ಕೆನಡಾದಲ್ಲಿ ಭಾರತೀಯರ ಜೀವಕ್ಕೆ ಆಪತ್ತು? ಕೋಮುವಾದಿಗಳ ಕೂಪವಾಯ್ತಾ ಉ.ಅಮೆರಿಕ?
ಆಧುನಿಕ ಜಗತ್ತು ಬೆಳೆದಂತೆ ದೇಶ ದೇಶಗಳ ನಡುವಿನ ಅಂತರ ದೂರವಾಗುತ್ತಿದೆ. ಯಾರು ಎಲ್ಲಿ ಬೇಕಾದರೂ ಹೋಗಿ ಬದುಕಬಹುದು, ನೆಲೆ ಕಂಡುಕೊಳ್ಳಬಹುದು. ಆದರೆ ಇಂತಹ ಮಾತುಗಳು ಅಕ್ಷರಶಃ ಸುಳ್ಳಾಗುತ್ತಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಂದರೆ ಅಮೆರಿಕ, ಕೆನಡಾ ಮತ್ತು ಯುರೋಪ್ನಲ್ಲಿ ಭಾರತವೂ ಸೇರಿ ಏಷ್ಯಾದಿಂದ ವಲಸೆ ಹೋದವರ ಮೇಲೆ ಜನಾಂಗೀಯ ದಾಳಿ ನಡೆಸುತ್ತಿರುವ ಕೇಸ್ಗಳು ಹೆಚ್ಚಾಗುತ್ತಿವೆ.
Recommended Video
ಅದರಲ್ಲೂ ಕೆನಡಾ ಇತ್ತೀಚೆಗೆ ಕೋಮುವಾದಿ ಕೂಪದಲ್ಲಿ ನರಳುತ್ತಿದೆಯಾ? ಎಂಬ ಅನುಮಾನ ಮೂಡಿದೆ. ನಿನ್ನೆ ಒಂಟಾರಿಯೋ ಪ್ರಾಂತ್ಯದಲ್ಲಿ ಮುಸ್ಲಿಂ ಕುಟುಂಬವೊಂದನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ. ನಾಲ್ವರ ಮೇಲೆ ಟ್ರಕ್ನ ಹರಿಸಿ ಕೊಲೆ ಮಾಡಿದ್ದಾನೆ ಮತಾಂಧ. ಇದು ತಾಜಾ ಉದಾಹರಣೆಯಾದರೂ ಕೊರೊನಾ ಪಿಡುಗು ಹೆಚ್ಚಾದ ಬಳಿಕ, ಕೆನಡಾದಲ್ಲಿ ಇಂತಹ ಘಟನೆಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಕೊರೊನಾ ನಡುವೆ ಏಷ್ಯಾದಿಂದ ವಲಸೆ ಹೋಗಿ ನೆಲೆಸಿರುವವರ ಮೇಲೆ ಭೀಕರ ದಾಳಿ ನಡೆಯುತ್ತಿದೆ.
ಟೆಕ್ಸಾಸ್ನಿಂದ ಕನ್ನಡತಿ ಸುಮಾ ಹಂಚಿಕೊಂಡ ಚಳಿಗಾಲದ ''ಬೆಚ್ಚನೆಯ'' ಅನುಭವ
ಅದರಲ್ಲೂ ಅತಿಹೆಚ್ಚು ಏಷ್ಯಾದವರೇ ವಾಸವಾಗಿರುವ ವ್ಯಾಂಕೋವರ್ ನಗರದಲ್ಲಿ ಭಾರಿ ಪ್ರಮಾಣದಲ್ಲಿ ಜನಾಂಗೀಯ ದಾಳಿ ಘಟನೆಗಳು ವರದಿಯಾಗಿವೆ. ಇದು ಅಮೆರಿಕದಲ್ಲಿ ನಡೆಯುತ್ತಿರುವ ದಾಳಿಗಿಂತಲೂ ಕ್ರೂರ ಹಾಗೂ ಅತಿಹೆಚ್ಚಾಗಿದೆ ಎನ್ನುತ್ತಿದೆ ಅಂಕಿ-ಅಂಶ.
