ಕೊರೊನಾ ವಿರುದ್ಧದ ಭಾರತದ ಹೋರಾಟಕ್ಕೆ ಕೈಜೋಡಿಸಿದ ಟರ್ಕಿ
ನವದೆಹಲಿ, ಮೇ 26: ಕೊರೊನಾ ವೈರಸ್ನ ಎರಡನೇ ಅಲೆಯಲ್ಲಿ ಭಾರೀ ಪ್ರಮಾಣದಲ್ಲಿ ವೈದ್ಯಕೀಯ ಕೊರತೆಯನ್ನು ಅನುಭವಿಸುತ್ತಿರುವ ಭಾರತಕ್ಕೆ ಹಲವು ದೇಶಗಳು ನೆರವಿಗೆ ಬಂದಿದೆ. ಈಗ ಟರ್ಕಿ ಕೂಡ ಭಾರತದೊಂದಿಗೆ ಕೈಜೋಡಿಸಿದ್ದು ವೈದ್ಯಕೀಯ ಸಲಕರಣೆಗಳನ್ನು ಹೊತ್ತ ಎರಡು ಮಿಲಿಟರಿ ವಿಮಾನಗಳು ಭಾರತದತ್ತ ಹಾರಿದೆ.
ಟರ್ಕಿಯ ಅಧ್ಯಕ್ಷ ರಿಸೆಪ್ ತಯಿಪ್ ಎರ್ಡೊಗನ್ ಅವರ ಸೂಚನೆಯಂತೆ ಕಳುಹಿಸಿರುವ ಕೋವಿಡ್ ನೆರವನ್ನು ಭಾರತ ಸ್ವೀಕರಿಸಲಿದೆ. ಎರಡು ಮಿಲಿಟರಿ ವಿಮಾನಗಳಲ್ಲಿ ಆಮ್ಲಜನಕ ಕಾನ್ಸಂಟೇಟರ್ಸ್, ವೆಂಟಿಲೇಟರ್ಗಳು ಮತ್ತು ಔಷಧಿಗಳನ್ನು ಕಳುಹಿಸಲಾಗುತ್ತಿದೆ. ವಿಮಾನಗಳು ಬುಧವಾರ ದೆಹಲಿ ವಿಮಾನ ನಿಲ್ದಾಣ ತಲುಪಲಿದೆ ಎಂದು ಟರ್ಕಿಯ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
"ಅಧ್ಯಕ್ಷ ರೆಸೆಪ್ ತಯಿಪ್ ಎರ್ಡೋಕನ್ ಅವರ ಸೂಚನೆಯಂತೆ ನಮ್ಮ ಎರಡು ವಿಮಾನಗಳು ಅಂಕಾರಾದ ಎಟಿಮೆಸ್ಗುಟ್ ವಿಮಾನ ನಿಲ್ದಾಣದಿಂದ ಕೊರೊನಾ ವೈರಸ್ ಎದುರಿಸಲು ಆರೋಗ್ಯ ಸಾಮಗ್ರಿಗಳನ್ನು ಹೊತ್ತು ಹೊರಟಿವೆ" ಎಂದು ಟರ್ಕಿ ರಕ್ಷಣಾ ಸಚಿವಾಲಯ ಟ್ವಿಟ್ಟರ್ನಲ್ಲಿ ತಿಳಿಸಿದೆ.
ಟರ್ಕಿಯ ಆರೋಗ್ಯ ಸಚಿವಾಲಯ ಮತ್ತು ಟರ್ಕಿ ರೆಡ್ ಕ್ರೆಸೆಂಟ್ ಸಂಸ್ಥೆ ಸಿದ್ಧಪಡಿಸಿದ 680 ಆಮ್ಲಜನಕ ಟ್ಯೂಬ್ಗಳು, ಐದು ಆಮ್ಲಜನಕ ಜನರೇಟರ್ಗಳು, 50 ವೆಂಟಿಲೇಟರ್ಗಳು ಮತ್ತು 50,000 ಪೆಟ್ಟಿಗೆಗಳ ಆಂಟಿ-ವೈರಲ್ ಔಷಧಿಗಳನ್ನು ವಿಮಾನಗಳು ಸಾಗಿಸುತ್ತಿವೆ ಎಂದು ವರದಿಯಾಗಿದೆ. "ಭಾರತದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ಟರ್ಕಿಯ ಮಿಲಿಟರಿ ಸರಕು ವಿಮಾನಗಳು ಇಂದು ರಾತ್ರಿ ನವದೆಹಲಿಗೆ ಆಗಮಿಸುತ್ತವೆ" ಎಂದು ಭಾರತದ ಟರ್ಕಿಯ ರಾಯಭಾರಿ ಫಿರಾತ್ ಸುನೆಲ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಟರ್ಕಿಯ ಸುದ್ದಿಸಂಸ್ಥೆಯಾಗಿರುವ ಆನಡೋಲು ಏಜೆನ್ಸಿ ವರದಿ ಮಾಡಿರುವ ಪ್ರಕಾರ ಟರ್ಕಿ ಕಳುಹಿಸಿದ ಈ ವೈದ್ಯಕೀಯ ನೆರವಿನ ಪೆಟ್ಟಿಗೆಯೊಂದಿಗೆ 13ನೇ ಶತಮಾನದ ಪರ್ಶಿಯನ್ ಕವಿ ಮೆವ್ಲಾನಾ ರೂಮಿ ಅವರ ಸಾಲುಗಳಿವೆ. "ಹತಾಶೆಯ ನಂತರವೂ ಭರವಸೆಯಿದೆ ಮತ್ತು ಕಡುಕತ್ತಲೆಯ ನಂತರ ಅನೇಕ ಸೂರ್ಯಂದಿರು ಇರುತ್ತಾರೆ.." ಎಂಬ ಬರಹದ ಜೊತೆಗೆ ಜೊತೆಗೆ ಟರ್ಕಿಯಿಂದ ಭಾರತದ ಜನರಿಗೆ ಪ್ರೀತಿಯೊಂದಿಗೆ" ಬರೆಯಲಾಗಿದೆ ಎಂದಿದೆ.