3ನೇ ಯುದ್ಧಕ್ಕೆ ಸರ್ವ ತಯಾರಿ, ಏಷ್ಯಾ-ಯುರೋಪ್ ಗಢಗಢ..!
ಯುರೋಪ್ ಹಾಗೂ ಏಷ್ಯಾ ಗಡಿಯಲ್ಲಿ ಪರಿಸ್ಥಿತಿ ಮತ್ತೊಮ್ಮೆ ಉದ್ವಿಗ್ನಗೊಂಡಿದೆ. ಏಷ್ಯಾ ಖಂಡಕ್ಕೆ ಸೇರುವ ಅರ್ಮೇನಿಯಾಗೂ, ಯುರೇಷಿಯಾದ ಭಾಗವಾಗಿರುವ ಅಜೆರ್ಬೈಜಾನ್ ನಡುವೆ ಭೀಕರ ಕಾಳಗ ಏರ್ಪಟ್ಟಿದೆ. ಇದು ಈಗಾಗಲೇ ಯುದ್ಧದ ಸನಿಹದಲ್ಲಿರುವ ಜಗತ್ತಿಗೆ ಶಾಕ್ ಕೊಟ್ಟಿದೆ. ಭಾರತ-ಚೀನಾ ನಡುವಿನ ಲಡಾಖ್ ಗಡಿ ಘರ್ಷಣೆ, ಅಮೆರಿಕ-ಚೀನಾ ನಡುವಿನ ಶೀತಲ ಸಮರ ಹಾಗೂ ತೈವಾನ್-ಚೀನಾ ಗಡಿ ಗಲಾಟೆಯಲ್ಲಿ ಮತ್ತೊಂದು ಯುದ್ಧ ಎಂಟ್ರಿಯಾಗಿದೆ.
ಬರೋಬ್ಬರಿ 25 ವರ್ಷಗಳಿಂದ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಮಧ್ಯೆ ಇದ್ದ ಗಡಿ ಗಲಾಟೆ ದಿಢೀರ್ ಭುಗಿಲೆದ್ದು 3ನೇ ಮಹಾಯುದ್ಧದ ಕಾರ್ಮೋಡ ಆವರಿಸುವಂತೆ ಮಾಡಿದೆ. ಎರಡೂ ರಾಷ್ಟ್ರಗಳ ಮಧ್ಯೆ ಯುದ್ಧ ಶುರುವಾಗಿ 5 ದಿನ ಕಳೆದಿದ್ದು, ಗುಂಡಿನ ಚಕಮಕಿ ಮತ್ತು ಮಿಸೈಲ್ ಕಾಳಗ ಎಗ್ಗಿಲ್ಲದೆ ಸಾಗಿದೆ. ಈಗಾಗಲೇ ಎರಡೂ ದೇಶಗಳ ನಡುವಿನ ಕಾದಾಟದಲ್ಲಿ ಸೈನಿಕರು ಸೇರಿದಂತೆ 500 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಇನ್ನು ಈ ಯುದ್ಧದ ಆರಂಭಕ್ಕೆ ಪ್ರಮುಖ ಕಾರಣವೇ ನಗೊರ್ನೊ-ಕರಬಾಖ್ ವಿವಾದಿತ ಭೂ ಪ್ರದೇಶ.
ಅರ್ಮೇನಿಯಾ- ಅಜರ್ ಬೈಜಾನ್ ನಡುವೆ ಯುದ್ಧ ಸ್ಫೋಟ
ಈ ಜಾಗದ ಮೇಲೆ ಹಕ್ಕು ಸಾಧಿಸುವುದಕ್ಕೆ ಎಂತಹ ಕೆಲಸಕ್ಕೂ ಎರಡೂ ದೇಶಗಳು ಸಜ್ಜಾಗಿ ನಿಂತಿವೆ. ಇದು ಬಲಿಷ್ಠ ರಾಷ್ಟ್ರಗಳನ್ನೂ ನಡುಗುವಂತೆ ಮಾಡಿದೆ. ಏಕೆಂದರೆ 3ನೇ ಮಹಾಯುದ್ಧದ ಜೊತೆ ಜೊತೆಗೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಬಹುದಾದ ಅಲ್ಲೋಲಕಲ್ಲೋಲ ಕೂಡ ಶ್ರೀಮಂತ ರಾಷ್ಟ್ರಗಳ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.
ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ. ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ನೂರಾರು ಅಮಾಯಕ ಜೀವಗಳು ಬಲಿಯಾಗುತ್ತಿವೆ. ಸದ್ಯದ ವರದಿಗಳ ಪ್ರಕಾರ ಈಗಾಗಲೇ 100ಕ್ಕೂ ಹೆಚ್ಚು ನಾಗರಿಕರು ಯುದ್ಧದ ಕೆನ್ನಾಲಿಗೆಗೆ ಬಲಿಯಾಗಿ ಹೋಗಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಗೂ ಕಂಟಕ
ಈಗಾಗಲೇ ಕೊರೊನಾ ಕಾಟಕ್ಕೆ ಬೇಸತ್ತಿರುವ ತೈಲ ಮಾರುಕಟ್ಟೆಗೆ ಮತ್ತೊಂದು ಸವಾಲು ಎದುರಾಗಿದೆ. ಈಗ ನಗೊರ್ನೊ ಹಾಗೂ ಕರಬಾಖ್ ವಿಚಾರವಾಗಿ ಭುಗಿಲೆದ್ದಿರುವ ಯುದ್ಧ ದಕ್ಷಿಣ ಕಾಕಸಸ್ ಪ್ರದೇಶದಲ್ಲಿ ಅಸ್ಥಿರತೆ ಮೂಡುವಂತೆ ಮಾಡಿದೆ. ದಕ್ಷಿಣ ಕಾಕಸಸ್ ಜಾಗತಿಕ ತೈಲ ಮಾರುಕಟ್ಟೆಗೆ ತೈಲ ಮತ್ತು ಅನಿಲ ಸಾಗಿಸೋದಕ್ಕೆ ಕಾರಿಡಾರ್ ಆಗಿದೆ. ದಕ್ಷಿಣ ಕಾಕಸಸ್ ಸುತ್ತಮುತ್ತಲ ಪ್ರದೇಶದಲ್ಲಿ ಯುದ್ಧ ನಡೆಯುತ್ತಿರುವಾಗ ಇಲ್ಲಿ ಸ್ಥಿರತೆ ನೆಲೆಸುವುದು, ಶಾಂತಿಯುತ ವ್ಯಾಪಾರ ನಡೆಯುವುದು ಕಷ್ಟಕರ. ಇದು ಜಾಗತಿಕ ತೈಲ ಮಾರುಕಟ್ಟೆಗೆ ಮತ್ತೆ ಕಂಟಕ ಎದುರಾಗುವ ಮುನ್ಸೂಚನೆ ನೀಡಿದೆ.
