ಹಕ್ಕಾನಿ ಅಟ್ಯಾಕ್: ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿದ ಸಹ-ಸಂಸ್ಥಾಪಕನೇ ಸೈಲೆಂಟ್!?
ಕಾಬೂಲ್, ಸಪ್ಟೆಂಬರ್ 21: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಆಯಿತು. ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ದೇಶದ ಪ್ರಧಾನಮಂತ್ರಿ ಎಂದು ಘೋಷಿಸಿದ್ದೂ ಆಯಿತು. ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳೊಂದಿಗೆ ಸಂಧಾನ ಸಭೆ ನಡೆಸಿದ ಹಾಗೂ ತಾಲಿಬಾನ್ ಸರ್ಕಾರದ ಸರ್ವಶ್ರೇಷ್ಠ ನಾಯಕ ಎಂದೇ ಬಿಂಬಿಸಲ್ಪಟ್ಟಿದ್ದ ತಾಲಿಬಾನ್ ಸಂಘಟನೆಯ ಉಪ ಸಂಸ್ಛಾಪಕ ಹಾಗೂ ಉಪ ಪ್ರಧಾನಮಂತ್ರಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಹೆಸರು ಇದೀಗ ತೆರೆಮರೆಗೆ ಸರಿದಿದೆ.
ಕಾಬೂಲ್ ನಗರದ ಅಧ್ಯಕ್ಷೀಯ ಅರಮನೆಯಲ್ಲಿ ನಡೆದ ನಾಟಕೀಯ ಶೂಟೌಟ್ ಬಳಿಕ ದೇಶದ ಉಪ ಪ್ರಧಾನಿ ಎಂದು ಘೋಷಿಸಲ್ಪಟ್ಟ ಬರಾಬಾರ್ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಯುಎಸ್ ಜೊತೆಗಿನ ಸಂಧಾನದಲ್ಲಿ ಪ್ರಮುಖ ಪಾತ್ರ ವಹಿಸಿದ ಬರಾದಾರ್ ಮೇಲೆ ಅದೇ ಯುಎಸ್ ಬೆಂಬಲಿತ ಭಯೋತ್ಪಾದನಾ ಸಂಘಟನೆಯ ಹಕ್ಕಾನಿ ಗುಂಪು ದಾಳಿ ನಡೆಸಿದೆ. ಸೆಪ್ಟೆಂಬರ್ ಆರಂಭದಲ್ಲಿ ತಾಲಿಬಾನ್ ಸರ್ಕಾರ ಮತ್ತು ಸಂಪುಟ ರಚನೆ ಸಂದರ್ಭದಲ್ಲಿ ಈ ದಾಳಿ ನಡೆಸಲಾಗಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಘಟನೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆಯಾದರೂ, ದಾಳಿ ನಡೆಸಿದವರ ಗುರುತು ಪತ್ತೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ.
ನಾನು ಸತ್ತಿಲ್ಲ ಎಂದು ಆಡಿಯೋ ಬಿಡುಗಡೆ ಮಾಡಿದ ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ
"ತಾಲಿಬಾನ್ ಅಲ್ಲದ ಹಾಗೂ ಅಲ್ಪಸಂಖ್ಯಾತ ನಾಯಕರಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸುವುದು ಜಗತ್ತಿನ ಇತರೆ ರಾಷ್ಟ್ರಗಳ ಎದುರಿಗೆ ಸ್ವೀಕಾರಾರ್ಹವಾಗುತ್ತದೆ ಎಂದು ಮುಲ್ಲಾ ಅಬ್ದುಲ್ ಘನಿ ಬರಾದಾರ್ ಪ್ರತಿಪಾದಿಸಿದರು. ಈ ವೇಳೆ ಸಭೆಯಲ್ಲಿ ಹಾಜರಾಗಿದ್ದ ಖಲೀಲ್ ಉಲ್ ರೆಹಮಾನ್ ಹಕ್ಕಾನಿಯು ಬರಾದಾರ್ ಮೇಲೆ ಹಲ್ಲೆಗೆ ಮುಂದಾದನು," ಎಂದು ಸ್ಥಳೀಯರು ಹೇಳಿದ್ದಾರೆ.
