ತಾಲಿಬಾನಿಗಳಿಂದ ಅಫ್ಘಾನ್ ಮಾಜಿ ಉಪಾಧ್ಯಕ್ಷನ ಸಹೋದರನ ಹತ್ಯೆ
ಕಾಬೂಲ್, ಸೆಪ್ಟೆಂಬರ್ 10; ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಸಹೋದರ ರೋಹುಲ್ಲಾ ಸಲೇಹ್ ಹತ್ಯೆಯಾಗಿದೆ. ತಾಲಿಬಾನಿ ಪಡೆಗಳು ಪಂಜ್ಶಿರ್ನಲ್ಲಿ ನಡೆದ ಘರ್ಷಣೆ ಬಳಿಕ ರೋಹುಲ್ಲಾ ಸಲೇಹ್ ಹತ್ಯೆ ಮಾಡಿವೆ.
ಗುರುವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಚಿತ್ರ ಹಿಂಸೆ ನೀಡಿ ತಾಲಿಬಾನಿಗಳು ಅಮರುಲ್ಲಾ ಸಲೇಹ್ ಸಹೋದರ ರೋಹುಲ್ಲಾ ಸಲೇಹ್ ಹತ್ಯೆ ಮಾಡಿವೆ. ರೋಹುಲ್ಲಾ ಸಲೇಹ್ ಹತ್ಯೆ ಬಗ್ಗೆ ಅವರ ಸೋದರಳಿಯ ಖಚಿತಪಡಿಸಿದ್ದಾರೆ.
ತಾಲಿಬಾನ್ ಜೊತೆ ಮಾತುಕತೆ ನಡೆಸಲೇಬೇಕಾದ ಅಗತ್ಯವಿದೆ; ಗುಟೆರಸ್
ಶುಕ್ರವಾರ ರಾಯಿಟರ್ಸ್ ಸುದ್ದಿ ಸಂಸ್ಥೆ ರೋಹುಲ್ಲಾ ಸಲೇಹ್ ಹತ್ಯೆಯಾಗಿದೆ ಎಂದು ವರದಿ ಮಾಡಿದೆ. ಗುರುವಾರ ತಾಲಿಬಾನಿ ಪಡೆಗಳು ಅಮರುಲ್ಲಾ ಸಲೇಹ್ ಸಹೋದರ ರೋಹುಲ್ಲಾ ಸಲೇಹ್ ಗುರುತಿಸಿದ್ದವು. ಬಳಿಕ ಅವರನ್ನು ಸೆರೆ ಹಿಡಿದು, ಚಿತ್ರಹಿಂಸೆ ನೀಡಿ ಗಲ್ಲಿಗೇರಿಸಿದ್ದಾರೆ.
ನಾನ್ಯಾಕೆ ದೇಶ ಬಿಟ್ಟೆ?; ತಾಲಿಬಾನ್ ಸರ್ಕಾರ ರಚನೆ ಬೆನ್ನಲ್ಲೇ ಅಶ್ರಫ್ ಘನಿ ಸ್ಪಷ್ಟನೆ
ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಉಪಾಧ್ಯಕ್ಷರಾಗಿದ್ದ ಅಮರುಲ್ಲಾ ಸಲೇಹ್ ಪರಾರಿಯಾಗಿದ್ದರು. ಆದರೆ ಅವರ ಸಹೋದರ ರೋಹುಲ್ಲಾ ಸಲೇಹ್ ದೇಶದಲ್ಲೇ ಉಳಿದಿದ್ದರು. ಈಗ ತಾಲಿಬಾನಿಗಳು ಅವರನ್ನು ಗುರುತಿಸಿ ಹತ್ಯೆ ಮಾಡಿದ್ದಾರೆ.
ಭಾರತದಲ್ಲಿ ಕಳವಳ ಸೃಷ್ಟಿಸಿರುವುದು ಏಕೆ ಆ ತಾಲಿಬಾನ್ ಸರ್ಕಾರ!?
