DW ಪತ್ರಕರ್ತರ ಹುಡುಕಾಟದಲ್ಲಿ ಸಂಬಂಧಿಗೆ ಗುಂಡಿಕ್ಕಿ ಕೊಂದ ತಾಲಿಬಾನ್!
ಕಾಬೂಲ್, ಆಗಸ್ಟ್ 20: ಅಫ್ಘಾನಿಸ್ತಾನಧಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಜರ್ಮನಿ ಮೂಲದ ಡಾಯ್ಚ ವೆಲ್ಲೆ(DW News) ಸುದ್ದಿ ಸಂಸ್ಥೆಯ ಪತ್ರಕರ್ತನನ್ನು ಹುಡುಕುವ ವೇಳೆ ಅವರ ಕುಟುಂಬ ಸದಸ್ಯರನ್ನು ತಾಲಿಬಾನ್ ಹೊಡೆದು ಕೊಂದಿರುವ ಘಟನೆ ವರದಿಯಾಗಿದೆ.
ಜರ್ಮನಿ ಮೂಲದ DW ಸುದ್ದಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತನಿಗಾಗಿ ತಾಲಿಬಾನ್ ಉಗ್ರರು ಮನೆ ಮನೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ತಾಲಿಬಾನ್ ಉಗ್ರರ ಗುಂಡಿಗೆ ಒಬ್ಬ ಸಂಬಂಧಿ ಪ್ರಾಣ ಬಿಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಉಳಿದಂತೆ ಕುಟುಂಬದ ಸದಸ್ಯರು ಪತ್ರಕರ್ತನ ಬಗ್ಗೆ ಮಾಹಿತಿ ನೀಡದೇ ತಪ್ಪಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
Fact Check: ಭಾರತಕ್ಕೆ ಬೆದರಿಕೆ ಹಾಕಿದರಾ ತಾಲಿಬಾನ್ ಉಗ್ರರು!?
ತಮ್ಮ ಸಂಸ್ಥೆಯ ಪತ್ರಕರ್ತನ ಸಂಬಂಧಿಕರ ಹತ್ಯೆಯನ್ನು DW ಸುದ್ದಿ ಸಂಸ್ಥೆಯ ನಿರ್ದೇಶಕ ಪೀಟರ್ ಲಿಂಬರ್ಗ್ ಖಂಡಿಸಿದ್ದಾರೆ. "ಅಫ್ಘಾನಿಸ್ತಾನದಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಅವರ ಸಂಬಂಧಿಕರಿಗೆ ರಕ್ಷಣೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ತಾಲಿಬಾನ್ ನಿನ್ನೆ ನಮ್ಮ ಸಂಪಾದಕರೊಬ್ಬರ ಹತ್ತಿರದ ಸಂಬಂಧಿಯನ್ನು ಕೊಂದಿರುವುದು ಊಹಿಸಲಾಗದಷ್ಟು ದುರಂತ, ಮತ್ತು ಅಫ್ಘಾನಿಸ್ತಾನದಲ್ಲಿರುವ ನಮ್ಮ ಎಲ್ಲಾ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ತಮ್ಮನ್ನು ತಾವು ಕಂಡುಕೊಳ್ಳುವ ತೀವ್ರ ಅಪಾಯಕ್ಕೆ ಸಾಕ್ಷಿಯಾಗಿದೆ," ಎಂದಿದ್ದಾರೆ.
ಮೂವರು ಪ್ರತಿನಿಧಿಗಳ ಮನೆ ಮೇಲೆ ತಾಲಿಬಾನ್ ದಾಳಿ:
"ಕಾಬೂಲ್ ಮತ್ತು ಪ್ರಾಂತ್ಯಗಳಲ್ಲಿ ತಾಲಿಬಾನ್ ಉಗ್ರರು ಈಗಾಗಲೇ ನಮ್ಮ ಸಂಸ್ಥೆಯ ಪತ್ರಕರ್ತರಿಗಾಗಿ ಸಂಘಟಿತ ಹುಡುಕಾಟ ನಡೆಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ತಾಲಿಬಾನ್ ಕನಿಷ್ಠ ಮೂರು ಇತರ ಡಿಡಬ್ಲ್ಯೂ ಪತ್ರಕರ್ತರ ಮನೆಗಳ ಮೇಲೆ ದಾಳಿ ಮಾಡಿದೆ," ಎಂದು ಬ್ರಾಡ್ಕಾಸ್ಟರ್ ಉಲ್ಲೇಖಿಸಿದೆ. DW ಮತ್ತು ಇತರ ಜರ್ಮನ್ ಮಾಧ್ಯಮ ಸಂಸ್ಥೆಗಳು ಅಫ್ಘಾನಿಸ್ತಾನದಲ್ಲಿ ವಾಸವಿರುವ ತಮ್ಮ ಸಿಬ್ಬಂದಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಜರ್ಮನಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ.