ಅಬ್ದುಲ್ ಬರಾದಾರ್ ರಕ್ಷಣೆಗೆ ಬಂದವರ ಹತ್ಯೆ
ಹಕ್ಕಾನಿ ತಂಡದ ನಾಯಕನೊಬ್ಬ ಅಫ್ಘಾನಿಸ್ತಾನದ ಉಪ ಪ್ರಧಾನಮಂತ್ರಿ ಎನಿಸಿಕೊಂಡ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಮೇಲೆರೆಗುತ್ತಿದ್ದಂತೆ ಅಂಗರಕ್ಷಕರು ಮಧ್ಯಪ್ರವೇಶಿಸಿದರು. ಈ ವೇಳೆ ಎರಡು ತಂಡಗಳ ನಡುವೆ ಗುಂಡಿನ ಕಾಳಗ ನಡೆಯಿತು, ಸ್ಥಳದಲ್ಲೇ ಕೆಲವರು ಪ್ರಾಣ ಬಿಟ್ಟರು. ಇದರ ಮಧ್ಯೆ ಯಾವುದೇ ಅಪಾಯವಿಲ್ಲದೇ ಪಾರಾದ ಬರಾದಾರ್ ರಾಜಧಾನಿ ಕಂದಹಾರ್ಗೆ ಹಾರಿದನು. ಅಲ್ಲಿ ತಂಡದ ಅತ್ಯುನ್ನ ನಾಯಕ ಹೈಬತುಲ್ಲಾ ಅಖುಂಡಜಾದರೊಂದಿಗೆ ಚರ್ಚೆ ನಡೆಸಲು ಮುಂದಾದನು.
ಅಫ್ಘಾನಿಸ್ತಾನದಲ್ಲಿ ಮಹಿಳಾ ಪರ ವರದಿ ಪ್ರಸಾರಕ್ಕೆ ಇದೆಂಥಾ ಶಿಕ್ಷೆ!?
ತಾಲಿಬಾನ್ ಮೂಲದವರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ
ಅಫ್ಘಾನಿಸ್ತಾನದಲ್ಲಿ ಕಳೆದ ಸೆಪ್ಟೆಂಬರ್ 7ರಂದು ಘೋಷಿಸಿದ ಸರ್ಕಾರದ ಸಂಪುಟದಲ್ಲಿ ಒಬ್ಬರೇ ಒಬ್ಬರು ತಾಲಿಬಾನ್ ಸಂಘಟನೆಯಿಂದ ಹೊರಗಿನವರು ಇರಲಿಲ್ಲ. ಅದರಲ್ಲೂ ಶೇ.90ರಷ್ಟು ಪಶ್ತೂನ್ಗಳನ್ನು ಒಳಗೊಂಡಿತ್ತು. ಹಕ್ಕಾನಿ ಕುಟುಂಬದ ಸದಸ್ಯರು ನಾಲ್ಕು ಸ್ಥಾನಗಳನ್ನು ಪಡೆದರು, ಭಯೋತ್ಪಾದನೆಗಾಗಿ ಎಫ್ಬಿಐನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಹಕ್ಕಾನಿ ನೆಟ್ವರ್ಕ್ನ ನಾಯಕ ಸಿರಾಜುದ್ದೀನ್ ಹಕ್ಕಾನಿ - ಆಂತರಿಕ ಸಚಿವ ಸ್ಥಾನ ನೀಡಲಾಯಿತು. ಇದೇ ವೇಳೆ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಅನ್ನು ಇಬ್ಬರು ಉಪ ಪ್ರಧಾನಮಂತ್ರಿಗಳಲ್ಲಿ ಒಬ್ಬರೆಂದು ಘೋಷಿಸಲಾಯಿತು. ಕಳೆದ 2016ರಲ್ಲೇ ತಾಲಿಬಾನ್ ಮತ್ತು ಹಕ್ಕಾನಿ ಗುಂಪುಗಳು ಪರಸ್ಪರ ವಿಲೀನಗೊಂಡಿದ್ದವು.
