ಯುದ್ಧಕ್ಕೆ ಸಿದ್ಧವಾಯ್ತಾ ರಷ್ಯಾ, ಮಾತು ಕೇಳದವರಿಗೆ ಶಾಕ್..!
ಅರ್ಮೇನಿಯಾ-ಅಜೆರ್ಬೈಜಾನ್ ನಡುವೆ ಆರಂಭವಾಗಿದ್ದ ಯುದ್ಧಕ್ಕೆ ಇನ್ನೇನು ಬ್ರೇಕ್ ಬಿತ್ತು ಎನ್ನುವಾಗಲೇ ಮತ್ತೆ ರಕ್ತಪಾತವಾಗಿದೆ. ನಿನ್ನೆ ರಷ್ಯಾ ನೇತೃತ್ವದಲ್ಲಿ ಅರ್ಮೇನಿಯಾ-ಅಜೆರ್ಬೈಜಾನ್ ದೇಶಗಳ ಮುಖ್ಯಸ್ಥರು ಮಾಸ್ಕೋದಲ್ಲಿ ಸಭೆ ಸೇರಿದ್ದರು. ಪುಟಿನ್ ಆದೇಶದ ಹಿನ್ನೆಲೆಯಲ್ಲಿ ರಷ್ಯಾ ಉನ್ನತಾಧಿಕಾರಿಗಳು ಸಭೆಯನ್ನು ಆಯೋಜಿಸಿದ್ದರು.
ಚುನಾವಣೆ ಸಿದ್ಧತೆಯಲ್ಲಿರುವ ಅಮೆರಿಕ, ರಷ್ಯಾ ನೇತೃತ್ವದಲ್ಲಿ ಅರ್ಮೇನಿಯಾ-ಅಜೆರ್ಬೈಜಾನ್ ಯುದ್ಧಕ್ಕೆ ಬ್ರೇಕ್ ಹಾಕುವ ಸಲುವಾಗಿ ಸಂಧಾನ ಮಾತುಕತೆ ನಡೆಯಲಿದೆ. ಇದಕ್ಕಾಗಿ ರಷ್ಯಾ ರಾಜಧಾನಿ ಮಾಸ್ಕೋ ಸಜ್ಜಾಗಿ ನಿಂತಿದೆ.
ಯುದ್ಧ ನಿಲ್ಲಿಸುವ ಪ್ರಯತ್ನ ವಿಫಲ, ಸೈನಿಕರು ಸೇರಿ ಸಾವಿರಾರು ಮಂದಿ ಬಲಿ
ಹೀಗೆ ಮ್ಯಾರಥಾನ್ ಸಭೆ ನಂತರ ಯುದ್ಧ ನಿಲ್ಲಿಸಲು ಅರ್ಮೇನಿಯಾ-ಅಜೆರ್ಬೈಜಾನ್ ಒಪ್ಪಿದ್ದವು. ಆದರೆ ಹೀಗೆ ಯುದ್ಧ ನಿಲ್ಲಿಸಲು ಒಪ್ಪಿ ಕೆಲವೇ ನಿಮಿಷಗಳಲ್ಲಿ ಮತ್ತೆ ದಾಳಿ, ಪ್ರತಿದಾಳಿ ನಡೆಸಿವೆ. ಈ ಮೂಲಕ ಅರ್ಮೇನಿಯಾ-ಅಜೆರ್ಬೈಜಾನ್ ಗಡಿಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ರಷ್ಯಾ ಪಟ್ಟ ಶ್ರಮವೂ ವ್ಯರ್ಥವಾಗಿ ಹೋಗಿದೆ. ಎರಡೂ ದೇಶಗಳ ಸೈನಿಕರು ಮಿಸೈಲ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಅರ್ಮೇನಿಯ v/s ಅಜೆರ್ಬೈಜಾನ್: 3 ಸಾವಿರ ಸೈನಿಕರ ಸಾವು
ಆದರೆ ಇದರಲ್ಲಿ ತಪ್ಪು ಯಾರದ್ದು ಅಂತಾ ಒಪ್ಪಿಕೊಳ್ಳಲು ಅರ್ಮೇನಿಯಾ-ಅಜೆರ್ಬೈಜಾನ್ ನಾಯಕರು ಸಿದ್ಧರಿಲ್ಲ. ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುತ್ತಾ ಜನರ ನೆಮ್ಮದಿಗೆ ಬೆಂಕಿ ಇಟ್ಟಿದ್ದಾರೆ. ಈಗಾಗಲೇ ಸಾವಿರಾರು ಜನ ಕಚ್ಚಾಟಕ್ಕೆ ಬಲಿಯಾಗಿದ್ದು, ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಗಿದೆ. ಮನೆ, ಆಹಾರ, ಹಣ ಎಲ್ಲವನ್ನೂ ಕಳೆದುಕೊಂಡು ಎರಡೂ ದೇಶಗಳ ಜನರು ಬೀದಿ ಬೀದಿ ಅಲೆಯುತ್ತಿದ್ದಾರೆ. ಆದರೆ ಯುದ್ಧ ನಿಲ್ಲಿಸಲು ಅರ್ಮೇನಿಯಾ-ಅಜೆರ್ಬೈಜಾನ್ ನಾಯಕರಿಗೆ ಬದ್ಧತೆಯೇ ಇಲ್ಲದಂತೆ ತೋರುತ್ತಿದೆ.
