ಅಭಿವೃದ್ಧಿಯ ಸುನಾಮಿ ಬರುತ್ತಿದೆ: ಮೋದಿಯನ್ನು ಹೊಗಳಿದ ಅಣ್ಣಾಮಲೈ
Recommended Video
ಕುವೈತ್, ಅಕ್ಟೋಬರ್ 7: ''ಭಾರತವು ಬಹಳ ವೇಗವಾಗಿ ಬದಲಾಗುತ್ತಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಭಿವೃದ್ಧಿಯ ಸುನಾಮಿ ಶುರುವಾಗುತ್ತಿದೆ'' ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದರು.
ಕುವೈತನ್ನಲ್ಲಿ ಭಾರತೀಯ ಪ್ರವಾಸಿ ಪರಿಷದ್ ಶುಕ್ರವಾರ ಆಯೋಜಿಸಿದ್ದ 'ಕರುನಾಡ ಡಿಂಡಿಮ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಡೀ ಭಾರತ ಬಹಳ ವೇಗವಾಗಿ ಬದಲಾಗುತ್ತಿದೆ. ಸುನಾಮಿ ಬಂದಾಗ ಭೌಗೋಳಿಕ ಬದಲಾವಣೆಗಳು ಆಗುತ್ತವೆ. ಅದೇ ರೀತಿ ಭಾರತದಲ್ಲಿ ಅಭಿವೃದ್ಧಿಯ ಬದಲಾವಣೆಗಳು ಆಗುತ್ತಿವೆ. ಮುಖ್ಯವಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಇವು ಸಾಧ್ಯವಾಗುತ್ತಿವೆ. ಕೆಲವು ಸಾಮ್ರಾಜ್ಯಗಳು, ರಾಜರ ಆಡಳಿತದ ಬದಲಾದಾಗ ದೇಶದ ಮೂಲಭೂತ ತತ್ವಗಳು ಸಹ ಬದಲಾಗುತ್ತವೆ. ಅಶೋಕ, ಚಂದ್ರಗುಪ್ತ ಮೌರ್ಯ, ಅಕ್ಬರ್, ಬಾಬರ್ ರಾಜರ ಆಡಳಿತ ಬಂದಾಗ ಈ ಬದಲಾವಣೆಗಳಾಗಿದ್ದವು. ಹಾಗೆಯೇ ಈಗ ಅಭಿವೃದ್ಧಿ ತಳಹದಿಗಳು ಬದಲಾಗುತ್ತಿವೆ ಎಂದು ಹೇಳಿದರು.
ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆದ ಅಣ್ಣಾಮಲೈ
'ಬೇರೆ ದೇಶಗಳು ಭಾರತೀಯರನ್ನು ನೋಡುವ ಬಗೆ ಬದಲಾಗಿದೆ. ನಮ್ಮ ಪಾಸ್ಪೋರ್ಟ್ಅನ್ನು ವಿದೇಶಗಳ ವಲಸೆ ಅಧಿಕಾರಿಗಳು ನೋಡುವ ಬಗೆ ಕೂಡ ಬದಲಾಗಿದೆ. ಕೆಲವು ವರ್ಷಗಳ ಹಿಂದೆ ನಮ್ಮ ಪಾಸ್ಪೋರ್ಟ್ಅನ್ನು ತೋರಿಸಿದಾಗ ಅನುಮಾನದಿಂದ ನೋಡುತ್ತಿದ್ದರು. ಈಗ ಭಾರತೀಯರಿಗೆ ಗೌರವ ಸಿಗುತ್ತಿದೆ' ಎಂದರು.
ಹೊಸ ಮಾದರಿ ರಾಜಕಾರಣ
ಭಾರತದಲ್ಲಿಯೇ ಭಾರತೀಯನಾಗಿರುವುದು ಮತ್ತು ವಿದೇಶದಲ್ಲಿ ಭಾರತೀಯ ಇರುವುದು ಎರಡೂ ಹೆಮ್ಮೆಯ ವಿಚಾರ. ಸಾಮಾನ್ಯವಾಗಿ ನೀವು ಇಂತಹ ಕಾರ್ಯಕ್ರಮಗಳಿಗೆ ರಾಜಕಾರಣಿಗಳನ್ನು ಕರೆಯುವುದಿಲ್ಲ. ಆದರೆ ಈಗ ಕರೆದಿದ್ದೀರಿ. ಏಕೆಂದರೆ ಭಾರತದಲ್ಲಿ ಹೊಸ ಪೀಳಿಗೆಯ ರಾಜಕಾರಣ ಶುರುವಾಗಿದೆ. ಇವರು ನಾಯಕರಲ್ಲ, ಮೊದಲು ಸೇವಕರು. ಈ ರಾಜಕಾರಣಿಗಳು ವಿಭಿನ್ನ. ಭರತ್ ಶೆಟ್ಟಿ ಮತ್ತು ಮಂಜುನಾಥ್ ಕೋಟ್ಯಾನ್ ಅವರು ಹೊಸ ಮಾದರಿಯ ರಾಜಕಾರಣಿಗಳು. ಹೊಸ ರಾಜಕೀಯವನ್ನು ಪ್ರತಿನಿಧಿಸುತ್ತಿದ್ದಾರೆ ಎಂದರು.
ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ
ಮೋದಿ ನಿಮ್ಮನ್ನು ಭೇಟಿ ಮಾಡುತ್ತಾರೆ
ನಮ್ಮ ಪ್ರಧಾನಿ ಯಾವ ದೇಶಕ್ಕೆ ಹೋದರೂ ಮೊದಲು ನಿಮ್ಮಂತೆ ಭಾರತದಿಂದ ಬಂದವರನ್ನು ಭೇಟಿ ಮಾಡಿ ಗೌರವ ನೀಡುತ್ತಾರೆ. ನಿಮ್ಮ ಶಕ್ತಿ ವೃದ್ಧಿಸಬೇಕು ಎನ್ನುವುದು ಅವರ ಆಸೆ. ಇತ್ತೀಚೆಗೆ ಅಮೆರಿಕದ ಹ್ಯೂಸ್ಟನ್ನಲ್ಲಿ ನಡೆದ 'ಹೌಡಿ ಮೋದಿ' ಕಾರ್ಯಕ್ರಮ ಇದಕ್ಕೆ ಉದಾಹರಣೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಜೀವನದಲ್ಲಿಯೇ ಹತ್ತು ಸಾವಿರ ಮಂದಿ ನೋಡಿರಲು ಸಾಧ್ಯವಿಲ್ಲ. ಅಮೆರಿಕದಲ್ಲಿ ರಾಜಕಾರಣಿಗಳ ಭಾಷಣಕ್ಕೆ ಹೆಚ್ಚೆಂದರೆ ಹತ್ತು ಸಾವಿರ ಮಂದಿ ಬರಬಹುದು. 25 ವರ್ಷಗಳ ಹಿಂದೆ ಮೋದಿ ಅವರು ಅಮೆರಿಕಕ್ಕೆ ಹೋಗಿದ್ದಾಗ ಶ್ವೇತ ಭವನದ ಮುಂದೆ ಫೋಟೊ ತೆಗೆಸಿಕೊಂಡಿದ್ದರು. ಈಗ ಅವರು ಹ್ಯೂಸ್ಟನ್ಗೆ ಬಂದಾಗ 59 ಸಾವಿರ ಜನರು ಸೇರಿದ್ದರು ಎಂದು ಹೇಳಿದರು.
ಯಾವ ನಾಯಕರಿಗೂ ಈ ಗೌರವ ಸಿಕ್ಕಿರಲಿಲ್ಲ
ನಾವು ಅಮೆರಿಕ ಅಧ್ಯಕ್ಷರನ್ನು ಹುಡುಕಿಕೊಂಡು ಹೋಗುತ್ತೇವೆ. ಅಪಾಯಿಂಟ್ಮೆಂಟ್ ತೆಗೆದುಕೊಂಡರೂ ನಮಗೆ ಕೇವಲ 15 ನಿಮಿಷ ಸಿಗಬಹುದು. ಆದರೆ ಸ್ವತಃ ಟ್ರಂಪ್ ಅವರು ಹುಡುಕಿಕೊಂಡು ಬಂದು ವೇದಿಕೆಯ ಕೆಳಗೆ ಎರಡೂವರೆ ಗಂಟೆ ಕುಳಿತಿದ್ದರು. ಯಾವ ದೇಶದ ನಾಯಕರಿಗೂ ಅಮೆರಿಕದಲ್ಲಿ ಈ ರೀತಿಯ ಗೌರವ ಸಿಕ್ಕಿರಲಿಲ್ಲ. ಇದು ಮೋದಿ ಅವರಿಗೆ ಸಿಕ್ಕ ಮರ್ಯಾದೆ ಎಂದು ನಾವು ಹೇಳಬಹುದು. ಆದರೆ ಪರೋಕ್ಷವಾಗಿ ಇದು ಅನಿವಾಸಿ ಭಾರತೀಯರಿಗೆ ಸಿಕ್ಕ ಗೌರವ ಎಂದು ಹೇಳಿದರು.
ಐಪಿಎಸ್ ಅಧಿಕಾರಿ ಅಣ್ಣಾಮಲೈ ಜನರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ ಏನಿದೆ?
