ಅತ್ತ ಅಮೆರಿಕ ಎಸ್ಕೇಪ್, ಇತ್ತ ಬಾಲ ಬಿಚ್ಚುತ್ತಿದೆ ತಾಲಿಬಾನಿ ಗ್ಯಾಂಗ್!
ಮಾನವನ ರೂಪದಲ್ಲಿರುವ ರಾಕ್ಷಸರು, ತಾಲಿಬಾನ್ ಉಗ್ರರು ಮತ್ತೆ ಬಾಲ ಬಿಚ್ಚಿದ್ದಾರೆ. ಮೊನ್ನೆ ಮೊನ್ನೆ ಇನ್ನೂ ಸ್ಕೂಲ್ ಬಳಿ ಬಾಂಬ್ ಇಟ್ಟು ಹತ್ತಾರು ಮಕ್ಕಳನ್ನು ಬಲಿಪಡೆದಿದ್ದ ತಾಲಿಬಾನ್ ಗ್ಯಾಂಗ್, ಇದೀಗ ಅಫ್ಘಾನ್ನ ರಾಜಧಾನಿ ಕಾಬೂಲ್ ಸಮೀಪದಲ್ಲಿ ಒಂದು ಜಿಲ್ಲೆಯನ್ನೇ ಒತ್ತೆಯಾಗಿ ಇರಿಸಿಕೊಂಡಿದ್ದಾರೆ. ಕಾಬೂಲ್ನಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಜಿಲ್ಲೆಯನ್ನು ತಾಲಿಬಾನ್ ಗ್ಯಾಂಗ್ ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಅಫ್ಘಾನಿಸ್ತಾನದ ಭದ್ರತಾ ಪಡೆ ಸ್ಥಳಕ್ಕೆ ದೌಡಾಯಿಸಿದೆ.
2021ರ ಸೆಪ್ಟೆಂಬರ್ 11ಕ್ಕೂ ಮೊದಲು ತನ್ನ ಮಿಲಿಟರಿ ವಾಪಸ್ ಕರೆಸಿಕೊಳ್ಳಲು ಅಮೆರಿಕ ನಿರ್ಧರಿಸಿದ ಬೆನ್ನಲ್ಲೇ ತಾಲಿಬಾನ್ ಉಗ್ರರು ಹಿಂಸೆ ಹೆಚ್ಚಿಸಿದ್ದಾರೆ. ಈಗಾಗಲೇ ಅಮೆರಿಕ ಬಹುಪಾಲು ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇನ್ನುಳಿದ ಅಲ್ಪಸ್ವಲ್ಪ ಸೇನಾ ತುಕಡಿಗಳನ್ನ ವಾಪಸ್ ಕರೆಸಿಕೊಳ್ಳುತ್ತಿದೆ ಅಮೆರಿಕ.
ಈ ಮಧ್ಯೆ ಅಫ್ಘಾನಿಸ್ತಾನದ ಮೇಲೆ ಕ್ರೂರ ದೃಷ್ಟಿ ನೆಟ್ಟಿರುವ ತಾಲಿಬಾನ್ ಟೆರರಿಸ್ಟ್ಗಳು, ಗುಂಪು ಗುಂಪಾಗಿ ನುಗ್ಗಿ ಅಮಾಯಕರ ರಕ್ತ ಹೀರುತ್ತಿದ್ದಾರೆ. ತಾಲಿಬಾನ್ ಉಗ್ರರು ವಶಕ್ಕೆ ಪಡೆದಿರುವ ಜಿಲ್ಲೆಯಲ್ಲಿ ಹಿಂಸೆ ನಡೆದಿರುವ ಸಾಧ್ಯತೆ ಇದ್ದು, ಈವರೆಗೂ ಸತ್ತವರ ಸಂಖ್ಯೆ ಸ್ಪಷ್ಟವಾಗಿಲ್ಲ.
