ಥಾಯ್ಲೆಂಡ್: ಬುದ್ಧನಿಂದಾಗಿ ಸಾವು ಗೆದ್ದರೇ ಈ ಬಾಲಕರು?
ಬೆಂಗಳೂರು, ಜುಲೈ, 10: ಥಾಯ್ಲೆಂಡ್ನ ಅತಿ ದುರ್ಗಮವಾದ ಗುಹೆಯಲ್ಲಿ ಜೂನ್ 23ರಿಂದ ಸಿಲುಕಿದ್ದ 10-14 ವರ್ಷದ ಈ ಬಾಲಕರು ಜೀವ ಉಳಿಸಿಕೊಂಡಿದ್ದಾದರೂ ಹೇಗೆ? ಇದಕ್ಕೆ ಭಾರತದ ಕೊಡುಗೆಯೂ ಇದೆ ಎನ್ನುವುದನ್ನು ಮರೆಯುವಂತಿಲ್ಲ.
ಈ ಬಾಲಕರ ಬಳಿ ಇದ್ದದ್ದು ಅಲ್ಪಸ್ವಲ್ಪ ಆಹಾರ ಮಾತ್ರ. ರಕ್ಷಣಾ ಕಾರ್ಯಪಡೆಗಳ ಕಣ್ಣಿಗೆ ಬೀಳುವವರೆಗೂ ಸುಮಾರು ಹತ್ತು ದಿನ ಅದನ್ನೇ ಅಲ್ಪ ಸ್ವಲ್ಪ ತಿಂದು ಜೀವ ಉಳಿಸಿಕೊಂಡಿದ್ದರು.
ಗುಹೆಯಲ್ಲಿ ಸಿಲುಕಿರುವ ಕೋಚ್ನ ಬದುಕು ಇನ್ನೂ ದುರಂತಮಯ
ಒಂದೇ ಜಾಗದಲ್ಲಿ ಕುಳಿತು ಸಾವಿನ ಅಂಜಿಕೆಯಲ್ಲಿಯೇ ವಾರಗಟ್ಟಲೆ ದಿನಗಳನ್ನು ನೂಕುವುದು ಮಕ್ಕಳನ್ನು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕುಗ್ಗಿಸುತ್ತದೆ.
ಕೊಂಚವೂ ಬೆಳಕಿನ ಕಿರಣ ಸ್ಪರ್ಶಿಸದ, ಆಮ್ಲಜನಕ ಕೂಡ ಸರಿಯಾಗಿ ಲಭ್ಯವಾಗದ ಆ ಕಗ್ಗತ್ತಲ ಗುಹೆಯಲ್ಲಿ ಅಷ್ಟು ದಿನ ಬಾಲಕರು ಜೀವ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ.
ಇದಕ್ಕೆ ಕಾರಣವಾಗಿದ್ದು, ಆ ಬಾಲಕರಿಗೆ ತನ್ನ ಪಾಲಿನ ಆಹಾರ ಹಂಚಿದ್ದಲ್ಲದೆ, ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿದ 25 ವರ್ಷದ ಕೋಚ್ ಎಕ್ಕೊಪಲ್ ಚಂಟಾವೊಂಗ್.
ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ ಬಾಲಕರನ್ನು ರಕ್ಷಿಸಿದ್ದು ಹೇಗೆ?
ಫುಟ್ಬಾಲ್ ತಂಡವನ್ನು ಸೇರುವ ಮುನ್ನ ಚಂಟಾವೊಂಗ್ ಬೌದ್ಧ ಸನ್ಯಾಸಿಯಾಗಿದ್ದರು. ಹನ್ನೆರಡನೆಯ ವಯಸ್ಸಿನಿಂದಲೇ ಧ್ಯಾನವನ್ನು ಕಲಿತಿದ್ದರು.
ವಿಷಮ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ಹೇಗೆ ಸ್ಥಿಮಿತತೆಯನ್ನು ಕಾಪಾಡಿಕೊಳ್ಳಬಹುದು ಮತ್ತು ಅದರಿಂದ ದೈಹಿಕ ಶಕ್ತಿಯನ್ನೂ ಹೇಗೆ ಉಳಿಸಿಕೊಳ್ಳಬಹುದು ಎಂಬ ಕಲೆ ಅವರಿಗೆ ಸಿದ್ಧಿಸಿತ್ತು.
ಗುಹೆಯಲ್ಲಿ ಸಿಲುಕಿದ್ದ ಮಕ್ಕಳಿಗೆ ಅಲ್ಲಿಯೇ ಧೈರ್ಯ ತುಂಬಿ ಧ್ಯಾನದ ಕಲೆ ಹೇಳಿಕೊಟ್ಟರು. ಇದರಿಂದಲೇ ಇಷ್ಟು ದಿನ ಬಾಲಕರು ಆರೋಗ್ಯವಂತರಾಗಿ ಇರಲು ಸಾಧ್ಯವಾಯಿತು ಎನ್ನಲಾಗಿದೆ.
Coach was a Buddhist monk before joining the team, he used his knowledge of meditation to keep the boys calm.Thailand has learned Buddhist wisdom from India through Lord Buddha: Minister & Deputy Chief of Mission, Royal Thai Embassy on ongoing rescue operation at Thai cave pic.twitter.com/JbpzX7SWXp
— ANI (@ANI) 10 July 2018
ರಾಯಲ್ ಥಾಯ್ ಎಂಬಸಿಯ ಸಚಿವ ನಿಟಿವದಿ ಮನಿಟ್ಕುಲ್ ಇದು ಭಾರತದ ಕೊಡುಗೆ ಎಂದು ಪ್ರಶಂಸಿಸಿದ್ದಾರೆ.
ಫುಟ್ಬಾಲ್ ತಂಡವನ್ನು ಸೇರುವ ಮೊದಲು ಕೋಚ್ ಸನ್ಯಾಸಿಯಾಗಿದ್ದರು. ಬಾಲಕರು ಸಮಾಧಾನಚಿತ್ತರಾಗಿ ಇರುವಂತೆ ಮಾಡಲು ಅವರು ಧ್ಯಾನವನ್ನು ಬಳಸಿದರು.
ಬುದ್ಧನ ಮೂಲಕ ಭಾರತದಿಂದ ಥಾಯ್ಲೆಂಡ್ ಬೌದ್ಧ ಜ್ಞಾನವನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.