ಜನರು ಪಲಾಯನ ಮಾಡುತ್ತಿದ್ದಂತೆ ಗಡಿ ನಿರ್ಬಂಧಕ್ಕೆ ಮುಂದಾದ ತಾಲಿಬಾನ್
ಕಾಬೂಲ್, ಸೆಪ್ಟೆಂಬರ್ 30: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆ ಇಡೀ ದೇಶದ ಚಿತ್ರಣವೇ ಬದಲಾಗುತ್ತಿದೆ. ಹಲವು ಹೊಸ ನಿಯಮಗಳನ್ನು ತಾಲಿಬಾನ್ ಸರ್ಕಾರ ಹೇರುತ್ತಿದೆ. ಜೊತೆಗೆ ಆರ್ಥಿಕ ಬಿಕ್ಕಟ್ಟು ಕೂಡ ದೇಶದಲ್ಲಿ ಕಾಣಿಸಿಕೊಳ್ಳುತ್ತಿದೆ.
ಇವೆಲ್ಲದರಿಂದ ತಪ್ಪಿಸಿಕೊಳ್ಳಲು ಸಾವಿರಾರು ಅಫ್ಘನ್ನರು ದಿನನಿತ್ಯ ಪರಿತಪಿಸುತ್ತಿದ್ದಾರೆ. ಜೊತೆಗೆ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದಕ್ಕೂ ತಾಲಿಬಾನ್ ತಡೆಯೊಡ್ಡುತ್ತಿದೆ. ದೇಶದ ದಕ್ಷಿಣ ಗಡಿ ಪಾಕಿಸ್ತಾನದ ಮೂಲಕ ಪಲಾಯನ ಮಾಡಲು ಸಾವಿರಾರು ಮಂದಿ ಪ್ರಯತ್ನಿಸುತ್ತಿದ್ದು, ಅವರನ್ನು ತಡೆಯಲಾಗುತ್ತಿದೆ.
ತಾಲಿಬಾನ್ ಸರ್ಕಾರಕ್ಕೆ ನೆರವಾಗಲು ಪಾಕ್ಗೆ ಎದುರಾಗಿದೆ ತೊಂದರೆ
ಹಲವು ಬಾರಿ ತಪ್ಪಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಿ ಸಾಧ್ಯವಾಗದೇ ಜನರು ವಾಪಸ್ಸಾಗುತ್ತಿದ್ದಾರೆ. 'ಇಲ್ಲಿ ಯಾವುದೇ ನೌಕರಿಯೂ ಇಲ್ಲವಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ಗಡಿ ದಾಟಿ ಕೆಲಸವನ್ನು ಹುಡುಕಿಕೊಳ್ಳಲೇಬೇಕಿದೆ. ಆದರೆ ಅದು ಕೂಡ ಸಾಧ್ಯವಾಗುತ್ತಿಲ್ಲ' ಎಂದು ವ್ಯಕ್ತಿಯೊಬ್ಬರು ದುಃಖದಿಂದ ಹೇಳಿಕೊಂಡಿದ್ದಾರೆ.
ಅಫ್ಘನ್ನರು ತಮ್ಮ ಸಂಘರ್ಷಪೀಡಿತ ನೆಲದಲ್ಲಿ ಬದುಕಬೇಕು. ದೇಶವನ್ನು ಉಳಿಸಬೇಕು, ಪುನರ್ ನಿರ್ಮಾಣ ಮಾಡಬೇಕು ಎಂದು ತಾಲಿಬಾನ್ ಆಡಳಿತಗಾರರು ಜನರನ್ನು ಒತ್ತಾಯಿಸುತ್ತಿರುವುದಾಗಿ ತಿಳಿದುಬಂದಿದೆ. 'ಇದು ನಿಮ್ಮ ದೇಶ. ನೀವು ಈ ದೇಶದಿಂದ ಹೊರಡಬಾರದು. ಹೀಗೆ ಮಾಡುವುದರಿಂದ ನಿಮ್ಮ ಅಫ್ಘಾನ್ ಸಂಸ್ಕೃತಿಯೆಡೆಗೆ ಅಗೌರವ ತೋರುತ್ತಿದ್ದೀರಿ' ಎಂದು ಜನರಿಗೆ ತಾಲಿಬಾನ್ ಆಡಳಿತಗಾರರು ಒತ್ತಾಯಿಸುತ್ತಿರುವುದಾಗಿ 25 ವರ್ಷದ ರಹಮದೀನ್ ವಾರ್ಡಕ್ ಎಂಬುವರು ಹೇಳಿದ್ದಾರೆ.
ಪಾಕಿಸ್ತಾನಿಗಳು ಕೂಡ ಗಡಿಯಲ್ಲಿ ಅಫ್ಘನ್ನಿಂದ ಪಲಾಯನ ಮಾಡುತ್ತಿರುವವರನ್ನು ತಡೆಯುತ್ತಿದ್ದಾರೆ. ಪ್ರತಿದಿನ ಎಂಟು ಸಾವಿರದಿಂದ ಒಂಬತ್ತು ಸಾವಿರ ಮಂದಿ ಯಾವುದೇ ಅಧೀಕೃತ ಕಾಗದ ಪತ್ರಗಳಿಲ್ಲದೇ ಗಡಿ ದಾಟಲು ಮುಂದಾಗುತ್ತಿದ್ದಾರೆ. ಸಾಧ್ಯವಾಗದೇ ಹಿಂದಿರುಗುತ್ತಿದ್ದಾರೆ.
