ಆಶಾ ಕಾರ್ಯಕರ್ತೆಯರಿಗೆ ಜಾಗತಿಕ ಗೌರವ
ಜಿನಿವಾ, ಮೇ 23: ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯ ಕಲ್ಪಿಸಲು, ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಅವಿರತವಾಗಿ ಶ್ರಮಿಸುತ್ತಿರುವ ದೇಶದ 10 ಲಕ್ಷ ಮಹಿಳಾ ಆಶಾ ಕಾರ್ಯಕರ್ತೆಯರನ್ನು ವಿಶ್ವ ಆರೋಗ್ಯ ಸಂಸ್ಥೆ ಗೌರವಿಸಿದೆ.
ಭಾರತ ಸರ್ಕಾರದ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು ಅಥವಾ ಆಶಾ ಕಾರ್ಯಕರ್ತೆಯರು. ಗ್ರಾಮೀಣ ಭಾರತದ ಸಂಪರ್ಕ ಬಿಂದುವಾಗಿದ್ದಾರೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕದಂತ ಸಂಕಷ್ಟ ಕಾಲದಲ್ಲಿ ಮನೆ-ಮನೆಗೆ ತೆರಳಿ ಕೊರೊನಾ ವೈರಸ್ ಪೀಡಿತರನ್ನು ಪತ್ತೆ ಹಚ್ಚಿ ಚಿಕಿತ್ಸೆ ದೊರೆಯುವಂತೆ ಮಾಡುವ ಮೂಲಕ ಗ್ರಾಮೀಣ ಭಾರತದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಬಹಳ ಮುಖ್ಯವಾದುದಾಗಿದೆ.
ಆಂಧ್ರಪ್ರದೇಶ ಮಾದರಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ವೇತನಕ್ಕೆ ಬೇಡಿಕೆ
ಸುಧಾರಿತ ಜಾಗತಿಕ ಆರೋಗ್ಯ, ನಾಯಕತ್ವ ಪ್ರದರ್ಶನ ಹಾಗೂ ಪ್ರಾದೇಶಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಬದ್ಧತೆಗೆ ಅತ್ಯುತ್ತಮ ಕೊಡುಗೆ ನೀಡಿದವರನ್ನು ಗುರುತಿಸಲು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೂಸ್ ಅಧಾನಮ್ ಗೇಬ್ರೆಯಸ್ 6 ಪ್ರಶಸ್ತಿಗಳನ್ನು ಘೋಷಿಸಿದ್ದಾರೆ.
ಗ್ರಾಮೀಣ ಭಾರತದ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ; "ಆಶಾ ಅಂದರೆ ಹಿಂದಿಯಲ್ಲಿ ಭರವಸೆ ಎಂದರ್ಥ. ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹರಡಿದ್ದ ಸಂದರ್ಭದಲ್ಲಿ ಗ್ರಾಮೀಣ ಭಾರತದಲ್ಲಿರುವವರಿಗೆ ಮತ್ತು ಬಡವರಿಗೆ ಪ್ರಾಥಮಿಕ ಆರೋಗ್ಯ ಸೇವೆ ದೊರೆಯುವಂತೆ ಮಾಡುವಲ್ಲಿ, ಸಮುದಾಯ ಆರೋಗ್ಯವನ್ನು ಕಾಪಾಡುವಲ್ಲಿ ಆಶಾ ಕಾರ್ಯಕರ್ತೆಯರ ಸೇವೆಗಾಗಿ. ಭಾರತದ 10 ಲಕ್ಷಕ್ಕಿಂತ ಹೆಚ್ಚು ಮಹಿಳಾ ಸ್ವಯಂಸೇವಕರನ್ನು ಗೌರವಿಸಲಾಗಿದೆ" ಎಂದರು.