ರಂಜಾನ್ಗೆ ರಜೆ ಘೋಷಿಸಿದ್ದರು
ಇಸ್ಲಾಂ ಧರ್ಮಿಯರ ಪವಿತ್ರ ಹಬ್ಬ ರಂಜಾನ್ ಹಿನ್ನೆಲೆಯಲ್ಲಿ ನಾವು ಹಿಂಸೆ ನಡೆಸುವುದಿಲ್ಲವೆಂದು ತಾಲಿಬಾನ್ ಉಗ್ರರು ರಜೆ ಘೋಷಿಸಿದ್ದರು. ಹಬ್ಬ ಮುಗಿಯುವ ತನಕ ಬಂಡಾಯ ಏಳಬಾರದು ಎಂದು ಆದೇಶವಿತ್ತು. ಈ ನಡುವೆ ಒಂದು ಇಡೀ ಜಿಲ್ಲೆಯ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಶಾಲೆ ಬಳಿ ಬಾಂಬ್ ಸ್ಫೋಟಿಸಿ 50ಕ್ಕೂ ಹೆಚ್ಚು ಮಕ್ಕಳು, ವೃದ್ಧರನ್ನ ಕೊಂದು ಹಾಕಿದ್ದರು. ಹಬ್ಬದ ಸಂಭ್ರಮದಲ್ಲಿರುವ ಅಫ್ಘಾನಿಸ್ತಾನದ ಪ್ರಜೆಗಳಿಗೆ ಉಗ್ರರ ಈ ಪಾಪ ಕೃತ್ಯ ಶಾಕ್ ನೀಡಿದ್ದು, ಭಯದಲ್ಲೇ ಬದುಕುವಂತಾಗಿದೆ.
ಅಫ್ಘಾನ್ ಜನರಿಗೆ ನೆಮ್ಮದಿಯೇ ಇಲ್ಲ
ಬ್ರಿಟಿಷರಿಂದ ಅಫ್ಘಾನ್ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ. ಇದು ಭಾರತಕ್ಕಿಂತ ಮೊದಲಾದರೂ ಅಲ್ಲಿ ಶಾಂತಿ ನೆಲೆಸಿಲ್ಲ. ಸದ್ಯಕ್ಕೆ ಅಫ್ಘಾನ್ ಸ್ಥಿತಿ ಹೇಗಿದೆ ಎಂದರೆ, ಧೈರ್ಯವಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಉಗ್ರಪಡೆ ಗುಂಡಿನ ಮಳೆಗರೆಯುತ್ತೋ, ಬಾಂಬ್ ಹಾಕುತ್ತೋ ಎಂಬ ಭಯ. ಅಫ್ಘಾನ್ನಲ್ಲಿ ದಿನಕ್ಕೆ ಒಂದಾದರೂ ಹಿಂಸೆ ನಡೆಸದಿದ್ದರೆ ತಾಲಿಬಾನ್ ಉಗ್ರರಿಗೆ ನಿದ್ದೆ ಬರೋದಿಲ್ಲ. ಈಗಾಗಲೇ ಲಕ್ಷಾಂತರ ಜನ ರಕ್ತ ಪಿಪಾಸುಗಳ ದಾಳಿಗೆ ಬಲಿಯಾಗಿದ್ದಾರೆ. ತಾಲಿಬಾನಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಅಶ್ರಫ್ ಘನಿ ಸರ್ಕಾರ ಪರದಾಡುತ್ತಿದೆ. ಕಂಡ ಕಂಡಲ್ಲಿ ಪಟಾಕಿಗಳಂತೆ ಉಗ್ರರು ಬಾಂಬ್ ಉಡಾಯಿಸುತ್ತಿದ್ದಾರೆ.
ಹೊಟ್ಟೆಗೆ ಅನ್ನವಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ
ಅಫ್ಘಾನಿಸ್ತಾನದ ಜನರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ, ಅಲ್ಲಿ ಬದುಕಬೇಕು ಎಂದರೆ ನರಕದರ್ಶನ ಗ್ಯಾರಂಟಿ. ಹೆಜ್ಜೆ ಹೆಜ್ಜೆಗೂ ಆವರಿಸುವ ಭಯ. ಯಾವ ಸಮಯದಲ್ಲಿ ಏನಾಗುತ್ತೋ ಎಂಬ ಆತಂಕ. ನೆಮ್ಮದಿ, ಶಾಂತಿ ಎಂಬುದೇ ಅಫ್ಘಾನಿಸ್ತಾನದ ಜನರಿಗೆ ಮರೆತು ಹೋದಂತಿದೆ. ಇನ್ನು ಅಲ್ಲಿನ ಆರ್ಥಿಕ ಸ್ಥಿತಿ ಕೂಡ ತೀರಾ ಹದಗೆಟ್ಟು ಹೋಗಿದ್ದು, ಹೊಟ್ಟೆಗೆ ಅನ್ನವಿಲ್ಲದೆ ಕೋಟ್ಯಂತರ ಮಂದಿ ನರಳುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸವೂ ಸಿಗದ ಪರಿಸ್ಥಿತಿ ಅಫ್ಘಾನಿಸ್ತಾನದಲ್ಲಿ ನಿರ್ಮಾಣವಾಗಿದೆ. ಹೀಗೆ ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಣೆ ನೆಪ ಮಾಡಿ ಬಂದು ಸೇರಿಕೊಂಡ ಯಾವುದೇ ದೇಶ ಕೂಡ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲ ಸಕ್ಸಸ್ ಆಗಿಲ್ಲ. ಅದು ಬಿಡಿ ಪ್ರಾಮಾಣಿಕ ಪ್ರಯತ್ನಗಳನ್ನೂ ನಡೆಸುತ್ತಿಲ್ಲ ಎಂಬ ಆರೋಪವಿದೆ.
