ಕರ್ತಾರ್ಪುರ್: 74 ವರ್ಷಗಳ ಬಳಿಕ ಒಂದಾದ ಸಹೋದರರು
ಇಸ್ಲಾಮಾಬಾದ್, ಜನವರಿ 13:ಭಾರತ ಹಾಗೂ ಪಾಕಿಸ್ತಾನ ವಿಭಜನೆ ವೇಳೆ ದೂರ ಆಗಿದ್ದ ಸಹೋದರರು 74 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ.
1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಮೊಹಮ್ಮದ್ ಸಿದ್ದಿಕ್ ಮತ್ತು ಅವರ ಹಿರಿಯ ಸಹೋದರ ಹಬೀಬ್ ಬೇರೆ ಆಗಿದ್ದರು. ಈ ವೇಳೆ ಇನ್ನೂ ಮಗುವಾಗಿದ್ದ ಮೊಹಮ್ಮದ್ ಸಿದ್ದಿಕ್ ಪಾಕಿಸ್ತಾನದಲ್ಲಿಯೇ ಉಳಿದುಕೊಂಡರು. ಆದರೆ ಹಬೀಬ್ ಅವರು ಭಾರತದಲ್ಲಿಯೇ ವಾಸಿಸುತ್ತಾ ಬೆಳೆದರು.
ಎರಡು ದೇಶಗಳ ಮಧ್ಯೆ ಹಂಚಿ ಹೋಗಿದ್ದ ಈ ಇಬ್ಬರು ಸಹೋದರರು ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ನಿಂದ ಭಾರತಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಕಾರಿಡಾರ್ ನಲ್ಲಿ ಮತ್ತೆ ಒಂದಾಗಿದ್ದಾರೆ.
ಗಡಿಯಿಂದ ಐದು ಕಿಲೋಮೀಟರ್ ದೂರದಲ್ಲಿರುವ ಕರ್ತಾರ್ಪುರದವರೆಗೆ ಭಾರತದಿಂದ ಪಾಕಿಸ್ತಾನಕ್ಕೆ ವೀಸಾ-ಮುಕ್ತ ಪ್ರಯಾಣಕ್ಕೆ ಅನುಕೂಲವಾಗುವಂತೆ ಕರ್ತಾರ್ಪುರ ಕಾರಿಡಾರ್ ಅನ್ನು ತೆರೆದಿದ್ದಕ್ಕಾಗಿ ಸಹೋದರರಿಬ್ಬರು ಉಭಯ ದೇಶಗಳ ಸರ್ಕಾರಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಕರ್ತಾರ್ಪುರ ಕಾರಿಡಾರ್ 2019 ರ ನವೆಂಬರ್ ತಿಂಗಳಿನಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿತ್ತು. 74 ವರ್ಷಗಳ ಬಳಿ ಒಬ್ಬರನ್ನೊಬ್ಬರು ನೋಡಿದ ಸಹೋದರರು ಬಿಗಿದಪ್ಪಿಕೊಂಡು ಆನಂದದಿಂದ ಕಣ್ಣೀರು ಸುರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಹೃದಯಸ್ಪರ್ಶಿ ವೀಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Recommended Video