ಇದು ವಿಶ್ವಸಂಸ್ಥೆಯ ಮಾಸ್ಟರ್ ಸ್ಟ್ರೋಕ್..! ಯುದ್ಧ ಮಾಡಲು ಅಲ್ಲ, ಯುದ್ಧ ನಿಲ್ಲಿಸಲು..!
ವಿಶ್ವಸಂಸ್ಥೆ ಆಗಾಗ ತನಗಿರುವ ಪವರ್ ಎಂತಹದ್ದು ಅಂತಾ ಸ್ಯಾಂಪಲ್ ತೋರಿಸ್ತಾನೆ ಇರುತ್ತೆ. ಈಗಲೂ ಅಷ್ಟೇ ವಿಶ್ವಸಂಸ್ಥೆ ತನ್ನ ಶಕ್ತಿಯನ್ನ ಮ್ಯಾನ್ಮಾರ್ ಸೇನೆಗೆ ತೋರಿಸಲು ಮುಂದಾಗಿದೆ. ಈಗಾಗಲೇ ನೂರಾರು ಜನರನ್ನು ಕಂಡಲ್ಲಿ ಗುಂಡಿಕ್ಕಿ ಕೊಂದಿರುವ ಮ್ಯಾನ್ಮಾರ್ ಮಿಲಿಟರಿ, ತನ್ನ ಹಿಂಸೆ ಮುಂದುವರಿಸಿದೆ. ಫೆಬ್ರವರಿಯಲ್ಲಿ ತನ್ನ ದೇಶದ ವಿರುದ್ಧವೇ ದಂಗೆ ಎದ್ದು, ಸೂಕಿ ಸೇರಿದಂತೆ ಅನೇಕ ರಾಜಕೀಯ ನಾಯಕರನ್ನು ಅರೆಸ್ಟ್ ಮಾಡಿರುವ ಮ್ಯಾನ್ಮಾರ್ ಮಿಲಿಟರಿ ತಾನು ಮಾಡಿದ್ದೇ ಸರಿ ಅಂತಾ ಮೆರೆಯುತ್ತಿದೆ. ಅನೇಕ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಇದಕ್ಕೆ ಭಾರಿ ಆಕ್ಷೇಪ ವ್ಯಕ್ತಪಡಿಸಿವೆ.
ವಿಶ್ವಸಂಸ್ಥೆ ಮೇಲೆ ಒತ್ತಡ ತಂದು ಮ್ಯಾನ್ಮಾರ್ನ ಹಿಂಸಾಚಾರ ನಿಲ್ಲಿಸಲು ಮಾಸ್ಟ್ರರ್ ಪ್ಲ್ಯಾನ್ ರೂಪಿಸಿವೆ. ಇದರ ಮೊದಲ ಭಾಗವಾಗಿ ಮ್ಯಾನ್ಮಾರ್ ಮಿಲಿಟರಿಗೆ ಶಸ್ತ್ರಾಸ್ತ್ರ ಮಾರಾಟವನ್ನ ನಿಲ್ಲಿಸುವಂತೆ ಆಜ್ಞೆ ಹೊರಡಿಸಲಾಗಿದೆ. ವಿಶ್ವಸಂಸ್ಥೆ ಮಂಡಿಸಿದ ನಿರ್ಣಯಕ್ಕೆ ಒಟ್ಟು 119 ಸದಸ್ಯ ರಾಷ್ಟ್ರಗಳಿಂದ ಸಹಿ ಬಿದ್ದಿದೆ.