ತಜಕಿಸ್ತಾನದಲ್ಲಿರುವ ಅಫ್ಘಾನಿಸ್ತಾನ ಉಚ್ಛಾಟಿತ ರಾಯಭಾರಿ ಅಗ್ಬಾರ್ ಪಂಜ್ಶಿರ್ ಹೋರಾಟದ ನಾಯಕ ಅಹ್ಮದ್ ಶಾ ಮಸೂದ್ ಮತ್ತು ಅಮರುಲ್ಲಾ ಸಲೇಹ್ ಎಲ್ಲೂ ಪರಾರಿಯಾಗಿಲ್ಲ. ಅವರು ದೇಶದಲ್ಲೇ ಇದ್ದಾರೆ. ಪಂಜ್ಶಿರ್ ಹೋರಾಟ ಮುಂದುವರೆದಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಅಮರುಲ್ಲಾ ಸಲೇಹ್ ಅಫ್ಘಾನಿಸ್ತಾನದ ಒಳಗೆ ಇದ್ದಾರೆ. ಅವರು ಪರಾರಿಯಾಗಿದ್ದಾರೆ ಎಂಬ ಸುದ್ದಿಗಳು ಸುಳ್ಳು. ನಾನು ಅವರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಅಗ್ಬಾರ್ ಹೇಳಿದ್ದು ಕುತೂಹಲಕ್ಕೆ ಕಾರಣವಾಗಿದೆ.
ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡರೂ ಪಂಜ್ಶಿರ್ನಲ್ಲಿ ಹೋರಾಟ ಮುಂದುವರೆದಿತ್ತು. ಈ ವಾರ ಪಂಚ್ಶಿರ್ ಸಂಪೂರ್ಣ ನಮ್ಮ ವಶವಾಗಿದೆ ಎಂದು ತಾಲಿಬಾನಿಗಳು ಹೇಳುತ್ತಿದ್ದಾರೆ. ಪಂಜ್ಶಿರ್ ವಶಪಡಿಸಿಕೊಳ್ಳಲು ನಡೆದ ಹೋರಾಟದಲ್ಲಿ ಸಾವಿರಾರು ತಾಲಿಬಾನಿಗಳ ಹತ್ಯೆ ನಡೆದಿದೆ.
ಪಂಚ್ಶಿರ್ ಪ್ರಾಂತ್ಯ ಅಫ್ಗಾನಿಸ್ತಾನದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಪಡೆಯ ನಿಯಂತ್ರಣದಲ್ಲಿತ್ತು. ಇಲ್ಲಿ ತಾಲಿಬಾನಿ ಉಗ್ರರ ಜೊತೆ ನಡೆಯತ್ತಿದ್ದ ಕಾಳಗದ ರೂಪುರೇಷೆಯನ್ನು ರೋಹುಲ್ಲಾ ಸಲೇಹ್ ರೂಪಿಸುತ್ತಿದ್ದ ಎಂಬ ಮಾಹಿತಿ ಇತ್ತು.
ಹಲವು ದಿನಗಳ ಕಾಲ ತಾಲಿಬಾನಿಗಳು ಪಂಚ್ಶಿರ್ ವಶಕ್ಕೆ ಪಡೆಯಲು ಪ್ರಯತ್ನ ನಡೆಸಿದ್ದರು. ಈಗ ಪಂಚ್ಶಿರ್ ತಾಲಿಬಾನಿಗಳ ವಶವಾಗಿದ್ದು, ಪ್ರಾಂತ್ಯದ ಗೌರ್ನರ್ ಕಚೇರಿಯ ಕಟ್ಟಡದ ಮೇಲೆ ತಾಲಿಬಾನಿಗಳು ನಿಂತಿರುವ ಚಿತ್ರಗಳು ವೈರಲ್ ಆಗಿವೆ.
