ಪಾನಿಪುರಿ ಪ್ರಿಯರೇ ಎಚ್ಚರಿಕೆ: ಆ ದೇಶದಲ್ಲಿ ನಿಮ್ಮದೇ ನೆಚ್ಚಿನ ಫುಡ್ ಬ್ಯಾನ್!
ಕಠ್ಮಂಡು, ಜೂನ್ 26: ನೀವು ಸೇವಿಸುವ ಆಹಾರ ಎಷ್ಟರ ಮಟ್ಟಿಗೆ ಆರೋಗ್ಯಕರ ಎನ್ನುವುದನ್ನು ಸಾರ್ವಜನಿಕರೇ ಅರಿತುಕೊಂಡಿರಬೇಕು. ಕೊಂಚ ಯಾಮಾರಿದರೆ ಬೇಡದ ಅನಾರೋಗ್ಯಗಳೆಲ್ಲ ಮೈಗೆ ಅಂಟಿಕೊಳ್ಳುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ನೇಪಾಳದಲ್ಲಿ ಪಾನಿಪುರಿಯನ್ನೇ ಬ್ಯಾನ್ ಮಾಡಲಾಗಿದೆ.
ಅನಾರೋಗ್ಯಕ್ಕೂ ಪಾನಿಪುರಿಗೂ ಎಲ್ಲಿಂದ ಎಲ್ಲಿಯ ನಂಟು ಎನ್ನುವ ಪ್ರಶ್ನೆ ನಿಮ್ಮಲ್ಲಿಯೂ ಹುಟ್ಟಿಕೊಳ್ಳಬಹುದು. ಆದರೆ ಕಠ್ಮಂಡುವಿನಲ್ಲಿ ಪಾನಿ ಪುರಿ ಮಾರಾಟವನ್ನು ಬ್ಯಾನ್ ಮಾಡುವುದರ ಹಿಂದೆ ಬಹುದೊಡ್ಡ ಕಾರಣವಿದೆ. ಈ ಅಂಶವನ್ನು ತಿಳಿದುಕೊಂಡರೆ ಪಾನಿ ಪುರಿ ಪ್ರಿಯರು ಒಂದ ಕ್ಷಣ ಶಾಕ್ ಆಗುತ್ತಾರೆ.
ಬೆಂಗಳೂರಲ್ಲಿ ವೈರಲ್ ಸೋಂಕುಗಳಲ್ಲಿ ಶೇಕಡ 10 ರಿಂದ 15 ರಷ್ಟು ಏರಿಕೆ
ನೇಪಾಳದ ರಾಜಧಾನಿ ಕಠ್ಮಂಡು ಕಣಿವೆಯ ಲಲಿತ್ಪುರ ಮೆಟ್ರೋಪಾಲಿಟನ್ ಸಿಟಿಯಲ್ಲಿ 12 ಜನರಲ್ಲಿ ಕಾಲರಾ ರೋಗ ಪತ್ತೆಯಾಗಿದ್ದು, ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ನಗರದಲ್ಲಿ ಪಾನಿ ಪುರಿ ಮಾರಾಟವನ್ನೇ ನಿಷೇಧಿಸಿದ್ದಾರೆ. ಏಕೆಂದರೆ ಪಾನಿಪುರಿಯಲ್ಲಿ ಕಾಲರಾ ಬ್ಯಾಕ್ಟೀರಿಯಾವನ್ನು ಹರಡಿಸುವ ನೀರನ್ನು ಬಳಕೆ ಮಾಡಲಾಗುತ್ತಿದೆ ಎಂದು ಲಲಿತ್ಪುರ ಮೆಟ್ರೋಪಾಲಿಟನ್ ಸಿಟಿ (ಎಲ್ಎಂಸಿ) ಹೇಳಿಕೊಂಡಿದೆ.