ಆದರೆ 1 ರಾಷ್ಟ್ರ ಈ ನಿರ್ಣಯದ ವಿರುದ್ಧ ಮತ ಹಾಕಿದ್ದು, 36 ರಾಷ್ಟ್ರಗಳು ಮತವನ್ನೇ ಹಾಕಿಲ್ಲ. ಈ ಪೈಕಿ ಚೀನಾ ಹಾಗೂ ರಷ್ಯಾ ಕೂಡ ಸೇರಿವೆ. ಏಕೆಂದರೆ ಮ್ಯಾನ್ಮಾರ್ ಮಿಲಿಟರಿಗೆ ಚೀನಾ, ರಷ್ಯಾದಿಂದಲೇ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮಾರಾಟವಾಗುತ್ತಿದೆ. ಹೀಗಾಗಿ ವಿಶ್ವಸಂಸ್ಥೆಯ ನಿರ್ಣಯದಿಂದ ಹಿಂದೆ ಸರಿದು, ಮ್ಯಾನ್ಮಾರ್ ಸೇನೆ ಜೊತೆ ಸಂಬಂಧ ಉಳಿಸಿಕೊಳ್ಳಲು ಚೀನಾ, ರಷ್ಯಾ ಯತ್ನಿಸಿರುವ ಆರೋಪ ಕೇಳಿಬಂದಿದೆ.
ಹಳ್ಳಿ ಜನರೇ ಟಾರ್ಗೆಟ್..!
ಮ್ಯಾನ್ಮಾರ್ ಸೇನಾ ದಂಗೆಯಲ್ಲಿ ಸಿಲುಕಿ 5 ತಿಂಗಳೇ ಉರುಳಿದೆ. ಆದ್ರೂ ಅಲ್ಲಿನ ಪರಿಸ್ಥಿತಿ ಹಿಡಿತಕ್ಕೆ ಬಂದಿಲ್ಲ, ಶಾಂತಿ ನೆಲೆಗೊಂಡಿಲ್ಲ. ಈ ನಡುವೆ ಮ್ಯಾನ್ಮಾರ್ ಸೈನಿಕರ ವಿರುದ್ಧ ಮ್ಯಾನ್ಮಾರ್ ಪ್ರಜೆಗಳು ರೊಚ್ಚಿಗೆದ್ದಿದ್ದಾರೆ. ಅದರಲ್ಲೂ ಹಳ್ಳಿ ಜನರ ಆಕ್ರೋಶ ತೀವ್ರಗೊಳ್ಳುತ್ತಿದೆ. ಸೇನೆ ವಿರುದ್ಧ ತಮ್ಮದೇ ಗುಂಪು ಕಟ್ಟಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ಸಹಿಸದ ಮ್ಯಾನ್ಮಾರ್ ಸರ್ವಾಧಿಕಾರಿಗಳು, ಮುಗ್ಧರ ಮೇಲೆ ದಾಳಿ ನಡೆಸಲು ಮುಂದಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಮ್ಯಾನ್ಮಾರ್ನ ಮಧ್ಯಭಾಗದ ಹಳ್ಳಿಯೊಂದರಲ್ಲಿ ಸೇನೆ-ಗ್ರಾಮಸ್ಥರ ನಡುವೆ ಭೀಕರ ಕಾಳಗ ನಡೆದು ಸುಮಾರು 200 ಗುಡಿಸಲಿಗೆ ಬೆಂಕಿ ಇಟ್ಟಿದ್ದ ಆರೋಪ ಕೇಳಿಬಂದಿತ್ತು. ಈ ಘಟನೆ ಜಗತ್ತಿನಾದ್ಯಂತ ತೀವ್ರ ಸಂಚಲನ ಸೃಷ್ಟಿಸಿತ್ತು.
800 ಕೊಲೆ, 5000 ಜನ ಅರೆಸ್ಟ್?
