ಯುಕೆ - ಇಂಡಿಯಾ ವೀಕ್ - 2018: ಲೀಡರ್ ಶಿಪ್ ಕಾನ್ಕ್ಲೇವ್ ಗೆ ಚಾಲನೆ
ಲಂಡನ್, ಜೂನ್ 20: ಜೂನ್ 20ರಿಂದ 21ರವರೆಗೆ ನಡೆಯಲಿರುವ 5ನೇ ಯುಕೆ - ಇಂಡಿಯಾ ಲೀಡರ್ ಶಿಪ್ ಕಾನ್ಕ್ಲೇವ್ ಗೆ ಬಕಿಂಗ್ ಹ್ಯಾಮ್ ಶೈರ್ ನಲ್ಲಿರುವ ಡಿ ವೆರ್ ಲ್ಯಾಟಿಮರ್ ಎಸ್ಟೇಟ್ ಲ್ಯಾಟಿಮರ್ ನಲ್ಲಿ ಚಾಲನೆ ನೀಡಲಾಗಿದೆ.
ಭಾರತ ಮತ್ತು ಬ್ರಿಟನ್ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಈ ಕಾನ್ಕ್ಲೇವ್ ಪ್ರಮುಖ ಕಾರ್ಯಕ್ರವಾಗಿದೆ. ಇದರಲ್ಲಿ ಹಲವಾರು ಚರ್ಚಾಗೋಷ್ಠಿಗಳು ನಡೆಯಲಿದ್ದು, ಎರಡೂ ದೇಶಗಳ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ
ದ್ವಿಪಕ್ಷೀಯ ಸಂಬಂಧಗಳಲ್ಲಿ ಅನ್ವೇಷಣೆಯ ಅಗತ್ಯತೆ ಹೆಚ್ಚಾಗುತ್ತಿರುವುದರ ಬಗ್ಗೆ ಕಾನ್ಕ್ಲೇವ್ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದೆ. ಯುಕೆ-ಇಂಡಿಯಾ ವ್ಯವಹಾರ ಮತ್ತು ರಾಜಕೀಯ ಮೊಗಸಾಲೆಯಲ್ಲಿ ತಮ್ಮದೇ ಆದ ಅನುಭವಗಳನ್ನು ಹೊಂದಿರುವ ಇಂಡಿಯಾ ಇನ್ ಕಾರ್ಪ್ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಮನೋಜ್ ಲಾಡ್ವಾ ಈ ಕಾನ್ಕ್ಲೇವ್ ನ ರೂವಾರಿಯಾಗಿದ್ದಾರೆ. ಬ್ರಿಟನ್ ದೇಶದ ಭಾರತದ ಹೈ ಕಮಿಷನರ್ ವೈ.ಕೆ. ಸಿನ್ಹಾ ಇದರಲ್ಲಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ.
ಯುಕೆ - ಇಂಡಿಯಾ ವೀಕ್ - 2018ಕ್ಕೆ ಲಂಡನ್ ನಲ್ಲಿ ಅದ್ಧೂರಿ ಚಾಲನೆ
ಉದ್ಯಮಿ ನಾಯಕರು ಮತ್ತು ರಾಜಕಾರಣಿಗಳು ಜಾಗತಿಕ ವ್ಯವಹಾರ ಮತ್ತು ರಾಜಕೀಯ ವಾತಾವರಣದ ಮೇಲೆ ಪರಿಣಾಮ ಬೀರುವ ನಿರ್ಣಾಯಕ ಸಮಸ್ಯೆಗಳ ಬಗ್ಗೆ ದಿನವಿಡೀ ಚರ್ಚಿಸಲಿದ್ದಾರೆ.
ಉದ್ಘಾಟನಾ ಭಾಷಣದ ನಂತರ ಲಿಬರಲ್ ಡೆಮೋಕ್ರಾಟ್ ನಾಯಕ ಮತ್ತು ಸರ್ ವಿನ್ಸ್ ಕೇಬಲ್ ಅವರು ಯುಕೆ ಮತ್ತು ಭಾರತ ನಡುವಿನ ಸಹಭಾಗಿತ್ವಕ್ಕಿರುವ ಹೆಚ್ಚಿನ ಅವಕಾಶಗಳು ಎಂಬ ವಿಚಾರದ ಬಗ್ಗೆ ಮಾತನಾಡಲಿದ್ದಾರೆ. ಲಾರ್ಡ್ ಮಾರ್ಲಾಂಡ್ ಕೂಡ ಇದೇ ಸಂದರ್ಭದಲ್ಲಿ ತಮ್ಮ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಅಲ್ಲದೆ, ಅರ್ಥಶಾಸ್ತ್ರಜ್ಞ ಮತ್ತು ಎನ್ಐಟಿಐ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಅವರು ನಾಲ್ಕು ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಸರಕಾರ, ಭಾರತೀಯ ಆರ್ಥಿಕತೆಯ ಪ್ರಸಕ್ತ ಸನ್ನಿವೇಶಗಳು ಮತ್ತು ಬದಲಾಗುತ್ತಿರುವ ಭಾರತದಲ್ಲಿ ಭಾರತೀಯ ಸರ್ಕಾರದ ನೀತಿಗಳು ಮತ್ತು ಆಡಳಿತ ವಿಧಾನಗಳ ಬಗ್ಗೆ ಆಹ್ವಾನಿತರ ಜೊತೆ ಸಂವಾದ ನಡೆಸಲಿದ್ದಾರೆ.
