ಶ್ರೀಲಂಕಾ ದಾಳಿಯಲ್ಲಿ ಐಎಸ್ ಐಎಸ್ ಕೈವಾಡ; ಪಟಪಟಿಸಿತು ಬಾವುಟ
ಕೊಲಂಬೋ (ಶ್ರೀಲಂಕಾ), ಏಪ್ರಿಲ್ 23: ಶ್ರೀಲಂಕಾದಲ್ಲಿ ನಡೆದ ಭೀಕರ ದಾಳಿಯ ಹಿಂದೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಕೈವಾಡ ಇರುವುದನ್ನು ಸೂಚಿಸುವಂತೆ ಆನ್ ಲೈನ್ ವಿಡಿಯೋವೊಂದು ಬಿಡುಗಡೆ ಆಗಿದೆ. ಈ ದಾಳಿ ಕೈಗೊಂಡ ಆತ್ಮಹತ್ಯಾ ಬಾಂಬರ್ ಇಸ್ಲಾಮಿಕ್ ಸ್ಟೇಟ್ ನ ಬಾವುಟ ಪ್ರದರ್ಶಿಸಿರುವುದು ಕಂಡುಬಂದಿದೆ.
ಕೊಲಂಬೋ ಹಾಗೂ ಸುತ್ತಮುತ್ತ ನಡೆದ ಒಂಬತ್ತು ಪ್ರತ್ಯೇಕ ಸ್ಫೋಟದಲ್ಲಿ ಹತ್ತಿರ ಹತ್ತಿರ ಮುನ್ನೂರು ಮಂದಿ ಸಾವನ್ನಪ್ಪಿ, ಐನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಶ್ರೀಲಂಕಾದ ಇತಿಹಾಸದಲ್ಲೇ ಅತ್ಯಂತ ಭೀಕರ ಭಯೋತ್ಪಾದನಾ ದಾಳಿ ಇದು ಎನ್ನಲಾಗುತ್ತಿದೆ. ಒಟ್ಟು ಏಳು ಆತ್ಮಹತ್ಯಾ ಬಾಂಬರ್ ಗಳ ಬಳಕೆಯಾಗಿದ್ದು, ಎಲ್ಲರೂ ಲಂಕನ್ನರೇ ಎಂದು ಖಾತ್ರಿ ಆಗಿದೆ.
ಶ್ರೀಲಂಕಾ ಸ್ಫೋಟ: ಚರ್ಚ್ ದಾಳಿಗೂ ಮೊದಲು ಉಗ್ರನನ್ನು ಪ್ರಶ್ನಿಸಿದ್ದ ಪಾದ್ರಿ
ಜತೆಗೆ ಸುನ್ನಿ ಜಿಹಾದಿ ಗುಂಪಾದ ನ್ಯಾಷನಲ್ ತೌಹಿತ್ ಜಮಾತ್ (ಎನ್ ಟಿಜೆ)ಗೆ ಸೇರಿದವರು. ಈ ಉಗ್ರ ಸಂಘಟನೆ ಆರಂಭವಾಗಿರುವುದು ಮೂರು ವರ್ಷದ ಹಿಂದಷ್ಟೇ. ಈ ವರೆಗೆ ಬೆರಳೆಣಿಕೆಯ ಕೃತ್ಯಗಳ ಹೊಣೆ ಹೊತ್ತುಕೊಂಡಿದೆ. 2016ರಲ್ಲಿ ಇಸ್ಲಾಂ ಮೂಲಭೂತವಾದಿಗಳಿಂದ ಆರಂಭವಾದ ಈ ಸಂಘಟನೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಬೆಳಕಿಗೆ ಬಂದಿದ್ದು 2018ರಲ್ಲಿ.
ಶ್ರೀಲಂಕಾವನ್ನು ಅಸ್ಥಿರಗೊಳಿಸುವ ಪ್ರಯತ್ನ
ಸಿಂಹಳಿ ಬೌದ್ಧರು ಸರಣಿಯಾಗಿ ಮುಸ್ಲಿಂ ವಿರೋಧಿ ಕಾರ್ಯಕ್ರಮಗಳನ್ನು ನಡೆಸಿದರು ಅದಕ್ಕೆ ಉತ್ತರ ಎಂಬಂತೆ ಕಳೆದ ವರ್ಷ ಎನ್ ಟಿಜೆ ದಾಳಿ ಸಂಘಟಿಸಿತ್ತು. ಶ್ರೀಲಂಕಾವನ್ನು ಅಸ್ಥಿರಗೊಳಿಸಬೇಕು ಎಂಬ ಕಾರಣಕ್ಕೆ ಭಾನುವಾರ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.