ಜಾಗತಿಕ ಸಂಸ್ಥೆಗಳು ನೀಡಿರುವ ಅಂಕಿ-ಅಂಶ ಹೇಳುವಂತೆ ಮ್ಯಾನ್ಮಾರ್ ಮಿಲಿಟರಿಗೆ ದಂಗೆಯಲ್ಲಿ ಈವರೆಗೂ ಸುಮಾರು 800 ಜನರನ್ನ ಕೊಲೆ ಮಾಡಲಾಗಿದೆ. ಹಾಗೇ 5000 ಜನರನ್ನ ಸರ್ವಾಧಿಕಾರಿಗಳು ಹಿಡಿದು ಜೈಲಿಗೆ ಹಾಕಿಸಿದ್ದಾರೆ. ಇನ್ನು ನಾಪತ್ತೆಯಾದ ಮಹಿಳೆಯರು, ಮಕ್ಕಳ ಸಂಖ್ಯೆಯಂತೂ ಲೆಕ್ಕಕ್ಕೆ ಸಿಗುತ್ತಿಲ್ಲ. ಹೀಗೆ ಇಡೀ ಮ್ಯಾನ್ಮಾರ್ ಅಕ್ಷರಶಃ ನರಕವಾಗಿದೆ. ಇಷ್ಟೆಲ್ಲಾ ಹಿಂಸೆ ನಡೆಯುತ್ತಿದ್ರೂ ಬಲಶಾಲಿ ರಾಷ್ಟ್ರಗಳ ಬಾಯಿ ಬಂದ್ ಆಗಿದೆ ಎಂಬ ಆರೋಪವಿದೆ. ಯಾಕಂದ್ರೆ ಚೀನಾ ವಿರುದ್ಧ ಮ್ಯಾನ್ಮಾರ್ ಒಂದು ಅಸ್ತ್ರವಾಗಿದ್ದು, ಮ್ಯಾನ್ಮಾರ್ ಜೊತೆಗಿನ ಸಂಬಂಧ ಹಾಳು ಮಾಡಿಕೊಳ್ಳಲು ನಂ. 1 ರಾಷ್ಟ್ರಗಳಿಗೆ ಇಷ್ಟವಿಲ್ಲ ಎಂಬ ಆರೋಪ ಕೇಳಿಬಂದಿದೆ.
ಹಳ್ಳಿಯಿಂದ ಕಾಡಿಗೆ ಎಸ್ಕೇಪ್..!
ಅವರೆಲ್ಲಾ ಇಷ್ಟುದಿನ ನೆಮ್ಮದಿಯಾಗಿ ತಮ್ಮ ತಮ್ಮ ಹಳ್ಳಿಗಳಲ್ಲಿ ಜೀವನ ನಡೆಸುತ್ತಿದ್ದರು, ಆದರೆ ಈಗಿನ ಪರಿಸ್ಥಿತಿ ಬೇರೆಯೇ ಆಗಿದೆ. ಜೀವ ಉಳಿಸಿಕೊಳ್ಳಲು ಲಕ್ಷಾಂತರ ಜನ ತಾವು ಹುಟ್ಟಿಬೆಳೆದ ಮನೆ ಮತ್ತು ಊರನ್ನೇ ಬಿಟ್ಟು ಓಡಿ ಬರುತ್ತಿದ್ದಾರೆ. ಕ್ರೂರ ಸೇನಾಧಿಕಾರಿಗಳ ಕೈಗೆ ಸಿಗದಂತೆ ಕಾಡುಗಳಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದಾರೆ. ಅಂದಹಾಗೆ ಇದು ಮ್ಯಾನ್ಮಾರ್ನ ಹಳ್ಳಿಗಳ ಕರುಣಾಜನಕ ಕಥೆ, ವ್ಯಥೆ. ಫೆಬ್ರುವರಿಯಲ್ಲಿ ನಡೆದ ಸೇನಾ ದಂಗೆ ವಿರೋಧಿಸಿ ಇಡೀ ಕೆಂಡವಾಗಿದೆ. ಸಾವಿರಾರು ಜನ ಹಿಂಸೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ, ಸೇನೆ ಇವರನ್ನೆಲ್ಲಾ ಕೊಂದು ಹಾಕಿದೆ ಎಂಬ ಆರೋಪವಿದೆ. ಅದರಲ್ಲೂ ಸಾವಿರ ಸಾವಿರ ಮಂದಿ ಕಾಣೆಯಾಗಿರೋದು ಭಯ ಹುಟ್ಟಿಸುತ್ತಿದೆ. ಆದರೆ ಈ ಹೊತ್ತಲ್ಲೇ ಹಳ್ಳಿಗಳಿಗೂ ಹಿಂಸಾಚಾರ ಹಬ್ಬಿದೆ.