"ಆಶಾ ಕಾರ್ಯಕರ್ತೆಯರು ಸಮುದಾಯದ ಗರ್ಭಿಣಿಯರ ಕಾಳಜಿ ವಹಿಸುವುದರ ಜೊತೆಗೆ ಮಕ್ಕಳಿಗೆ ರೋಗ ನಿರೋಧಕ ಲಸಿಕೆ ದೊರೆಯುವಂತೆ ಮಾಡುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸುತ್ತಾರೆ. ಸಮುದಾಯ ಆರೋಗ್ಯ ರಕ್ಷಣೆ, ಅಧಿಕ ರಕ್ತದೊತ್ತಡ, ಕ್ಷಯರೋಗಕ್ಕೆ ಚಿಕಿತ್ಸೆ ಸಿಗುವಂತೆ ಮಾಡುವಲ್ಲೂ ಆಶಾ ಕಾರ್ಯಕರ್ತೆಯರ ಶ್ರಮವಿದೆ. ಪೋಷಣೆ, ನೈರ್ಮಲ್ಯ, ಆರೋಗ್ಯಕರ ಜೀವನಕ್ಕಾಗಿ ಅರಿವು ಮೂಡಿಸುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಜಗತ್ತು ಅಸಮಾನತೆ, ಸಂಘರ್ಷ, ಆಹಾರ ಅಭದ್ರತೆ, ಹವಾಮಾನ ಬಿಕ್ಕಟ್ಟು ಮತ್ತು ಸಾಂಕ್ರಾಮಿಕ ರೋಗಗಳಂತ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ, ಪ್ರಪಂಚದಾದ್ಯಂತ ಆರೋಗ್ಯ ರಕ್ಷಿಸಲು ಮತ್ತು ಉತ್ತೇಜಿಸಲು ಅತ್ಯುತ್ತಮ ಕೊಡುಗೆ ನೀಡಿದವರನ್ನು ಗುರುತಿಸಲು ಈ ಪ್ರಶಸ್ತಿ ನೀಡಲಾಗುತ್ತಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.
ಪೋಲಿಯೊ ಲಸಿಕಾ ಕಾರ್ಯಕರ್ತರ ಸ್ಮರಣೆ; ಫೆಬ್ರವರಿ ತಿಂಗಳಲ್ಲಿ ಅಫ್ಘಾನಿಸ್ತಾನದ ತಖರ್ ಮತ್ತು ಕುಂದುಜ್ ಪ್ರಾಂತ್ಯಗಳಲ್ಲಿ ಶಸ್ತ್ರಸಜ್ಜಿತ ಉಗ್ರರಿಂದ ಕೊಲ್ಲಲ್ಪಟ್ಟ ಪೊಲಿಯೋ ಲಸಿಕೆ ಕಾರ್ಯಕರ್ತರ ತಂಡಕ್ಕೂ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಲಸಿಕೆ ಕಾರ್ಯಕರ್ತರ ತಂಡದಲ್ಲಿದ್ದ ಮೊಹಮ್ಮದ್ ಜುಬೈರ್ ಖಲಾಜೈ, ನಜೀಬುಲ್ಲಾ ಕೋಶಾ, ಶಾದಾಬ್ ಯೋಸುಫಿ, ಶರೀಫುಲ್ಲಾ ಹೇಮತಿ, ಹಸೀಬಾ ಒಮರಿ, ಖದೀಜಾ ಅತ್ತೀ, ಮುನಿರಾ ಹಕಿಮಿ, ರೋಬಿನಾ ಯೋಸುಫಿ ಮತ್ತು ಅವರ ಸಹೋದರ ಶಾದಾಬ್ ಅವರನ್ನು ಸ್ಮರಿಸಲಾಯಿತು.
"ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಪೋಲಿಯೊ ಹೆಚ್ಚಿರುವ ರಾಷ್ಟ್ರಗಳಾಗಿವೆ, ಪೋಲಿಯೊ ನಿರ್ಮೂಲನೆ ಮಾಡುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಯತ್ನಕ್ಕೆ ಆರೋಗ್ಯ ಕಾರ್ಯಕರ್ತರ ಹತ್ಯೆಗಳು ಅಡ್ಡಿಯಾಗಿದೆ. ಪೋಲಿಯೊ ಲಸಿಕೆ ಬಂಜೆತನಕ್ಕೆ ಕಾರಣವಾಗುತ್ತದೆ ಎಂದು ನಂಬಿರುವ ಅಲ್ಲಿನ ಜನ ಲಸಿಕಾ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಹಲವು ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಿರುವ ಘಟನೆಗಳು ಕೂಡ ನಡೆದಿವೆ" ಎಂದು ಹೇಳಿದರು.
Recommended Video