'ಕಾಬೂಲ್ ಹೋಟೆಲ್ನಿಂದ ತಕ್ಷಣ ಹೊರಡಿ'; ತನ್ನ ನಾಗರಿಕರಿಗೆ ಯುಎಸ್, ಯುಕೆ ಎಚ್ಚರಿಕೆ
ಕಾಬೂಲ್, ಅಕ್ಟೋಬರ್ 11: ಅಫ್ಘಾನಿಸ್ತಾನದ ಕಾಬೂಲ್ನ ಹೊಟೇಲ್ನಿಂದ ತಕ್ಷಣ ಹೊರಡುವಂತೆ ಸೋಮವಾರ ಯುನೈಟೆಡ್ ಸ್ಟೇಟ್ಸ್ ಹಾಗೂ ಬ್ರಿಟನ್ ತನ್ನ ನಾಗರಿಕರಿಗೆ ಸೂಚನೆ ನೀಡಿದೆ. ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಮಸೀದಿಯೊಂದರ ಮೇಲೆ ಬಾಂಬ್ ದಾಳಿ ನಡೆದು ಈ ದಾಳಿಯ ಹೊಣೆಯನ್ನು ಐಎಸ್ಐಎಸ್ ಗುಂಪು ಹೊತ್ತ ಬಳಿಕ ಈ ಎಚ್ಚರಿಕೆಯನ್ನು ಯುಎಸ್ ಹಾಗೂ ಬ್ರಿಟನ್ ಕಾಬೂಲ್ನಲ್ಲಿ ಇರುವ ತನ್ನ ನಾಗರಿಕರಿಗೆ ನೀಡಿದೆ.
ಅಫ್ಘಾನಿಸ್ತಾನದಲ್ಲಿ ಯುಎಸ್ ತನ್ನ ಸೇನೆಯನ್ನು ಹಿಂದಕ್ಕೆ ಪಡೆದ ಬಳಿಕ ಆಗಸ್ಟ್ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಬಳಿಕ ಅಫ್ಘಾನಿಸ್ತಾನದಲ್ಲಿ ಹಲವಾರು ಹಲವಾರು ಬಾಂಬ್ ದಾಳಿಗಳು ನಡೆದಿದೆ.
ಆಡಳಿತವನ್ನು ಅಸ್ಥಿರಗೊಳಿಸದಂತೆ ಯುಎಸ್ಗೆ ತಾಲಿಬಾನ್ ಎಚ್ಚರಿಕೆ
ತನ್ನ ನಾಗರಿಕರಿಗೆ ಈ ನಿಟ್ಟಿನಲ್ಲಿ ಎಚ್ಚರಿಕೆಯನ್ನು ನೀಡಿರುವ ಯುಎಸ್ ಸ್ಟೇಟ್ ವಿಭಾಗವು, "ಸೆರೆನಾ ಹೋಟೆಲ್ನಲ್ಲಿ ಹಾಗೂ ಅದರ ಸಮೀಪದಲ್ಲಿ ಇರುವ ಯುಎಸ್ ನಾಗರಿಕರು ಈ ತಕ್ಷಣ ಕಾಬೂಲ್ ಅನ್ನು ತೊರೆಯಿರಿ," ಎಂದು ಸೂಚಿಸಿದೆ. ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಈ ಎಚ್ಚರಿಕೆಯನ್ನು ಕೈಗೊಳ್ಳಿ ಎಂದು ಕೂಡಾ ಹೇಳಿದೆ.
ಇನ್ನು ಬ್ರಿಟನ್ನ ವಿದೇಶಾಂಗ ಸಚಿವಾಲಯವು, "ಸುರಕ್ಷತೆಯ ವಿಚಾರದಲ್ಲಿ ಅಪಾಯ ಅಧಿಕ ಆಗಿರುವ ಕಾರಣದಿಂದಾಗಿ ನಮ್ಮ ಜನರು ಹೋಟೆಲ್ನಲ್ಲಿ ಉಳಿಯಬಾರದು ಎಂದು ನಾವು ಹೇಳುತ್ತೇವೆ. ಮುಖ್ಯವಾಗಿ ಕಾಬೂಲ್ನಿಂದ ನಮ್ಮ ನಾಗರಿಕರು ಹೊರಡಿ," ಎಂದು ತಿಳಿಸಿದೆ.
ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ತನ್ನ ಸರ್ಕಾರವನ್ನು ರಚನೆ ಮಾಡಿದ್ದರೂ ಕೂಡಾ ಈವರೆಗೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆಯುವಲ್ಲಿ ವಿಫಲವಾಗಿದೆ. ಈ ನಡುವೆ ತಾಲಿಬಾನ್ ಅನ್ನು ಗುರಿಯಾಗಿಸಿಕೊಂಡು ಐಸಿಸ್ ಉಗ್ರ ಸಂಘಟನೆಯ ಅಫ್ಘಾನ್ ಘಟಕವು ಬಾಂಬ್ ದಾಳಿಯನ್ನು ನಡೆಸಿದೆ.
