ಆತ್ಮಾಹುತಿ ದಾಳಿಕೋರರ ಕುಟುಂಬಕ್ಕೆ ನಿವೇಶನದ ಜೊತೆ ನಗದು ಬಹುಮಾನ!
ಕಾಬೂಲ್, ಅಕ್ಟೋಬರ್ 20: ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬರ್ಗಳಿಗೆ ಪ್ರಚೋದನೆ ನೀಡುವಂತಾ ಹೊಸ ಭರವಸೆಯನ್ನು ತಾಲಿಬಾನ್ ಸರ್ಕಾರವು ಜಾರಿಗೊಳಿಸಲು ಹೊರಟಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಅಫ್ಘಾನಿಸ್ತಾನದ ಯೋಧರ ಮೇಲೆ ದಾಳಿ ನಡೆಸುವ ಆತ್ಮಾಹುತಿ ಬಾಂಬರ್ ಕುಟುಂಬಕ್ಕೆ ಭೂಮಿ ಮತ್ತು ನಗದು ಬಹುಮಾನ ನೀಡುವುದಾಗಿ ತಾಲಿಬಾನ್ ಭರವಸೆ ನೀಡಿದೆ. ಅಲ್ಲದೇ ಆತ್ಮಾಹುತಿ ಬಾಂಬರ್ಗಳನ್ನು ತಾಲಿಬಾನ್ ಸರ್ಕಾರ ಹುತಾತ್ಮರು ಎಂದು ಕರೆದಿದೆ.
ತಾಲಿಬಾನ್ನ ಹಂಗಾಮಿ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ, ಕಾಬೂಲ್ ಹೋಟೆಲ್ನಲ್ಲಿ ಒಟ್ಟುಗೂಡಿದ ಬಾಂಬರ್ಗಳ ಕುಟುಂಬ ಸದಸ್ಯರಿಗೆ ಬಹುಮಾನವನ್ನು ನೀಡಿದರು ಎಂದು ಆಂತರಿಕ ಸಚಿವಾಲಯದ ವಕ್ತಾರ ಸಯೀದ್ ಖೋಸ್ಟಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸೋಮನಾಥ ವಿಗ್ರಹ ಧ್ವಂಸಗೊಳಿಸಿದ ತಾಲಿಬಾನ್
ಸೋಮವಾರ ಸಂಜೆ ಸಭೆಯನ್ನುದ್ದೇಶಿಸಿ ಮಾತನಾಡಿದ ಹಕ್ಕಾನಿ, ಆತ್ಮಹತ್ಯಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಉಲ್ಲೇಖಿಸಿ, ಹುತಾತ್ಮರು ಮತ್ತು ಫೆಡಾಯೀನ್ರ ತ್ಯಾಗವನ್ನು ಶ್ಲಾಘಿಸಿದರು ಎಂದು ಖೋಸ್ಟಿ ಟ್ವೀಟ್ ಮಾಡಿದ್ದಾರೆ. ಈ ಎಲ್ಲ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಬೆಂಬಲವನ್ನು ಪಡೆಯುವ ತಾಲಿಬಾನ್ ಸರ್ಕಾರದ ಪ್ರಯತ್ನಕ್ಕೆ ವಿರುದ್ಧವಾಗಿದೆ.
"ಆತ್ಮಾಹುತಿ ದಾಳಿಕೋರರನ್ನೇ ದೇಶದ ನಾಯಕರು"
ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿಕೋರರನ್ನೇ "ಇಸ್ಲಾಂ ಮತ್ತು ದೇಶದ ಹಿರೋಗಳು" ಎಂದು ಹಕ್ಕಾನಿ ಕರೆದಿರುವ ಬಗ್ಗೆ ವಕ್ತಾರರು ತಿಳಿಸಿದ್ದಾರೆ. ಸೋಮವಾರ ನಡೆದ ಸಭೆಯ ನಂತರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಂತರದಲ್ಲಿ ಹುತಾತ್ಮರ ಕುಟುಂಬಕ್ಕೆ 10,000 ಅಫ್ಘಾನಿ (112 ಯುಎಸ್ ಡಾಲರ್) ನಗದು ಬಹುಮಾನದ ಜೊತೆಗೆ ಒಂದು ನಿವೇಶನ ಭೂಮಿಯನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ತುಂಬಿದ ಸಭಾಂಗಣದಲ್ಲಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ಅಪ್ಪಿಕೊಂಡು ಸಂತೈಸುತ್ತಿರುವ ಫೋಟೋಗಳನ್ನು ಆಂತರಿಕ ಸಚಿವಾಲಯದ ವಕ್ತಾರ ಖೋಸ್ತಿ ಟ್ವೀಟ್ ಮಾಡಿದ್ದಾರೆ.