ನೂರು ಬಾಂಬ್ ಡಿಟೋನೇಟರ್ಸ್
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕೇಂದ್ರ ಕೊಲಂಬೋ ಬಸ್ ನಿಲ್ದಾಣದಲ್ಲಿ ನೂರು ಬಾಂಬ್ ಡಿಟೋನೇಟರ್ಸ್ ಸೋಮವಾರ ಪತ್ತೆಯಾಗಿತ್ತು. ಕೊಲಂಬೋದ ಚರ್ಚ್ ವೊಂದರ ಬಳಿ ನಿಲ್ಲಿಸಿದ್ದ ವಾಹನದಲ್ಲಿ ಸಿಡಿಯದಿದ್ದ ಬಾಂಬ್ ಪತ್ತೆಯಾಗಿತ್ತು. ಬಂಡಾರನಾಯಿಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭಾನುವಾರ ರಾತ್ರಿ ಸಿಡಿಯದೆ ಉಳಿದಿದ್ದ ಪೈಪ್ ಬಾಂಬ್ ಪತ್ತೆಯಾಗಿತ್ತು.
ಶ್ರೀಲಂಕಾದಲ್ಲಿ ಸರಣಿ ಆತ್ಮಾಹುತಿ ಬಾಂಬ್ ಸಿಡಿಸಿದ ಉಗ್ರರು ಎಲ್ಲಿಯವರು?
ಎನ್ ಟಿಜೆಯನ್ನು ನಿಯಂತ್ರಿಸುವವರು ಬೇರೆಲ್ಲೊ ಇದ್ದಾರೆ
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ ಐಎಸ್)ದ ಕೈವಾಡ ಈ ಸರಣಿ ಸ್ಫೋಟದಲ್ಲಿ ಇರುವ ಬಗ್ಗೆ ಮೊದಲು ತಿಳಿಸಿದ್ದು ಭಾರತೀಯ ಗುಪ್ತಚರ ಇಲಾಖೆ ಅಧಿಕಾರಿಗಳು. ಭಾರತೀಯ ಆಧಿಕಾರಿಯೊಬ್ಬರು ಮಾತನಾಡಿ, ಎನ್ ಟಿಜೆ ಎಂಬುದು ಕಾಲಾಳುಗಳ ಪಡೆಯಂತೆ ಅಷ್ಟೇ. ಸ್ವತಂತ್ರವಾಗಿ ಕೆಲಸ ಮಾಡಲಾರದು. ಅದನ್ನು ನಿಯಂತ್ರಿಸುವವರು ಬೇರೆಲ್ಲೋ ಇದ್ದಾರೆ ಎಂದಿದ್ದಾರೆ.
ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ; ಇಪ್ಪತ್ನಾಲ್ಕು ಮಂದಿ ವಶಕ್ಕೆ
ಇನ್ನಷ್ಟು ದಾಳಿ ನಡೆಸುವ ಎಚ್ಚರಿಕೆ ನೀಡಿದ ಐಎಸ್ ಐಎಸ್
ಈ ಮಧ್ಯೆ ಐಎಸ್ ಐಎಸ್ ನ ವಿಡಿಯೋವೊಂದು ಬಿಡುಗಡೆ ಆಗಿದ್ದು, ಇಸ್ಲಾಮಿಕ್ ಸ್ಟೇಟ್ ನ ಸೈನಿಕರು ಎಲ್ಲೆಡೆ ಇದ್ದಾರೆ. ಧಾರ್ಮಿಕ ನಂಬಿಕೆ ಇಲ್ಲದ ಸ್ಥಳಗಳಲ್ಲಿ ಇಂಥ ಸ್ಫೋಟಗಳು ಆಗುತ್ತಲೇ ಇರುತ್ತವೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ. ಸೋಮವಾರ ಮಧ್ಯರಾತ್ರಿಯಿಂದ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಅದು ಕೆಲವು ವಾರಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ರಾಷ್ಟ್ರೀಯ ಭದ್ರತಾ ಸಮಿತಿ ಜತೆಗೆ ಸಭೆ ನಡೆಸಿದ ನಂತರ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಈ ನಿರ್ಧಾರ ಮಾಡಿದ್ದಾರೆ.