ನೂತನ ಅಫ್ಘಾನ್ ಸರ್ಕಾರದ ನೇತೃತ್ವ ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರದಾರ್ಗೆ?
ಕಾಬೂಲ್, ಸೆಪ್ಟೆಂಬರ್ 03: ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಅಫ್ಘಾನಿಸ್ತಾನದ ಹೊಸ ಸರ್ಕಾರ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಇಸ್ಲಾಮಿಸ್ಟ್ ಗುಂಪು, "ಅಫ್ಘಾನ್ ನೂತನ ಸರ್ಕಾರದ ನೇತೃತ್ವವನ್ನು ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ವಹಿಸಲಿದ್ದಾರೆ. ಈ ಬಗ್ಗೆ ಶೀಘ್ರವೇ ಘೋಷಣೆ ಮಾಡಲಾಗುತ್ತದೆ," ಎಂದು ಶುಕ್ರವಾರ ತಿಳಿಸಿದೆ.
ಮುಲ್ಲಾ ಅಬ್ದುಲ್ ಘನಿ ಬರದಾರ್ ತಾಲಿಬಾನ್ ರಾಜಕೀಯ ಕಚೇರಿಯ ಮುಖಂಡರಾಗಿದ್ದು, ಇವರೊಂದಿಗೆ ಸರ್ಕಾರ ಮುನ್ನಡೆಸುವಲ್ಲಿ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಓಮರ್ರ ಪುತ್ರ ಮೊಹಮಮ್ದ್ ಯಾಕೂಬ್ ಹಾಗೂ ಸರ್ಕಾರದ ಉನ್ನತ ಅಧಿಕಾರಿ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಜಾಯ್ ಕೂಡಾ ಜೊತೆಯಾಗಲಿದ್ದಾರೆ ಎಂದು ವರದಿಗಳು ಹೇಳಿದೆ.
'ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ' ಎಂದ ತಾಲಿಬಾನ್
"ಎಲ್ಲಾ ಹಿರಿಯ ನಾಯಕರುಗಳು ಕಾಬೂಲ್ಗೆ ಬಂದು ತಲುಪಿದ್ದಾರೆ. ಹೊಸ ಸರ್ಕಾರದ ನೂತನ ಅಧ್ಯಕ್ಷರು ಯಾರೂ ಎಂಬುವುದನ್ನು ಘೋಷಣೆ ಮಾಡುವ ಎಲ್ಲಾ ಸಿದ್ದತೆಗಳು ಕಾಬೂಲ್ನಲ್ಲಿ ನಡೆಯುತ್ತಿದೆ," ಎಂದು ತಾಲಿಬಾನ್ನ ಹಿರಿಯ ನಾಯಕರುಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ತಾಲಿಬಾನ್ ಆಗಸ್ಟ್ ತಿಂಗಳಿನಲ್ಲಿ ಕಾಬೂಲ್ ಅನ್ನು ತನ್ನ ವಶಕ್ಕೆ ಪಡೆಯುವ ಮೂಲಕ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನದ ಹಲವಾರು ಪ್ರಮುಖ ಪ್ರದೇಶವನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಂಡಿದೆ. ಇನ್ನು ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದ ಬೆನ್ನಲ್ಲೇ ಹಲವಾರು ರಾಷ್ಟ್ರಗಳು ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ವಾಪಾಸ್ ಕರೆಸಿಕೊಳ್ಳುವ ಕಾರ್ಯ ನಡೆಸಿದೆ. ಈ ಎಲ್ಲಾ ಕಾರ್ಯಗಳ ಬೆನ್ನಲ್ಲೇ ಈಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಸರ್ಕಾರವನ್ನು ರಚನೆ ಮಾಡಲು ಸಿದ್ದತೆ ನಡೆಸಿದೆ.
ಇನ್ನು ಈ ನೂತನ ಸರ್ಕಾರವು ತನ್ನ ದೇಶವನ್ನು ಈ ಆರ್ಥಿಕ ಹಣದುಬ್ಬರದ ಪರಿಸ್ಥಿತಿಯಲ್ಲಿ ಹೇಗೆ ಮುನ್ನಡೆಸಲಿದೆ ಎಂಬುವುದು ಈಗ ತಾಲಿಬಾನ್ಗೆ ಸವಾಲು ಕೂಡಾ ಹೌದು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿಗೂ ಮುನ್ನವೇ ಭಾರೀ ಆರ್ಥಿಕ ವಿಪತ್ತು ಕಾಣಿಸಿಕೊಂಡಿತ್ತು. ಈ ನಡುವೆ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡಿದೆ. ಈಗ ಅಫ್ಘಾನಿಸ್ತಾನದ ಜನರು ತಮ್ಮ ಕುಟುಂಬಕ್ಕೆ ಒಂದು ಹೊತ್ತಿನ ಆಹಾರವನ್ನು ನೀಡಲು ಕೂಡಾ ಕಷ್ಟ ಪಡುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಗೆಯೇ ಅಫ್ಘಾನಿಸ್ತಾನದಲ್ಲಿ ಬರ ಮತ್ತು ಸಂಘರ್ಷದ ವಿನಾಶದಿಂದ ಅಂದಾಜು 2,40,000 ಅಫ್ಘನ್ನರ ಜೀವವನ್ನು ತೆಗೆದುಕೊಂಡಿದೆ.
