ಬಾಂಗ್ಲಾ ದಾಳಿ: ಸ್ನೇಹಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುಸೇನ್
ಢಾಕಾ, ಜುಲೈ, 04: ಸ್ನೇಹಕ್ಕಾಗಿ, ಸ್ನೇಹಿತರಿಗಾಗಿ ಪ್ರಾಣ ತ್ಯಾಗ ಮಾಡಿದ ಅನೇಕ ನೈಜ ಘಟನೆಗಳನ್ನು ಕೇಳಿದ್ದೇವೆ. ಅಂಥದ್ದೆ ಒಂದು ದುರಂತ ಕತೆ ಬಾಂಗ್ಲಾದೇಶದ ಉಗ್ರರ ದಾಳಿಯಲ್ಲಿಯೂ ತೆರೆದುಕೊಳ್ಳುತ್ತದೆ.
ಪ್ರಪಂಚವನ್ನೇ ನಡುಗಿಸಿದ ಪೈಶಾಚಿಕ ಕೃತ್ಯದ ಸೂತಕ ಇನ್ನು ಬಾಂಗ್ಲಾದೇಶದಲ್ಲಿ ಆರಿಲ್ಲ. ಆದರೆ ಬಾಂಗ್ಲಾದ ಈ ದುರಂತದಲ್ಲಿ ಫರಾಜ್ ಅಯಾಜ್ ಹುಸೇನ್ ಎಂಬ ಮುಸ್ಲಿಂ ಯುವಕ ದುರಂತ ನಾಯಕನಾಗಿ ನಿಂತಿದ್ದಾನೆ.[ಐಎಸ್ಐಎಸ್ ಅಟ್ಟಹಾಸ: ಕತ್ತು ಕೊಯ್ದು 20 ವಿದೇಶಿಗರ ಹತ್ಯೆ]
ಹುಸೇನ್ ಹೋರಾಟ ಮತ್ತು ಕ್ಷಣಕ್ಕೆ ತೆಗೆದುಕೊಂಡ ನಿರ್ಧಾರ ಪ್ರಪಂಚಕ್ಕೆ ಸ್ನೇಹ ಮತ್ತು ಬಾಂಧವ್ಯದ ತತ್ವ ಸಾರಿದೆ. ಉಗ್ರರ ಕೃತ್ಯದಲ್ಲಿ 20 ವರ್ಷದ ಯುವಕ ಸಹ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಹುಸೇನ್ ತಮ್ಮ ಅಂತಿಮ ಕ್ಷಣಗಳನ್ನು ಎದುರು ನೋಡುತ್ತಿದ್ದರೂ ತೆಗೆದುಕೊಂಡ ನಿರ್ಧಾರ ಮಾತ್ರ ಜಗತ್ತಿಗೆ ಮಾದರಿ.[ಢಾಕಾ ಕಾರ್ಯಾಚರಣೆ ಅಂತ್ಯ: 6 ಉಗ್ರರ ಹತ್ಯೆ, 14 ಜನರ ರಕ್ಷಣೆ]
ಹುಸೇನ್ ತನ್ನ ಸ್ನೇಹಿತರಾದ ಅಬಿಂತಾ ಕಬೀರ್, ತರಿಷಿ ಜೈನ್ ಜತೆ ದುರಂತ ಸಂಭವಿಸಿದ ರೆಸ್ಟೋರೆಂಟ್ ಗೆ ತೆರಳಿದ್ದರು. ಈ ವೇಳೆ ಆಗಮಿಸಿದ ಭಯೋತ್ಪಾದಕರು ರೆಸ್ಟೋರೆಂಟ್ ನಲ್ಲಿ ಇದ್ದವರ ಕುತ್ತಿಗೆ ಮೇಲೆ ಕೋವಿ ಇರಿಸಿದರು. ಹುಸೇನ್ ಮುಸ್ಲಿಂ ಎಂದು ತಿಳಿದು " ನೀನು ಬೇಕಾದರೆ ಹೊರಕ್ಕೆ ಹೊಗಬಹುದು, ನಿನಗೆ ಪ್ರಾಣ ಭಿಕ್ಷೆ ನೀಡುತ್ತಿದ್ದೇವೆ" ಎಂದು ಸಹ ಹೇಳಿದ್ದರು.
ಆದರೆ ಈ ಸಂದರ್ಭ ಹುಸೇನ್ ಅಲ್ಲಿಂದ ಪಲಾಯನ ಮಾಡಲಿಲ್ಲ. ತನ್ನ ಸ್ನೇಹಿತರನ್ನು ತೊರೆದು ಹೊರಕ್ಕೆ ಬರಲಿಲ್ಲ. ಅಂತಿಮವಾಗಿ ಪೈಶಾಚಿಕ ಕೃತ್ಯಕ್ಕೆ ಹುಸೇನ್ ಸಹ ಪ್ರಾಣ ಕಳೆದುಕೊಳ್ಳಬೇಕಾಗಿ ಬಂದಿದ್ದು ದುರ್ದೈವ.