ಈಗಾಗಲೇ ಹೊಸ ಸರ್ಕಾರ ರಚನೆ ಬಗ್ಗೆ ತಾಲಿಬಾನಿಗಳು ಘೋಷಣೆ ಮಾಡಿದ್ದಾರೆ. ಮುಲ್ಲಾ ಮೊಹಮ್ಮದ್ ಹಸನ್ ಅಕುಂದ್ ಹೊಸ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. 1990ರಲ್ಲಿ ತಾಲಿಬಾನ್ ಸರ್ಕಾರವಿದ್ದಾಗ ಪ್ರಾಂತ್ಯವೊಂದರ ಗೌರ್ನರ್ ಆಗಿದ್ದ ಅಕುಂದ್ ವಿದೇಶಾಂಗ ಖಾತೆಯ ಉಪ ಸಚಿವರಾಗಿಯೂ ಕೆಲಸ ಮಾಡಿದ್ದರು.
ತಾಲಿಬಾನ್ ಸಂಘಟನೆಯಲ್ಲಿ ಸಕ್ರಿಯರಾಗಿರುವ ಹಲವು ನಾಯಕರಿಗೆ ವಿವಿಧ ಹುದ್ದೆಗಳನ್ನು ನೀಡಲಾಗಿದೆ. ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಮತ್ತು ಅಬ್ದುಲ್ ಸಲಾಂ ಹಫಿ ಹೊಸ ಸರ್ಕಾರದ ಉಪ ನಾಯಕರಾಗಿರುತ್ತಾರೆ. ಮುಲ್ಲಾ ಉಮರ್ ಪುತ್ರ ಮುಲ್ಲಾ ಯಾಕೂಬ್ ರಕ್ಷಣಾ ಸಚಿವರಾಗಲಿದ್ದಾರೆ.
ಕುಖ್ಯಾತ ಭಯೋತ್ಪಾದಕ ಹಖ್ಖಾನಿ ಗುಂಪಿನ ನಾಯಕ ಸಿರಾಜುದ್ದೀನ್ ಹಖ್ಖಾನಿ ಗೃಹ ಸಚಿವರಾಗಲಿದ್ದಾರೆ. ಹೊಸ ಸರ್ಕಾರದ ಭಾಗವಾಗಿರುವ ಅನೇಕ ಉಗ್ರರು ಅಮೆರಿಕದ ಮೋಸ್ಟ್ ವಾಟೆಂಡ್ ಪಟ್ಟಿಯಲ್ಲಿದ್ದರು.
ತಾಲಿಬಾನಿಗಳು ಪಂಚ್ಶಿರ್ ಪ್ರಾಂತ್ಯ ವಶಕ್ಕೆ ಪಡೆದಿಲ್ಲ. ಪ್ರಾಂತ್ಯ ಇನ್ನೂ ನಮ್ಮ ವಶದಲ್ಲಿಯೇ ಇದೆ ಎಂದು ಅಫ್ಗಾನಿಸ್ತಾನದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಹೇಳಿದೆ. ತಾಲಿಬಾನ್ ಮತ್ತು ಅದರ ಮಿತ್ರರ ಜೊತೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಘೋಷಣೆ ಮಾಡಿದೆ.
ಈ ನಡುವೆ ತಾಲಿಬಾನಿಗಳ ಗುಂಪಿನಲ್ಲಿಯೇ ಅಸಮಾಧಾನವಿದೆ. ಸಿರಾಜುದ್ದೀನ್ ಹಖ್ಖಾನಿ ಮತ್ತು ಅಬ್ದುಲ್ ಘನಿ ಬರಾದಾರ್ ಗುಂಪಿನ ನಡುವೆ ಕಾಳಗ ನಡೆದಿದೆ ಎಂದು ವರದಿಯಾಗಿತ್ತು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಫೈಜ್ ಕಾಬೂಲ್ಗೆ ತೆರಳಿದ್ದರು.