ಬಸವಣ್ಣನ ಮುಂದೆ ಭಾವುಕರಾದ ಸಿದ್ದು ಈ ಪ್ರಶ್ನೆಗಳಿಗೆ ಉತ್ತರಿಸುವರೆ?
ಲಂಡನ್, ಸೆಪ್ಟೆಂಬರ್ 17 : "ಲಂಡನ್ನ ಜೇಮ್ಸ್ ಪಾರ್ಕ್ನಲ್ಲಿರುವ ಅಣ್ಣ ಬಸವಣ್ಣನವರ ಪುತ್ಥಳಿ ನೋಡಿ ಕಣ್ತುಂಬಿ ಬಂತು. ನಿಜವಾದ ವಿಶ್ವಗುರು ನಮ್ಮ ಬಸವಣ್ಣ" ಹೀಗೆಂದು ಸಿದ್ದರಾಮಯ್ಯನವರು ಮೂರು ದಿನಗಳ ಹಿಂದೆ ಸೆಪ್ಟೆಂಬರ್ 14ರಂದು, ಲಂಡನ್ನಿನಿಂದಲೇ ಟ್ವೀಟ್ ಮಾಡಿದ್ದರು.
ಈ ಟ್ವೀಟನ್ನು ಕಂಡು ಅವರ ಹಲವಾರು ಅಭಿಮಾನಿಗಳು ಕೂಡ ಭಾವುಕರಾಗಿದ್ದರೆ, ಅವರ ವಿರೋಧಿಗಳು, ಆ ಪುತ್ಥಳಿಯನ್ನು ಅನಾವರಣ ಮಾಡಿದ್ದು ಯಾರು? ಎಂದು ಸಿದ್ದರಾಮಯ್ಯನವರನ್ನು ಮತ್ತು ಅವರ ಕಟ್ಟಾ ಅಭಿಮಾನಿಗಳನ್ನು ಕಾಲೆಳೆದು ಚರ್ಚೆಗೆ ನಾಂದಿ ಹಾಡಿದ್ದರು.
ಈಗ, ಬಸವಣ್ಣನ ಪುತ್ಥಳಿಯನ್ನು ಲಂಡನ್ನಿನ ಥೇಮ್ಸ್ ನದಿಯ ದಡದಲ್ಲಿ ಮತ್ತು ಪಾರ್ಲಿಮೆಂಟ್ ಎದುರಲ್ಲಿ ಸ್ಥಾಪಿಸಲು ಶ್ರಮಿಸಿದ ಕನ್ನಡಿಗ, ಲ್ಯಾಂಬೆತ್ ಮಾಜಿ ಮೇಯರ್ ಡಾ. ನೀರಜ್ ಪಾಟೀಲ ಅವರು, ಸಿದ್ದರಾಮಯ್ಯನವರಿಗೆ ಮೂರು ಪ್ರಶ್ನೆಗಳನ್ನು ಹಾಕಿದ್ದು, ಆ ಪ್ರಶ್ನೆಗಳಲ್ಲಿರುವ ಸಂಗತಿಗಳನ್ನು ಸಾಧ್ಯವಾದರೆ ಅಲ್ಲಗಳೆಯಿರಿ ಎಂದು ಸವಾಲು ಹಾಕಿದ್ದಾರೆ.
ಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ 5 ಪ್ರಶ್ನೆಗಳು
ಸಿದ್ದರಾಮಯ್ಯನವರು ಬೆಳಗಿನ ಜಾವ 1 ಗಂಟೆಗೆ (ಸ್ಥಳೀಯ ಕಾಲಮಾನ) ಬಸವಣ್ಣನ ಪುತ್ಥಳಿ ಇರುವ ಸ್ಥಳಕ್ಕೆ ಭೇಟಿ ನೀಡಿ, ಏಕಾಂಗಿಯಾಗಿ ನಿಂತುಕೊಂಡು ಫೋಟೋ ಹೊಡೆಸಿಕೊಂಡಿದ್ದರು. ಆದರೆ, ಈ ಸಂಗತಿಯನ್ನು ಸ್ಥಳೀಯ ಕನ್ನಡ ಮತ್ತು ಭಾರತೀಯ ಸಂಘಟನೆಗಳಿಗೆ ತಿಳಿಸುವ ಔದಾರ್ಯವನ್ನೂ ತೋರಿರಲಿಲ್ಲ ಎಂಬುದು ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ಆಕ್ರೋಶ ವ್ಯಕ್ತಪಡಿಸಿದೆ. ಬಸವೇಶ್ವರ ಫೌಂಡೇಷನ್ ಕೇಳಿರುವ ಮೂರು ಸಂಗತಿಗಳು ಕೆಳಗಿನಂತಿವೆ.
ಪ್ರಶ್ನೆ 1 : ಬಸವಣ್ಣನ ಪುತ್ಥಳಿಯನ್ನು ವಿರೋಧಿಸಿದ್ದು ಏಕೆ?
ಅಂದಿನ ಕರ್ನಾಟಕ ಸರಕಾರದ ಬೆಂಬಲದೊಂದಿಗೆ 2010ರಲ್ಲಿ ಬಸವೇಶ್ವರರ ಪುತ್ಥಳಿ ಸ್ಥಾಪಿಸುವ ಕ್ರಿಯೆಗೆ ಚಾಲನೆ ನೀಡಲಾಯಿತು. ನಂತರ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಈ ಪುತ್ಥಳಿ ಸ್ಥಾಪಿಸುವ ಯೋಜನೆಗೆ ನೀಡಿರುವ ಎಲ್ಲ ಬೆಂಬಲಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆದೇಶಿಸಿದ್ದರು. ಇದರಿಂದಾಗಿ, ನಮ್ಮ ಯೋಜನೆಯೇ ನೆನೆಗುದಿಗೆ ಬಿದ್ದು, ಕೊನೆಗೆ ನಾವೇ ನಮ್ಮ ಕೈಯಾರೆ 3.5 ಕೋಟಿ ರುಪಾಯಿಗಳನ್ನು ಸಂಗ್ರಹಿಸಬೇಕಾಯಿತು.
ನಮ್ಮ ಯೋಜನೆಯೇ ನೆನಗುದಿಗೆ ಬಿದ್ದಿದ್ದಾಗ ಕರ್ನಾಟಕ ಸರಕಾರ ಬೆಂಬಲಿಸಬೇಕೆಂದು ನಾವು ಅವರನ್ನು ಭೇಟಿಯಾಗಿದ್ದೆವು. ಆಗ ಅವರು ವ್ಯಂಗ್ಯವಾಗಿ, ಜಗಜ್ಯೋತಿ ಬಸವಣ್ಣನವರ ಪುತ್ಥಳಿಯನ್ನು ಲಂಡನ್ ನಲ್ಲಿ ಸ್ಥಾಪಿಸುವ ಅಗತ್ಯವಿಲ್ಲ ಎಂದಿದ್ದರಲ್ಲದೆ, ಇಡೀ ಸಂಪುಟದ ಎದುರಿನಲ್ಲಿ, ಪುತ್ಥಳಿ ಸ್ಥಾಪಿಸುವುದರಿಂದ ಸಮಯ ಮತ್ತು ಶಕ್ತಿ ಸುಮ್ಮನೆ ವ್ಯಯವಾಗುತ್ತದೆ ಎಂದು ನುಡಿದಿದ್ದರು. ಸಿದ್ದರಾಮಯ್ಯನವರು ಬಸವಣ್ಣನ ಪುತ್ಥಳಿಯನ್ನು ವಿರೋಧಿಸಿದ್ದು ಏಕೆ?
ಲಂಡನ್ನಲ್ಲಿ ಬಸವಣ್ಣನ ಪ್ರತಿಮೆ ಕಂಡು ಭಾವುಕರಾದ ಸಿದ್ದರಾಮಯ್ಯ
ಪ್ರಶ್ನೆ 2 : ಪುತ್ಥಳಿ ಅನಾವರಣಕ್ಕೆ ಮೋದಿ ಅನರ್ಹರೆ?
