'ಅಶ್ರಫ್ ಅಧ್ಯಕ್ಷರಾಗಿರುವವರೆಗೂ ತಾಲಿಬಾನ್ ಮಾತುಕತೆ ನಡೆಸದು': ಪಾಕ್ ಪ್ರಧಾನಿ
ಇಸ್ಲಾಮಾಬಾದ್, ಆ.12: ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವೆ ದೊಡ್ಡ ಮಟ್ಟದ ಹೋರಾಟದ ನಡುವೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯೊಂದನ್ನು ನೀಡಿದ್ದಾರೆ. ಅಶ್ರಫ್ ಘನಿ ಅಫ್ಘಾನಿಸ್ತಾನ ದೇಶದ ಅಧ್ಯಕ್ಷರಾಗಿ ಉಳಿಯುವವರೆಗೂ ಭಯೋತ್ಪಾದಕ ಗುಂಪು ಅಫ್ಘಾನಿಸ್ತಾನ ಸರ್ಕಾರದ ಜೊತೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಇಸ್ಲಾಮಾಬಾದ್ನಲ್ಲಿ ವಿದೇಶಿ ಪತ್ರಕರ್ತರೊಂದಿಗೆ ಮಾತನಾಡಿದ ಇಮ್ರಾನ್ ಖಾನ್, ''ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜಕೀಯ ಇತ್ಯರ್ಥ ಕಷ್ಟಕರವಾಗಿದೆ,'' ಎಂದು ಹೇಳಿದರು. "ನಾನು ತಾಲಿಬಾನ್ ಅನ್ನು ಮನವೊಲಿಸಲು ಪ್ರಯತ್ನಿಸಿದೆ. ಮೂರು ನಾಲ್ಕು ತಿಂಗಳ ಹಿಂದೆ ತಾಲಿಬಾನಿಗರು ಇಲ್ಲಿಗೆ ಬಂದರು," ಎಂದು ಪಾಕಿಸ್ತಾನದ ದ ನ್ಯೂಸ್ ಇಂಟರ್ ನ್ಯಾಷನಲ್ ಇಮ್ರಾನ್ ಖಾನ್ ಹೇಳಿದ್ದನ್ನು ಉಲ್ಲೇಖಿಸಿದೆ.
ತಾಲಿಬಾನ್ 'ಸಾಮಾನ್ಯ ನಾಗರಿಕರು', ಮಿಲಿಟರಿ ಪಡೆಗಳಲ್ಲ ಎಂದ ಪಾಕ್ ಪ್ರಧಾನಿ!
"ಷರತ್ತು ಎಂದರೆ ಅಶ್ರಫ್ ಘನಿ ಇರುವವರೆಗೂ ನಾವು (ತಾಲಿಬಾನ್) ಅಫ್ಘಾನ್ ಸರ್ಕಾರದೊಂದಿಗೆ ಮಾತನಾಡಲು ಹೋಗುವುದಿಲ್ಲ ಎಂದು ತಾಲಿಬಾನಿಗರು ಹೇಳಿದ್ದಾರೆ," ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಹಿಂಸಾಚಾರವನ್ನು ಹೆಚ್ಚಿಸಲು ಪಾಕಿಸ್ತಾನವು ತಾಲಿಬಾನ್ಗಳಿಗೆ ಸಹಾಯ ಮಾಡುತ್ತದೆ ಎಂದು ಕಾಬೂಲ್ ನಂಬಿದ್ದರಿಂದ ಈ ಪ್ರದೇಶದಲ್ಲಿ ಅಸ್ಥಿರತೆಯನ್ನು ಹೆಚ್ಚಿಸಲು ಅಫ್ಘಾನ್ ಸರ್ಕಾರವು ಪಾಕಿಸ್ತಾನ ಕಾರಣ ಎಂದು ಇಸ್ಲಾಮಾಬಾದ್ ಅನ್ನು ಟೀಕಿಸುತ್ತಿದೆ. ಇತ್ತೀಚೆಗೆ, ಅಫ್ಘಾನಿಸ್ತಾನದ ಜನರು ಪಾಕಿಸ್ತಾನದ ವಿರುದ್ಧ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಆರಂಭಿಸಿದರು, ದೇಶದ ಹದಗೆಟ್ಟ ಪರಿಸ್ಥಿತಿಗೆ ಪಾಕಿಸ್ತಾನದವರನ್ನು ದೂಷಿಸಿದರು.
ತಾಲಿಬಾನ್ನಿಂದ ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದಿಂದಾಗಿ, ಭಯೋತ್ಪಾದಕ ಗುಂಪು ಜನರನ್ನು ಲೂಟಿ ಮಾಡುತ್ತಿದ್ದು, ಸರ್ಕಾರದಿಂದ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ನಾಗರಿಕರನ್ನು ಕೊಲ್ಲುತ್ತಿರುವುದರಿಂದ ಪರಿಸ್ಥಿತಿ ಕೆಟ್ಟದಾಗಿ ಹದಗೆಡುತ್ತಿದೆ. ಇದನ್ನು ನಿಭಾಯಿಸಲು ಅಫ್ಘಾನಿಸ್ತಾನ ಸರ್ಕಾರ ಪ್ರಯತ್ನ ಮಾಡುತ್ತಿದೆ. ಆದರೆ ಸುಮಾರು ಅರವತ್ತು ಶೇಕಡಾದಷ್ಟು ಅಫ್ಘಾನ್ ಪ್ರದೇಶವನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ.
