ಬೊಂಬಾಟ್ ಸುದ್ದಿ:ಭಾರತಕ್ಕೆ 76193000000ರೂ. ಘೋಷಿಸಿದ ವಿಶ್ವಬ್ಯಾಂಕ್!
ವಾಶಿಂಗ್ಟನ್, ಮೇ.15: ಭಾರತದ ಲಾಕ್ ಡೌನ್ ನಡುವೆ ನೊವೆಲ್ ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತಕ್ಕೆ ಅಂತಾರಾಷ್ಟ್ರೀಯ ಬ್ಯಾಂಕ್ 1 ಬಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡುವುದಾಗಿ ಘೋಷಿಸಿದೆ.
ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ನಡುವೆ ಸಾಮಾಜಿಕ ಸಂರಕ್ಷಣಾ ಕಾರ್ಯಗಳ ವೇಗ ವೃದ್ಧಿಸುವ ಯೋಜನೆಗೆ ಅನುಕೂಲಕ್ಕೆ ವಿಶ್ವಬ್ಯಾಂಕ್ ಆರ್ಥಿಕ ನೆರವು ನೀಡಲು ಮುಂದಾಗಿದೆ. ಬಡತನ ಮತ್ತು ದುರ್ಬಲ ವರ್ಗದ ಜನರಿಗೆ ನೆರವು ನೀಡಲು ಮುಂದಾಗಿರು ಭಾರತಕ್ಕೆ ಆರ್ಥಿಕ ಬೆಂಬಲ ನೀಡಲಾಗುತ್ತದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.
ನಿರಾಶಾ ಭಾರತೀಯ ಉದ್ಯಮಿಯಿಂದ ಪ್ರಧಾನಿ ಮೋದಿಗೆ ಬಂತು ಬಹಿರಂಗ ಪತ್ರ.!
ವಿಶ್ವಬ್ಯಾಂಕ್ ನಿಂದ ಭಾರತಕ್ಕೆ ಇದುವರೆಗೂ ಕೊರೊನಾ ವೈರಸ್ ವಿರುದ್ಧ ಹೋರಾಡಲು 2 ಬಿಲಿಯನ್ ಡಾಲರ್ ಆರ್ಥಿಕ ನೆರವು ಹರಿದು ಬಂದಿದೆ. ಕಳೆದ ತಿಂಗಳಷ್ಟೇ ದೇಶದ ಆರೋಗ್ಯ ವಲಯದ ಅಭಿವೃದ್ಧಿಗೆ 1 ಬಿಲಿಯನ್ ಡಾಲರ್ ಘೋಷಣೆ ಮಾಡಲಾಗಿತ್ತು.
1 ಬಿಲಿಯನ್ ಡಾಲರ್ ಹಣ 2 ಹಂತಗಳಲ್ಲಿ ಬಿಡುಗಡೆ
ನೊವೆಲ್ ಕೊರೊನಾ ವೈರಸ್ ವಿರುದ್ಧ ಹೋರಾಡಲು 1 ಬಿಲಿಯನ್ ಡಾಲರ್ ಘೋಷಿಸಿರುವ ವಿಶ್ವಬ್ಯಾಂಕ್ ಎರಡು ಹಂತಗಳಲ್ಲಿ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದೆ. 2020ರ ಆರ್ಥಿಕ ಸಾಲಿನಲ್ಲಿ ತುರ್ತಾಗಿ 750 ಬಿಲಿಯನ್ ಡಾಲರ್ ಹಣ ಬಿಡುಗಡೆ ಮಾಡಲಾಗುತ್ತದೆ. ಈ ಪೈಕಿ 250 ಬಿಲಿಯನ್ ಡಾಲರ್ ಹಣವು ಜೂನ್.30ರೊಳಗೆ ಬಿಡುಗಡೆಯಾಗಲಿದೆ. ಇನ್ನು, 2021ರ ಆರ್ಥಿಕ ಸಾಲಿನಲ್ಲಿ ಬಾಕಿ ಉಳಿದ 250 ಬಿಲಿಯನ್ ಡಾಲರ್ ಹಣವನ್ನು ಬಿಡುಗಡೆ ಮಾಡುವುದಾಗಿ ವಿಶ್ವಬ್ಯಾಂಕ್ ತಿಳಿಸಿದೆ.
PMGKY ಮೂಲಕ ಬಡವ ಮತ್ತು ದುರ್ಬಲ ವರ್ಗಕ್ಕೆ ನೆರವು
ಭಾರತದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಮೂಲಕ ಬಡವರು, ದುರ್ಬಲ ವರ್ಗ ಹಾಗೂ ಅಗತ್ಯ ನೆರವಿನ ನಿರೀಕ್ಷೆಯಲ್ಲಿ ಇರುವ ವರ್ಗಕ್ಕೆ ಮೊದಲ ಹಂತದಲ್ಲಿ ಆರ್ಥಿಕ ಬೆಂಬಲ ನೀಡಲಾಗುತ್ತದೆ. ದೇಶಾದ್ಯಂತ ಸಾರ್ವಜನಿಕ ವಿತರಣಾ ವ್ಯವಸ್ಥೆ, ನೇರ ಸವಲತ್ತು ವರ್ಗಾವಣೆ ಮೂಲಕ ಕೊವಿಡ್-19 ಮುಕ್ತ ದೇಶ ನಿರ್ಮಾಣಕ್ಕೆ ಶ್ರಮಿಸುತ್ತಿರುವವರಿಗೆ, ಅಸಂಘಟಿಕ ಕಾರ್ಮಿಕರು, ವಲಸೆ ಕಾರ್ಮಿಕರು, ಈ ಯೋಜನೆಯ ಅಡಿಯಲ್ಲಿ ಬರುತ್ತಾರೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.
