ಪ್ರಳಯದ ಸುಂದರ ಚಿತ್ರಗಳನ್ನು ಕ್ಲಿಕ್ಕಿಸಲು ಎಲ್ಲರೂ ಸಜ್ಜಾಗಿ!
Recommended Video
ನಾಳೆ ಏನಾಗುತ್ತದೆ ಎಂಬ ಚಿಂತೆ ಯಾರಿಗೂ ಇಲ್ಲ. ಅಲ್ಲ, ಚಿಂತೆ ಇರಬೇಕಾಗಿರುವುದಾದರೂ ಏತಕ್ಕೆ? ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ನಮ್ಮಗೆ ಚಿಂತೆ ಏತಕೆ? ಶನಿವಾರದ ಇರುಳು ಕಳೆದು ಬೆಳಕಾಗಲೇಬೇಕು, ಭಾನುವಾರ ಭಾಸ್ಕರ ತನ್ನ ಚಿನ್ನದ ಹೊದಿಕೆಯನ್ನು ಭೂಮಿಯ ಮೇಲೆ ಹಾಸಲೇಬೇಕು.
ನಾಳೆಯ ಚಿಂತೆಯಿಲ್ಲದೆ, ಎಲ್ಲರೂ ತಮ್ತಮ್ಮ ವ್ಯಾಪಾರದಲ್ಲಿ ಮುಳುಗಿಹೋಗಿದ್ದಾರೆ. ವೈದ್ಯರು ಸ್ಟೆತೆಸ್ಕೋಪ್ ಹೆಗಲಿಗೆ ಹಾಕಿಕೊಂಡು ಬಡವರು, ಮಧ್ಯಮ ವರ್ಗದವರು, ಶ್ರೀಮಂತರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜಕಾರಣಿಗಳು ಯಾತ್ರೆ ಮುಂದುವರಿಸಿದ್ದಾರೆ, ಮುಂದಿನ ವರ್ಷ ಮತ್ತೆ ಸರಕಾರ ರಚಿಸುವ ಕನಸು ಕಾಣುತ್ತಿದ್ದಾರೆ.
ಪ್ರಳಯಕ್ಕೆ ಹೊಸ ದಿನಾಂಕ ನಿಗದಿ, ನವೆಂಬರ್ 19!
ಇನ್ನು ನಮ್ಮನಿಮ್ಮಂಥ ಶ್ರೀಸಾಮಾನ್ಯರು ವಾಟ್ಸಾಪಿನಲ್ಲಿ ಏನು ಬಂದಿದೆ, ಫೇಸ್ ಬುಕ್ಕಿನಲ್ಲಿ ಬಿಳಿ ಗಡ್ಡದವನೊಬ್ಬ 'ಯಾರಾದ್ರೂ ಇನ್ನೂ ಎದ್ದಿದ್ದೀರಾ?' ಎಂದು ನಟ್ಟನಡುರಾತ್ರಿ ಹಾಕಿದ, ಕೆಲಸಕ್ಕೆ ಬಾರದ, ಕಿತ್ತುಹೋಗಿರುವ ಸ್ಟೇಟಸ್ಸಿಗೆ ಎಷ್ಟು ಲೈಕುಗಳು ಬಂದಿವೆ ಎಂದು ಎಣಿಕೆ ಮಾಡುತ್ತಿರುತ್ತಾರೆ, ತಮ್ಮದೂ ಒಂದು ಲೈಕ್ ಒತ್ತಿರುತ್ತಾರೆ.
ಅಂದ ಹಾಗೆ, ನಾಳೆ ಏನಾಗಲಿದೆ? ನಾಳೆ ಭಾನುವಾರ ಯಾವ ದೇವಸ್ಥಾನಕ್ಕೆ ಹೋಗಬೇಕು, ಲವ್ವರ್ ಜೊತೆ ಯಾವ ಪಾರ್ಕಿಗೆ ಹೋಗಬೇಕು, ಎಂಥ ಸಿನೆಮಾ ನೋಡಬೇಕು, ಎಲ್ಲಿ ಟ್ರೆಕ್ಕಿಂಗ್ ಹೋಗಬೇಕು, ಯಾವ ಪುಸ್ತಕ ಬಿಡುಗಡೆಗೆ ತೆರಳಬೇಕು ಎಂಬುದನ್ನು ಬದಿಗಿಟ್ಟು ಈ ಪ್ರಶ್ನೆಯನ್ನು ತ್ವರಿತವಾಗಿ ಕೇಳಬೇಕಾಗಿದೆ. ಏಕೆಂದರೆ, ಟೈಮು ತುಂಬಾ ಕಮ್ಮಿಯಿದೆ.
