ಅರ್ಥ್ ಅವರ್ ಗೆ ನಮ್ಮ ಬೆಂಬಲವಿದೆ, ನಿಮ್ಮದು?
ಬೆಂಗಳೂರು, ಮಾ. 26: ಮಾರ್ಚ್ 28 ರಂದು ರಾತ್ರಿ 8.30 ರಿಂದ 9.30 ರವರೆಗೆ ಪ್ಯಾರೀಸ್ ಐಫೆಲ್ ಟವರ್ ಮಂಕಾಗಲಿದೆ. ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಶ್ವೇತ ಭವನ ಹೊಳಪು ಕಳೆದುಕೊಳ್ಳಲಿದೆ. ಆದರೆ ನಿಮ್ಮ ಮನೆಯಲ್ಲಿ ಅಂದು ಟಿವಿ ಸ್ವಿಚ್ ಆಫ್ ಆಗುತ್ತದೆಯೋ? ಇಲ್ಲವೋ? ಗೊತ್ತಿಲ್ಲ.
ಹೌದು..ಮತ್ತೊಮ್ಮೆ ಅರ್ಥ್ ಅವರ್ ಮತ್ತೆ ಬಂದಿದೆ. ಇದೇ ಶನಿವಾರ ಅಂದರೆ ಮಾರ್ಚ್ 28 ರಂದು ರಾತ್ರಿ 8.30 ರಿಂದ 9.30 ರವರೆಗೆ ಎಲ್ಲ ಮನೆಯ ವಿದ್ಯುತ್ ದೀಪಗಳು ಬಂದ್ ಆಗಲಿವೆ.[ಅರ್ಥ್ ಅವರ್ ಎಂದರೇನು?]
ಜಾಗತಿಕ ತಾಪಮಾನ ನಿಯಂತ್ರಣ, ಏರುತ್ತಿರುವ ಪರಿಸರ ಮಾಲಿನ್ಯ ತಡೆ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ಅರ್ಥ್ ಅವರ್ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
170 ದೇಶಗಳ ವಿವಿಧ ನಗರಗಳಲ್ಲಿ ವಿದ್ಯುತ್ ದೀಪಗಳನ್ನು ಒಂದು ಗಂಟೆ ಕಾಲ ಬಂದ್ ಮಾಡಲಾಗುತ್ತದೆ. ಯುನೆಸ್ಕೋದ ಸದಸ್ಯ ರಾಷ್ಟ್ರಗಳು ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ ಎಂದು ಅರ್ಥ್ ಅವರ್ ಯೋಜನೆ ಪ್ರಮುಖ ಸುಧಾಂಶು ಸರೋನ್ ವಾಲಾ ತಿಳಿಸಿದ್ದಾರೆ.
ಅರ್ಥ್ ಅವರ್ ಕಾರ್ಯಕ್ರಮವನ್ನು ಪಾಲಿಸಲು ಅನೇಕ ಸಂಸ್ಥೆಗಳು, ಕಚೇರಿಗಳು ಸಜ್ಜಾಗಿವೆ. ನಿಮ್ಮ ಕಚೇರಿ ಅಥವಾ ಮನೆಯಲ್ಲೂ ಈ ಬಗೆಯ ಆಚರಣೆಯನ್ನು ಮಾಡ್ತಿರಾ ಅಲ್ಲವೇ? ಆ ಮೂಲಕ ಜಾಗತಿಕ ತಾಪಮಾನ ಕಡಿಮೆಮಾಡಲು, ಪರಿಸರ ಜಾಗೃತಿ ಮೂಡಿಸಲು ನೀವು ಕೈ ಜೋಡಿಸ್ತಿರಾ ತಾನೆ?