ಎರಡನೇ ಹಂತದಲ್ಲಿ ಸಾಮಾಜಿಕ ಭದ್ರತೆಗೆ ಆದ್ಯತೆ
ಭಾರತದಂತಾ ದೇಶದಲ್ಲಿ ದಿನಕ್ಕೆ 3 ಡಾಲರ್ ಎಂದರೆ 200ರೂಪಾಯಿಗಿಂತಲೂ ಕಡಿಮೆ ವೇತನಕ್ಕೆ ದುಡಿಯುವ ಕಾರ್ಮಿಕರಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ಎರಡನೇ ಹಂತದಲ್ಲಿ ಸ್ಥಳೀಯ ಅಗತ್ಯತೆಗಳು ಹಾಗೂ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲಾಗುತ್ತದೆ.
ದೇಶದ ಶೇ.90ರಷ್ಟು ಕಾರ್ಮಿಕರಿಗಿಲ್ಲ ಸಾಮಾಜಿಕ ಭದ್ರತೆ
ಭಾರತದಲ್ಲಿ ಶೇ.90ರಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಈ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯಿಲ್ಲ. ನಿರ್ದಿಷ್ಟ ಹಣದ ಉಳಿತಾಯ, ಸಾಮಾಜಿಕ ವಿಮೆ, ಅನಾರೋಗ್ಯದ ಹಿನ್ನೆಲೆ ರಜೆ ಇರುವುದಿಲ್ಲ. ಪ್ರತಿವರ್ಷ ತಾವಿರುವ ಪ್ರದೇಶವನ್ನು ಬಿಟ್ಟು 90ಲಕ್ಷ ಕಾರ್ಮಿಕರು ಕೆಲಸ ಹುಡುಕಿಕೊಂಡು ಬೇರೊಂದು ಪ್ರದೇಶಕ್ಕೆ ವಲಸೆ ಹೋಗುತ್ತಾರೆ. ಹೀಗೆ ವಲಸೆ ಹೋಗುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಕಟ್ಟಿಕೊಡುವುದು ಕೂಡ ಸವಾಲಿನ ಕೆಲಸವಾಗಿದೆ.
ಭಾರತದಲ್ಲಿ ಗ್ರಾಮೀಣ ಭಾಗದ ಕಾರ್ಮಿಕರಿಗೆ ಆದ್ಯತೆ
ಇನ್ನು, ಭಾರತದಲ್ಲಿ ಪ್ರಮುಖವಾಗಿ ಗ್ರಾಮೀಣ ಭಾಗದಿಂದ ವಲಸೆ ಬರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇರುವುದಿಲ್ಲ. ಈ ಹಿನ್ನೆಲೆ ಗ್ರಾಮೀಣ ಭಾಗದವರನ್ನು ಹೆಚ್ಚಾಗಿ ಗಮನದಲ್ಲಿ ಇಟ್ಟುಕೊಂಡು ಪ್ರಮುಖ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದರಿಂದ ದೇಶದಲ್ಲಿ ಸಂಯೋಜಿತ ವ್ಯವಸ್ಥೆ ಅಡಿಯಲ್ಲಿ ದೇಶವನ್ನು ಮುನ್ನೆಡೆಸಲು ಸಾಧ್ಯವಾಗುತ್ತದೆ. ಅದಕ್ಕಾಗಿ 460 ಸಾಮಾಜಿಕ ಭದ್ರತಾ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.
ವಲಸೆ ಕಾರ್ಮಿಕರು, ನಗರ ಪ್ರದೇಶದ ಬಡವರಿಗೆ ಬೆಂಬಲ
ಭಾರತದಲ್ಲಿ ಇರುವ ನಗರ ಪ್ರದೇಶಗಳಲ್ಲಿನ ದುರ್ಬಲ ಮತ್ತು ಬಡವರ್ಗದ ಜನರು ಹಾಗೂ ವಲಸೆ ಕಾರ್ಮಿಕರ ನೆರವಿಗೆ ನಿಲ್ಲುವಂತಾ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ದೇಶದ ಎಲ್ಲ ಕಡೆಗಳಲ್ಲಿ ಆಹಾರ ಭದ್ರತೆ, ಸಾಮಾಜಿಕ ವಿಮೆ ಮತ್ತು ಆರ್ಥಿಕ ಬೆಂಬಲವನ್ನು ನೀಡಲಾಗುತ್ತದೆ. ಅಂತಿಮವಾಗಿ ದೇಶದ ಸಾಮಾಜಿಕ ಭದ್ರತಾ ವ್ಯವಸ್ಥೆ, ಬಡವ ಮತ್ತು ಗ್ರಾಮೀಣ ಭಾಗದ ಜನರ ಅಗತ್ಯತೆಗಳನ್ನು ಒದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತದೆ. ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ವಿಶ್ವಬ್ಯಾಂಕ್ ತಿಳಿಸಿದೆ.
1 ಬಿಲಿಯನ್ ಡಾಲರ್ ಹಣದ ಮೂಲ ಯಾವುದು?
ಅಂತಾರಾಷ್ಟ್ರೀಯ ಬ್ಯಾಂಕ್ ಘೋಷಿಸಿದ 1 ಬಿಲಿಯನ್ ಡಾಲರ್ ಪೈಕಿ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಘದಿಂದ 550 ಬಿಲಯನ್ ಡಾಲರ್, ರಿಯಾಯತಿ ದರದಲ್ಲಿ 200 ಬಿಲಿಯನ್ ಡಾಲರ್ ಹಾಗೂ ಅಂತಾರಾಷ್ಟ್ರೀಯ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್ 250 ಬಿಲಿಯನ್ ಡಾಲರ್ ಹಣವನ್ನು ನೀಡಲಾಗುತ್ತಿದೆ.