ಟ್ರಂಪ್ ಸಂಧಾನವೂ ವಿಫಲವಾಗಿತ್ತು..!
ತಾಲಿಬಾನಿ ನಾಯಕರ ಜೊತೆ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ಚರ್ಚೆ ನಡೆಸಲು ಮುಂದಾಗಿದ್ದರು. ಅಲ್ಲದೆ ತಾಲಿಬಾನಿಗಳು ಒಳ್ಳೆಯವರು ಎಂದು ಟ್ರಂಪ್ ಹೇಳಿದ್ದರು. ಆದರೆ ಅಫ್ಘಾನ್ ಸರ್ಕಾರದ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಉಗ್ರರ ಜೊತೆ ಮಾತುಕತೆ ನಡೆಸಿದ್ದಕ್ಕೆ ಅಮೆರಿಕದ ವಿರುದ್ಧ ಅಶ್ರಫ್ ಘನಿ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಇದೆಲ್ಲಾ ನಡೆದು ಕೆಲವೇ ದಿನಗಳು ಕಳೆಯುವ ಒಳಗಾಗಿ ಅಮೆರಿಕದ ಸೈನಿಕರನ್ನೇ ತಾಲಿಬಾನ್ ಉಗ್ರರು ಕೊಂದು ಹಾಕಿದ್ದರು. ಈ ದಾಳಿ ನಂತರ ಅಮೆರಿಕ ಹಾಗೂ ತಾಲಿಬಾನ್ ನಡುವಿನ ಮಾತುಕತೆಯೇ ಮುರಿದುಬಿದ್ದಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಸೇನೆ ಹಿಂಪಡೆಯಲು ಅಮೆರಿಕ ಒಪ್ಪಿಗೆ ಸೂಚಿಸಿತ್ತು.
ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದರು..!
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅದೆಷ್ಟು ಕ್ರೂರವಾಗಿ ವರ್ತಿಸುತ್ತಿದೆ ಎಂದರೆ, ಅಲ್ಲಿನ ಪ್ರಧಾನಿ, ಅಧ್ಯಕ್ಷರು, ಉಪಾಧ್ಯಕ್ಷರಿಗೇ ಸರಿಯಾದ ಭದ್ರತೆ ಸಿಗುತ್ತಿಲ್ಲ. ಕೆಲವು ತಿಂಗಳ ಹಿಂದೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ಪಾರ್ಲಿಮೆಂಟ್ ಮೇಲೆ ದಾಳಿಗೆ ಮುಂದಾಗಿದ್ದರು. ಅದೃಷ್ಟವಶಾತ್ ಸೂಸೈಡ್ ಬಾಂಬರ್ ಅಫ್ಘಾನ್ ಸಂಸತ್ ಭವನದಿಂದ ದೂರದಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ್ದ. ಇದರಿಂದ ಜನಪ್ರತಿನಿಧಿಗಳ ಜೀವ ಉಳಿದಿತ್ತು. ಆದರೆ ಅಂದಿನ ಸ್ಫೋಟದ ತೀವ್ರತೆಗೆ ಅಫ್ಘಾನಿಸ್ತಾನದ ಪಾರ್ಲಿಮೆಂಟ್ ಕಟ್ಟಡವೇ ನಡುಗಿ ಹೋಗಿತ್ತು. ಗೋಡೆಗಳು ಬಿರುಕುಬಿಡುವಷ್ಟು ತೀವ್ರತೆ ಆ ಸ್ಫೋಟಕ್ಕೆ ಇತ್ತು.