ಅಫ್ಘಾನ್ ಬಿಕ್ಕಟ್ಟು; ತುರ್ತಾಗಿ ಒಪ್ಪಂದಕ್ಕೆ ಬರಲೇಬೇಕಿದೆ ಎಂದ ಯುಎನ್ ನಿರಾಶ್ರಿತ ಸಂಸ್ಥೆ
ಕಾಬೂಲ್, ಸೆಪ್ಟೆಂಬರ್ 15: ಅಫ್ಘಾನಿಸ್ತಾನದ ಬಿಕ್ಕಟ್ಟನ್ನು ನಿವಾರಿಸಿ ಸ್ಥಿರತೆ ತರುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯಗಳು ಹಾಗೂ ತಾಲಿಬಾನ್ ಪರಸ್ಪರ ವ್ಯವಹಾರ ಮಾರ್ಗವನ್ನು ಕಂಡುಕೊಳ್ಳುವುದು ಅವಶ್ಯಕವಾಗಿದೆ ಎಂದು ಯುಎನ್ ನಿರಾಶ್ರಿತರ ಸಂಸ್ಥೆ ಮುಖ್ಯಸ್ಥ ಫಿಲಿಪ್ಪೊ ಗ್ರ್ಯಾಂಡಿ ಹೇಳಿದ್ದಾರೆ.
ಅಸೋಸಿಯೇಟ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಈ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. 'ಜಗತ್ತು ಕಠಿಣ ಆಯ್ಕೆಯನ್ನು ಹೊಂದಿದೆ. ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಹೆಚ್ಚಾಗುವ ಅಪಾಯವನ್ನು ನಿವಾರಿಸಬೇಕಾಗಿದೆ. ಇದರೊಂದಿಗೆ, ತಾಲಿಬಾನ್ ಸರ್ಕಾರಕ್ಕೆ ಬೆಂಬಲ ನೀಡುವ ಅಥವಾ ನೀಡದೇ ಇರುವ ಕುರಿತ ಗೊಂದಲದ ನಡುವೆ ಅಂತರರಾಷ್ಟ್ರೀಯ ಸಮುದಾಯಗಳು ಸೂಕ್ತ ತೀರ್ಮಾನವನ್ನು ಕೈಗೊಳ್ಳಬೇಕಿದೆ' ಎಂದಿದ್ದಾರೆ.
ತಾಲಿಬಾನ್ ಆಕ್ರಮಿತ ಅಫ್ಘನ್ನಲ್ಲಿ ತಿಂಗಳ ನಂತರ ಎದುರಾಗಿದೆ ಆರ್ಥಿಕ ಬಿಕ್ಕಟ್ಟು
'ಅಂತರರಾಷ್ಟ್ರೀಯ ಸಮುದಾಯಗಳು ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ. ವಾಸ್ತವಿಕತೆ, ಅಫ್ಘಾನಿಸ್ತಾನದಲ್ಲಿ ಸ್ಥಿರತೆಯನ್ನು ತರುವ ಅವಶ್ಯಕತೆ ಹಾಗೂ ತಾಲಿಬಾನ್ ನೇತೃತ್ವದ ಸರ್ಕಾರಕ್ಕೆ ಬೆಂಬಲಿಸುವ ರಾಜಕೀಯ ನೀತಿಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಿದೆ' ಎಂದು ಗ್ರ್ಯಾಂಡಿ ಹೇಳಿದ್ದಾರೆ.
20 ವರ್ಷಗಳ ನಂತರ ತಾಲಿಬಾನ್ ಇದೇ ಆಗಸ್ಟ್ ತಿಂಗಳಿನಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ. ತನ್ನದೇ ನೂತನ ಸರ್ಕಾರ ರಚನೆ ಮಾಡಿದೆ. ಆದರೆ ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದ ತಾಲಿಬಾನ್, ಈಚೆಗೆ ತಾಲಿಬಾನ್ ನಾಯಕರನ್ನು ಒಳಗೊಂಡ ಮಧ್ಯಂತರ ಸರ್ಕಾರ ಘೋಷಣೆ ಮಾಡಿದೆ. ಸೂಕ್ತ ಸರ್ಕಾರ ರಚನೆ ಮಾಡುವವರೆಗೂ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡುವುದಿಲ್ಲ ಎಂದು ಹಲವು ದೇಶಗಳು ಸ್ಪಷ್ಟ ಸಂದೇಶ ರವಾನಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಗ್ರ್ಯಾಂಡಿ, 'ಸಾಮೂಹಿಕ ವಲಸೆಗೆ ಕಾರಣವಾಗಬಲ್ಲ ಹಿಂಸಾಚಾರಕ್ಕೆ ಎಡೆಮಾಡಿಕೊಡುವ ಆರ್ಥಿಕ ಕುಸಿತವನ್ನು ತಡೆಯಲು ತುರ್ತಾಗಿ ಒಪ್ಪಂದದ ಅಗತ್ಯವಿದೆ. ಈಗಾಗಲೇ ದುರ್ಬಲವಾಗಿರುವ ಅಫ್ಘಾನ್ ಆರ್ಥಿಕತೆಯಿಂದಾಗಿ ನೆರೆಹೊರೆಯ ದೇಶಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಪ್ರಪಂಚದಾದ್ಯಂತ ಏರಿಳಿತಗಳಿಗೆ ಕಾರಣವಾಗುತ್ತದೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕಾಬೂಲ್ನಲ್ಲಿ ಭಾರತ ಮೂಲದ ಅಫ್ಘಾನ್ ವ್ಯಕ್ತಿಯ ಅಪಹರಣ
'ಇದು ತುರ್ತಾಗಿ ನಡೆಯಬೇಕಾದ ಕಾರ್ಯವಾಗಿದೆ. ವರ್ಷಗಟ್ಟಲೆ ಚರ್ಚಿಸಿ ತೀರ್ಮಾನಕ್ಕೆ ಬರುವಂಥ ವಿಷಯ ಇದಲ್ಲ. ಆದರೆ ಇದಕ್ಕೆ ಎಲ್ಲಾ ಕಡೆಯಿಂದಲೂ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಪರಸ್ಪರ ಹೊಂದಾಣಿಕೆ ಮುಖ್ಯವಾಗುತ್ತದೆ. ಅಂತರರಾಷ್ಟ್ರೀಯ ಸಮುದಾಯಗಳು ಕೆಲವು ನಿಯಮಗಳನ್ನು ಅಳವಡಿಸಿಕೊಳ್ಳಬೇಕಿದೆ ಹಾಗೂ ತಾಲಿಬಾನ್ ಕೂಡ ಸೂಕ್ತ ಒಪ್ಪಂದಕ್ಕೆ ಒಳಗಾಗುವ ಅಗತ್ಯವಿದೆ' ಎಂದಿದ್ದಾರೆ.