ಇದೆಲ್ಲಾ ಆದ ಮೇಲೆ, ಕಡೆಗೆ ಎಲ್ಲವೂ ಸರಿಹೋಗಿ 2015ರ ನವೆಂಬರ್ 14ರಂದು ಬಸವೇಶ್ವರ ಅವರ ಪುತ್ಥಳಿಯನ್ನು ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಂಟಿಯಾಗಿ ಅನಾವರಣಕ್ಕೆ ಆಗಮಿಸಬೇಕೆಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾವು ಆಹ್ವಾನ ನೀಡಿದ್ದೆವು. ಅವರು ನಮ್ಮ ಆಹ್ವಾನವನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ, ಬಸವೇಶ್ವರ ಪುತ್ಥಳಿ ಅನಾವರಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅನರ್ಹ ವ್ಯಕ್ತಿ ಎಂದು ಅಪಹಾಸ್ಯ ಮಾಡಿದ್ದರು. ಪುತ್ಥಳಿ ಅನಾವರಣಕ್ಕೆ ಮೋದಿ ಅನರ್ಹರೆ?
ಭಾರತದಿಂದ ಹೊರಗಿರುವವರಿಗೆ ಇಂಥ ರಾಜಕೀಯ ಬೇಕಾಗಿಲ್ಲ, ನಾವು ಎಲ್ಲೇ ಇದ್ದರೂ ಭಾರತೀಯರು, ನಾವು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗರು ಅಲ್ಲ ಎಂದು ಹೇಳಿ, ಪ್ರಧಾನಿಯೊಂದಿಗೆ ಜಂಟಿಯಾಗಿ ಪುತ್ಥಳಿ ಅನಾವರಣ ಮಾಡಬೇಕೆಂದು ಅವರನ್ನು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಅವರು ಜಗ್ಗಲಿಲ್ಲ. ನಮ್ಮ ನಿರ್ವಿವಾದದ ಆಶಯವನ್ನು ಅರ್ಥ ಮಾಡಿಕೊಳ್ಳಲು ವಿಫಲರಾದ ಅವರು, ಭಾರತದ ಪ್ರಧಾನಿಯ ಮತ್ತು ಅವರು ಪ್ರತಿನಿಧಿಸುವ ಪಕ್ಷದ ವಿರುದ್ಧ ವಾಗ್ದಾಳಿ ಮಾಡುತ್ತಲೇ ಇದ್ದರು.
ಸಿದ್ದರಾಮಯ್ಯ ನಿವಾಸಕ್ಕೆ ಅತೃಪ್ತ ಶಾಸಕರು, ಮಹತ್ವದ ಚರ್ಚೆ
ಪ್ರಶ್ನೆ 3 : ಆಶಾಢಭೂತಿ ಎಂದು ಏಕೆ ಕರೆಯಬಾರದು?
ಇದು ಎಲ್ಲರೂ ತಿಳಿದಿರುವ ಸಂಗತಿ. ಬಸವಣ್ಣನವರು ಯಾವುದೇ ಜಾತಿ ರಾಜಕೀಯವನ್ನು, ಜಾತಿ ತಾರತಮ್ಯವನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದರು. ಆದರೆ, ಸಿದ್ದರಾಮಯ್ಯನವರು ಅಧಿಕಾರದ ಲಾಲಸೆಗಾಗಿ, ಎರಡನೇ ಬಾರಿ ಮುಖ್ಯಮಂತ್ರಿ ಆಗುವ ಉದ್ದೇಶದಿಂದ, ಬಸವಣ್ಣನವರ ತತ್ತ್ವದ ವಿರುದ್ಧ ಬಸವೇವಶ್ವರ ಅವರ ಹಿಂಬಾಲಕರನ್ನೇ ಇಬ್ಭಾಗಿಸಲು ಮುಂದಾದರು. ಈ ಎಲ್ಲ ಸಂಗತಿಗಳನ್ನು ಅವರು ಬೇಕಿದ್ದರೆ ಅಲ್ಲಗಳೆಯಲಿ, ನಾನು ಮೇಲಿನಂತೆ ನಡೆದುಕೊಂಡಿಲ್ಲವೆಂದು ಸಾಬೀತುಪಡಿಸಲಿ. ಅವರನ್ನು ಕರ್ನಾಟಕದ ಗ್ರೇಟೆಸ್ಟ್ ಆಶಾಢಭೂತಿ ಎಂದು ಏಕೆ ಕರೆಯಬಾರದು?