‘ಬನ್ನಿ ಮಾತಾಡೋಣ’ ಅಂತು ರಷ್ಯಾ..!
ನಿಮಗೆ ತಿಳಿದಿರಲಿ ಇಡೀ ಜಗತ್ತಿನ ಯಾವ ದೇಶವೂ ಹೊಂದಿರಲಾರದಷ್ಟು ಭೂಪ್ರದೇಶ ಸೋವಿಯತ್ನ ಪಾಲಾಗಿತ್ತು. ಸುಮಾರು 22 ಮಿಲಿಯನ್ ಸ್ಕ್ವೇರ್ ಕಿಲೋಮೀಟರ್ ಅಂದರೆ 2 ಅಮೆರಿಕ ಅಥವಾ 2 ಕೆನಡಾ ದೇಶಗಳಷ್ಟು ಅಥವಾ ಅದಕ್ಕಿಂತಲೂ ಹೆಚ್ಚಿನ ಭೂಮಿಯನ್ನು ಆಗ ಸೋವಿಯತ್ ಯೂನಿಯನ್ ಹೊಂದಿತ್ತು. ಅಂದು ಸೋವಿಯತ್ ಭಾಗವಾಗಿದ್ದ ಅರ್ಮೇನಿಯ ಮತ್ತು ಅಜೆರ್ಬೈಜಾನ್ ರಾಜ್ಯ ಅಥವಾ ಸೋವಿಯತ್ನ ಪ್ರಾಂತೀಯ ಸ್ಥಾನಮಾನ ಪಡೆದಿದ್ದವು. 1991ರಲ್ಲಿ ಸೋವಿಯತ್ ವಿಭಜನೆ ಆದಾಗ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ದೂರಾದವು. ಬಳಿಕ ಎರಡೂ ರಾಷ್ಟ್ರಗಳು ತುಂಡು ಭೂಮಿಗೆ ಕಚ್ಚಾಡುತ್ತಿವೆ. ಹೀಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಎರಡೂ ದೇಶಗಳ ನಾಯಕರಿಗೆ ಕರೆ ಮಾಡಿದ್ದು, ಸಂಧಾನಕ್ಕೆ ಬನ್ನಿ ಎಂದು ತಿಳಿಸಿದ್ದಾರೆ.
Recommended Video
‘ಜಗಳ ಬೇಡ ಪ್ಲೀಸ್’ ಎಂದ ವಿಶ್ವಸಂಸ್ಥೆ
ಕೊರೊನಾ ಕಾಡುತ್ತಿದೆ, ಆರ್ಥಿಕತೆ ಅಲ್ಲಾಡಿ ಹೋಗಿದೆ. ಹೀಗಿರುವಾಗ 3ನೇ ಮಹಾಯುದ್ಧದ ಮಾತುಗಳು ಜಗತ್ತನ್ನು ತಲ್ಲಣಗೊಳಿಸಿವೆ. ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಡುವೆ ಯುದ್ಧ ಆರಂಭವಾಗುತ್ತಿದ್ದಂತೆ, ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೋ ಗುಟೆರೆಸ್ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಶೀಘ್ರ ಗಡಿ ಭಾಗದಲ್ಲಿ ಉದ್ವಿಗ್ನತೆ ಶಮನಗೊಳಿಸಿ ಎಂದು ಎರಡೂ ದೇಶಗಳಿಗೆ ಸಲಹೆ ನೀಡಿದ್ದಾರೆ. ಹಾಗೇ ರಾಜತಾಂತ್ರಿಕ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಸಾಧ್ಯ, ಇಂತಹ ಸಂದರ್ಭದಲ್ಲಿ ಹಿಂಸೆ ಮಾರ್ಗವಲ್ಲ ಎಂದಿದ್ದಾರೆ. ಇಷ್ಟೆಲ್ಲದರ ಮಧ್ಯೆ ಜಾಗತಿಕ ಸಮುದಾಯದ ಮನವಿಗೆ ಅರ್ಮೇನಿಯ, ಅಜೆರ್ಬೈಜಾನ್ ಬೆಲೆ ನೀಡುತ್ತವಾ, ಇಲ್ಲ ರೊಚ್ಚಿಗೆದ್ದಿರುವ ಎರಡೂ ರಾಷ್ಟ್ರಗಳು ಬಡಿದಾಟ ಮುಂದುವರಿಸುತ್ತವಾ ಕಾದು ನೋಡಬೇಕಿದೆ.