ಉಕ್ರೇನ್ ನಾಗರಿಕರ ಹತ್ಯೆ ಕಳವಳಕಾರಿ, ಸ್ವತಂತ್ರ ತನಿಖೆ ಅಗತ್ಯ: ಯುಎನ್ನಲ್ಲಿ ಭಾರತ
ನವದೆಹಲಿ, ಏಪ್ರಿಲ್ 06: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ಮೇಲೆ ರಷ್ಯಾದ ದಾಳಿಯ ಬಗ್ಗೆ ಪ್ರಬಲ ಹೇಳಿಕೆಯನ್ನು ನೀಡಿರದ ಭಾರತ ಮಂಗಳವಾರ ಉಕ್ರೇನ್ನಲ್ಲಿ ನಾಗರಿಕರ ಹತ್ಯೆಯನ್ನು ಖಂಡಿಸಿದೆ. ಉಕ್ರೇನ್ನ ಬುಚಾದಲ್ಲಿ ನಾಗರಿಕ ಹತ್ಯೆಗಳ ವರದಿಗಳ ಬಗ್ಗೆ ಭಾರತ ಯುಎನ್ನಲ್ಲಿ ಕಳವಳವನ್ನು ವ್ಯಕ್ತಪಡಿಸಿದ್ದು ಹಾಗೆಯೇ ಈ ಬಗ್ಗೆ ಸ್ವತಂತ್ರ ತನಿಖೆಯು ಅಗತ್ಯವಾಗಿದೆ ಎಂದು ಭಾರತ ಕರೆ ನೀಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತನಾಡಿದ ಭಾರತದ ರಾಯಭಾರಿ ಟಿಎಸ್ ತಿರುಮೂರ್ತಿ, "ಬುಚಾದಲ್ಲಿನ ನಾಗರಿಕ ಹತ್ಯೆಗಳ ಇತ್ತೀಚಿನ ವರದಿಗಳು ಬಹಳ ಗೊಂದಲವನ್ನುಂಟುಮಾಡುತ್ತವೆ. ನಾವು ಈ ಹತ್ಯೆಗಳನ್ನು ಖಂಡನೆ ಮಾಡುತ್ತೇವೆ. ಸ್ವತಂತ್ರ ತನಿಖೆಗೆ ಬೆಂಬಲ ನೀಡುತ್ತೇವೆ," ಎಂದು ಹೇಳಿದ್ದಾರೆ.
ಕೀವ್ನಲ್ಲಿ 410 ನಾಗರಿಕರ ದೇಹ ಪತ್ತೆ: ಉಕ್ರೇನ್
ಇದೇ ಸಂದರ್ಭದಲ್ಲಿ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ಮತ್ತು ಯುದ್ಧವನ್ನು ಕೊನೆಗೊಳಿಸಲು ಭಾರತವು ತನ್ನ ಕರೆಯನ್ನು ಪುನರುಚ್ಚರಿಸಿದೆ. ರಷ್ಯಾದ ದಾಳಿಯಿಂದಾಗಿ ಉಕ್ರೇನ್ನಲ್ಲಿ ನಾಗರಿಕರ ಸಾವಿನ ಬಗ್ಗೆ ಭಾರೀ ಆತಂಕ ಸೃಷ್ಟಿಯಾಗಿದೆ. ಖಂಡನೆಯೂ ವ್ಯಕ್ತವಾಗಿದೆ. ಸಾಮೂಹಿಕ ಸಮಾಧಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮರಣದಂಡನೆಗೆ ಒಳಗಾದ ನಾಗರಿಕರ ದೇಹಗಳ ಚಿತ್ರಗಳು ವಿಶ್ವದಲ್ಲಿ ಹಲವಾರು ನಾಯಕರುಗಳು ಆಕ್ರೋಶಕ್ಕೆ ಕಾರಣವಾಗಿದೆ. ಭಾರತ ಕೂಡಾ ಮೊದಲ ಬಾರಿಗೆ ನೀಡಿದ ಪ್ರಬಲ ಹೇಳಿಕೆಯಲ್ಲಿ ರಷ್ಯಾದಿಂದ ನಾಗರಿಕರ ಹತ್ಯೆಯನ್ನು ಖಂಡನೆ ಮಾಡಿದೆ.
