ಮತ್ತೆ ಬಂಡವಾಳಶಾಹಿಗೆ ಮಣೆ ಹಾಕಿದ ಇನ್ಫಿ ಮೂರ್ತಿ
ಟೊರಾಂಟೊ, ಏಪ್ರಿಲ್ 28: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿರುವ ದೊಡ್ಡಣ್ಣ ಎನ್ ಆರ್ ನಾರಾಯಣ ಮೂರ್ತಿ ಅವರಿಗೆ 'ವಿಶ್ವ ಭಾರತೀಯ' ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಗಿದೆ.
ಕನ್ನಡಿಗ, ಇನ್ಫೋಸಿಸ್ ಕಂಪನಿಯ ಸಹ ಸಂಸ್ಥಾಪಕ, ಹಾಲಿ ಕಾರ್ಯಕಾರಿ ಅಧ್ಯಕ್ಷ ನಾರಾಯಣ ಮೂರ್ತಿ ಅವರಿಗೆ Canada India Foundation Chanchalani Global Indian Award ಪ್ರಶಸ್ತಿಯನ್ನು ಭಾನುವಾರ ಟೊರಾಂಟೊದಲ್ಲಿ ನಡೆದ ಸಮಾರಂಭದಲ್ಲಿ ಕೆನಡಾದ ಹಣಕಾಸು ಸಚೊವ ಜೋ ಒಲಿವರ್ ಅವರು ಪ್ರದಾನ ಮಾಡಲಾಯಿತು.
2014ನೇ ಸಾಲಿನ ಈ ಪ್ರಶಸ್ತಿಯು ಟ್ರೋಫಿ ಮತ್ತು 50 ಸಾವಿರ ಡಾಲರ್ ನಗದು ಒಳಗೊಂಡಿರುತ್ತದೆ. ಈ ಸಂದರ್ಭದಲ್ಲಿ ಗವರ್ನರ್ ಜನರಲ್ ಡೇವಿಡ್ ಜಾನ್ಸ್ ಟನ್, ಪ್ರಧಾನಿ ಸ್ಟೀಫನ್ ಹಾರ್ಪರ್, ಕೆನಡಾದ ವಲಸೆ ಸಚಿವ, ಕ್ರೀಡಾ ಸಚಿವ, ಭಾರತದ ಹೈಕಮೀಷನರ್ ನಿರ್ಮಲ್ ವರ್ಮಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣ ಮೂರ್ತಿ ಅವರು ಜಗತ್ತು ಮತ್ತೆ ಬಂಡವಾಳಶಾಹಿಯತ್ತ ಹೊರಳುವುದು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು. ಬಂಡವಾಳಶಾಹಿ ಇತ್ತೀಚೆಗೆ ಕಾರ್ಯಗತವಾಗುಗುತ್ತಿಲ್ಲ; ಉದ್ಯಮರಂಗದಿಂದ ದೂರ ಉಳಿಯುತ್ತಿದೆ. ಇದನ್ನು ಸರಿಪಡಿಸುವ ತುರ್ತು ಅಗತ್ಯವಿದೆ ಎಂದು ಪ್ರತಿಪಾದಿಸಿದರು.
'ನಮ್ಮಂತಹ ಬಹುರಾಷ್ಟ್ರೀಯ ಕಂಪನಿಗಳೇ ಸಾಮಾಜಿಕ ಬಂಡವಾಳ ಹೆಚ್ಚಿಸುವಲ್ಲಿ ಉತ್ತಮ ಪಾತ್ರ ನಿಭಾಯಿಸುತ್ತಿವೆ. ಮಾನವ ಗೌರವನ್ನು ವೃದ್ಧಿಸಿಕೊಂಡು ಹೆಚ್ಚು ಹೆಚ್ಚು ಬಂಡವಾಳ ಹೂಡುವ ಅಗತ್ಯವಿದೆ. ಈ ಬಂಡವಾಳವು ಅಂತಿಮವಾಗಿ ಸಮಾಜದ ಒಳಿತಿಗಾಗಿ ಸದ್ವಿನಿಯೋಗವಾಗಬೇಕು' ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಭಾರತದಲ್ಲಿ ಹೆಚ್ಚು ಹೆಚ್ಚು ಬಂಡವಾಳ ಹೂಡುವಂತೆ ಕೆನಡಾದಲ್ಲಿರುವ ಭಾರತದ ಹೈಕಮೀಷನರ್ ನಿರ್ಮಲ್ ವರ್ಮಾ ಅವರು ಉದ್ಯಮಿಗಳಿಗೆ ಕರೆಕೊಟ್ಟರು.