ಹೋಲ್ಡ್ ಆನ್, ಪ್ರಳಯದ ದಿನವನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ
ಏಕೆಂದರೆ, ಕಣ್ಣಿಗೆ ಬಿದ್ದರೆ ಯಾರಾದರೂ ಸಾಷ್ಟಾಂಗ ನಮಸ್ಕಾರ ಮಾಡಬೇಕೆನಿಸುವಂಥ ಡೆವಿಡ್ ಮೇಡ್ ಎಂಬ ಮನುಷ್ಯನ ಆಕಾರದ ವ್ಯಕ್ತಿಯೊಬ್ಬ ನವೆಂಬರ್ 19, ಭಾನುವಾರದಂದು ಜಗತ್ ಪ್ರಳಯವಾಗಲಿದೆ, ಭಾರೀ ಭೂಕಂಪಗಳಾಗಲಿವೆ, ಮತ್ತೇನೋ ಸಂಭವಿಸಲಿದೆ ಎಂದು ಹಲವರ ನಿದ್ದೆಗೆಡಿಸಿದ್ದಾನೆ. ಇನ್ನು ನಮ್ಮಂಥವರು ತಲೆ ಕೆಡಿಸಿಕೊಳ್ಳದಿದ್ದರೆ ಹೇಗೆ?
ಯಾರು ಈ ಭವಿಷ್ಯಕಾರ ಡೆವಿಡ್ ಮೇಡ್?
ನವೆಂಬರ್ 19ರಂದು ಗಗನವೇ ಗುಡುಗಲಿ, ಭೂಮಿಯೇ ನಡುಗಲಿ, ಸಾಗರವೇ ಕೆರಳಲಿ, ಅಗ್ನಿಪರ್ವತವೇ ಅದುರಲಿ, ಚಂಡಮಾರುತವೇ ಬೀಸಲಿ, ವರ್ಷಧಾರೆಯೇ ಸುರಿದು ಊರಿಗೆ ಊರೇ ಕೊಚ್ಚಿಕೊಂಡು ಹೋಗಲಿ, ಸುನಾಮಿಯೇ ಉಕ್ಕಿಬರಲಿ, ಅಥವಾ ಇಂಥ ಅವಘಡಗಳಾಗದೇ ಇದ್ದರೂ, ಈ ಪ್ರಳಯದ ಹುಳವನ್ನು ಬಿಟ್ಟಿರುವ ಡೇವಿಡ್ ಮೇಡ್ ಯಾರೆಂದು ತಿಳಿಯೋಣ ಬನ್ನಿ.
ಡೆವಿಡ್ ಮೇಡ್ ಒಬ್ಬ ಕ್ರೈಸ್ತ ಸಂಖ್ಯಾಶಾಸ್ತ್ರಜ್ಞ
ಡೆವಿಡ್ ಮೇಡ್ ಒಬ್ಬ ಕ್ರೈಸ್ತ ಸಂಖ್ಯಾಶಾಸ್ತ್ರಜ್ಞ. ಐವತ್ತು ಐವತ್ತೈದರ ಆಸುಪಾಸಿನಲ್ಲಿರುವ ಈತ 'ಪ್ಲಾನೆಟ್ ಎಕ್ಸ್ - ದಿ 2017 ಅರೈವಲ್' ಎಂಬ ಪುಸ್ತಕವನ್ನು ಬರೆದಿದ್ದಾನೆ. ಅದರಲ್ಲಿ, ನಿಬಿರು ಎಂಬ ಆಕಾಶಕಾಯ ಭೂಮಿಗೆ ಅಪ್ಪಳಿಸುವುದರಿಂದ ವಸುಂಧರೆಯ ಮೇಲೆ ಅಲ್ಲೋಲಕಲ್ಲೋಲಗಳಾಗಲಿವೆ ಎಂದು ಭವಿಷ್ಯ ನುಡಿದಿದ್ದಾನೆ.
ಚಿತ್ರ ಕೃಪೆ:http://planetxnews.com/meade/
ಪ್ಲಾನೆಟ್ ಎಕ್ಸ್ ಎಂಬ ಬೆಸ್ಟ್ ಸೆಲ್ಲರ್
ಈ ಡೆವಿಡ್ ಅಂಥಿಂಥ ಮನುಷ್ಯನಲ್ಲ. ಖಗೋಳಶಾಸ್ತ್ರದಲ್ಲಿ ನುರಿತವನು, ಹಲವಾರು ಸಂಶೋಧನೆಗಳಲ್ಲಿ ಮುಳುಗೆದ್ದಿದ್ದಾನೆ. ಪ್ಲಾನೆಟ್ ಎಕ್ಸ್ ಎಂಬ ಬೆಸ್ಟ್ ಸೆಲ್ಲರ್ ಪುಸ್ತಕ ಸೇರಿದಂತೆ ಡಜನ್ ಗಟ್ಟಲೆ ಬುಕ್ಕುಗಳನ್ನು ಗೀಚಿ ಬಿಸಾಕಿದ್ದಾನೆ. ಬೈಬಲ್ ಮತ್ತು ವಿಜ್ಞಾನವನ್ನು ಮಿಶ್ರಣ ಮಾಡಿ ಹೊಸಹೊಸ ವ್ಯಾಖ್ಯಾನಗಳನ್ನು ಬರೆಯುವುದೆಂದರೆ ಆತನಿಗೆ ಇನ್ನಿಲ್ಲದ ಪ್ರೀತಿ.