ರೊಹಿಂಗ್ಯಾ ಹಿಂಸಾಚಾರ ರಿಪೀಟ್..?
ಅದು 2016ರ ಅಂತ್ಯಕಾಲ. ಜಗತ್ತು ಮ್ಯಾನ್ಮಾರ್ ಕಡೆಗೆ ದಿಟ್ಟಿಸಿ ನೋಡಿತ್ತು. ರೊಹಿಂಗ್ಯಾ ಮುಸ್ಲೀಮರ ಮೇಲೆ ದಿಢೀರ್ ದಾಳಿ ನಡೆದು ನೋಡ ನೋಡುತ್ತಿದ್ದಂತೆ ಸಾವಿರಾರು ರೊಹಿಂಗ್ಯಾಗಳು ಜೀವ ಕಳೆದುಕೊಂಡರು. ಈ ಹೊತ್ತಲ್ಲೇ ಅಮಾನುಷ ಘಟನೆಗಳು ನಡೆದವು. ರೊಹಿಂಗ್ಯಾ ಮುಸ್ಲೀಮರ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆದಿತ್ತು. ಹಲವು ಮಹಿಳೆಯರನ್ನ ರೇಪ್ & ಮರ್ಡರ್ ಮಾಡಿದ್ದರು ಎಂಬ ಆಘಾತಕಾರಿ ವಿಚಾರ ಜಗತ್ತನ್ನು ತಲ್ಲಣಗೊಳಿಸಿತ್ತು. 24 ಸಾವಿರ ರೊಹಿಂಗ್ಯಾಗಳು ಗಲಭೆಯಲ್ಲಿ ಹತ್ಯೆಯಾದರೆ, 1 ಮಿಲಿಯನ್ ರೊಹಿಂಗ್ಯಾಗಳು ಮ್ಯಾನ್ಮಾರ್ ಬಿಟ್ಟು ಓಡಿ ಹೋದರು. ಹೀಗೆ ರೊಹಿಂಗ್ಯಾ ಮುಸ್ಲೀಮರ ಮೇಲೆ ದಾಳಿ ನಡೆಸಿದ್ದು ಮ್ಯಾನ್ಮಾರ್ನ ಸೇನೆ ಎಂಬ ಆರೋಪ ಇದೆ. ಈಗಲೂ ಮ್ಯಾನ್ಮಾರ್ ಮಿಲಿಟರಿ ಹಳ್ಳಿಗಳಲ್ಲಿ ವಾಸವಿರುವ ಜನರ ಮೇಲೆ ಕ್ರೂರ ದಾಳಿ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮಿಲಿಟರಿ ಆಡಳಿತ ಅಬ್ಬರ
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್ಗೆ ತೆಗೆದುಕೊಂಡಿದೆ ಸೇನೆ. ಮ್ಯಾನ್ಮಾರ್ ಸೇನೆ ವಿರುದ್ಧ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಮ್ಯಾನ್ಮಾರ್ ಮಿಲಿಟರಿ ಕ್ರಮ ಟೀಕಿಸಿವೆ. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಲ್ಲಿನ ಸೇನಾಧಿಕಾರಿಗಳು, ಪ್ರತಿಭಟನೆ ನಡೆಸುತ್ತಿರುವ ಜನರನ್ನ ಚದುರಿಸಲು ಬಲಪ್ರಯೋಗ ಮಾಡುತ್ತಿದ್ದಾರೆ.