ಹೊರದೇಶಕ್ಕೆ ಹೋಗುವವರು ಧೈರ್ಯಶಾಲಿಗಳು
ನಮ್ಮಲ್ಲಿ ಎರಡು ರೀತಿಯ ಜನರು ಊರು ಬಿಡುತ್ತಾರೆ. ಮೊದಲನೆಯವ ಕಳ್ಳ. ತಪ್ಪು ಮಾಡಿದಾಗ ಓಡಿಹೋಗುತ್ತಾನೆ. ಎರಡನೆಯ ವರ್ಗದ್ದು ಆಸಕ್ತಿಕರ ವಿಷಯ. ಅವರಿಗೆ ತಾಕತ್ತಿರಬೇಕು. ಎಲ್ಲರಿಗೂ ಊರು ಬಿಡಲು ಆಗುವುದಿಲ್ಲ. ಧೈರ್ಯ ಮತ್ತು ಗುರಿ ಹೊಂದಿರುವ ಕೆಲವೇ ಕೆಲವು ಜನರು ನಮ್ಮಲ್ಲಿ ಸರಿಯಾದ ಅವಕಾಶ ಇಲ್ಲ ಎಂದಾದಾಗ ಬೇರೆ ದೇಶಕ್ಕೆ ತೆರಳಿ ತಮ್ಮ ದೃಷ್ಟಿಕೋನವನ್ನು ವಿಸ್ತರಿಸಿಕೊಳ್ಳುತ್ತಾರೆ. ಆದ್ದರಿಂದ ನೀವೆಲ್ಲರೂ ಧೈರ್ಯಶಾಲಿಗಳು. ಇನ್ನು 10-15 ವರ್ಷಗಳಲ್ಲಿ ನಮ್ಮ ದೇಶ ಬದಲಾಗುತ್ತದೆ. ಈಗ ಸಿಗುತ್ತಿರುವ ಅವಕಾಶ ನಿಮಗೆ ಭಾರತದಲ್ಲಿಯೇ ಸಿಗಬಹುದು, ನಿಮಗೆಲ್ಲ ವಿಶಿಷ್ಟ ಕೌಶಲ ಇದೆ. ನೀವೆಲ್ಲ ವಾಪಸ್ ನಮ್ಮ ದೇಶಕ್ಕೆ ಬಂದು ಅದನ್ನು ಬಳಸಿಕೊಳ್ಳಬಹುದು. ನಿಮ್ಮಲ್ಲಿ ಉತ್ಪಾದಕತೆ ಹೆಚ್ಚಿರುವುದರಿಂದ ಅದು ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಹೇಳಿದರು.
'ಕರ್ನಾಟಕ ಸಿಂಗಮ್' ಅಣ್ಣಾಮಲೈ ಬದುಕಿನ ಸಿಂಹಾವಲೋಕನ
ಸೈನಿಕರ ನಂತರ ನೀವಿದ್ದೀರಿ
ಭಾರತ ಆರ್ಥಿಕ ಸಂಕಷ್ಟವನ್ನು ತಾಳಿಕೊಳ್ಳಲು ಶಕ್ತವಾಗಿದೆ. ಅದರಲ್ಲಿ ದೇಶದ ಹೊರಗೆ ದುಡಿಯುತ್ತಿರುವ ನಿಮ್ಮ ಕೊಡುಗೆ ಇದೆ. ಇಡೀ ಜಗತ್ತಿಗೆ ಆರ್ಥಿಕ ಹಿಂಜರಿತ ಉಂಟಾದರೂ ಅದನ್ನು ಎದುರಿಸುವಷ್ಟು ಹಣಕಾಸು ನಿಧಿ ಆರ್ಬಿಐ ಬಳಿ ಇದೆ. ದೇಶವನ್ನು ಕಾಯುವ ಸೈನಿಕರು ನಮ್ಮ ಹೆಮ್ಮೆ. ಹಾಗೆಯೇ ದೇಶಕ್ಕಾಗಿ ಕಷ್ಟಪಟ್ಟು ದುಡಿಯುವವರಲ್ಲಿ ಎರಡನೆಯ ಸ್ಥಾನದಲ್ಲಿ ವಿದೇಶದಲ್ಲಿರುವ ನೀವೆಲ್ಲ ಇದ್ದೀರಿ. ನೀವು ಕೆಲಸ ಮಾಡಿ ಡಾಲರ್ಅನ್ನು ಭಾರತಕ್ಕೆ ಕಳುಹಿಸುತ್ತಿದ್ದೀರಿ. ಹೀಗಾಗಿಯೇ ಪೆಟ್ರೋಲ್ ದರ ಏರಿಕೆಯಾದರೂ ದೇಶಕ್ಕೆ ಅದನ್ನು ನಿಭಾಯಿಸಲು ಸಾಧ್ಯವಾಗಿರುವುದು ಎಂದರು.