ಕ್ರೌರ್ಯ ತುಂಬಿಕೊಂಡು ದೇವರು ಬರಲಿದ್ದಾನೆ
ಮೇಡ್, ಬೈಬಲ್ ನಲ್ಲಿರುವ ಒಂದು ವ್ಯಾಖ್ಯಾನವನ್ನು ಅರ್ಥೈಸಿಕೊಂಡು, "ದೇವರು ಮತ್ತೆ ಬರುವ ದಿನ ಹತ್ತಿರ ಬರುತ್ತಿದೆ, ಕೋಪೋದ್ರಿಕ್ತನಾಗಿ ಅತ್ಯಂತ ಕ್ರೌರ್ಯ ತುಂಬಿಕೊಂಡು ಆತ ಬರಲಿದ್ದಾನೆ. ಆತ ಭೂಮಿಯನ್ನು ಅಲ್ಲಾಡಿಸಲಿದ್ದಾನೆ ಮತ್ತು ಪಾಪಿಗಳನ್ನು ಸಂಹಾರ ಮಾಡಲಿದ್ದಾನೆ" ಎಂದು ನಂಬುವ ಹಾಗೆ ಓಳು ಬಿಟ್ಟಿದ್ದಾನೆ.
ನಕ್ಷತ್ರಗಳು ಯಾವುದೇ ಬೆಳಕು ನೀಡಲಾರವು
ಇಷ್ಟು ಸಾಲದೆಂಬಂತೆ, ಸ್ವರ್ಗಲೋಕದಲ್ಲಿರುವ ನಕ್ಷತ್ರಗಳು ಯಾವುದೇ ಬೆಳಕು ನೀಡಲಾರವು. ಹುಟ್ಟುವ ಸೂರ್ಯ ಕಪ್ಪಗಾಗಲಿದ್ದಾನೆ, ಚಂದ್ರ ಕೂಡ ತನ್ನ ಹೊಳಪು ಕಳೆದುಕೊಳ್ಳಲಿದ್ದಾನೆ ಎಂದು ಡೆವಿಡ್ ಮೇಡ್ ಏನೇನೋ ಕನವರಿಸುವವನಂತೆ ಪುಸ್ತಕದಲ್ಲಿ ಬರೆದಿದ್ದಾನೆ.
ನಿಬಿರು ತನ್ನ ಪಯಣ ಆರಂಭಿಸಿದೆ
ನಿಬಿರು ಆಕಾಶಕಾಯ ಭೂಮಿಯೆಡೆಗೆ ತನ್ನ ಪಯಣ ಆರಂಭಿಸಿದ್ದು, ಸೆಪ್ಟೆಂಬರ್ 23ರಂದು ಅಪ್ಪಳಿಸಲಿದೆ ಎಂದಿದ್ದವನು, ಇದ್ದಕ್ಕಿದ್ದಂತೆ ಕ್ಯಾಲೆಂಡರ್ ಹಾಳೆಗಳನ್ನು ಹರಿದುಹಾಕಿ, ನವೆಂಬರ್ 19ರಂದು ಈ ಘಟನೆ ಸಂಭವಿಸಲಿದೆ ಎಂದು ಬೆದರಿಕೆ ಹಾಕಿದ್ದಾನೆ. ಗೋಡೆಯನ್ನು ಅಲಂಕರಿಸಿರುವ ನಿಮ್ಮ ಕ್ಯಾಲೆಂಡರ್ ನವೆಂಬರ್ ತೋರಿಸುತ್ತಿದೆಯಾ ಚೆಕ್ ಮಾಡಿ!
ಭವಿಷ್ಯಕಾರರು ಹೇಳಿದ್ದೆಲ್ಲ ನಿಜವಾಗಿದೆಯಾ?
ಇಂಥ ಭವಿಷ್ಯವನ್ನು ಎಷ್ಟೊಂದು ಭವಿಷ್ಯಕಾರರು ಹೇಳಿದ್ದಾರೆ. ಅವರು ಹೇಳಿದ್ದೆಲ್ಲ ನಿಜವಾಗಿದೆಯಾ? ನಮ್ಮ ಕರ್ನಾಟಕದಲ್ಲೇ ಇಂಥ ಎಷ್ಟೊಂದು ಜ್ಯೋತಿಷಿಗಳಿಲ್ಲ? ಮೇಡ್ ಹೇಳಿದ ಭವಿಷ್ಯವೂ ನಿಜವಾಗತ್ತೆ ಅಂತ ಏನು ಗ್ಯಾರಂಟಿ? ನಾನಂತೂ ಭಾನುವಾರ ಬಸವನಗುಡಿಯ ಕಾರಂಜಿ ಆಂಜನೇಯನಿಗೆ ಪ್ರದಕ್ಷಿಣೆ ಹಾಕೋಣ ಅಂದುಕೊಂಡಿದ್ದೀನಿ. ನೀವು?