ಪಾಕಿಸ್ತಾನದ ಜೊತೆಗೆ ಉತ್ತಮ ಸಂಬಂಧವುಳ್ಳವರಿಗೆ ಪ್ರಧಾನಿ ಪಟ್ಟ
ಯುಎಸ್ ಟ್ರಂಪ್ ಸರ್ಕಾರದ ಜೊತೆಗೆ ಸಂಧಾನ ಮಾತುಕತೆ ನಡೆಸುವುದಕ್ಕೂ ಮೊದಲು ಬರಾದಾರ್ ಪಾಕಿಸ್ತಾನದ ಜೈಲಿನಲ್ಲಿ ಎಂಟು ವರ್ಷ ಕಳೆದಿದ್ದನು. ಆದರೆ ಕಾಬೂಲ್ನಲ್ಲಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಮುಖ್ಯಸ್ಥರು ಬರಾದಾರ್ ವಿರುದ್ಧ ಹಕ್ಕಾನಿಗಳಿಗೆ ಬೆಂಬಲಿಸಿದರು. ಆದ್ದರಿಂದಲೇ ಬರಾದಾರ್ ಗಿಂತ ಅಲ್ಪಜ್ಞಾನಿ ಆಗಿರುವ ಮೊಹಮ್ಮದ್ ಹಸನ್ ಅಖುಂದಾಗೆ ಪ್ರಧಾನಮಂತ್ರಿ ಪಟ್ಟ ಕಟ್ಟಲಾಯಿತು. ಏಕೆಂದರೆ ಈತ ಇಸ್ಲಾಮಾಬಾದ್ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಈತನ ಆಯ್ಕೆಯಿಂದ ಹಕ್ಕಾನಿಗಳಿಗೆ ಯಾವುದೇ ಅಪಾಯವಾಗುವುದಿಲ್ಲ ಎಂದು ಭಾವಿಸಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಪಾಕಿಸ್ತಾನದ ಮಿಲಿಟರಿಯ ಮಾಧ್ಯಮ ಕಚೇರಿಯು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಮಹಿಳೆಯರು ಇರುವುದು ಮಂತ್ರಿ ಆಗುವುದಕ್ಕಲ್ಲ, ಜನ್ಮ ನೀಡುವುದಕ್ಕೆ: ಅಫ್ಘಾನ್ ಸಚಿವನ ನುಡಿಮುತ್ತು!
ಬರಾದಾರ್ ಕೊಲೆ ವದಂತಿ ತಿರಸ್ಕರಿಸಿದ ತಾಲಿಬಾನ್
ಕಾಬೂಲ್ ಅಧ್ಯಕ್ಷೀಯ ಅರಮನೆಯಲ್ಲಿ ಸಂಘರ್ಷ ನಡೆದಿರುವ ಕುರಿತು ವದಂತಿಗಳನ್ನು ತಾಲಿಬಾನ್ ತಳ್ಳಿ ಹಾಕಿತ್ತು. ಸರ್ಕಾರಿ ದೂರದರ್ಶನ ವಾಹಿನಿಯಲ್ಲಿ ಕಾಣಿಸಿಕೊಂಡ ಬರಾದಾರ್, ತಮ್ಮ ಮೇಲೆ ದಾಳಿ ನಡೆದಿರುವುದು, ತಾವು ಗಾಯಗೊಂಡಿರುವುದು ಅಥವಾ ತಮ್ಮ ಸಾವಿನ ಬಗ್ಗೆ ಹರಡಿರುವ ಸುದ್ದಿಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದರು. "ದೇವರಲ್ಲಿ ಪ್ರಾರ್ಥಿಸಿಕೊಳ್ಳಿ, ನಾನು ಸುರಕ್ಷಿತ ಮತ್ತು ಸದೃಢವಾಗಿದ್ದೇನೆ. ನಮ್ಮಲ್ಲಿ ಆಂತರಿಕ ವಿವಾದಗಳಿವೆ ಎಂದು ಮಾಧ್ಯಮಗಳು ನೀಡಿದ ಇನ್ನೊಂದು ಹೇಳಿಕೆಯು ಸಂಪೂರ್ಣವಾಗಿ ನಿಜವಲ್ಲ," ಎಂದು ತಮ್ಮ ಸಂಕ್ಷಿಪ್ತ ಭಾಷಣದಲ್ಲಿ ಹೇಳಿದ್ದರು. ಆದರೆ ಸೆಪ್ಟೆಂಬರ್ 12ರಂದು ಕತಾರ್ ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಸ್ವಾಗತಿಸಲು ಬರಾದಾರ್ ಹಾಜರಿರಲಿಲ್ಲ. ಅಲ್ಲದೇ, ಈ ವಾರ ನಡೆದ ತಾಲಿಬಾನ್ ಸರ್ಕಾರದ ಮೊದಲ ಸಂಪುಟ ಸಭೆಯಿಂದಲೂ ದೂರ ಉಳಿದುಕೊಂಡಿದ್ದರು.