ಗಡಿ ಸಮೀಪದ ಪ್ರದೇಶ ತಾಲಿಬಾನ್ ವಶಕ್ಕೆ ಪಡೆದ ಬಳಿಕ ಅಫ್ಘಾನ್ನ ಪ್ರಮುಖ ಗಡಿ ಮುಚ್ಚಿದ ಪಾಕ್
ಈ ನಡುವೆ ಅಫ್ಘಾನಿಸ್ತಾನದ ರಾಜಧಾನಿಯನ್ನು ಕೂಡಾ ತಾಲಿಬಾನಿಗರು ವಶಕ್ಕೆ ಪಡೆದುಕೊಳ್ಳುವ ಆತಂಕ ಎದುರಾಗಿದೆ. ರಾಜಧಾನಿಗೆ ಸಮೀಪವಿರುವ ಪ್ರದೇಶವನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಿದೆ. ಈ ಎಲ್ಲಾ ಬೆಳವಣಿಗಳು ಅಮೆರಿಕ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಪಡೆದ ನಂತರ ಸಂಭವಿಸಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ವಾಷಿಂಗ್ಟನ್ ಮತ್ತು ತಾಲಿಬಾನ್ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಯುಎಸ್ ಪಡೆಗಳು ಅಫ್ಘಾನಿಸ್ತಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಿಂತೆಗೆದುಕೊಳ್ಳಲು ಆರಂಭಿಸಿದ ತಕ್ಷಣ ತಾಲಿಬಾನ್ ಅಫ್ಘಾನ್ ಪಡೆಗಳ ವಿರುದ್ಧ ತನ್ನ ಆಕ್ರಮಣವನ್ನು ಹೆಚ್ಚಿಸಿತು.
ಇನ್ನು ಇದಕ್ಕೂ ಹಿಂದೆ ಹೇಳಿಕೆ ನೀಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ''ತಾಲಿಬಾನ್ ಮಿಲಿಟರಿ ಸಂಘಟನೆಗಳಲ್ಲ ಆದರೆ ಸಾಮಾನ್ಯ ನಾಗರಿಕರು,'' ಎಂದು ಹೇಳಿದ್ದರು. "ಗಡಿಯಲ್ಲಿ ಮೂರು ಮಿಲಿಯನ್ ಅಫ್ಘಾನ್ ನಿರಾಶ್ರಿತರು ಇರುವಾಗ ದೇಶವು ತಾಲಿಬಾನ್ರನ್ನು ಹೇಗೆ ಬೇಟೆಯಾಡಬೇಕು," ಎಂದು ಪ್ರಶ್ನಿಸಿದ್ದರು. ಪಿಬಿಎಸ್ ನ್ಯೂಸ್ ಅವರ್ಗೆ ನೀಡಿದ ಸಂದರ್ಶನದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್, ''ಪಾಕಿಸ್ತಾನವು ಮೂರು ಮಿಲಿಯನ್ ಅಫ್ಘಾನ್ ನಿರಾಶ್ರಿತರ ಆತಿಥ್ಯ ವಹಿಸಿದೆ, ಅದರಲ್ಲಿ ಹೆಚ್ಚಿನವರು ಪಶ್ತೂನ್ಗಳು, ತಾಲಿಬಾನ್ ಹೋರಾಟಗಾರರ ಅದೇ ಜನಾಂಗದವರು ಆಗಿದ್ದಾರೆ,'' ಎಂದು ಹೇಳಿದ್ದರು.
"ಪ್ರಸ್ತುತ, 500,000 ಜನರ ಶಿಬಿರಗಳಿವೆ ಹಾಗೂ 100,000 ಜನರ ಶಿಬಿರಗಳಿವೆ. ತಾಲಿಬಾನ್ ಕೆಲವು ಮಿಲಿಟರಿ ಸಂಘಟನೆಗಳಲ್ಲ, ತಾಲಿಬಾನಿಗರು ಕೂಡಾ ಸಾಮಾನ್ಯ ನಾಗರಿಕರು. ಈ ಶಿಬಿರಗಳಲ್ಲಿ ಕೆಲವು ನಾಗರಿಕರು ಇದ್ದರೆ, ಪಾಕಿಸ್ತಾನ ಈ ಜನರನ್ನು ಹೇಗೆ ಬೇಟೆಯಾಡಬೇಕು? ನೀವು ಆ ಜನರನ್ನು ಆತಂಕವಾದಿಗಳು ಎಂದು ಹೇಗೆ ಕರೆಯಬಹುದು?," ಎಂದು ವಾದಿಸಿದ್ದರು.
ಇದಕ್ಕೂ ಮುನ್ನ ಗಡಿ ಸಮೀಪದ ಪ್ರದೇಶ ತಾಲಿಬಾನ್ ವಶಕ್ಕೆ ಪಡೆದ ಬಳಿಕ ಅಫ್ಘಾನ್ನ ಪ್ರಮುಖ ಗಡಿಯನ್ನು ಪಾಕಿಸ್ತಾನ ಮುಚ್ಚಿತ್ತು.
(ಒನ್ಇಂಡಿಯಾ ಸುದ್ದಿ)