'ಪಾಕ್' ಪಾರಿವಾಳದ ಕಾಲಿನಲ್ಲಿದ್ದ 'ರಹಸ್ಯ' ರಶೀದಿಯಲ್ಲಿ ಬರೆದಿದ್ದೇನು?
ಇಸ್ಲಮಾಬಾದ್, ಮೇ.28: ಭಾರತದ ರಹಸ್ಯ ಮಾಹಿತಿಗಳನ್ನು ಪಡೆಯುವುದಕ್ಕೆ ಪಾಕಿಸ್ತಾನ ಎಲ್ಲಿಲ್ಲದ ತಲೆ ಓಡಿಸುತ್ತಿರುತ್ತದೆ. ಉಗ್ರ ಸಂಘಟನೆಗಳನ್ನು ಎತ್ತಿ ಕಟ್ಟುವುದು, ಜಮ್ಮು-ಕಾಶ್ಮೀರ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುವುದು. ಇದರ ನಡುವೆ ಪಾಕ್ ಮತ್ತೊಂದು ಗೌಪ್ಯ ಮಾರ್ಗ ಕಂಡುಕೊಂಡಂತೆ ಕಾಣುತ್ತಿದೆ.
ಭಾರತೀಯ ಗಡಿರೇಖೆಯಲ್ಲಿ ಪಾರಿವಾಳಗಳನ್ನು ಹಾರಿ ಬಿಡುತ್ತಿರುವ ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಆದರೆ ಪಾರಿವಾಳನ್ನು ತಾನೇ ಹಾರಿ ಬಿಟ್ಟಿರುವುದಾಗಿ ಪಾಕಿಸ್ತಾನ ಮೂಲದ ಹಬೀಬುಲ್ಲಾ ಎಂಬುವವರು ಒಪ್ಪಿಕೊಂಡಿದ್ದಾರೆ.
ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ 'ಗೂಢಾಚಾರಿ ಪಾರಿವಾಳ' ಸೆರೆ
ಭಾರತದ ಗಡಿ ಪ್ರದೇಶದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ ವಾಸವಿರುವ ಹಬೀಬುಲ್ಲಾ, ರಂಜಾನ್ ಹಬ್ಬದ ಸಂಭ್ರಮದ ಸಂಕೇತವಾಗಿ ಈ ಪಾರಿವಾಳವನ್ನು ಹಾರಿ ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನದ 'ಡಾನ್' ಸುದ್ದಿಸಂಸ್ಥೆ ವರದಿ ಮಾಡಿದೆ.
"ನಾನು ಹಾರಿ ಬಿಟ್ಟ ಪಾರಿವಾಳ ಶಾಂತಿ ಸಂಕೇತ"
ಪಾಕಿಸ್ತಾನದ ಬಗ್ಗಾ-ಶಾಖಾಘರ್ ಗ್ರಾಮದ ಹಬೀಬುಲ್ಲಾ ಸ್ವತಃ ತಾವೇ ಪಾರಿವಾಳವನ್ನು ಹಾರಿ ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. 12ಕ್ಕೂ ಹೆಚ್ಚು ಪಾರಿವಾಳಗಳನ್ನು ಸಾಕುತ್ತಿರುವ ವ್ಯಕ್ತಿ, ರಂಜಾನ್ ಹಬ್ಬದ ಸಂಭ್ರಮದಲ್ಲಿ ಶಾಂತಿಯ ಸಂಕೇತವಾಗಿ ಪಾರಿವಾಳವನ್ನು ಹಾರಿ ಬಿಟ್ಟಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಜನರೇ ಸೆರೆ ಹಿಡಿದ ಪಾರಿವಾಳದ ಕಾಲಿನಲ್ಲಿ ರಶೀದಿ
ಕಳೆದ ಮೇ.25ರ ಸೋಮವಾರ ಜಮ್ಮು-ಕಾಶ್ಮೀರದ ಗಡಿ ಪ್ರದೇಶದ ಹಿರನಗರ್ ಸೆಕ್ಟರ್ ನ ಮನ್ಯಾರಿ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಹಾರಾಟ ನಡೆಸಿದ್ದ ಪಾರಿವಾಳವನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದರು. ತಾವು ಸೆರೆ ಹಿಡಿದ ಪಾರಿವಾಳವನ್ನು ಪೊಲೀಸರಿಗೆ ಒಪ್ಪಿಸಿದಾಗಿ ಅದರ ಕಾಲಿಗೆ ಯಾವುದೋ ಒಂದು ರಶೀದಿಯನ್ನು ಕಟ್ಟಿರುವುದು ಪೊಲೀಸರ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
ಪಾಕಿಸ್ತಾನದ ಗೂಢಾಚಾರಿಯಲ್ಲ ಆ ಪಾರಿವಾಳ
ಭಾರತದ ಗಡಿ ಪ್ರದೇಶದಲ್ಲಿ ಹಾರಾಟ ನಡೆಸಿದ ತಮ್ಮ ಪಾರಿವಾಳವು ಯಾವುದೇ ಗೂಢಚಾರಿ ಕೆಲಸಕ್ಕಾಗಿ ಬಳಸಿಕೊಂಡಿದ್ದಲ್ಲ. ಪಾರಿವಾಳದ ಕಾಲಿಗೆ ಕಟ್ಟಿರುವ ರಶೀದಿಯಲ್ಲಿ ಪತ್ತೆಯಾಗಿದ್ದು ನನ್ನ ಮೊಬೈಲ್ ಸಂಖ್ಯೆಯೇ ವಿನಃ ಯಾವುದೇ ಕೋಡ್ ವರ್ಡ್ ಅಲ್ಲ ಎಂದು ಹಬೀಬುಲ್ಲಾ ಹೇಳಿಕೆ ನೀಡಿದ್ದಾರೆ.
ಪಾಕ್ ಪಾರಿವಾಳ ಭಾರತದ ಗಡಿಯಲ್ಲಿ ಹಾರಿದ್ದು ಮೊದಲಲ್ಲ
ಇನ್ನು, ಜಮ್ಮು-ಕಾಶ್ಮೀರದ ಜಿದ್ದಾಜಿದ್ದಿನ ನಡುವೆಯೂ ಭಾರತದ ಗಡಿಯಲ್ಲಿ ಪಾಕಿಸ್ತಾನದ ಪಾರಿವಾಳಗಳು ಹಾರಾಟ ನಡೆಸುತ್ತಿರುವುದು ಇದೇ ಮೊದಲೇನೂ ಅಲ್ಲ. ಕಳೆದ 2015ರ ಮೇ ತಿಂಗಳಿನಲ್ಲಿ ಗಡಿಯಲ್ಲಿ ಹಾರಾಟ ನಡೆಸುತ್ತಿದ್ದ ಬಿಳಿ ಪಾರಿವಾಳವನ್ನು 14 ವರ್ಷದ ಬಾಲಕನು ಸೆರೆ ಹಿಡಿದಿದ್ದನು. 2016ರ ಅಕ್ಟೋಬರ್ ನಲ್ಲೂ ಕೂಡಾ ಇದೇ ರೀತಿ ಗಡಿ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಪಾರಿವಾಳವನ್ನು ಸೆರೆ ಹಿಡಿಯಲಾಗಿತ್ತು.