ತಾಲಿಬಾನ್ ಸಚಿವರೊಂದಿಗೆ ಭೇಟಿಯಾಗಿ ಈ ಕುರಿತು ಮಾತನಾಡಿದ್ದು, ಅವರು ತಮ್ಮೊಳಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ. ಹಿಂದಿನ ನಿರ್ಬಂಧಗಳನ್ನು ಮುಕ್ತಗೊಳಿಸುವ ಸೂಚನೆ ನೀಡಿದ್ದಾರೆ. ಆದರೆ ಅವರ ಕಾರ್ಯಗಳಿಂದಷ್ಟೇ ನಿರ್ಣಯಕ್ಕೆ ಬರಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಮಾನವೀಯ ನೆಲೆಯಲ್ಲಿ ಅಫ್ಘಾನಿಸ್ತಾನದ ಅಗತ್ಯಗಳನ್ನು ಪೂರೈಸಲು ಜಾಗತಿಕ ಬೆಂಬಲವಿದೆ. ಇದಕ್ಕಾಗಿ ಸೋಮವಾರದವರೆಗೂ 1.2 ಶತಕೋಟಿ ಡಾಲರ್ಗಳನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡ ತಿಂಗಳ ನಂತರ ಇದೀಗ ದೇಶದಲ್ಲಿ ಒಂದೊಂದೇ ಸಮಸ್ಯೆಗಳು ಎದುರಾಗುತ್ತಿವೆ.
ಕಳೆದ 20 ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ನೂರಾರು ಶತಕೋಟಿ ಡಾಲರ್ ವೆಚ್ಚ ಮಾಡಿದ್ದು, ಸದ್ಯಕ್ಕೆ ಅಫ್ಘಾನಿಸ್ತಾನದ ಆರ್ಥಿಕತೆ ಕುಸಿಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಈ ತಿಂಗಳ ಅಂತ್ಯದ ವೇಳೆಗೆ ಆಹಾರ ಕೊರತೆ ಭಯಾನಕ ರೂಪ ತಾಳಬಹುದು ಎಂದು ಅಂದಾಜಿಸಲಾಗಿದೆ.
ತನ್ನ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟುಗಳಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡದೇ ಎಚ್ಚೆತ್ತುಕೊಳ್ಳದೇ ಇದ್ದರೆ ದೇಶ ಬಡತನ ರೇಖೆಗಿಂತ ಕೆಳಗೆ ಇಳಿಯುವ ಅಪಾಯದಲ್ಲಿದೆ ಎಂದು ಯುಎನ್ಡಿಪಿ ಕೂಡ ಎಚ್ಚರಿಕೆ ನೀಡಿದೆ. ಶತಕೋಟಿ ಡಾಲರ್ ವಿದೇಶಿ ನೆರವು ಅಫ್ಘಾನಿಸ್ತಾನಕ್ಕೆ ಹರಿದುಬಂದಿದ್ದರೂ ಅಫ್ಘಾನಿಸ್ತಾನದ ಆರ್ಥಿಕತೆ ಹೆಣಗುತ್ತಿದೆ. ಜನಸಂಖ್ಯೆ ಏರಿಕೆಗೆ ಅನುಗುಣವಾಗಿ ಬೆಳವಣಿಗೆ ಅಸಾಧ್ಯವೆನಿಸುತ್ತಿದೆ. ಉದ್ಯೋಗ ಕಳೆದುಕೊಂಡವರು ಒಂದೆಡೆಯಿದ್ದರೆ, ಅನೇಕ ಸರ್ಕಾರಿ ಉದ್ಯೋಗಿಗಳಿಗೆ ಕನಿಷ್ಠ ಜುಲೈ ತಿಂಗಳಿನಿಂದಲೂ ಸಂಬಳ ನೀಡಿಲ್ಲದಿರುವುದು ಆರ್ಥಿಕ ಬಿಕ್ಕಟ್ಟಿಗೆ ಒಂದು ಉದಾಹರಣೆಯಾಗಿದೆ.