ಮನೆಯಲ್ಲಂತೂ ಕೂರುವುದಿಲ್ಲ: ಅಫ್ಘಾನ್ ಮಹಿಳೆಯರ ದೃಢ ನಿರ್ಧಾರ
ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಅಫ್ಘಾನ್ನಲ್ಲಿ ಅಧಿಕಾರ ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನಕ್ಕೆ ಹರಿದುಬರುತ್ತಿದ್ದ ವಿದೇಶಿ ನೆರವಿನ ಹಣವೂ ನಿಂತು ಹೋಗಿದೆ. ದೇಶದಲ್ಲಿ ಆರ್ಥಿಕ ಕುಸಿತ ಕಂಡುಬಂದಿದ್ದು, ಹೆಚ್ಚಿನ ಸಂಖ್ಯೆಯ ಅಫ್ಘನ್ನರು ದೇಶ ತೊರೆಯಲು ಮುಂದಾಗಿದ್ದಾರೆ. ಬರಗಾಲದಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
ಈ ನಡುವೆ ವಿಶ್ವ ಸಂಸ್ಥೆ ಕೂಡ ಜನಸಂಖ್ಯೆಯ ಮೂರನೇ ಒಂದು ಭಾಗ ಬರಗಾಲದಿಂದ ನಾಶವಾಗಬಹುದು ಎಂದು ಎಚ್ಚರಿಕೆ ನೀಡಿದೆ. ಕೊರೊನಾ ಸಾಂಕ್ರಾಮಿಕ ಹಾಗೂ ಇತ್ತೀಚಿನ ಬಿಕ್ಕಟ್ಟಿನವರೆಗೂ ಗಡಿಯನ್ನು ತೆರೆಯಲಾಗಿತ್ತು. ಆದರೆ ಪ್ರತಿನಿತ್ಯ ಸಾವಿರಾರು ಮಂದಿ ಗಡಿ ದಾಟುತ್ತಿದ್ದಂತೆ ಅಲ್ಲಿ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಪಾಕಿಸ್ತಾನ ಕೂಡ ಗಡಿ ಗೇಟನ್ನು ಮುಚ್ಚಿದೆ.
ಮೊದಮೊದಲು ಸಾವಿರಾರು ಮಂದಿ ಗಡಿ ದಾಟಿ ದೇಶ ತೊರೆದು ಹೋದರು. ಆದರೆ ಆಗಸ್ಟ್ನ ಕೊನೆ ಎರಡು ವಾರಗಳಿಂದ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಇದೀಗ ಪಾಕಿಸ್ತಾನದ ಗಡಿಯನ್ನು ಮುಚ್ಚುವುದಾಗಿ ತಾಲಿಬಾನ್ ಹೇಳಿಕೊಳ್ಳುತ್ತಿದೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡ ತಿಂಗಳ ನಂತರ ಇದೀಗ ದೇಶದಲ್ಲಿ ಒಂದೊಂದೇ ಸಮಸ್ಯೆಗಳು ಎದುರಾಗುತ್ತಿವೆ. ಕಳೆದ 20 ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ನೂರಾರು ಶತಕೋಟಿ ಡಾಲರ್ ವೆಚ್ಚ ಮಾಡಿದ್ದು, ಸದ್ಯಕ್ಕೆ ಅಫ್ಘಾನಿಸ್ತಾನದ ಆರ್ಥಿಕತೆ ಕುಸಿಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಈ ತಿಂಗಳ ಅಂತ್ಯದ ವೇಳೆಗೆ ಆಹಾರ ಕೊರತೆ ಭಯಾನಕ ರೂಪ ತಾಳಬಹುದು ಎಂದು ಅಂದಾಜಿಸಲಾಗಿದೆ.
ತನ್ನ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟುಗಳಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡದೇ ಎಚ್ಚೆತ್ತುಕೊಳ್ಳದೇ ಇದ್ದರೆ ದೇಶ ಬಡತನ ರೇಖೆಗಿಂತ ಕೆಳಗೆ ಇಳಿಯುವ ಅಪಾಯದಲ್ಲಿದೆ ಎಂದು ಯುಎನ್ಡಿಪಿ ಕೂಡ ಎಚ್ಚರಿಕೆ ನೀಡಿದೆ. ಶತಕೋಟಿ ಡಾಲರ್ ವಿದೇಶಿ ನೆರವು ಅಫ್ಘಾನಿಸ್ತಾನಕ್ಕೆ ಹರಿದುಬಂದಿದ್ದರೂ ಅಫ್ಘಾನಿಸ್ತಾನದ ಆರ್ಥಿಕತೆ ಹೆಣಗುತ್ತಿದೆ. ಜನಸಂಖ್ಯೆ ಏರಿಕೆಗೆ ಅನುಗುಣವಾಗಿ ಬೆಳವಣಿಗೆ ಅಸಾಧ್ಯವೆನಿಸುತ್ತಿದೆ. ಉದ್ಯೋಗ ಕಳೆದುಕೊಂಡವರು ಒಂದೆಡೆಯಿದ್ದರೆ, ಅನೇಕ ಸರ್ಕಾರಿ ಉದ್ಯೋಗಿಗಳಿಗೆ ಕನಿಷ್ಠ ಜುಲೈ ತಿಂಗಳಿನಿಂದಲೂ ಸಂಬಳ ನೀಡಿಲ್ಲದಿರುವುದು ಆರ್ಥಿಕ ಬಿಕ್ಕಟ್ಟಿಗೆ ಒಂದು ಉದಾಹರಣೆಯಾಗಿದೆ. ಈ ಎಲ್ಲ ಗೋಜನ್ನು ಬಿಟ್ಟು ದೇಶ ತೊರೆಯಲು ಹೋಗುವವರಿಗೂ ಅವಕಾಶ ಇಲ್ಲದಂತಾಗಿದೆ.