ಚೀನಾ, ಭಾರತದವರೇ ಹೆಚ್ಚು..!
ವ್ಯಾಂಕೋವರ್ ಕೆನಡಾದ ಪಶ್ಚಿಮ ಕರಾವಳಿಯ ನಗರ. ಇಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬ ಏಷ್ಯಾ ಮೂಲದವರು. ಹೀಗೆ ಭಾರಿ ಪ್ರಮಾಣದಲ್ಲಿ ಏಷ್ಯಾದಿಂದ ಜನರು ವ್ಯಾಂಕೋವರ್ ನಗರಕ್ಕೆ ವಲಸೆ ಬಂದಿದ್ದಾರೆ. ಹಲವು ದಶಕಗಳಿಂದಲೂ ಇಲ್ಲಿ ಜನರು ಒಗ್ಗಟ್ಟಿನಿಂದ ಬದುಕುತ್ತಿದ್ದರು. ಆದರೆ ಈಗ ವ್ಯಾಂಕೋವರ್ ನೆಮ್ಮದಿಯೇ ಹಾಳಾಗಿ ಹೋಗಿದೆ. 1 ವರ್ಷದ ಅವಧಿಯಲ್ಲಿ ಏಷ್ಯಾ ಜನರ ಮೇಲೆ ಜನಾಂಗೀಯ ದಾಳಿಯ ಸಾವಿರಾರು ಘಟನೆಗಳು ವರದಿಯಾಗಿವೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಏಷ್ಯಾದ ಮೂಲ ನಿವಾಸಿಗಳಿಗೆ ವ್ಯಾಂಕೋವರ್ ನಗರದಲ್ಲಿ ನೆಮ್ಮದಿಯಾಗಿ ಬದುಕಲು ಆಗುತ್ತಿಲ್ಲ. ಈ ಆತಂಕಕ್ಕೆ ಬೆಂಕಿ ಹಚ್ಚುವಂತೆ ನಿನ್ನೆ ಮುಸ್ಲಿಂ ಕುಟುಂಬದ ಮೇಲೆ, ಟ್ರಕ್ ಹತ್ತಿಸಿ ಕೊಲೆ ಮಾಡಲಾಗಿದೆ.
ಒಂದೇ ಕುಟುಂಬದ ನಾಲ್ವರ ಹತ್ಯೆ
ಒಂಟಾರಿಯೋ ಪ್ರಾಂತ್ಯದಲ್ಲಿ ಮುಸ್ಲಿಂ ಕುಟುಂಬವೊಂದನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ನಾಲ್ವರ ಮೇಲೆ ಟ್ರಕ್ನ ಹರಿಸಿ ಕೊಲೆ ಮಾಡಿದ್ದಾನೆ ಮತಾಂಧ. ರೇಸಿಂಗ್ ಡ್ರೆಸ್ ಹಾಕಿದ್ದ ವ್ಯಕ್ತಿ ಕೊಲೆಮಾಡಿ ತಕ್ಷಣ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಆದರೆ ಕೊಲೆ ಮಾಡಿದ 7 ಕಿಲೋ ಮಿಟರ್ ದೂರದ ಮಾಲ್ನಲ್ಲಿ ಆತ ಸೆರೆಸಿಕ್ಕಿದ್ದಾನೆ. ಘಟನೆಯಲ್ಲಿ 74 ವರ್ಷದ ಮಹಿಳೆ, 46 ವರ್ಷದ ಪುರುಷ, 44ರ ಮಹಿಳೆ ಮತ್ತು 15 ವರ್ಷದ ಬಾಲಕಿ ಹತ್ಯೆ ನಡೆದಿದೆ. ತೀವ್ರವಾಗಿ ಗಾಯಗೊಂಡ ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ. ಆರೋಪಿಯನ್ನು ನಾಥನಿಯಲ್ ಎಂದು ಗುರುತಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಕೆನಡಾದಲ್ಲಿ ಭಾರತೀಯರೇ ಹೆಚ್ಚು