ಕಾಬೂಲ್ನಲ್ಲಿ ಮಸೀದಿ ಬಳಿ ಬಾಂಬ್ ಸ್ಪೋಟ: 'ನಾಗರಿಕರು ಸಾವನ್ನಪ್ಪಿದ್ದಾರೆ' ಎಂದ ತಾಲಿಬಾನ್
ಉತ್ತರ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ದೋಸ್ತ್ ಮೊಹಮ್ಮದ್ ಅವರು ಹೇಳಿರುವ ಪ್ರಕಾರ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ದಾಳಿಯಲ್ಲಿ ಬಹುತೇಕರು ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಅಫ್ಘಾನಿಸ್ತಾನವು ತಾಲಿಬಾನ್ ವಶವಾಗುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಹೆಚ್ಚಳವಾಗಿದೆ. ಕಾಶ್ಮೀರಿ ಪಂಡಿತರು, ಸಿಖ್ ಹಾಗೂ ಮುಸ್ಲಿಂ ಸಮುದಾಯದ ಜನರು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನದಲ್ಲಿ ಒಟ್ಟು ಏಳು ಮಂದಿ ನಾಗರಿಕರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಭಾರತೀಯ ಭದ್ರತಾ ಪಡೆಯು ಈವರೆಗೆ ಉಗ್ರರ ಮೇಲೆ ಸಹಾನುಭೂತಿ ಹೊಂದಿರುವ ಸುಮಾರು 700 ಮಂದಿಯನ್ನು ವಶಕ್ಕೆ ಪಡೆದಿದೆ. ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆ ವೇಳೆ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಘಟನೆಯಲ್ಲಿ ಭಾರತೀಯ ಸೇನೆಯ ಒಬ್ಬ ಜೂನಿಯರ್ ಕಮಿಷನ್ ಆಫೀಸರ್ ಹಾಗೂ ನಾಲ್ವರು ಯೋಧರು ಸೇರಿದಂತೆ ಐವರು ಹುತಾತ್ಮರಾಗಿದ್ದಾರೆ.
ಇತ್ತೀಚೆಗೆ ತಾಲಿಬಾನ್ ಹಾಗೂ ಯುಎಸ್ ನಡುವೆ ಮಾತುಕತೆ ನಡೆದಿದೆ. ಅಫ್ಘಾನಿಸ್ತಾನದಿಂದ ಯುಎಸ್ ತನ್ನ ಸೇನೆಯನ್ನು ಹಿಂದಕ್ಕೆ ಪಡೆದ ಬಳಿಕ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡ ತಾಲಿಬಾನ್ನೊಂದಿಗೆ ನಡೆದ ಮೊದಲ ಮಾತುಕತೆಯಲ್ಲಿ ಆಡಳಿತವನ್ನು ಅಸ್ಥಿರಗೊಳಿಸದಂತೆ ತಾಲಿಬಾನ್ ಯುಎಸ್ಗೆ ಎಚ್ಚರಿಕೆ ನೀಡಿದೆ ಎಂದು ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಾಕಿ ಶನಿವಾರ ತಿಳಿಸಿದ್ದಾರೆ.
"ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದು ಯಾರಿಗೂ ಒಳಿತಲ್ಲ ಎಂದು ನಾವು ತಿಳಿಸಿದ್ದೇವೆ," ಎಂದು ಯುಎಸ್ನೊಂದಿಗೆ ದೋಹಾದ ಕತಾರ್ನಲ್ಲಿ ಮಾತುಕತೆ ನಡೆದ ಬಳಿಕ ಬಕಾರ್ ಸುದ್ದಿ ಸಂಸ್ಥೆಗೆ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಾಕಿ ಹೇಳಿದ್ದಾರೆ.
"ಅಫ್ಘಾನಿಸ್ತಾನದೊಂದಿಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುವುದು ಎಲ್ಲರಿಗೂ ಒಳಿತು. ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಇರುವ ತಾಲಿಬಾನ್ ಸರ್ಕಾರವನ್ನು ಅಸ್ಥಿರಗೊಳಿಸಲು ಏನನ್ನೂ ಮಾಡಬಾರದು. ಆ ರೀತಿ ಮಾಡಿದ್ದಲ್ಲಿ ಜನರಿಗೆ ತೊಂದರೆ ಉಂಟಾಗುತ್ತದೆ," ಎಂದು ಅಮಿರ್ ಖಾನ್ ಮುತ್ತಾಕಿ ಎಚ್ಚರಿಕೆ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)