ಕೊರೊನಾ ಹಾವಳಿ: ಸದಸ್ಯ ರಾಷ್ಟ್ರಗಳಿಗೆ ಮಹತ್ವದ ಸೂಚನೆ ನೀಡಿದ ವಿಶ್ವಸಂಸ್ಥೆ
ವಾಷಿಂಗ್ಟನ್, ಮೇ 14: ಕಳೆದ ಮೂರು ತಿಂಗಳಿನಿಂದ ಜಗತ್ತಿನಲ್ಲಿ ಕೊರೊನಾ ಮಹಾಮಾರಿಯಿಂದ ಸಹಜ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ಅನೇಕ ರಾಷ್ಟ್ರಗಳು ಲಾಕ್ಡೌನ್ ಜಾರಿ ಮಾಡಿವೆ.
ಲಾಕ್ಡೌನ್ ನಲ್ಲಿ ಜನ ಮನೆಯಿಂದ ಹೊರಗೆ ಬರಲಾಗದೇ, ಸಹಜ ಜೀವನ ನಡೆಸಲಾಗದೇ ತೊಂದರೆಯಲ್ಲಿ ಸಿಲುಕಿದ್ದಾರೆ. ಒಂದು ಕಡೆ ಕೋವಿಡ್ 19 ತಡೆಗಟ್ಟಲು ಲಾಕ್ಡೌನ್ ಅಗತ್ಯವಾದರೆ, ಇನ್ನೊಂದು ಕಡೆ ಲಾಕ್ಡೌನ್ ನಿಂದ ಅಡ್ಡ ಪರಿಣಾಮಗಳೂ ಹೆಚ್ಚಾಗುತ್ತಿವೆ.
ಕೊರೊನಾ ಮಹಾಮಾರಿ ನಮ್ಮಿಂದ ದೂರವಾಗದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಈ ಬಗ್ಗೆ ಇಂದು ವಿಶ್ವಸಂಸ್ಥೆ ತನ್ನ ಸದಸ್ಯ ರಾಷ್ಟ್ರಗಳಿಗೆ ಮಹತ್ವದ ಸೂಚನೆ ನೀಡಿದೆ. ''ಲಾಕ್ಡೌನ್ ನಿಂದ ಹಾಗೂ ಕೋವಿಡ್ ಹಾವಳಿಯಿಂದ ಜನರ ಮಾನಸಿಕ ಸಮತೋಲನದಲ್ಲಿ ಏರುಪೇರಾಗುವ ಸಂಭವವಿದೆ. ಹಾಗಾಗಿ ನಿಮ್ಮ ನಿಮ್ಮ ಪ್ರಜೆಗಳ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ'' ಎಂದು ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ಸೂಚನೆ ನೀಡಿದೆ.
ವಿನಾಶಕಾರಿ ದುರಂತವನ್ನೇ ಸೃಷ್ಟಿಸಿದೆ
''ಕೋವಿಡ್ 19 ಕಳೆದ ಮೂರು ತಿಂಗಳಿನಿಂದ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವಿನಾಶಕಾರಿ ದುರಂತವನ್ನೇ ಸೃಷ್ಟಿಸಿದೆ. ಇದನ್ನು ತಡೆಯಲು ಎಲ್ಲ ರಾಷ್ಟ್ರಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಕೆಲ ರಾಷ್ಟ್ರಗಳು ಯಶಸ್ವಿಯಾಗಿವೆ, ಇನ್ನೂ ಕೆಲವು ಹೋರಾಡುತ್ತಿವೆ. ಆದರೆ, ಇಂತಹ ಸನ್ನಿವೇಶ ಜನರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ'' ಎಂದು ವಿಶ್ವಸಂಸ್ಥೆ ಹೇಳಿದೆ.
ತಮ್ಮ ಪ್ರೀತಿ ಪಾತ್ರರಿಂದ ಹೆಚ್ಚು ದೂರವಾಗುತ್ತಿದ್ದಾರೆ
''ಕೋವಿಡ್ ತಡೆಯ ಮೊದಲ ಹಂತದಲ್ಲಿ ನಮಗೆಲ್ಲ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ಇತ್ತು. ಈಗ ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಜನರು ಹೆಚ್ಚು ಮಾನಸಿಕ ಕ್ಷೋಭೆಗಳಿಗೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ. ಯುರೋಪ, ಏಷ್ಯಾ, ಅಮೆರಿಕ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಕೋವಿಡ್ ಪರಿಣಾಮವಾಗಿ ಜನ ಹೆಚ್ಚು ಮಾನಸಿಕ ಒತ್ತಡದಿಂದ ಬಳಲುತ್ತಿರುವುದು ಕಂಡು ಬಂದಿದೆ. ಜನರು ತಮ್ಮ ಪ್ರೀತಿ ಪಾತ್ರರಿಂದ ಹೆಚ್ಚು ದೂರವಾಗುತ್ತಿದ್ದಾರೆ'' ಎಂದು ವಿಶ್ವಸಂಸ್ಥೆಯ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಬಂತು ಮತ್ತೊಂದು ಎಚ್ಚರಿಕೆ ಸಂದೇಶ
ಸಾಮಾಜಿಕ ಸಮಸ್ಯೆಗಳು ಹುಟ್ಟಿಕೊಳ್ಳಲಿವೆ
''ಕೋವಿಡ್ ನ ಪರಿಣಾಮದ ಮಾನಸಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಮತ್ತೊಂದಿಷ್ಟು ಸಾಮಾಜಿಕ ಸಮಸ್ಯೆಗಳು ಹುಟ್ಟಿಕೊಳ್ಳಲಿವೆ. ಹೀಗಾಗಿ ಆಯಾ ದೇಶಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜನರ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಅಗತ್ಯ ಕ್ರಮಗಳನ್ನು ಈಗಿನಿಂದಲೇ ತೆಗೆದುಕೊಳ್ಳಬೇಕು'' ಎಂದು ವಿಶ್ವಸಂಸ್ಥೆ ರಾಷ್ಟ್ರಗಳಿಗೆ ಸೂಚನೆ ನೀಡಿದೆ.
ನಿರ್ಲಕ್ಷ್ಯ ಮಾಡುತ್ತಾ ಬರುತ್ತಿದ್ದೇವೆ
ಬಿಕ್ಕಟ್ಟಿನ ಈ ಸಮಯದಲ್ಲಿ ಜನರ ಮಾನಸಿಕ ಆರೋಗ್ಯದ ಬಗ್ಗೆ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೇರಸ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ''ಮಾನಸಿಕ ಆರೋಗ್ಯ ಕ್ಷೇತ್ರವನ್ನು ನಾವು ಹಲವು ವರ್ಷಗಳಿಂದ ನಿರ್ಲಕ್ಷ್ಯ ಮಾಡುತ್ತಾ ಬರುತ್ತಿದ್ದೇವೆ. ಕೊರೊನಾದಿಂದ ಈಗ ಮತ್ತಷ್ಟು ಮಾನಸಿಕ ಒತ್ತಡದಿಂದ ಬಳಲುತ್ತಿದ್ದೇವೆ'' ಎಂದು ಅವರು ಹೇಳಿದ್ದಾರೆ.