ಜಗತ್ತಿನಲ್ಲಿ ಅತಿಹೆಚ್ಚು ಭಾರತೀಯರು ವಲಸೆ ಹೋಗಿರುವ ದೇಶಗಳಲ್ಲಿ ಕೆನಡಾ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಕೆನಡಾದಲ್ಲಿ ಭಾರತೀಯರ ಸಂಖ್ಯೆ ಬಹುದೊಡ್ಡದು. ಏಷ್ಯಾ ಮೂಲದವರ ಲೆಕ್ಕ ತೆಗೆದುಕೊಂಡರೆ, ಭಾಗಶಃ ಕೆನಡಾದಲ್ಲಿ ನಮ್ಮವರೇ ವಾಸ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆನಡಾ ಕೋಮುವಾದ ಎಂಬ ಕೂಪಕ್ಕೆ ಬಿದ್ದಿದೆಯಾ? ಎಂಬ ಅನುಮಾನ ಮೂಡುತ್ತಿದೆ. ಕೆನಡಾ ಶಾಂತ ದೇಶ ಎಂಬ ಕಾರಣಕ್ಕಾಗೇ ಏಷ್ಯನ್ನರು ಅಲ್ಲಿಗೆ ಹೋಗಿ ನೆಲೆಸುತ್ತಿದ್ದರು. ಆದರೆ ಈಗಿನ ಬೆಳವಣಿಗೆಗಳು ತೀವ್ರ ಆತಂಕ ಸೃಷ್ಟಿಸುತ್ತಿವೆ. ಭಾರತ ಮೂಲದವರ ಮೇಲೂ ಹಲ್ಲೆಗಳು ಹೆಚ್ಚುತ್ತಿರುವುದು, ಜನಾಂಗೀಯ ದಾಳಿಯ ಕಿಚ್ಚಿಗೆ ತುಪ್ಪ ಸುರಿದಿದೆ.
ಘಟನೆ ಖಂಡಿಸಿದ ಟ್ರುಡೋ
ಕೆನಡಾದಲ್ಲಿ ಹೀಗೆ ಜನಾಂಗೀಯ ದಾಳಿ ನಡೆಯುತ್ತಿರುವುದು ಖುದ್ದು ಅಲ್ಲಿನ ರಾಜಕೀಯ ನಾಯಕರನ್ನೇ ಬೆಚ್ಚಿ ಬೀಳಿಸಿದೆ. ಕೆನಡಿಯನ್ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಮುಸ್ಲಿಂ ಕುಟುಂಬದ ಹತ್ಯೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆಯನ್ನ ತೀವ್ರವಾಗಿ ಖಂಡಿಸಿರುವ ಟ್ರುಡೋ, ಸಂತಾಪ ಸೂಚಿಸಿದ್ದಾರೆ. ಆದರೂ ದಿನೇ ದಿನೇ ಏಷ್ಯಾ ಮೂಲದವರ ಮೇಲೆ ಕೆನಡಾ ಮತ್ತು ಅಮೆರಿಕದಲ್ಲಿ ದ್ವೇಷದ ಭಾವನೆ ಬೆಳೆಯುತ್ತಿರುವುದು ಭಾರಿ ಆತಂಕ ಮೂಡಿಸಿದೆ. ಬಿಳಿಯರು, ಕರಿಯರು ಎಂಬ ದ್ವೇಷದ ಬೆಂಕಿಯಲ್ಲಿ ನೂರಾರು ವರ್ಷಗಳಿಂದ ಬೆಂದು ಹೋಗಿರುವ ಉತ್ತರ ಅಮೆರಿಕದಲ್ಲಿ, ಈಗಲೂ ಇಂತಹ ಅನಿಷ್ಠ ಮನಸ್ಥಿತಿ ಬದುಕಿರುವುದು ದುರಂತವೇ ಸರಿ.