ಚೀನಾ ನಮ್ಮ ಅತಿ ಮುಖ್ಯ ಪಾಲುದಾರ ಎಂದು ಹೇಳಿಕೊಂಡ ತಾಲಿಬಾನ್
ಅಫ್ಘಾನಿಸ್ತಾನದಲ್ಲಿ ಒಂದು ಕಡೆ ಬರಗಾಲ ಮತ್ತೊಂದು ಕಡೆ ಯುದ್ಧ ಸನ್ನಿವೇಶವಿದೆ. ಅಫ್ಘಾನಿಸ್ತಾನಕ್ಕೆ ಹಣದ ಅವಶ್ಯಕತೆಯಿದೆ. ಆದರೆ ತಾಲಿಬಾನ್ಗಳು ಅಫ್ಘಾನ್ ಸೆಂಟ್ರಲ್ ಬ್ಯಾಂಕ್ನಿಂದ ವಿದೇಶದಲ್ಲಿ ಹೊಂದಿರುವ ಸುಮಾರು 10 ಬಿಲಿಯನ್ ಡಾಲರ್ ಸ್ವತ್ತುಗಳನ್ನು ತ್ವರಿತವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಅಫ್ಘಾನಿಸ್ತಾನದಲ್ಲಿ ವಿಶ್ವ ಆಹಾರ ಕಾರ್ಯಕ್ರಮದ ನಿರ್ದೇಶಕರು ಮೇರಿ ಎಲನ್ ಮೆಕ್ಗಾರ್ಟಿ, "ಆಗಸ್ಟ್ 15 ರಿಂದ ನಾವು ಈ ಬಿಕ್ಕಟ್ಟು ಇನ್ನಷ್ಟು ಹದಗೆಡುತ್ತಿರುವುದನ್ನು ಕಂಡಿದ್ದೇವೆ. ಅಫ್ಘಾನಿಸ್ತಾನದಲ್ಲಿ ತೀವ್ರ ಆರ್ಥಿಕ ಕುಸಿತವು ಉಂಟಾಗಿದೆ," ಎಂದು ಹೇಳಿದ್ದಾರೆ.
ಇನ್ನು ನೂತನ ಸರ್ಕಾರ ಸ್ಥಾಪನೆಗೆ ಸಿದ್ದತೆ ನಡೆಸುತ್ತಿರುವ ತಾಲಿಬಾನ್ಗೆ ಭಾರತ ಸಂದೇಶವನ್ನು ನೀಡಿದೆ. ''ಅಫ್ಘಾನಿಸ್ತಾನವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿಯೂ ಬಳಸಿಕೊಳ್ಳಬಾರದು,'' ಎಂಬ ಮಾತನ್ನು ಭಾರತವು ಪುನರುಚ್ಚರಿಸಿದೆ. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ತನ್ನ ಅಧಿಕೃತ ಸರ್ಕಾರವನ್ನು ನಡೆಸಲು ಎಲ್ಲಾ ಸಿದ್ದತೆಗಳನ್ನು ಮಾಡುತ್ತಿರುವ ಬೆನ್ನಲ್ಲೇ ಈ ಸಂದೇಶವನ್ನು ಭಾರತ ನೀಡಿದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ, ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ವಿವರಗಳು ಭಾರತಕ್ಕೆ ತಿಳಿದಿಲ್ಲ ಎಂದಿದ್ದಾರೆ. ''ಅಫ್ಘಾನಿಸ್ತಾನದಲ್ಲಿ ಯಾವ ರೀತಿ ಸರ್ಕಾರ ರಚನೆಯಾಗುತ್ತದೆ ಎಂಬ ಕುರಿತು ನಮಗೆ ಯಾವುದೇ ವಿವರ ತಿಳಿದಿಲ್ಲ. ಅದನ್ನು ಊಹಿಸಲು ಆಗುವುದಿಲ್ಲ'' ಎಂದು ಹೇಳಿದ್ದಾರೆ.
(ಒನ್ ಇಂಡಿಯಾ ಸುದ್ದಿ)