ಮನೆ ಮನೆಗೆ ನುಗ್ಗಿ ತಾಲಿಬಾನ್ ಕ್ರೌರ್ಯ ಪ್ರದರ್ಶನ:
ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ತಾಲಿಬಾನ್ ಉಗ್ರರು ಕಾಬೂಲ್ ನಗರದಲ್ಲಿ ಅಟ್ಟಹಾಸ ತೋರುತ್ತಿದ್ದಾರೆ. ಪ್ರತಿಯೊಂದು ಮನೆ ಮನೆಗಳಿಗೆ ನುಗ್ಗಿ ದಾಖಲೆಗಳನ್ನು ದಾಖಲೆಗಳನ್ನು ಹುಡುಕಾಡುತ್ತಿದ್ದಾರೆ. ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ರಾಜ್ಯ ಗುಪ್ತಚರ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರನ್ನು ಗುರುತು ಹಾಕಿಕೊಳ್ಳುತ್ತಿದ್ದಾರೆ. ವಿಶ್ವಸಂಸ್ಥೆ ಮತ್ತು ನ್ಯಾಟೋ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಪತ್ತೆ ಮಾಡುವುದಕ್ಕಾಗಿಯೇ ತಾಲಿಬಾನ್ ಉಗ್ರರು ಪ್ರತಿಯೊಂದು ಮನೆಗಳಿಗೂ ನುಗ್ಗಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮೂಲಗಳಿಂದ ತಿಳಿದು ಬಂದಿದೆ.
ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ತಾಲಿಬಾನ್:
"ಅಫ್ಘಾನಿಸ್ತಾನ ವಿಮೋಚನೆ ಆಗಿರುವ ಈ ಸಂದರ್ಭದಲ್ಲಿ ತಾಲಿಬಾನ್ ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುವುದಕ್ಕೆ ಬಯಸುವುದಿಲ್ಲ ಎಂದು ತಾಲಿಬಾನ್ ಹೇಳಿತ್ತು. ಹೀಗೆ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಉಗ್ರರು ತಮ್ಮ ಹಳೆಚಾಳಿ ಮುಂದುವರಿಸಿದ್ದರು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ದೇಶ ತೊರೆದು ಹೊರಟ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಮನೆ ಮನೆಗಳಿಗೆ ನುಗ್ಗಿ ಕ್ರೌರ್ಯ ತೋರುವುದಕ್ಕೆ ಶುರು ಮಾಡಿದ್ದರು.
ತಾಲಿಬಾನಿಗಳು ಹೇಳಿದ ಮಾತುಗಳೆಲ್ಲ ಹುಸಿ:
Recommended Video
ಕಾಬೂಲ್ನಲ್ಲಿ ಇರುವ ವಿದೇಶಿ ದೂತವಾಸ ಕಚೇರಿಗಳು, ರಾಯಭಾರಿ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಭದ್ರತೆ ಮತ್ತು ಸುರಕ್ಷತೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ನಾವು ಈಗ ಎಲ್ಲಾ ವಿದೇಶಿ ಸಂಸ್ಥೆಗಳಿಗೆ ಭದ್ರತೆ ಒದಗಿಸುತ್ತೇವೆ. ನಾವು ಅಫ್ಘಾನಿಸ್ತಾನದ ಒಳಗೆ ಅಥವಾ ಹೊರಗೆ ಯಾವುದೇ ಶತ್ರುಗಳನ್ನು ಹುಡುಕುವುದಿಲ್ಲ," ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದರು. ಇದರ ಜೊತೆಗೆ ತಾಲಿಬಾನ್ ನೆಲದಲ್ಲಿದ್ದುಕೊಂಡು ಯಾವುದೇ ದೇಶಗಳ ವಿರುದ್ಧ ಸಮರ ಸಾರುವುದಕ್ಕೆ ಅಥವಾ ಕೆಡಕು ಮಾಡುವುದಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಅಂಥ ಚಟುವಟಿಕೆಗಳಿಗೆ ಯಾವುದೇ ರೀತಿ ಅವಕಾಶ ನೀಡುವುದಿಲ್ಲ. ಆಂತರಿಕವಾಗಿ ಸಮಾಜಮುಖಿ ಸರ್ಕಾರ ರಚನೆ ಮತ್ತು ಆಡಳಿತ ನೀಡುವುದೇ ತಾಲಿಬಾನ್ ಮುಂದಿನ ಗುರಿ ಎಂದು ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದರು.