ಎಲ್ಲಾ ದಿಕ್ಕಿಗೂ ಶಾಂತಿಯ ಹಸ್ತ ಚಾಚುವ ಸಮಯ ಬಂದಿದೆ:ಪಾಕಿಸ್ತಾನ
ಇಸ್ಲಾಮಾಬಾದ್,ಫೆಬ್ರವರಿ 03: ಎಲ್ಲಾ ದಿಕ್ಕಿಗೂ ಶಾಂತಿಯ ಹಸ್ತ ಚಾಚುವ ಸಮಯ ಬಂದಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಹೇಳಿದ್ದಾರೆ.
ಜನರಲ್ ಬಜ್ವಾ ಮಂಗಳವಾರ ಪಾಕಿಸ್ತಾನವು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗಾಗಿ ದೊಡ್ಡ ತ್ಯಾಗಗಳನ್ನು ಮಾಡಿದ ಶಾಂತಿ ಪ್ರಿಯ ದೇಶ ಎಂದು ಹೇಳಿದ್ದಾರೆ.
ಹಸಿವಿನಿಂದ ಕಂಗೆಟ್ಟ ಪಾಕಿಸ್ತಾನ,ಇಲ್ಲಿದೆ ಒಂದು ಮೊಟ್ಟೆಯ ಬೆಲೆ
ಗಮನಾರ್ಹವಾದ ಬೆಳವಣಿಗೆಯಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಭಾರತದ ಬಗೆಗಿನ ತಮ್ಮ ದೃಷ್ಟಿಯನ್ನು ಬದಲಿಸಿಕೊಂಡಿದ್ದಾರೆ ಎಂದು ಕಾಣುತ್ತಿದೆ. ಏಕೆಂದರೆ ಅವರು ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನು ಗೌರವಯುತವಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.
ಭಾರತಕ್ಕೆ ಸಂಬಂಧಿಸಿದ ಪಾಕಿಸ್ತಾನ ಸೇನಾ ಮುಖ್ಯಸ್ಥರ ಹೇಳಿಕೆಗಳು ದೃಷ್ಟಿಕೋನದ ಬದಲಾವಣೆಯ ಸಂಕೇತ ಮತ್ತು ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಯ ಬಯಕೆಯ ಸಂಕೇತವಾಗಿದೆ. ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಭಾರತ ಪದೇ ಪದೇ ಹೇಳುತ್ತಾ ಬಂದಿದ್ದು ಭಾರತದ ವಿರುದ್ಧ ಭಯೋತ್ಪಾದಕ ದಾಳಿಗೆ ಕಾರಣವಾದ ತನ್ನ ಮಣ್ಣಿನಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನವು ಇನ್ನು ಮುಂದಾದರೂ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಎಲ್ಲಾ ದಿಕ್ಕುಗಳಿಗೂ ಶಾಂತಿ ಪಸರಿಸುವ ಸಮಯ
ಪಾಕಿಸ್ತಾನದ ವಾಯುಪಡೆ ಅಕಾಡೆಮಿಯಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ, ಜನರಲ್ ಬಜ್ವಾ ಪಾಕಿಸ್ತಾನ ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯ ಆದರ್ಶಕ್ಕೆ ದೃಢವಾಗಿ ಬದ್ಧವಾಗಿದೆ ಮತ್ತು ಎಲ್ಲಾ ದಿಕ್ಕುಗಳಿಗೂ ಶಾಂತಿಯನ್ನು ಪಸರಿಸುವ ಸಮಯ ಇದಾಗಿದೆ ಎಂದು ಹೇಳಿದ್ದಾರೆ.
ಪರಸ್ಪರ ಗೌರವ ಹಾಗೂ ಶಾಂತಿಯನ್ನು ಕಾಪಾಡಬೇಕು
ನಾವು ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯ ಆದರ್ಶಕ್ಕೆ ದೃಢವಾಗಿ ಬದ್ಧರಾಗಿದ್ದೇವೆ. ಎಲ್ಲಾ ದಿಕ್ಕುಗಳಿಗೂ ಶಾಂತಿಯ ಹಸ್ತವನ್ನು ಚಾಚುವ ಸಮಯ ಇದು. ಪಾಕಿಸ್ತಾನ ಮತ್ತು ಭಾರತ ನಡುವೆ ಸುದೀರ್ಘ ಕಾಲದ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನು ಗೌರವಯುತವಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಬೇಕು" .
ಯಾವುದೇ ಬೆದರಿಕೆ ಎದುರಿಸಲು ಸಿದ್ಧ
ಯಾವುದೇ ಬೆದರಿಕೆಯನ್ನು ಎದುರಿಸಲು ಪಾಕಿಸ್ತಾನ ಸಶಸ್ತ್ರ ಪಡೆಗಳು ಸಂಪೂರ್ಣ ಸಮರ್ಥವಾಗಿವೆ ಎಂದು ಅವರು ಹೇಳಿದರು. ಸಮಾರಂಭದಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರೆ, ಪಾಕಿಸ್ತಾನ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಮುಜಾಹಿದ್ ಅನ್ವರ್ ಖಾನ್ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು. "ಭಯೋತ್ಪಾದನೆ ವಿರುದ್ಧದ ಯುದ್ಧ" ದಲ್ಲಿ ಪಾಕಿಸ್ತಾನ ವಾಯುಪಡೆಯು ವಹಿಸಿರುವ ಪಾತ್ರವನ್ನು ಜನರಲ್ ಬಜ್ವಾ ಶ್ಲಾಘಿಸಿದರು.
ಶಾಂತಿ ಬಯಕೆ ದೌರ್ಬಲ್ಯದ ಸಂಕೇತವಲ್ಲ
ಪಾಕಿಸ್ತಾನದ ಇಂಟರ್-ಸರ್ವಿಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ಹೇಳಿಕೆಯ ಪ್ರಕಾರ, ಜನರಲ್ ಬಜ್ವಾ ಅವರ "ಶಾಂತಿಯ ಬಯಕೆಯನ್ನು ದೌರ್ಬಲ್ಯದ ಸಂಕೇತ" ಎಂದು ತಪ್ಪಾಗಿ ಅರ್ಥೈಸಲು ಪಾಕಿಸ್ತಾನವು ಯಾರನ್ನೂ ಅಥವಾ ಯಾವುದೇ ಘಟಕಕ್ಕೂ ಅನುಮತಿಸುವುದಿಲ್ಲ.