85ರ ಭೂಕಂಪ ಸ್ಮರಣೆ ಮುಗಿದ 2 ಗಂಟೆಯೊಳಗೆ ಭೀಕರ ಕಂಪನ!
ಪ್ರಕೃತಿ ವಿಕೋಪ ಸುರಕ್ಷತೆ ತರಬೇತಿಯಿಂದ ಮೆಕ್ಸಿಕೋದಲ್ಲಿ ಉಳಿದವು ಸಾವಿರಾರು ಪ್ರಾಣಗಳು. ಸೆ. 19ರ ಭೂಕಂಪದಲ್ಲಿ ಅತಿ ಕಡಿಮೆಯಾದ ಸಾವಿನ ಸಂಖ್ಯೆ.
ಮೆಕ್ಸಿಕೋ ಸಿಟಿ, ಸೆಪ್ಟೆಂಬರ್ 19: ಮೆಕ್ಸಿಕೊದಲ್ಲಿ ಸೆ. 19ರಂದು ಸಂಭವಿಸಿರುವ ಜಗತ್ತಿನ ಗಮನ ಸೆಳೆದಿದೆ. 1985ರ ನಂತರ ಅಲ್ಲಿ ಸಂಭವಿಸಿರುವ ಪ್ರಬಲ ಭೂಕಂಪ ಇದಾಗಿದೆ ಎಂದು ಹೇಳಲಾಗಿದೆ. ಈ ನೈಸರ್ಗಿಕ ವಿಕೋಪಕ್ಕೆ 248 ಜನರು ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಆದರೆ, ವಿಪರ್ಯಾಸ ಏನಂದ್ರೆ, 1985ರಲ್ಲಿ ಮೆಕ್ಸಿಕೋವನ್ನು ಬುಡಮೇಲುಗೊಳಿಸಿದ್ದ ಮಹಾ ಭೂಕಂಪದ ಸ್ಮರಣೆಯ ದಿನದಂದೇ ಅಲ್ಲಿ ಮತ್ತೆ ಭೂಕಂಪವಾಗಿರುವುದು.
ಚಿತ್ರಗಳಲ್ಲಿ ಹಿಡಿದಿಟ್ಟ ಮೆಕ್ಸಿಕೋ ಕಂಪನ; ಮನಕಲಕುವ ಆಕ್ರಂದನ
ಹೌದು. 1985ರ ಸೆಪ್ಟಂಬರ್ 19ರಂದು ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪವಾಗಿತ್ತು. ನಿಂತ ನೆಲವೇ ಬಾಯ್ತೆರೆದು ಅನಾಮತ್ತಾಗಿ 10 ಸಾವಿರದಷ್ಟು ಜನರನ್ನು ಆಪೋಶನ ತೆಗೆದುಕೊಂಡಿತ್ತು.
ಅಂಥ ರೌದ್ರಮಯ, ಭೀಕರ ದುರಂತವನ್ನು ಮೆಕ್ಸಿಕೋ ದೇಶದ ಜನರು ಪ್ರತಿ ವರ್ಷ ನೆನೆಯುತ್ತಾರೆ. ಪ್ರತಿ ವರ್ಷ ಸೆ. 19ರಂದು ಅಲ್ಲಿನ ಪ್ರತಿ ಊರು, ಕೇರಿಗಳಲ್ಲಿ ಜನರು ತಾವೆಲ್ಲಿರುತ್ತಾರೋ ಅಲ್ಲಿಯೇ 1985ರ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ.
