ಲಂಡನ್: ಬಸವಣ್ಣನ ಪ್ರತಿಮೆಗೆ ಮಹಾರಾಷ್ಟ್ರ ಮಂತ್ರಿ ಪುಷ್ಪ ನಮನ
ಲಂಡನಿನ ಬ್ರಿಟಿಷ್ ಪಾರ್ಲಿಮೆಂಟ್ ಆವರಣದಲ್ಲಿರುವ ಬಸವಣ್ಣನವರ ಪುತ್ಥಳಿಗೆ ಮಹಾರಾಷ್ಟ್ರ ಸಾಮಾಜಿಕ ನ್ಯಾಯ ಸಚಿವ ರಾಜ್ ಕುಮಾರ್ ಬಡೋಳೆ ಪುಷ್ಪ ನಮನ ಸಲ್ಲಿಸಿದರು.
ಲಂಡನ್, ಜನವರಿ 31: ಲಂಡನ್ ನಗರದ ಥೇಮ್ಸ್ ನದಿ ತಟದಲ್ಲಿರುವ ಬಸವಣ್ಣನವರ ಪುತ್ಥಳಿಗೆ ಮಹಾರಾಷ್ಟ್ರ ಸಾಮಾಜಿಕ ನ್ಯಾಯ ಮಂತ್ರಿ ರಾಜ್ ಕುಮಾರ್ ಬಡೋಳೆ ಪುಷ್ಟ ನಮನ ಸಲ್ಲಿಸಿದರು.
ಬ್ರಿಟನಿನಲ್ಲಿರುವ ಸಂಸ್ಥೆ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಜನವರಿ 30ರಂದು ಈ ಪುಷ್ಪ ನಮನ ಕಾರ್ಯಕ್ರಮ ಆಯೋಜಿಸಿತ್ತು. ಲ್ಯಾಂಬೆತ್ ಮಾಜಿ ಮೇಯರ್ ಹಾಗೂ ಫೌಂಡೇಷನಿನ ಅಧ್ಯಕ್ಷ ಡಾ ನೀರಜ್ ಪಾಟೀಲ್, ಸಚಿವರನ್ನು ಬ್ರಿಟನ್ ನಾಗರಿಕರ ಪರವಾಗಿ ಸ್ವಾಗತಿಸಿದರು. ಮಹಾರಾಷ್ಟ್ರ ಮೂಲದವರು ಮತ್ತು ಕನ್ನಡಿಗರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.[ನಾಗತಿಹಳ್ಳಿ ಚಂದ್ರಶೇಖರ್ ಗೆ ಲಂಡನ್ ನಲ್ಲಿ ಗೌರವ]
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನೀರಜ್ ಪಾಟೀಲ್, ಬಸವೇಶ್ವರರು 800 ವರ್ಷಗಳ ಹಿಂದೆಯೇ ಭಾರತದಲ್ಲಿ ಜಾತಿ ನಿರ್ಮೂಲಕ್ಕೆ ಕೈ ಹಾಕಿದ್ದರು. ಮತ್ತು ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಇವತ್ತಿಗೂ ಭಾರತದಲ್ಲಿ ಜಾತಿ ಮತ್ತು ಧರ್ಮಗಳ ಆಧಾರದಲ್ಲಿ ಸಮಾಜವನ್ನು ಒಡೆಯಲಾಗುತ್ತಿದೆ. ಇದು ನಿಲ್ಲಬೇಕು ಎಂದರು.[ಲಂಡನ್ ಸ್ಕೂಲ್ ನಲ್ಲಿ ವರುಣ್ ವಿರುದ್ಧ ಅಸಮಾಧಾನ]
ಬಸವಣ್ಣನವರ ಪ್ರತಿಮೆಗೆ ನಮನ ಸಲ್ಲಿಸಿ ಮಾತನಾಡಿದ ಮಹಾರಾಷ್ಟ್ರ ಸಚಿವ ಬಡೋಳೆ, ಭಾರತದ ತತ್ವಜ್ಞಾನಿಯೊಬ್ಬರ ಪ್ರತಿಮೆ ಐತಿಹಾಸಿಕ ಲಂಡನ್ ನಗರದಲ್ಲಿ, ಅದೂ ಬ್ರಿಟಿಶ್ ಸಂಸತ್ತಿನ ಆವರಣದಲ್ಲಿ ಥೇಮ್ಸ್ ನದಿಗೆ ಮುಖ ಮಾಡಿಕೊಂಡಿರುವುದನ್ನು ನೋಡಿ ನನಗೆ ತುಂಬು ಆಚ್ಚರಿಯಾಗಿದೆ ಎಂದರು.
ಬ್ರಿಟಿಷ್ ಸಂಸತ್ತಿನ ಆವರಣದೊಳಗಿರುವ ಐತಿಹಾಸಿಕ ವ್ಯಕ್ತಿ ಬಸವೇಶ್ವರರ ಪ್ರತಿಮೆಯನ್ನು ನವೆಂಬರ್ 14, 2015ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.