BREAKING: ಉತ್ತರಖಂಡ ಪ್ರವಾಹದಲ್ಲಿ ಸಿಲುಕಿದ ಐವರು ಕನ್ನಡಿಗರು
ಬೆಂಗಳೂರು, ಅ 20: ಉತ್ತರಾಖಂಡದಲ್ಲ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದ್ದು, ಐವರು ಕನ್ನಡಿಗರು ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಮೂಲದ ಮೂವರು, ಉಡುಪಿಯ ಒಬ್ಬರು ಹಾಗೂ ವಿಜಯಪುರದ ಒಬ್ಬರು ಪ್ರವಾಹದಲ್ಲಿ ಸಿಲುಕಿ ಪರಿಹಾರಕ್ಕಾಗಿ ಮೊರೆ ಇಟ್ಟಿದ್ದಾರೆ ಎನ್ನಲಾಗಿದೆ.
ಇಶಾ ಫೌಂಡೇಷನ್ ಮೂಲಕ ಉತ್ತರಖಂಡ ಪ್ರವಾಸ ತೆರಳಿದ್ದ ಬೆಂಗಳೂರು ಯಲಹಂಕ ಮೂಲದ ರಿತೇಶ್ ಭಟ್ ಎಂಬುವವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಮಂಗಳವಾರ ಕರೆ ಮಾಡಿದ್ದ ರಿತೇಶ್ ಭಟ್ ತಾವು ಸುರಕ್ಷಿತ ಇರುವುದಾಗಿ ಹೇಳಿದ್ದರು. ರಸ್ತೆ ಬ್ಲಾಕ್ ಆಗಿವೆ. ರಸ್ತೆ ದುರಸ್ತಿ ಬಳಿಕ ಬರುತ್ತೇನೆ ಎಂದು ಹೇಳಿದ್ದರು. ಆದರೆ, ಇಂದು ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಭಾರಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೊಬೈಲ್ ಸ್ವಿಚ್ ಆಫ್ ಆಗಿರುವ ಸಾಧ್ಯತೆ ಇದೆ. ಇಶಾ ಫೌಂಡೇಷನ್ ಮೂಲಕ ತಂಡದಲ್ಲಿ ತೆರಳಿರುವುದರಿಂದ ಇತರೆ ಪ್ರವಾಸಿಗರೂ ಜೊತೆಯಲ್ಲಿದ್ದಾರೆ. ಹೀಗಾಗಿ ಆತಂಕ ಪಡುವ ಆಗತ್ಯ ಇಲ್ಲ ಎನ್ನಲಾಗಿದೆ.
ಸಹಾಯವಾಣಿ:
ಉತ್ತರಖಂಡ ರಾಜ್ಯದಲ್ಲಿ ಭಾರೀ ಪ್ರವಾಹದಲ್ಲಿ ಪ್ರವಾಹದಲ್ಲಿ ಕರ್ನಾಟಕದ ಪ್ರವಾಸಿಗರು ಸಿಲುಕಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸಹಾಯವಾಣಿ ಆರಂಭಿಸಿದೆ.
ಈಗಾಗಲೇ ಉತ್ತರಖಂಡ, ಚಾರ್ಧಾಮ ಪ್ರವಾಸಕ್ಕೆ ತೆರಳಿರುವ ಕನ್ನಡಿಗ ಪ್ರವಾಸಿಗರು, ಪರಿಹಾರ ಕಾರ್ಯಗಳ ಕುರಿತು, ಕನ್ನಡಿಗರ ರಕ್ಷಣೆ ಕುರಿತು ಯಾವುದೇ ಮಾಹಿತಿಯನ್ನು ಪಡೆಯಬಹುದಾಗಿದೆ. ಸಹಾಯವಾಣಿ ನಂಬರ್ - 080-22340676
ಉತ್ತರಖಂಡದಲ್ಲಿ ವರುಣನ ರೌದ್ರನರ್ತನಕ್ಕೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಪ್ರವಾಹ, ಭೂಕುಸಿತ ಸೇರಿದಂತೆ ಮಳೆ ಸಂಬಂಧಿತ ಘಟನೆಗಳಲ್ಲಿ ಈವರೆಗೂ ಸಾವಿನ ಮನೆ ಸೇರಿದವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಉತ್ತರಖಂಡಕ್ಕೆ ಆಗಮಿಸಿರುವ ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಗಳು ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ರಾಜ್ಯದಲ್ಲಿ ಒಟ್ಟು 15 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸಲಾಗಿದ್ದು, ಈವರೆಗೂ 300ಕ್ಕೂ ಹೆಚ್ಚು ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಮೂರು ಐಎಎಫ್ ಚಾಪರ್ಗಳು ರಾಜ್ಯಕ್ಕೆ ಆಗಮಿಸಿದ್ದು, ಈ ಪೈಕಿ ಎರಡನ್ನು ನೈನಿತಾಲ್ನಲ್ಲಿ ನಿಯೋಜಿಸಲಾಗಿದೆ.
Recommended Video