ಪ್ರವಾಸವನ್ನು ಅರ್ಧಕ್ಕೆ ಕಡಿತಗೊಳಿಸಲು ಬರಲು ಸಾಧ್ಯವಿಲ್ಲ
"ಕತಾರ್ ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಭೇಟಿ ಸಂದರ್ಭದಲ್ಲಿ ಹಕ್ಕಾನಿ ನಾಯಕರೂ ಸೇರಿದಂತೆ ತಾಲಿಬಾನ್ ಸರ್ಕಾರದ ಬಹುಪಾಲು ಸಚಿವರು ಹಾಜರಾಗಿದ್ದರು. ಆದರೆ ಸಚಿವರ ಭೇಟಿಯ ಬಗ್ಗೆ ನನಗೆ ತಿಳಿದಿರಲಿಲ್ಲ. "ನಾನು ಕತಾರ್ ವಿದೇಶಾಂಗ ಸಚಿವರ ಕಾಬೂಲ್ ಭೇಟಿಯ ಸಮಯದಲ್ಲಿ ಪ್ರಯಾಣಿಸುತ್ತಿದ್ದೆ, ನನ್ನ ಪ್ರವಾಸವನ್ನು ಅರ್ಧಕ್ಕೆ ಕಡಿತಗೊಳಿಸಿ ಕಾಬೂಲ್ಗೆ ಮರಳಲು ಸಾಧ್ಯವಾಗಲಿಲ್ಲ," ಎಂದು ಬರಾದಾರ್ ಹೇಳಿದ್ದಾರೆ.
ಬರಾದಾರ್ ಸೈಡ್ ಲೈನ್ ಆಗಿಲ್ಲ ಎಂದ ತಾಲಿಬಾನ್ ವಕ್ತಾರ
ಅಫ್ಘಾನಿಸ್ತಾನದ ಉಪ ಪ್ರಧಾನಮಂತ್ರಿ ಹಾಗೂ ತಾಲಿಬಾನ್ ಸಂಘಟನೆ ಸಹ ಸಂಸ್ಥಾಪಕರೂ ಆಗಿರುವ ಮುಲ್ಲಾ ಅಬ್ದುಲ್ ಘನಿ ಬರಾದಾರ್ ರನ್ನು ಯಾವುದೇ ರೀತಿ ಕಡೆಗಣಿಸಿಲ್ಲ. ಅವರು ಶೀಘ್ರದಲ್ಲೇ ಹಿಂತಿರುಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ. "ಇಸ್ಲಾಮಿಕ್ ಎಮಿರೇಟ್ನ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಯಾವುದೇ ಕಚೇರಿ ಅಥವಾ ಸರ್ಕಾರಿ ಹುದ್ದೆಗಳ ಬಗ್ಗೆ ಜಗಳವಾಡುವುದಿಲ್ಲ." ಎಂದು ತಾಲಿಬಾನ್ ವಕ್ತಾರ ಕರಿಮಿ ಹೇಳಿದ್ದಾರೆ.
ನಾಪತ್ತೆಯಾದ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಯಾರು?
ತಾಲಿಬಾನ್ ಸಹ ಸಂಸ್ಥಾಪಕರಾದ ಅಬ್ದುಲ್ ಘನಿ ಬರಾದಾರ್ ಹೊಸ ಸರ್ಕಾರದಲ್ಲಿ ಉಪ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 1970ರ ಉತ್ತರಾರ್ಧದಲ್ಲಿ ಸೋವಿಯತ್ ದೇಶದ ಆಕ್ರಮಣದಿಂದ ಬರಾದಾರ್ ಜೀವನವು ಸಹಜವಾಗಿ ಎಲ್ಲ ಅಫ್ಘನ್ನರಂತೆ ಶಾಶ್ವತವಾಗಿ ಬದಲಾಯಿತು. ಆತನಲ್ಲಿ ಬಂಡಾಯಗಾರನ ಮನೋಭಾವನ್ನು ಸೃಷ್ಟಿಸಿತು. ಈತ ಮುಲ್ಲಾ ಒಮರ್ ಜೊತೆಗಿನ ಆಪ್ತ ಹೋರಾಟಗಾರ ಎಂದು ನಂಬಲಾಗಿತ್ತು. 1990ರ ಆರಂಭದಲ್ಲಿ ಸೋವಿಯತ್ ವಾಪಸ್ ತೆರಳಿದ ನಂತರದಲ್ಲಿ ನಡೆದ ಅಂತರ್ಯುದ್ಧದ ಗೊಂದಲ ಮತ್ತು ಭ್ರಷ್ಟಾಚಾರದ ಸಮಯದಲ್ಲಿ ಇಬ್ಬರೂ ತಾಲಿಬಾನ್ ಚಳುವಳಿಗೆ ಇಳಿದರು.
