ಹಿಂದು ದೇವಾಲಯಗಳ ಮೇಲೆ ದಾಳಿ ಮಾಡಿದವರ ಬೇಟೆಯಾಡಿ: ಬಾಂಗ್ಲಾದೇಶ ಪ್ರಧಾನಿ
ಢಾಕಾ, ಅಕ್ಟೋಬರ್ 15: ಹಿಂದು ದೇವಾಲಯಗಳ ಮೇಲೆ ದಾಳಿ ಮತ್ತು ದುರ್ಗಾ ಪೂಜೆಯ ಆಚರಣೆಗಳ ವೇಳೆ ನಾಲ್ವರ ಹತ್ಯೆಯಲ್ಲಿ ಭಾಗಿಯಾದವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಬಾಂಗ್ಲಾದೇಶ ಸರ್ಕಾರವು ನೀಡಿದೆ. ದುರ್ಗಾ ಪೂಜೆ ಆಚರಣೆ ವೇಳೆ ಕೆಲವು ಹಿಂದು ದೇವಾಲಯಗಳನ್ನು ಧ್ವಂಸಗೊಳಿಸಿದ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಹೀಗಾಗಿ ಢಾಕಾದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮಾತ್ರವಲ್ಲದೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಗುರುವಾರ 22 ಜಿಲ್ಲೆಗಳಲ್ಲಿ ಅರೆಸೇನಾ ಪಡೆ ನಿಯೋಜಿಸಲು ಆದೇಶಿಸಿದ್ದಾರೆ.
ಢಾಕಾದಲ್ಲಿರುವ ಢಾಕೇಶ್ವರಿ ರಾಷ್ಟ್ರೀಯ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು, "ಕಮಿಲಾದಲ್ಲಿನ ಘಟನೆಗಳನ್ನು ಕೂಲಂಕುಷವಾಗಿ ತನಿಖೆ ಮಾಡಲಾಗುತ್ತಿದೆ. ಯಾರನ್ನೂ ಬಿಡುವುದಿಲ್ಲ. ಅವರು ಯಾವ ಧರ್ಮಕ್ಕೆ ಸೇರಿದವರು ಎಂಬುದು ಮುಖ್ಯವಲ್ಲ. ಅವರನ್ನು ಬೇಟೆಯಾಡಿ ಶಿಕ್ಷಿಸಲಾಗುವುದು" ಎಂದು ಹೇಳಿದರು. ಕಾರ್ಯಕ್ರಮದ ಬಳಿಕ ಹಿಂದುಗಳೊಂದಿಗೆ ನವರಾತ್ರಿಯ ಶುಭಾಶಯ ವಿನಿಮಯ ಮಾಡಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಸೀನಾ ಅವರು, "ನಾವು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಇದು ತಂತ್ರಜ್ಞಾನದ ಯುಗವಾಗಿದೆ. ಈ ಘಟನೆಯಲ್ಲಿ ಭಾಗಿಯಾದವರನ್ನು ತಂತ್ರಜ್ಞಾನದ ಬಳಕೆಯಿಂದ ಖಂಡಿತವಾಗಿ ಪತ್ತೆ ಮಾಡಲಾಗುತ್ತದೆ" ಎಂದು ಹಸೀನಾ ಹೇಳಿದರು.
ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವಿಡಿಯೋಗಳು ಹರಿದಾಡುತ್ತಿವೆ. ದೊಡ್ಡ ಗುಂಪುಗಳು ದುರ್ಗಾಪೂಜೆ ವಿಗ್ರಹಳನ್ನು ಧ್ವಂಸ ಮಾಡುವುದು, ಕಲ್ಲುಗಳನ್ನು ಎಸೆಯುವುದು ಮತ್ತು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡುವುದನ್ನು ವೈರಲ್ ವಿಡಿಯೋಗಳಲ್ಲಿ ಕಾಣಬಹುದು. ಹೀಗಾಗಿ ದೇಶಾದ್ಯಂತ ಹಿಂದೂ ದೇವರ ಮೇಲೆ ದಾಳಿ ಖಂಡಿಸಲಾಗಿದೆ. ದುರ್ಗಾ ಪೂಜೆ ಆಚರಣೆಯ ಸಂದರ್ಭದಲ್ಲಿ ಹಿಂಸಾಚಾರದ ಹಿಂದೆ ಇರುವ ಜನರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಕೋರಿದೆ. ಭಾರತ ಈ ಹಿಂಸಾಚಾರದ ವರದಿಗಳನ್ನು ಆತಂಕಕಾರಿ ಎಂದು ಕರೆದಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "ಬಾಂಗ್ಲಾದೇಶದಲ್ಲಿ ಧಾರ್ಮಿಕ ಸಭೆಯ ಮೇಲೆ ದಾಳಿಗಳನ್ನು ಒಳಗೊಂಡ ಅಹಿತಕರ ಘಟನೆಗಳ ಗೊಂದಲದ ವರದಿಗಳನ್ನು ನಾವು ನೋಡಿದ್ದೇವೆ. ಬಾಂಗ್ಲಾದೇಶ ಸರ್ಕಾರ ಕಾನೂನು ಜಾರಿ ಯಂತ್ರಗಳ ನಿಯೋಜನೆ ಸೇರಿದಂತೆ ಪರಿಸ್ಥಿತಿಯ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ತಕ್ಷಣವೇ ಪ್ರತಿಕ್ರಿಯಿಸಿದೆ" ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳಿಗೆ ತಿಳಿಸಿದರು.
ಘಟನೆಯ ಬಳಿಕ ಬಾಂಗ್ಲಾದೇಶದ ಅಧಿಕಾರಿಗಳು ಹಾಜಿಗಂಜ್ ನಲ್ಲಿ ರ್ಯಾಲಿಗಳ ಮೇಲೆ ನಿಷೇದ ಹೇರಲಾಗಿದೆ. ಸದ್ಯ ಢಾಕಾದಿಂದ ಸುಮಾರು 100 ಕಿಮೀ ದೂರದಲ್ಲಿರುವ ಕುಮಿಲಾದಲ್ಲಿರುವ ದುರ್ಗಾ ಪೂಜೆಯ ಮಂಟಪದಲ್ಲಿ ನಡೆದ ದೇವದೂಷಣೆಯ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉದ್ರಿಕ್ತ ಗುಂಪು ಕುಮಿಲಾ, ನೆರೆಯ ಹಾಜಿಗಂಜ್, ವಾಯುವ್ಯ ಕರಾವಳಿ ಉಪ ಜಿಲ್ಲೆಗಳಾದ ಹಾಟಿಯಾ ಮತ್ತು ಬನ್ಸ್ಖಾಲಿಯ ದೇವಾಲಯಗಳ ಮೇಲೆ ದಾಳಿ ಮಾಡಿದೆ. ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಸಾಮಾಜಿಕ ಮಾಧ್ಯಮವನ್ನು ಹೆಚ್ಚಾಗಿ ಬಳಸಲಾಗಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.