ಅಂಥ ಕರಾಳ ದಿನ ಮರುಕಳಿಸಿದರೆ ಹೇಗೆಂಬ ಭೀತಿಯಲ್ಲೇ ಕಟ್ಟಡಗಳನ್ನು ಕಟ್ಟುವ ಮಾದರಿಯಲ್ಲಿ ಸೂಕ್ತ ಬದಲಾವಣೆ ತರಲಾಗಿದೆ. ಇದಕ್ಕಾಗಿ ಒಂದು ಸ್ಟಾಂಡರ್ಡ್ ಮಾದರಿಯನ್ನು ಸರ್ಕಾರ ನೀಡಿದೆ. ಅದನ್ನು ಮೀರಿ ಯಾರೂ ಕಟ್ಟಡಗಳನ್ನು ಕಟ್ಟುವಂತಿಲ್ಲ. ಇದರ ಜತೆಗೆ ಕಾಲಕಾಲಕ್ಕೆ ಅಲ್ಲಿನ ಜನರಿಗೆ ಪ್ರಕೃತಿ ವಿಕೋಪದ ವೇಳೆ ಪಾರಾಗುವುದು, ಮತ್ತೊಬ್ಬರನ್ನೂ ಅಪಾಯದಿಂದ ರಕ್ಷಿಸುವ ಬಗೆಯನ್ನು ತಿಳಿಸಿಕೊಡಲಾಗಿದೆ. ಇದು ಈ ಬಾರಿಯ ಭೂಕಂಪನದ ವೇಳೆ ಅತೀವವಾಗಿ ನೆರವಾಗಿದೆ. ಹೇಗಂತೀರಾ... ಇಲ್ಲಿದೆ ನೋಡಿ ಮಾಹಿತಿ.
ಆತ್ಮರಕ್ಷಣೆಯ ಕಲಿಕೆ
ಭೂಕಂಪದಂಥ ಸಂದರ್ಭಗಳು ಮರುಕಳಿಸಿದಾಗ ಮುನ್ನಚ್ಚರಿಕೆ ಹೇಗೆ ತೆಗೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ಒಂದು ಅಣಕವೂ ಪ್ರದರ್ಶನವಾಗುತ್ತದೆ. ಇದರಲ್ಲಿ ಎಲ್ಲಾ ನಾಗರಿಕರೂ ಪಾಲ್ಗೊಳ್ಳುತ್ತಾರೆ. ರೇಡಿಯೋ, ಧ್ವನಿವರ್ಧಕಗಳಲ್ಲಿ ''ಇನ್ನು ಕೆಲವೇ ಕ್ಷಣಗಳಲ್ಲಿ ಭೂಕಂಪವಾಗಲಿದೆ. ನೀವು ಎಲ್ಲಿದ್ದೀರೋ ಅಲ್ಲಿಯೇ ಸುರಕ್ಷಿತ ಸ್ಥಳಗಳಿಗೆ ಹೋಗತಕ್ಕದ್ದು'' ಎಂದು ಸಾರಲಾಗುತ್ತದೆ. ಅಂತೆಯೇ, ಜನರು ಸುರಕ್ಷಿತ ಸ್ಥಳಗಳಿಗೆ ಹೋಗುತ್ತಾರೆ.
ಕಲಿತ ಪಾಠ ಪುನರ್ ಮನನ
ಆನಂತರ, ಭೂಕಂಪದ ವೇಳೆ ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು ಹೇಗೆ ರಕ್ಷಿಸಬೇಕೆಂಬುದರ ಬಗ್ಗೆ ಎಲ್ಲಾ ಯುವಕರಿಗೆ ಅಣಕು ಪ್ರದರ್ಶನದ ಮೂಲಕ ತರಬೇತಿ ನೀಡಲಾಗುತ್ತದೆ. ವರ್ಷಗಳು ಉರುಳಿದರೂ, ಅದೆಷ್ಟೇ ಆಧುನಿಕತೆ ಮೈದಳೆದಿದ್ದರೂ ಆ ದುಃಸ್ವಪ್ನವನ್ನು ಅವರು ಮರೆತಿಲ್ಲ. ಹಾಗೆ ಮರೆಯುವುದು ಅವರ ಜಾಯಮಾನವೂ ಅಲ್ಲ.