ಆಹಾರ, ಇಂಧನದ ಬೆಲೆ ಏರಿಕೆ ಬಗ್ಗೆ ಉಲ್ಲೇಖ
ಭಾರತವು "ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಆಳವಾದ ಕಾಳಜಿಯನ್ನು ಹೊಂದಿದೆ" ಎಂದು ಪ್ರತಿಪಾದಿಸಿದ ಭಾರತದ ರಾಯಭಾರಿ ಟಿಎಸ್ ತಿರುಮೂರ್ತಿ "ಬಿಕ್ಕಟ್ಟಿನ ಪರಿಣಾಮವು ಹಲವಾರು ರಾಷ್ಟ್ರಗಳ ಮೇಲೆ ಬೀಳುತ್ತಿದೆ. ಅದರಲ್ಲೂ ಮುಖ್ಯವಾಗಿ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಈ ಬಿಕ್ಕಟ್ಟಿನ ಪರಿಣಾಮ ತೀವ್ರವಾಗಿ ತಟ್ಟಿದೆ. ಆಹಾರ ಹಾಗೂ ಇಂಧನದ ವೆಚ್ಚ ಹೆಚ್ಚಾಗುತ್ತಿದೆ," ಎಂದು ವಿವರಿಸಿದರು.
ಉಕ್ರೇನ್ ಬಂದರಿನ ಮೇಲೆ ಬಾಂಬ್ ದಾಳಿ: ಕೀವ್ ಬಳಿ ಸಾಮೂಹಿಕ ಸಮಾಧಿ
"ಮುಗ್ಧ ಮಾನವ ಜೀವಗಳು ಅಪಾಯದಲ್ಲಿರುವಾಗ, ರಾಜತಾಂತ್ರಿಕತೆಯು ಏಕೈಕ ಕಾರ್ಯಸಾಧ್ಯವಾದ ಆಯ್ಕೆಯಾಗಿ ಮೇಲುಗೈ ಸಾಧಿಸಬೇಕು," ಎಂದು ಕೂಡಾ ಈ ವೇಳೆಯೇ ಭಾರತದ ರಾಯಭಾರಿ ಟಿಎಸ್ ತಿರುಮೂರ್ತಿ ಪ್ರತಿಪಾದಿಸಿದರು.
ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭ ಮಾಡಿದಾಗಿನಿಂದ ಈವರೆಗೆ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲೂ ಮುಖ್ಯವಾಗಿ ಬುಚಾದಲ್ಲಿ ನಾಗರಿಕರ ಮಾರಣಹೋಮ ಆತಂಕಕ್ಕೆ ಕಾರಣವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಷ್ಯಾದ ಸೈನ್ಯವನ್ನು ಯುದ್ಧ ಅಪರಾಧ ಮಾಡಿದೆ ಎಂದು ಹಲವಾರು ರಾಷ್ಟ್ರಗಳು ಆರೋಪ ಮಾಡಿದೆ. ಬ್ರಿಟನ್, ಫ್ರಾನ್ಸ್, ಜರ್ಮನಿ, ಯುನೈಟೆಡ್ ಸ್ಟೇಟ್ಸ್ ಮತ್ತು ನ್ಯಾಟೋ ಚಿತ್ರಗಳ ಬಗ್ಗೆ ಭಯಾನಕ ಧ್ವನಿಯನ್ನು ವ್ಯಕ್ತಪಡಿಸಿವೆ. ಬುಚಾದಲ್ಲಿ ನಾಗರಿಕರ ದೇಹಗಳು ಹಾದಿ ಹಾದಿಯಲ್ಲಿ ಇರುವುದು ಕಂಡು ಬಂದಿದೆ.