ಅಖಾಡಕ್ಕೆ ರಷ್ಯಾ ಸೇನೆ ಎಂಟ್ರಿ..?
ಇಷ್ಟೆಲ್ಲದರ ಮಧ್ಯೆ ಅರ್ಮೇನಿಯಾ-ಅಜೆರ್ಬೈಜಾನ್ ನಾಯಕರಿಗೆ ಮತ್ತೊಂದು ಭಯ ಕಾಡುತ್ತಿದೆ. ಖುದ್ದು ರಷ್ಯಾ ಅಧ್ಯಕ್ಷರೇ ಎರಡೂ ದೇಶಗಳಿಗೆ ಯುದ್ಧ ನಿಲ್ಲಿಸುವಂತೆ ತಾಕೀತು ಮಾಡಿದ್ದರು. ಆದರೆ ಸೊಕ್ಕು ಬಿಡದೆ ಎರಡೂ ದೇಶಗಳು ಯುದ್ಧ ಮುಂದುವರಿಸಿವೆ.
ಹೀಗಾಗಿ ರಷ್ಯಾ ಸೇನೆಯೇ ಖುದ್ದು ಅಖಾಡಕ್ಕೆ ಎಂಟ್ರಿಯಾಗಿ ಅರ್ಮೇನಿಯಾ-ಅಜೆರ್ಬೈಜಾನ್ ಹೆಡೆಮುರಿ ಕಟ್ಟಲಿದೆ ಎನ್ನಲಾಗ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಗಡಿಯಲ್ಲಿ ಹಲವು ಬೆಳವಣಿಗೆಗಳು ನಡೆದಿವೆ. ಈ ಹಿಂದೆ ಅರ್ಮೇನಿಯಾ-ಅಜೆರ್ಬೈಜಾನ್ 'ಸೋವಿಯತ್ ರಷ್ಯಾ'ಗೆ ಸೇರಿದ್ದವು.
ಹೀಗೆ ದಶಕಗಳ ಹಿಂದೆ ಸೋವಿಯತ್ ವಿಭಜನೆ ನಂತರ ದೂರವಾದ ತಮ್ಮದೇ ದೇಶದ ಭೂ ಪ್ರದೇಶಗಳ ಮೇಲೆ ರಷ್ಯಾ ಹಕ್ಕು ಪ್ರತಿಪಾದಿಸುವ ಸಾಧ್ಯತೆ ದಟ್ಟವಾಗಿದೆ. ಅಕಸ್ಮಾತ್ ರಷ್ಯಾ ಸೇನೆ ಯುದ್ಧಕ್ಕೆ ಎಂಟ್ರಿ ಕೊಟ್ಟರೆ, ಅರ್ಮೇನಿಯಾ-ಅಜೆರ್ಬೈಜಾನ್ ಸೇನೆಗಳು ಓಡಿ ಹೋಗದೆ ಬೇರೆ ದಾರಿಯೇ ಇಲ್ಲ.
ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ.
ಅರ್ಮೇನಿಯಾ- ಅಜರ್ ಬೈಜಾನ್ ನಡುವೆ ಯುದ್ಧ ಸ್ಫೋಟ
ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ. ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ನೂರಾರು ಅಮಾಯಕ ಜೀವಗಳು ಬಲಿಯಾಗುತ್ತಿವೆ.