ಕಾಲರಾಗೆ ಪಾನಿ ಪುರಿಯ ನೀರು ಹೇಗೆ ಕಾರಣವಾಗುತ್ತದೆ? ಪಾನಿ ಪುರಿ ಮಾರಾಟಕ್ಕೆ ನಿರ್ಬಂಧ ಹಾಕಿರುವುದಕ್ಕೆ ಪ್ರಮುಖ ಕಾರಣವೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಪಾನಿ ಪುರಿ ಮಾರಾಟ ನಿರ್ಬಂಧಕ್ಕೆ ಆಂತರಿಕ ಕ್ರಮ
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಾಲರಾ ರೋಗ ಹರಡುವ ಅಪಾಯ ಹೆಚ್ಚುತ್ತಿದೆ. ಈ ಹಿನ್ನೆಲೆ ನಗರದ ಜನನಿಬಿಡ ಪ್ರದೇಶಗಳಲ್ಲಿ ಮತ್ತು ಕಾರಿಡಾರ್ ಪ್ರದೇಶದಲ್ಲಿ ಪಾನಿ ಪುರಿ ಮಾರಾಟವನ್ನು ನಿರ್ಬಂಧಿಸಲು ಆಂತರಿಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮುನ್ಸಿಪಲ್ ಪೊಲೀಸ್ ಮುಖ್ಯಸ್ಥ ಸೀತಾರಾಮ್ ಹಚೇತು ಹೇಳಿದ್ದಾರೆ.
ಕಠ್ಮಂಡು ವ್ಯಾಪ್ತಿಯಲ್ಲೇ 12 ಮಂದಿಗೆ ಕಾಲರಾ ರೋಗ
ನೇಪಾಳದ ರಾಜಧಾನಿ ಕಠ್ಮಂಡು ಕಣಿವೆಯ ಏಳು ಮಂದಿಯಲ್ಲಿ ಭಾನುವಾರ ಕಾಲರಾ ರೋಗ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 12ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಜನಸಂಖ್ಯೆ ಸಚಿವಾಲಯ ತಿಳಿಸಿದೆ. ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಸಾಂಕ್ರಾಮಿಕ ರೋಗ ಮತ್ತು ರೋಗ ನಿಯಂತ್ರಣ ವಿಭಾಗದ ನಿರ್ದೇಶಕ ಚುಮನ್ಲಾಲ್ ದಾಶ್ ಪ್ರಕಾರ, ಕಠ್ಮಂಡು ಮಹಾನಗರದಲ್ಲಿ ಐದು ಕಾಲರಾ ಮತ್ತು ಚಂದ್ರಗಿರಿ ಪುರಸಭೆ ಮತ್ತು ಬುಧಾನಿಲಕಂಠ ಪುರಸಭೆಯಲ್ಲಿ ತಲಾ ಒಂದು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಚಿಕಿತ್ಸೆ ಪಡೆದ ಇಬ್ಬರು ಕಾಲರಾ ರೋಗಿಗಳು ಡಿಸ್ಚಾರ್ಜ್
ಕಾಲರಾ ರೋಗ ತಗುಲಿದ ರೋಗಿಗಳು ಪ್ರಸ್ತುತ ನೇಪಾಳದ ಟೇಕುನಲ್ಲಿರುವ ಸುಕ್ರರಾಜ್ ಟ್ರೋಪಿಕಲ್ ಆಂಡ್ ಇನ್ಫೆಕ್ಷನ್ ಡಿಸೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ರಾಜಧಾನಿ ವಿವಿಧ ಭಾಗಗಳಲ್ಲಿ ಐದು ಕಾಲರಾ ಪ್ರಕರಣಗಳು ಕಂಡುಬಂದಿವೆ. ಸೋಂಕಿತರಲ್ಲಿ ಇಬ್ಬರು ಈಗಾಗಲೇ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ವೈದ್ಯರ ಬಳಿಗೆ ಆಗಮಿಸುವಂತೆ ಲಕ್ಷಣ ಹೊಂದಿರುವವರಿಗೆ ಮನವಿ
ಕಾಲರಾ ರೋಗದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ತಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಆರೋಗ್ಯ ಮತ್ತು ಜನಸಂಖ್ಯೆ ಸಚಿವಾಲಯ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದೆ. ಅತಿಸಾರ, ಕಾಲರಾ ಮತ್ತು ಇತರ ನೀರಿನಿಂದ ಹರಡುವ ರೋಗಗಳು ವಿಶೇಷವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಹರಡುತ್ತಿರುವುದರಿಂದ ಪ್ರತಿಯೊಬ್ಬರೂ ಜಾಗೃತರಾಗಿ ಮತ್ತು ಜಾಗರೂಕತೆಯಿಂದ ಇರುವಂತೆ ಸಚಿವಾಲಯವು ಸೂಚನೆ ನೀಡಿದೆ.
Recommended Video