ದೇಶದ ಗಮನ ಬೇರೆ ಕಡೆ ಸೆಳೆಯಲು ಪಾಕ್ ಮೇಲೆ ದಾಳಿಗೆ ಭಾರತದ ಸಂಚು?
ಇಸ್ಲಮಾಬಾದ್, ಜೂನ್ 25: "ಚೀನಾ ಜೊತೆಗಿನ ಗಡಿ ವಿವಾದದಿಂದ ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು, ಮೋದಿ ಸರಕಾರ, ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದೆ" ಪಾಕಿಸ್ತಾನದ ವಿದೇಶಾಂಗ ಖಾತೆಯ ಸಚಿವ ಶಾ ಮೆಹಮೂದ್ ಖುರೇಷಿ ಹೇಳಿದ್ದಾರೆ.
"ಪೂರ್ವ ಲಡಾಖ್ ಭಾಗದ ಗಾಲ್ವಾನ್ ಕಣಿವೆಯಲ್ಲಿ ನಡೆದ ಘಟನೆಯ ನಂತರ ಮುಜುಗರ ಎದುರಿಸುತ್ತಿರುವ ಭಾರತ, ತಮ್ಮ ದೇಶದ ವಿರುದ್ದ ಕಾರ್ಯಾಚರಣೆ ನಡೆಸಿ, ಜನರ ಗಮನವನ್ನು ಬೇರಡೆಗೆ ಸೆಳೆಯುವ ಹುನ್ನಾರ ನಡೆಸುತ್ತಿದೆ"ಎಂದು ಖುರೇಷಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ರಾಯಭಾರ ಕಚೇರಿ ಸಿಬ್ಬಂದಿ ಕಡಿತಗೊಳಿಸಿ; ಪಾಕ್ಗೆ ಭಾರತದ ಸೂಚನೆ
ತಮ್ಮ ಆರೋಪಗಳಿಗೆ ಯಾವುದೇ ಪುರಾವೆಯನ್ನು ವಿದೇಶಾಂಗ ಸಚಿವ ಖುರೇಷಿ ನೀಡಲಿಲ್ಲ. ಪಾಕಿಸ್ತಾನದ ಈ ಹೇಳಿಕೆಗೆ ಭಾರತದಿಂದ ಯಾವುದೇ ಪ್ರತಿಕ್ರಿಯೆ ಇದುವರೆಗೆ ಬಂದಿಲ್ಲ.
ಪಾಕಿಸ್ತಾನದ ದೂತಾವಾಸ ಕಚೇರಿಯ ಅಧಿಕಾರಿಗಳು ಬೇಹುಗಾರಿಕಾ ಕೆಲಸದಲ್ಲಿ ತೊಡಗಿದ್ದಾರೆ ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆಂದು, ನವದೆಹಲಿಯ ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಅರ್ಧದಷ್ಟು ಸಿಬ್ಬಂದಿಯನ್ನು ಹೊರಹಾಕಲು ಭಾರತ ಮಂಗಳವಾರ (ಜೂ 23) ಸೂಚಿಸಿತ್ತು.
ಐವರು ಲಷ್ಕರ್ ಉಗ್ರರ ಬಂಧನ, ಶಸ್ತ್ರಾಸ್ತ್ರಗಳು ವಶಕ್ಕೆ
ಕೆಲವು ದಿನಗಳ ಹಿಂದೆ, ಪಾಕಿಸ್ತಾನದಲ್ಲಿನ ಭಾರತೀಯ ಹೈಕಮಿಷನರ್ ಅವರ ಇಬ್ಬರು ಕಾರು ಚಾಲಕರು ಪಾದಚಾರಿಗಳಿಗೆ ಹೊಡೆದು ಪರಾರಿಯಾಗಲು ಯತ್ನಿಸಿದ್ದಾರೆ ಎಂದು ಪಾಕಿಸ್ತಾನ ಪೊಲೀಸರು ಅವರನ್ನು ಬಂಧಿಸಿ, ನಂತರ ಇವರಿಬ್ಬರನ್ನು ಬಿಡುಗಡೆ ಮಾಡಿ ಭಾರತಕ್ಕೆ ವಾಪಸ್ ಕಳುಹಿಸಿತ್ತು.
ಈ ಘಟನೆಯ ಬೆನ್ನಲ್ಲೇ, ಪಾಕಿಸ್ತಾನದ ವಿದೇಶಾಂಗ ಸಚಿವರು, ಭಾರತ, ತನ್ನ ಮೇಲೆ ದಾಳಿ ನಡೆಸಲು ಯತ್ನಿಸುತ್ತಿದೆ ಎನ್ನುವ ಆಧಾರ ರಹಿತ ಹೇಳಿಕೆಯನ್ನು ನೀಡಿದ್ದಾರೆ.