3ನೇ ಮಹಾಯುದ್ಧಕ್ಕೆ ಕಾರಣವಾಗುತ್ತಾ ಈ ಕೋಳಿ ಜಗಳ..?
ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಯುದ್ಧದಿಂದ ಇಡೀ ವಿಶ್ವಕ್ಕೆ ನಷ್ಟ ಕಾಡಲಿದೆ. ಏಕೆಂದರೆ ಈಗ ಯುದ್ಧ ನಡೆಯುತ್ತಿರುವ ಪ್ರದೇಶ ವಿಶ್ವಕ್ಕೆ ತೈಲ ಸರಬರಾಜು ಪ್ರಮುಖ ಜಾಗ. ಇಲ್ಲಿಂದ ಬಹುಪಾಲು ತೈಲ ವ್ಯವಹಾರ ನಡೆಯುತ್ತಿದೆ. ಆದರೆ ಈಗ ಯುದ್ಧ ನಡೆಯುತ್ತಿರುವುದು ಭಾರಿ ಆತಂಕ ಮೂಡಿಸಿದೆ.
ಮತ್ತೊಂದು ಕಡೆ 3ನೇ ಮಹಾಯುದ್ಧಕ್ಕೂ ಈ ಕೋಳಿ ಜಗಳ ದಾರಿ ಮಾಡಿಕೊಡುವ ಸಾಧ್ಯತೆ ದಟ್ಟವಾಗಿರುವುದು ಆತಂಕ ಹೆಚ್ಚಿಸಿದೆ. ಏಕೆಂದರೆ ಅರ್ಮೇನಿಯಾ ಏಷ್ಯಾ ಖಂಡಕ್ಕೆ ಸೇರಿದರೆ, ಅಜೆರ್ಬೈಜಾನ್ ಯುರೇಷಿಯಾ ಭಾಗವಾಗಿದೆ. ಈ ಕಾರಣಕ್ಕೆ ಜಗತ್ತು ಮತ್ತೆ ಇಬ್ಭಾಗವಾಗುವ ಆತಂಕ ಎದುರಾಗಿದೆ.
ಜಾಗತಿಕ ತೈಲ ಮಾರುಕಟ್ಟೆಗೂ ಕಂಟಕ
ಈಗಾಗಲೇ ಕೊರೊನಾ ಕಾಟಕ್ಕೆ ಬೇಸತ್ತಿರುವ ತೈಲ ಮಾರುಕಟ್ಟೆಗೆ ಮತ್ತೊಂದು ಸವಾಲು ಎದುರಾಗಿದೆ. ಈಗ ನಗೊರ್ನೊ ಹಾಗೂ ಕರಬಾಖ್ ವಿಚಾರವಾಗಿ ಭುಗಿಲೆದ್ದಿರುವ ಯುದ್ಧ ದಕ್ಷಿಣ ಕಾಕಸಸ್ ಪ್ರದೇಶದಲ್ಲಿ ಅಸ್ಥಿರತೆ ಮೂಡುವಂತೆ ಮಾಡಿದೆ. ದಕ್ಷಿಣ ಕಾಕಸಸ್ ಜಾಗತಿಕ ತೈಲ ಮಾರುಕಟ್ಟೆಗೆ ತೈಲ ಮತ್ತು ಅನಿಲ ಸಾಗಿಸೋದಕ್ಕೆ ಕಾರಿಡಾರ್ ಆಗಿದೆ. ದಕ್ಷಿಣ ಕಾಕಸಸ್ ಸುತ್ತಮುತ್ತಲ ಪ್ರದೇಶದಲ್ಲಿ ಯುದ್ಧ ನಡೆಯುತ್ತಿರುವಾಗ ಇಲ್ಲಿ ಸ್ಥಿರತೆ ನೆಲೆಸುವುದು, ಶಾಂತಿಯುತ ವ್ಯಾಪಾರ ನಡೆಯುವುದು ಕಷ್ಟಕರ. ಇದು ಜಾಗತಿಕ ತೈಲ ಮಾರುಕಟ್ಟೆಗೆ ಮತ್ತೆ ಕಂಟಕ ಎದುರಾಗುವ ಮುನ್ಸೂಚನೆ ನೀಡಿದೆ.