ಭಾರತ-ಚೀನಾ ನಡುವೆ ಕೊನೆಯ ಬಾರಿ ಗುಂಡಿನ ಸದ್ದು ಕೇಳಿದ್ದು ಯಾವಾಗ?
ನವದೆಹಲಿ, ಜೂನ್.17: ಭಾರತ-ಚೀನಾ ನಡುವಿನ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಲಡಾಖ್ ಪೂರ್ವಭಾಗದ ಗಾಲ್ವಾನ್ ನದಿ ಕಣಿವೆಯು ತಮ್ಮದು ಎಂದು ಡ್ರ್ಯಾಗನ್ ರಾಷ್ಟ್ರ ಪಟ್ಟು ಹಿಡಿದಿದೆ.
Recommended Video
ಜೂನ್.15 ಮತ್ತು 16ರಂದು ನಡೆದ ಎರಡು ಸೇನೆಗಳ ಮುಖಾಮುಖಿ ಸಂಘರ್ಷದಲ್ಲಿ ಮೊದಲಿಗೆ ಭಾರತೀಯ ಸೇನಾಧಿಕಾರಿ ಸೇರಿ ಮೂವರು ಪ್ರಾಣ ಬಿಟ್ಟಿದ್ದರು. ತದನಂತರದಲ್ಲಿ ತಾಪಮಾನ ಮತ್ತು ಚೀನಿ ಯೋಧರು ನಡೆಸಿದ ಹಲ್ಲೆಯಿಂದ ಗಾಯಗೊಂಡಿದ್ದ 17 ಭಾರತೀಯ ಯೋಧರು ಹುತಾತ್ಮರಾಗಿದ್ದರು.
ಭಾರತದ 20 ಯೋಧರು ಹುತಾತ್ಮರಾದ ಬೆನ್ನಲ್ಲೇ ನಡೆದ ಪ್ರತಿದಾಳಿಯಲ್ಲಿ ಚೀನಾದ 35 ಸೈನಿಕರನ್ನು ಹತ್ಯೆಗಯ್ಯಲಾಗಿದೆ ಎಂದು ಯುಎಸ್ ಸುದ್ದಿಸಂಸ್ಥೆಯು ವರದಿ ಮಾಡಿದೆ. ಉಭಯ ರಾಷ್ಟ್ರದ ಯೋಧರು ಯಾವುದೇ ರೀತಿ ಗುಂಡಿನ ದಾಳಿಯನ್ನು ನಡೆಸಿಲ್ಲ. ಬದಲಿಗೆ ಪರಸ್ಪರ ನಡೆಸಿದ ಕಾದಾಟದಲ್ಲಿ ಇಷ್ಟೊಂದು ಸಾವು-ನೋವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಭಾರತ-ಚೀನಾ ಸಂಘರ್ಷ: ಗಾಲ್ವಾನ್ ಕಣಿವೆ ಹೆಸರಿನ ರಹಸ್ಯ
ಒಂದು ವೇಳೆ ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ಸದ್ದು ಮೊಳಗಿದರೆ ಜಾಗತಿಕ ಮಟ್ಟದಲ್ಲಿ ಚೀನಾ ಅತಿದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗಿದ್ದಲ್ಲಿ ಕಟ್ಟಕಡೆಯದಾಗಿ ಉಭಯ ರಾಷ್ಟ್ರಗಳ ಗಡಿಯಲ್ಲಿ ಗುಂಡಿನ ಸದ್ದು ಮೊಳಗಿದ್ದು ಯಾವಾಗ, ಏಕೆ, ಅದಕ್ಕೆ ಕಾರಣ ಏನು ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ನೋಡಿ.
ಗಡಿಯಲ್ಲಿ 44 ವರ್ಷಗಳ ಹಿಂದೆ ಗುಂಡಿನ ಮೊರೆತ
ಭಾರತ-ಚೀನಾ ಗಡಿಯಲ್ಲಿ 44 ವರ್ಷಗಳ ಹಿಂದೆ ಮೊದಲ ಬಾರಿಗೆ ಉಭಯ ರಾಷ್ಟ್ರಗಳ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಬಳಿಯಲ್ಲಿ ಗುಂಡಿನ ಮೊರೆತ ಕೇಳಿ ಬಂದಿತ್ತು. ಇದೀಗ ಲಡಾಖ್ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇದಕ್ಕೂ ಮೊದಲು 1975ರಲ್ಲಿ ಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಭಾರತೀಯ ಯೋಧ ಹುತಾತ್ಮರಾಗಿದ್ದರು. ಇದನ್ನು ಹೊರತುಪಡಿಸಿದರೆ ಈವರೆಗೂ ಎರಡು ರಾಷ್ಟ್ರಗಳ ಗಡಿಯಲ್ಲಿ ಒಂದೇ ಒಂದು ಗುಂಡಿನ ಸದ್ದು ಕೇಳಿ ಬಂದಿರಲಿಲ್ಲ. 1967ರಲ್ಲಿ ಸಿಕ್ಕಿಂ ವಲಯದಲ್ಲಿ ಕಟ್ಟಕಡೆಯದಾಗಿ ಗುಂಡಿನ ದಾಳಿ ನಡೆದಿರುವ ಬಗ್ಗೆ ವರದಿಯಾಗಿತ್ತು.
ಸಿಕ್ಕಿಂ ಸೆಕ್ಟರ್ ನಲ್ಲಿ ಗುಂಡಿನ ದಾಳಿ ನಡೆದಿದ್ದು ಏಕೆ?
ಸಿಕ್ಕಿಂ ಒಂದು ರಾಜ್ಯವಾಗಿದ್ದು, ಭಾರತ ವ್ಯಾಪ್ತಿಯಲ್ಲಿರುವ ಈ ಪ್ರದೇಶದಲ್ಲಿ ಹೋರಾಟ ಆರಂಭವಾಗಿದ್ದು ಏಕೆ ಎನ್ನುವುದಕ್ಕೆ ಹಲವು ರೀತಿಯ ಕಥೆಗಳಿವೆ. ಈ ಪೈಕಿ ಒಂದು ಕಾರಣವೆಂದರೆ ಚೀನಾದ ಕುರಿಗಳನ್ನು ಕಳುವು ಮಾಡಿದರು ಎಂದು ಚೀನಾ ದೂಷಿಸಿತ್ತು. ಆದರೆ ಇದರ ಹಿಂದೆ ವಿಸ್ತರಣಾವಾದದ ಷಡ್ಯಂತ್ರ ಅಡಗಿತ್ತು ಎಂದು ಹೇಳಲಾಗುತ್ತದೆ.
ಭಾರತ-ಚೀನಾ ಗಡಿ ಉದ್ವಿಗ್ನತೆ ಹಿಂದಿನ ರೋಚಕ ಇತಿಹಾಸ!