2001 ರಲ್ಲಿ ಯುಎಸ್ ನೇತೃತ್ವದ ಪಡೆಗಳು ತಾಲಿಬಾನ್ ಆಡಳಿತವನ್ನು ಉರುಳಿಸಿದ ನಂತರ, ಭಯೋತ್ಪಾದಕರು ಹೊಸ ಆಡಳಿತ ಸ್ಥಾಪಿಸುವ ನಿಟ್ಟಿನಲ್ಲಿ ಸಂಭಾವ್ಯ ಒಪ್ಪಂದದೊಂದಿಗೆ ಹಂಗಾಮಿ ನಾಯಕ ಹಮೀದ್ ಕರ್ಜಾಯ್ ಅವರನ್ನು ಸಂಪರ್ಕಿಸಿದ ಸಣ್ಣ ಗುಂಪಿನ ಬಂಡಾಯಗಾರರಲ್ಲಿ ಬರಾದಾರ್ ಒಬ್ಬರು ಎಂದು ಹೇಳಲಾಗುತ್ತದೆ. 2010ರ ವೇಳೆ ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾದ ಬರಾದಾರ್ ಅನ್ನು ಒತ್ತಡದ ನಂತರ 2018ರಲ್ಲಿ ಬಿಡುಗಡೆಗೊಳಿಸಿ ಕ್ವಾತಾರ್ ಗೆ ಕಳುಹಿಸಲಾಗಿತ್ತು. ಅವರನ್ನು ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಯುನೈಟೆಡ್ ಸ್ಟೇಟ್ಸ್ ಜೊತೆ ಸೇನೆ ಹಿಂತೆಗೆದುಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದರು.
ಯಾರು ಈ ಸಿರಾಜುದ್ದೀನ್ ಹಕ್ಕಾನಿ?
ಸೋವಿಯತ್ ವಿರೋಧಿ ಜಿಹಾದ್ನ ಪ್ರಸಿದ್ಧ ಕಮಾಂಡರ್ ಪುತ್ರನಾಗಿ ತಾಲಿಬಾನ್ನ ಉಪ ನಾಯಕ ಮತ್ತು ಶಕ್ತಿಯುತ ಹಕ್ಕಾನಿ ಜಾಲದ ಮುಖ್ಯಸ್ಥರಾಗಿ ಸಿರಾಜುದ್ದೀನ್ ಹಕ್ಕಾನಿ ಪ್ರಬಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರನ್ನು ಆಂತರಿಕ ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ. ಹಕ್ಕಾನಿ ಜಾಲವು ಯುಎಸ್ ನಿಯೋಜಿತ ಭಯೋತ್ಪಾದಕ ಗುಂಪಾಗಿದ್ದು, ಇದನ್ನು ಅಫ್ಘಾನಿಸ್ತಾನದಲ್ಲಿ ಅತ್ಯಂತ ಅಪಾಯಕಾರಿ ಭಯೋತ್ಪಾದಕ ಗುಂಪು ಎಂದು ಪರಿಗಣಿಸಲಾಗುತ್ತದೆ. ಆತ್ಮಾಹುತಿ ಬಾಂಬರ್ಗಳ ಬಳಕೆಯಲ್ಲಿ ಈ ಜಾಲವು ಅತ್ಯಂತ ಕುಖ್ಯಾತಿಯನ್ನು ಪಡೆದಿದೆ. ಕಳೆದ ಕೆಲವು ವರ್ಷಗಳಲ್ಲಿ ಕಾಬೂಲ್ನಲ್ಲಿ ನಡೆದ ಭೀಕರ ದಾಳಿಗಳಲ್ಲಿ ಈ ಜಾಲದ ಕೈವಾಡವಿರುವ ಶಂಕೆಯಿದೆ.
ತಮ್ಮ ಸ್ವಾತಂತ್ರ್ಯ, ಹೋರಾಟದ ಚಾಣಾಕ್ಷತೆ ಮತ್ತು ಜಾಣತನದ ವ್ಯಾಪಾರ ವ್ಯವಹಾರಗಳಿಗೆ ಹೆಸರುವಾಸಿಯಾಗಿರುವ ಹಕ್ಕಾನಿಗಳು ಮುಖ್ಯವಾಗಿ ಪೂರ್ವ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದಾರೆ ಮತ್ತು ತಾಲಿಬಾನ್ ನಾಯಕತ್ವ ಮಂಡಳಿಯ ಮೇಲೆ ಗಣನೀಯ ಹಿಡಿತ ಹೊಂದಿದ್ದಾರೆ.