ಭಾರತದಲ್ಲಿ ನೀಡುವ ಲಸಿಕೆ ಪ್ರಮಾಣಪತ್ರದ ಮೇಲೆ ಯುಕೆಗೆ ಅನುಮಾನವೇಕೆ!?
ನವದೆಹಲಿ, ಸೆಪ್ಟೆಂಬರ್ 22: ಯುನೈಟೆಡ್ ಕಿಂಗ್ ಡಮ್(ಯುಕೆ) ತನ್ನ ಪ್ರಯಾಣ ನೀತಿ ಪರಿಷ್ಕರಿಸಿದ್ದು, ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಅನ್ನು ಅನುಮೋದಿತ ಲಸಿಕೆಗಳ ಪಟ್ಟಿಗೆ ಸೇರಿಸಿದೆ.
ಭಾರತೀಯ ಸರ್ಕಾರವು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಟಿಟ್-ಫಾರ್-ಟಾಟ್ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಿಲಾಗಿದೆ. ಆದರೆ ಎರಡೂ ಡೋಸ್ ಲಸಿಕೆ ಪಡೆದುಕೊಂಡ ಭಾರತೀಯರು ಇನ್ನೂ ಕ್ವಾರಂಟೈನ್ ನಲ್ಲಿ ಇರುವುದನ್ನು ಕಡ್ಡಾಯಗೊಳಿಸಲಾಗಿದೆ.
ನೀವು ಬಯಸಿದರೆ 1 ಡೋಸ್ ಪಡೆದ 4 ವಾರದಲ್ಲೇ ಕೊವಿಶೀಲ್ಡ್ 2ನೇ ಡೋಸ್!
ಯುಕೆ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, "ಅಸ್ಟ್ರಾಜೆನೆಕಾ ಕೋವಿಶೀಲ್ಡ್, ಅಸ್ಟ್ರಾಜೆನೆಕಾ ವಾಕ್ಸೇವ್ರಿಯಾ ಮತ್ತು ಮಾಡರ್ನ್ ಟಕೆಡಾದಂತಹ ನಾಲ್ಕು ಲಸಿಕೆಗಳನ್ನು ಅನುಮೋದಿತ ಲಸಿಕೆ ಎಂದು ಗುರುತಿಸಲಾಗಿದೆ." ಆದಾಗ್ಯೂ, ಯುಕೆ ಹೈ ಕಮಿಷನ್ ಹೇಳಿಕೆಯ ಪ್ರಕಾರ, ಅದರ ಸರ್ಕಾರವು "ಲಸಿಕೆ ಪ್ರಮಾಣೀಕರಣದ ಮಾನ್ಯತೆಯನ್ನು ವಿಸ್ತರಿಸಲು ಭಾರತದೊಂದಿಗೆ ಕೆಲಸ ಮಾಡುತ್ತಿದೆ."
ಎರಡು ಡೋಸ್ ಪಡೆದವರಿಗೂ ಕ್ವಾರೆಂಟೈನ್:
ಭಾರತವು ಈಗ ಅಂಬರ್ ಪಟ್ಟಿಯಲ್ಲಿದ್ದರೂ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದರೂ, ಭಾರತೀಯರು ಕ್ವಾರೆಂಟೈನ್ ನಲ್ಲಿ ಇರುವುದನ್ನು ಕಡ್ಡಾಯಗೊಳಿಸಲಾಗಿದೆ. ಏಕೆಂದರೆ ಸಮಸ್ಯೆಯು ಕೊವಿಶೀಲ್ಡ್ ಲಸಿಕೆಯದ್ದಲ್ಲ, ಬದಲಿಗೆ ಭಾರತದಲ್ಲಿ ನೀಡುವ ಲಸಿಕೆ ಸ್ವೀಕೃತಿ ಪ್ರಮಾಣಪತ್ರದ ಮೇಲೆ ಅನುಮಾನವಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಸಂಶೋಧಿಸಿದ ಭಾರತೀಯ ಆವೃತ್ತಿಯಾದ ಕೋವಿಶೀಲ್ಡ್ ಅನ್ನು ಗುರುತಿಸದಿದ್ದರೆ "ಪರಸ್ಪರ ಕ್ರಮಗಳ" ಬಗ್ಗೆ ಭಾರತ ಎಚ್ಚರಿಸಿದ ನಂತರ ಹೊಸ ತೊಂದರೆ ಉಂಟಾಗಿದೆ.
ಯುಕೆ ತಾರತಮ್ಯ ನೀತಿ ಬಗ್ಗೆ ಪ್ರಸ್ತಾಪ:
"ಕೋವಿಶೀಲ್ಡ್ ಲಸಿಕೆಯನ್ನು ಗುರುತಿಸದಿರುವುದು ಒಂದು ತಾರತಮ್ಯ ನೀತಿಯಾಗಿದ್ದು, ಯುಕೆಗೆ ಪ್ರಯಾಣಿಸುವ ನಮ್ಮ ನಾಗರಿಕರ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು ಹೊಸ ಯುಕೆ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ಬಲವಾಗಿ ಪ್ರಸ್ತಾಪಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಕೆಲವು ಆಶ್ವಾಸನೆಗಳನ್ನು ನೀಡಲಾಗಿದೆ ಎಂದು ನನಗೆ ಹೇಳಲಾಗಿದೆ "ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಸುದ್ದಿಗಾರರಿಗೆ ತಿಳಿಸಿದರು.
ಭಾರತದಲ್ಲಿ ಇಳಿಮುಖವಾಗುತ್ತಿರುವ ಕೊರೊನಾವೈರಸ್:
ಭಾರತದಲ್ಲಿ ಒಂದು ದಿನದಲ್ಲಿ 26,964 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 34,167 ಮಂದಿ ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಅದೇ ಮಹಾಮಾರಿಯಿಂದ 383 ಜನರು ಸಾವಿನ ಮನೆ ಸೇರಿದ್ದಾರೆ. ಬುಧವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಕೊರೊನಾವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ 3,01,989 ಆಗಿದ್ದು, ಇದು ಕಳೆದ 186 ದಿನಗಳಲ್ಲೇ ಅತ್ಯಂತ ಕನಿಷ್ಠ ಎಂದು ಗೊತ್ತಾಗಿದೆ. ಇದರ ಹೊರತಾಗಿ ದೇಶದಲ್ಲಿ 3,27,83,741 ಮಂದಿ ಸೋಂಕಿತರು ಗುಣಮುಖರಾಗಿದ್ದು, 4,45,768 ಜನರು ಮಹಾಮಾರಿಯಿಂದಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
82.65 ಕೋಟಿ ಮಂದಿಗೆ ಕೊರೊನಾವೈರಸ್ ಲಸಿಕೆ ವಿತರಣೆ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿಯಲ್ಲಿ ಲಸಿಕೆ ವಿತರಣೆ ಅಭಿಯಾನವನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ದೇಶದಲ್ಲಿ 82.65 ಕೋಟಿಗೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 249 ದಿನಗಳಾಗಿದೆ. ದೇಶದಲ್ಲಿ ಈವರೆಗೂ 82,65,15,754 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಲಿತ ಪ್ರದೇಶಗಳಿಗೆ ಈವರೆಗೂ 80,13,26,335 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.