ಈ ಸಂಗತಿಗಳಿಗೆ ಉತ್ತರಿಸುವರೆ ಸಿದ್ದರಾಮಯ್ಯ?
ಈ ಪ್ರಶ್ನೆಗಳನ್ನು ಕೇವಲ ಸಿದ್ದರಾಮಯ್ಯನವರಿಗೆ ಮಾತ್ರ ಕೇಳಲಾಗಿದೆ. ಇವು ಅವರು ಪ್ರತಿನಿಧಿಸುತ್ತಿರುವ ಪಕ್ಷಕ್ಕೆ ಕೇಳಿದ್ದಲ್ಲ. ಅವರು ಅವರದೇ ಪಕ್ಷದ ನಾಯಕರಾದ ಡಾ. ಜಿ ಪರಮೇಶ್ವರ ಮತ್ತು ಎಚ್ ಆಂಜನೇಯ ಅವರಂತೆ ನಮಗೆ ಬರುವ ಸಂಗತಿಯನ್ನು ತಿಳಿಸಬೇಕಾಗಿತ್ತು ಎಂದಿದ್ದಾರೆ ಪಾಟೀಲರು.
ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ಸಿನ ಲಿಂಗಾಯತ ಸಮುದಾಯದ ನಾಯಕ ಎಂಬಿ ಪಾಟೀಲರನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯನವರು ಲಿಂಗಾಯತ ಮತ್ತು ವೀರಶೈವರನ್ನು ಇಬ್ಭಾಗಿಸಲು ಸರ್ವಪ್ರಯತ್ನಗಳನ್ನೂ ಮಾಡಿದ್ದರು. ಕಡೆಗೆ, ಲಿಂಗಾಯತರು ಹೆಚ್ಚಾಗಿರುವ ಪ್ರದೇಶಗಳಲ್ಲಿಯೇ ಕಾಂಗ್ರೆಸ್ ನಾಯಕರು ಭಾರೀ ಮುಖಭಂಗ ಅನುಭವಿಸಬೇಕಾಯಿತು.
ಈಗ, ಯುರೋಪ್ ಪ್ರವಾಸದಲ್ಲಿದ್ದಾಗ, ಬಸವಣ್ಣನ ಪುತ್ಥಳಿಯ ಸ್ಥಾಪನೆಯೇ ಬೇಡವೆಂದಿದ್ದ ಸಿದ್ದರಾಮಯ್ಯನವರು, ಪುತ್ಥಳಿಯ ಮುಂದೆ ನಿಂತಾಗ ಕಣ್ತುಂಬಿ ಬಂದಿತ್ತು ಎಂದಿರುವುದು ಲಂಡನ್ನಿನಲ್ಲಿನ ಕನ್ನಡಿಗರನ್ನು ಕೆರಳಿಸಿದೆ. ಈ ಕಾರಣಕ್ಕಾಗಿಯೇ ನೀರಜ್ ಪಾಟೀಲರು ಮೇಲಿನ ಸಂಗತಿಗಳನ್ನು ಸಿದ್ದರಾಮಯ್ಯ ಅವರ ಮುಂದೆ ಬಿಚ್ಚಿಟ್ಟಿದ್ದಾರೆ. ಉತ್ತರಿಸುವರೆ ಸಿದ್ದರಾಮಯ್ಯ?