ಟಿಬೆಟ್ ಆಯ್ತು ಸಿಕ್ಕಿಂ ಮೇಲೆ ಕಣ್ಣು ಇರಿಸಿದ ಚೀನಾ
ಒಂದು ಹಂತದಲ್ಲಿ ಭಾರತದ ವ್ಯಾಪ್ತಿಯಲ್ಲೇ ಗುರುತಿಸಿಕೊಂಡಿದ್ದ ಟಿಬೆಟ್ ನ್ನು ಚೀನಾ ಆಕ್ರಮಿಸಿಕೊಂಡಿದ್ದು ಆಗಿದೆ. ಇದೀಗ ಭಾರತದ ಮತ್ತೊಂದು ಗಡಿ ಪ್ರದೇಶವಾಗಿರುವ ಸಿಕ್ಕಿಂನ್ನು ವಶಕ್ಕೆ ಪಡೆಯಲು ಸಂಚು ರೂಪಿಸುತ್ತಿದೆ. 1962ರ ಯುದ್ಧದ ಸಂದರ್ಭದಲ್ಲಿ ದ್ರೋಹವೆಸಗಿದ ಚೀನಾ ಭಾರತದ ಜೊತೆಗೆ ಪಂಚಶೀಲ ಒಪ್ಪಂದವನ್ನು ಮಾಡಿಕೊಂಡಿದ್ದು, ಸಿಕ್ಕಿಂ ಗಡಿಯಲ್ಲಿರುವ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತ್ತು. ಅಂತಿಮವಾಗಿ ಭಾರತೀಯ ಸೇನೆ ಮತ್ತು ಇಂಜಿನಿಯರ್ಸ್ ತಂಡವು ಈ ಸೆಕ್ಟರ್ ನಲ್ಲಿ ಕತಿವರಸೆ ಕಾರ್ಯವನ್ನು ಶುರು ಮಾಡಿತು. ಭಾರತೀಯ ಗಡಿ ಪ್ರದೇಶದಲ್ಲಿ ಕಂದಕಗಳನ್ನು ಅಗೆಯುತ್ತಿದ್ದ ಚೀನಾ ಸೇನೆಯು ವಾಪಸ್ ತೆಗೆದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿತ್ತು.
ಉಭಯ ರಾಷ್ಟ್ರಗಳ ನಡುವೆ ಕಬ್ಬಿಣಗ ಬೇಲಿ
ಚೀನಾ ತೋರುತ್ತಿದ್ದ ಅತಿಕ್ರಮಣದ ಕ್ರಮಗಳನ್ನು ತಡೆಯಲು ಭಾರತವು ಗಡಿಯಲ್ಲಿ ಬೇಲಿಗಳನ್ನು ಹಾಕುವುದಕ್ಕೆ ತೀರ್ಮಾನಿಸಿತು. 1890ರ ಒಪ್ಪಂದದ ಪ್ರಕಾರ ಬ್ರಿಟಿಷರು ಮತ್ತು ಕ್ವಿಂಗ್ ರಾಜವಂಶದ ಚೀನಾ ನಡುವಿನ ಗಡಿಯಾಗಿ ಒಪ್ಪಿಕೊಂಡಿದ್ದ ನಾಥು ಲಾದಿಂದ ಸೆಬು ಲಾವರೆಗೆ ಉದ್ದವಾದ ಕಬ್ಬಿಣದ ಗೂಟಗಳನ್ನು ಹೂಳುವ ಮೂಲಕ ಬೇಲಿಯನ್ನು ನಿರ್ಮಿಸಲು ಮುಂದಾಗಿದ್ದು, ಇದಕ್ಕೂ ಕೂಡಾ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು.
ಗಡಿಯಲ್ಲಿ ತಂತಿ ಬೇಲಿ ದಾಟಿದ ಬಂದ ಚೀನಾ ಯೋಧರು
ಭಾರತ-ಚೀನಾ ಗಡಿಯಲ್ಲಿ ನಿರ್ಮಿಸಿದ್ದ ತಂತಿ ಬೇಲಿಯನ್ನು 1962ರ ಸಪ್ಟೆಂಬರ್.11ರಂದು ಚೀನಾ ಯೋಧರು ದಾಟಿ ಬಂದರು. ಅದಾಗಿ ಮೂರು ದಿನಕ್ಕೆ ನಾಥು ಲಾ ಗಡಿ ಪ್ರದೇಶದಲ್ಲಿ ಗುಂಡಿನ ಚಕಮಕಿ ಶುರುವಾಯಿತು. ಮುಂದಿನ ಮೂರು ದಿನಗಳಲ್ಲಿ ಗಡಿಯಲ್ಲಿ ಶೆಲ್ ದಾಳಿ ಹೆಚ್ಚಾಗಿದ್ದು, ಸಪ್ಟೆಂಬರ್.14ರಂದು ಪರಿಸ್ಥಿತಿ ಕೊಂಚ ತಿಳಿಗೊಂಡಿತು. ನಂತರದ ಎರಡು ದಿನಗಳಲ್ಲಿ ಗುಂಡಿನ ಚಕಮಕಿ ಮತ್ತು ದಾಳಿಯಲ್ಲಿ ಮೃತಪಟ್ಟ ಯೋಧರ ಮೃತದೇಹವನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಭಾರತ-ಚೀನಾ ಘರ್ಷಣೆ: ಚೈನೀಸ್ ಸೈನಿಕರ ಸಾವಿನ ಲೆಕ್ಕ ನೀಡಿದ ಯುಎಸ್
20 ದಿನಗಳಲ್ಲೇ ಮತ್ತೊಮ್ಮೆ ಮೊಳಗಿತು ಗುಂಡಿನ ಸದ್ದು
ನಾಥು ಲಾ ಗಡಿ ಪ್ರದೇಶದಲ್ಲಿ ಮೊದಲಿಗೆ ಸಪ್ಟೆಂಬರ್.11ರಂದು ಗುಂಡಿನ ದಾಳಿ ನಡೆಸಿದ್ದು, 14ರ ವೇಳೆಗೆಲ್ಲ ಪರಿಸ್ಥಿತಿ ತಿಳಿಗೊಂಡಿತ್ತು. ಅದಾಗಿ 20 ದಿನಗಳಲ್ಲೇ ಚೀನಾ ಮತ್ತೊಮ್ಮೆ ಕಾಲ್ಕೆರೆದು ಜಗಳಕ್ಕೆ ನಿಂತಿತ್ತು. ಚೋ ಲಾ ಪ್ರದೇಶದಲ್ಲಿ ಅಕ್ಟೋಬರ್.1ರಂದು ನಡೆದ ಪರಸ್ಪರ ದಾಳಿಯಲ್ಲಿ ಉಭಯ ರಾಷ್ಟ್ರಗಳಿಗೂ ತೀವ್ರ ಹಾನಿಯಾಯಿತು. ಭಾರತಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಚೀನಾಗೆ ನಷ್ಟ ಉಂಟಾಯಿತು. ಗುಂಡಿನ ದಾಳಿಯಲ್ಲಿ 80 ಭಾರತೀಯ ಯೋಧರು ಹುತಾತ್ಮರಾದರೆ 300 ರಿಂದ 400 ಚೀನೀ ಯೋಧರನ್ನು ಹೊಡೆದುರುಳಿಸಲಾಯಿತು. ಇದು ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ನಡೆದ ಕೊನೆಯ ಅತಿದೊಡ್ಡ ಪ್ರಮಾಣದ ಕಾದಾಟ ಎಂದು ಹೇಳಲಾಗಿದೆ.
1975ರಲ್ಲೂ ಕಾಲ್ಕೆರೆದು ಜಗಳಕ್ಕೆ ನಿಂತಿದ್ದ ಚೀನಾ
ಅರುಣಾಚಲ ಪ್ರದೇಶದಲ್ಲಿ 1975ರಲ್ಲಿ ಇಂಥದ್ದೇ ಮತ್ತೊಂದು ಘಟನೆ ನಡೆದಿತ್ತು. ಗಡಿಯಲ್ಲಿ ಗಸ್ತು ಕಾಯುತ್ತಿದ್ದ ಭಾರತೀಯ ಯೋಧರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ದಟ್ಟ ಮಂಜಿನ ಅಡಿಯಲ್ಲಿ ಸಿಲುಕಿ ಯೋಧರು ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿತ್ತು. ಇನ್ನೊಂದು ಹಂತದಲ್ಲಿ ಚೀನಾ ಯೋಧರೇ ನಾಲ್ವರು ಭಾರತೀಯ ಯೋಧರ ಮೇಲೆ ಗುಂಡು ಹಾರಿಸಿ ಕೊಂದಿದ್ದರು ಎಂದು ಆರೋಪವೂ ಕೇಳಿ ಬಂದಿತ್ತು.