Updated:
ಕಾರ್ಯಕ್ರಮದಲ್ಲಿ ತಮ್ಮ ಮಾತಿಗೂ ಮೊದಲು ಮನೋಜ್ ಲಡ್ವಾ ಯೋಗ ಪ್ರದರ್ಶನ ನಡೆಸಿದರು. ನಂತರ ಮಾತನಾಡಿದ ಅವರು, 'ಎರಡೂ ದೇಶಗಳು (ಯುಕೆ ಮತ್ತು ಭಾರತ) ದ್ವಿಪಕ್ಷೀಯ ಸಂಬಂಧಗಳಲ್ಲಿ ವಿಶ್ವಾಸ ಬೆಳೆಸಿಕೊಳ್ಳಬೇಕು' ಎಂದರು.
"ಯುಕೆ - ಭಾರತವು ವಿಶ್ವದ ಅತ್ಯುತ್ತಮ ಪ್ರತಿಭೆಗಳನ್ನು ಹೊಂದಲು ಸ್ಪರ್ಧೆಯಲ್ಲಿವೆ. ನಾವು ವಹಿವಾಟು ಮಾದರಿಯಲ್ಲಿ ಉಳಿಯಲು ಸಾಧ್ಯವಿಲ್ಲ. ನಮ್ಮ ನಡುವಿನ ಸಂಬಂಧವನ್ನು ಹೇಗೆ ನಾವು ಉನ್ನತೀಕರಿಸಿ ನಿಜವಾಗಿಯೂ ರೂಪಾಂತರ ಮಾಡಬಹುದು ಎಂಬುದಕ್ಕೆ ಈ ಕಾನ್ಕ್ಲೇವ್ ಹಮ್ಮಿಕೊಂಡಿದ್ದೇವೆ," ಎಂದರು.
ನಂತರ ಮಾತನಾಡಿದ ವೈ.ಕೆ. ಸಿನ್ಹಾ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಮನೋಜ್ ಲಾಡ್ವಾ ಅವರಿಗೆ ಧನ್ಯವಾದ ಸಲ್ಲಿಸಿದರು. "ಜನರು ಎರಡು ದೇಶಗಳ ನಡುವಿನ ಪರಸ್ಪರ ಸಂಬಂಧದ ಕೇಂದ್ರ ಬಿಂದು," ಎಂದು ಅವರು ಬಣ್ಣಿಸಿದರು.
ವೀಸಾ ಒಂದು ಪ್ರಮುಖ ವಿಷಯ. ಆದರೆ ನಮ್ಮ ನಡುವಿನ ಸಂಬಂಧವನ್ನು ಇದು ನಿರ್ಧರಿಸುವುದಿಲ್ಲ ಎಂದು ಅವರು ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸರ್ ವಿನ್ಸ್ ಕೇಬಲ್, "ಭಾರತ ಈಗ ಜಗತ್ತಿನ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿದೆ. ಬ್ರಟನ್ ಏಳನೇ ಸ್ಥಾನದಲ್ಲಿದ್ದು, ಆರ್ಥಿಕತೆಯ ಗಾತ್ರ ಭಾರತದ ಪರವಾಗಿದೆ. ಭಾರತ ಈಗ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದು," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"ನಾವು ಬ್ರಿಟನ್ ಜನರು ಭಾರತಕ್ಕೆ ಹೋಗುವುದರ ಬಗ್ಗೆ ಚರ್ಚೆಯನ್ನೇ ನಡೆಸುತ್ತಿಲ್ಲ. ಭಾರತದಲ್ಲಿ ತರಬೇತಿ ಪಡೆಯಲು ಬ್ರಿಟನ್ ವೃತ್ತಿಪರರನ್ನು ಯಾಕೆ ಕಳುಹಿಸಬಾರದು?" ಎಂದು ಅವರು ಇದೇ ವೇಳೆ ಪ್ರಶ್ನಿಸಿದರು.