ಆರ್ಥಿಕ ಬಿಕ್ಕಟ್ಟಿನಿಂದ ಬಡತನದಲ್ಲಿ ಜನ:
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಪಾತ್ರವನ್ನು ಔಪಚಾರಿಕವಾಗಿ ಗುರುತಿಸುವಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮನಸ್ಸು ಮಾಡದ ಬೆನ್ನಲ್ಲೇ ಈ ಘಟನೆ ನಡೆದಿದೆ. ವಿದೇಶಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ತಾಲಿಬಾನ್ ಸಭೆಗಳು ಬಡ ಆಫ್ಘನ್ನರಿಗೆ ನೆರವು ಪಡೆಯುವುದಕ್ಕೆ ಹೆಚ್ಚಿನ ಲಕ್ಷ್ಯವನ್ನು ವಹಿಸಿದೆ. ವಿಶ್ವಸಂಸ್ಥೆ ಮುನ್ಸೂಚಿಸಿದಂತೆ ವಾಸ್ತವಿಕವಾಗಿ ದೇಶದ ಇಡೀ ಜನಸಂಖ್ಯೆಯು ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಬಡತನದಲ್ಲಿ ಸಿಲುಕಿದೆ. ಈ ಹಿನ್ನೆಲೆ ವಿಶೇಷವಾಗಿ ಮಹಿಳೆಯರು ಮತ್ತು ಯುವತಿಯನ್ನು ಗೌರವಿಸುವುದಕ್ಕೆ ಸಂಬಂಧಿಸಿದಂತೆ ಕೆಲವು ಷರತ್ತುಗಳೊಂದಿಗೆ ಮಾನ್ಯತೆಗಾಗಿ ತಾಲಿಬಾನ್ ಸಲ್ಲಿಸಿದ ಕೋರಿಕೆಯನ್ನು ಅಂತಾರಾಷ್ಟ್ರೀಯ ಸಮುದಾಯ ಸ್ವಾಗತಿಸಿದೆ.
ಅಫ್ಘಾನ್ ಸರ್ಕಾರದಲ್ಲಿ ಸಂಘರ್ಷದ ಸಂಕೇತ:
ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿಕೋರರಿಗೆ ಬಹುಮಾನ ಘೋಷಿಸಿರುವ ನಿರ್ಧಾರವು ತಾಲಿಬಾನ್ ಸರ್ಕಾರದ ಸಂಘರ್ಷದ ಸಂಕೇತವಾಗಿದೆ. ಇಸ್ಲಾಮಿಕ್ ಸ್ಟೇಟ್ಸ್ ಆತ್ಮಾಹುತಿ ಬಾಂಬ್ ದಾಳಿಗಳನ್ನು ಖಂಡಿಸುತ್ತಿರುವ ಅವರು ತಮ್ಮನ್ನು ಜವಾಬ್ದಾರಿಯುತ ಆಡಳಿತಗಾರರು ಎನಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಭದ್ರತೆ ಒದಗಿಸುವ ಭರವಸೆಯನ್ನು ನೀಡುತ್ತಿದ್ದಾರೆ. ಆದರೆ ಇನ್ನೊಂದು ದಿಕ್ಕಿನಲ್ಲಿ ತಮ್ಮ ಅನುಯಾಯಿಗಳ ವಿಚಾರದಲ್ಲಿ ಆತ್ಮಾಹುತಿ ದಾಳಿಕೋರರನ್ನು ಹೊಗಳುವುದರ ಜೊತೆಗೆ ಬಹುಮಾನ ಘೋಷಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಯುಎಸ್ ಜೊತೆಗೆ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ:
ಯುನೈಟೆಡ್ ಸ್ಟೇಟ್ಸ್ ಜೊತೆಗೆ ಅಫ್ಘಾನಿಸ್ತಾನವು ಅಂತರ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಅಂತಾರಾಷ್ಟ್ರೀಯ ಮಂಜೂರಾತಿ ಶಿಷ್ಟಾಚಾರಗಳಿಗೆ ಅನುಗುಣವಾಗಿ ಅಫ್ಘಾನಿಸ್ತಾನದ ಶತಕೋಟಿ ಡಾಲರ್ ನಷ್ಟು ಸ್ವತ್ತುಗಳು ಯುಎಸ್ ಖಾತೆಯಲ್ಲಿ ಸ್ಥಗಿತಗೊಳಿಸಲಾಗಿದೆ.
ಇಸ್ಲಾಮಿಕ್ ಸ್ಟೇಟ್ಸ್ ಬೆದರಿಕೆ:
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರಕ್ಕೆ ಇಸ್ಲಾಮಿಕ್ ಸ್ಟೇಟ್ಸ್ ಬೆದರಿಕೆಯೊಡ್ಡುತ್ತಿದ್ದು, ಅಂತಾರಾಷ್ಟ್ರೀಯ ಬೆಂಬಲ ಪಡೆಯುವುದರ ಜೊತೆಗೆ ತಮ್ಮ ಅಧಿಕಾರವನ್ನು ಕಳೆದುಕೊಳ್ಳುವುದಕ್ಕೆ ತಾಲಿಬಾನ್ ಸಿದ್ಧವಿಲ್ಲ. ಈ ಹಿನ್ನೆಲೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಏಕೆಂದರೆ ಈ ಹಿಂದಿನ 20 ವರ್ಷಗಳಲ್ಲಿ ಅಫ್ಘಾನಿಸ್ತಾನ ಸರ್ಕಾರ ಮತ್ತು ಯುಎಸ್ ಸೇನಾಪಡೆಗಳ ವಿರುದ್ಧ ತಾಲಿಬಾನ್ ಇದೇ ರೀತಿ ಆತ್ಮಾಹುತಿ ಬಾಂಬರ್ ಮತ್ತು ರಸ್ತೆ ಬದಿ ಸ್ಫೋಟಗಳ ತಂತ್ರವನ್ನು ಬಳಸಿಕೊಂಡಿತ್ತು.