ವಾರ್ಷಿಕ ತರಬೇತಿ
ಇದೇ ರೀತಿ, ಈ ಬಾರಿಯ ಸೆ. 19ರಂದು ಬೆಳಗ್ಗೆ ಇಂಥದ್ದೇ ಅಣಕು ಪ್ರದರ್ಶನ ನಡೆಸಲಾಗಿತ್ತು. ಬೆಳಗ್ಗೆಯಿಂದ ಈ ಕಾರ್ಯಕ್ರಮಗಳಲ್ಲಿ, ತರಬೇತಿಗಳಲ್ಲಿ ಜನರು ಪಾಲ್ಗೊಂಡಿದ್ದರು. ಹೊತ್ತೇರುವಷ್ಟರಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಮುಗಿದು ಎಲ್ಲರೂ ಮನೆಗೆ ಕಡೆ, ತಮ್ಮ ತಮ್ಮ ಕೆಲಸಗಳ ಕಡೆ ನಡೆದರು.
ಭೂಮಿಯ ರೌದ್ರ ನರ್ತನ
ಹೀಗೆ, ಜನರು ತಮ್ಮ ಕೆಲಸಗಳ ಕಡೆಗೆ ಹೋಗಿ ಕೇವಲ 2 ಗಂಟೆ ಸರಿಯುವಷ್ಟರಲ್ಲೇ ಸಂಭವಿಸಿತು ನೋಡಿ ಆ ಮಹಾ ಭೂಕಂಪ. ಪ್ರಳಯ ರುದ್ರನ ಮಾದರಿಯಲ್ಲಿ ನಡುಗಿತು ಭೂಮಿ. ನೋಡನೋಡುತ್ತಿದ್ದಂತೆ ಕಟ್ಟಡಗಳು ಎಲ್ಲೆಂದರಲ್ಲಿ ಕುಸಿಯ ತೊಡಗಿದವು. ಎಲ್ಲೆಲ್ಲೋ ಇದ್ದವರೆಲ್ಲಾ ಅಲ್ಲಲ್ಲೇ ಮಣ್ಣಲ್ಲಿ ಮಣ್ಣಾದರು. ಆಯುಷ್ಯ ಗಟ್ಟಿಯಿದ್ದವರು ಬದುಕಿಕೊಂಡರು.
ಬಹುತೇಕರು ಸುರಕ್ಷಿತರಾದರು
ಆದರೆ, ಇಲ್ಲೇ ನೋಡಿ ಆಗಿರೋದು ಒಂದು ಸಾರ್ಥಕ ಕೆಲಸ. ಸುಮಾರು 32 ವರ್ಷಗಳ ಹಿಂದೆ ಸಂಭವಿಸಿದ್ದ ಭೂಕಂಪದ ಸ್ಮರಣೆ ವೇಳೆ ಪ್ರತಿ ವರ್ಷ ನಡೆಸುತ್ತಾ ಬಂದಿದ್ದ ಸಂಸ್ಮರಣೆ ಹಾಗೂ ತರಬೇತಿ ಕಾರ್ಯಕ್ರಮವು ಸಾವಿರಾರು ಜನರ ಪ್ರಾಣ ಉಳಿಯುವಂತೆ ಮಾಡಿದೆ. ಮಕ್ಕಳಿಂದ ಹಿರಿಯವರೆಗೂ ಸುರಕ್ಷತೆಯ ಅರಿವಿದ್ದಿದ್ದರಿಂದಾಗಿ ಬಹುತೇಕ ಮಂದಿ ಬಚಾವಾಗಿದ್ದಾರೆ. ತಪ್ಪಿಸಿಕೊಳ್ಳಲಾಗದ ಸಂದಿಗ್ಧತೆಗೆ ಸಿಲುಕಿದವರು ಮಾತ್ರ ಸಾವನ್ನಪ್ಪಿದ್ದಾರೆ.
ಜಾಗ್ರತೆಯಿಂದ ಉಳಿದಿದ್ದಾರೆ ಹಲವರು
ಒಟ್ಟಾರೆಯಾಗಿ, ಕಳೆದುಹೋದ ದುಃಸ್ವಪ್ನದಿಂದ ಕಲಿತ ಪಾಠವನ್ನು ಮರೆಯದೇ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದರಿಂದ ಸಾವಿರಾರು ಲೆಕ್ಕದಲ್ಲಿ ಆಗಬೇಕಿದ್ದ ಸಾವಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ.