ಸ್ವಿಸ್ ಬ್ಯಾಂಕ್ ಗೆ ಮಲ್ಯ 198 ಕೋಟಿ ಸಾಲ ಬಾಕಿ, ಬಂಗಲೆ ಖಾಲಿಗೆ ಮನವಿ
ಸಾಲಗಾರ ವಿಜಯ್ ಮಲ್ಯರನ್ನು ಲಂಡನ್ ನಲ್ಲಿರುವ ಬಂಗಲೆ ಖಾಲಿ ಮಾಡಿಸುವಂತೆ ಸ್ವಿಸ್ ಬ್ಯಾಂಕ್ ಯುಬಿಎಸ್ ಎಜಿ ಕೇಳಿಕೊಂಡಿದೆ. ಅಲ್ಲಿ ಮಲ್ಯ, ಅವರ ತಾಯಿ ಹಾಗೂ ಮಗ ಇದ್ದು, ಮಿಲಿಯನ್ ಗಟ್ಟಲೆ ಪೌಂಡ್ ಬೆಲೆ ಬಾಳುವ, ಲಂಡನ್ ನ ರೆಜೆಂಟ್ ಪಾರ್ಕ್ ಬಳಿ ಇರುವ ಬಂಗಲೆ ಖಾಲಿ ಮಾಡಿಸಬೇಕು ಎಂದು ಮನವಿ ಮಾಡಿದೆ.
ಆಸ್ತಿಯ ಸ್ವಾಧೀನವನ್ನು ಕೊಡಿಸಬೇಕು ಎಂದು ದೇಶದ ಮೂರನೇ ಅತ್ಯುನ್ನತ ಕೋರ್ಟ್, ಯು.ಕೆ. ಹೈ ಕೋರ್ಟ್ ನಲ್ಲಿ ಮನವಿ ಮಾಡಲಾಗಿದೆ. ಅಡಮಾನ ಇಟ್ಟಿರುವ ಅವಧಿ ಮುಕ್ತಾಯ ಆಗಿದ್ದು, ವಿಜಯ್ ಮಲ್ಯ ಮರುಪಾವತಿ ಮಾಡಿಲ್ಲ ಎಂದು ಹೇಳಿದೆ.
ಮಲ್ಯ ಸಾಲದ ಉರುಳು ಈಗ ಬ್ಯಾಂಕ್ ಅಧಿಕಾರಿಗಳ ಕೊರಳಿಗೂ ಬಿತ್ತು!
ರೋಸ್ ಕ್ಯಾಪಿಟಲ್ ವೆಂಚರ್ಸ್, ವಿಜಯ್ ಮಲ್ಯ, ಅವರ ತಾಯಿ ಲಲಿತಾ ಮಲ್ಯ ಹಾಗೂ ಸಿದ್ಧಾರ್ಥ ಮಲ್ಯ ವಿರುದ್ಧ ಹೈಕೋರ್ಟ್ ನ ವಾಣಿಜ್ಯ ಹಾಗೂ ಆಸ್ತಿ ಕೋರ್ಟ್ ನಲ್ಲಿ ಬ್ಯಾಂಕ್ ದಾವೆ ಹೂಡಿದೆ. ಈ ಬಗೆಗಿನ ವಿಚಾರಣೆ ಅಕ್ಟೋಬರ್ ಇಪ್ಪತ್ನಾಲ್ಕರಂದು ಕೋರ್ಟ್ ಮುಂದೆ ಬರಲಿದೆ.
195 ಕೋಟಿ ರುಪಾಯಿ ಸಾಲ ಪಡೆಯಲಾಗಿತ್ತು
ಐದು ವರ್ಷಗಳ ಅವಧಿಗೆ 2012ರ ಮಾರ್ಚ್ ನಲ್ಲಿ ಬ್ಯಾಂಕ್ ನಿಂದ 20.4 ಮಿಲಿಯನ್ ಪೌಂಡ್ (195 ಕೋಟಿ) ಸಾಲ ಪಡೆಯಲಾಗಿತ್ತು. ಮಲ್ಯ, ಅವರ ತಾಯಿ ಹಾಗೂ ಮಗ ಟ್ರಸ್ಟ್ ನ ಫಲಾನುಭವಿಗಳು. ಇಲ್ಲೇ ವಾಸಿಸುತ್ತಾರೆ. ರೋಸ್ ಕ್ಯಾಪಿಟಲ್ ನ ಷೇರುಗಳನ್ನು ಗ್ಲಾಡ್ಕೋ ಹೊಂದಿದ್ದು, ಅದರ ಮಾಲೀಕತ್ವ ಸೈಲೆಟಾ ಟ್ರಸ್ಟ್ ದು. ಅದು ಮಲ್ಯರ ಕುಟುಂಬ ಟ್ರಸ್ಟ್ ಆಗಿದೆ.
ಬಂಗಲೆ ಬಿಟ್ಟು ಹೋಗುತ್ತಿಲ್ಲ ಎಂಬ ಆರೋಪ
ಸಾಲದ ಅವಧಿ ಮುಗಿದು, ಹಣವೂ ಪಾವತಿ ಮಾಡದೆ, ಆ ಬಂಗಲೆ ಬಿಟ್ಟು ಕೂಡ ಹೋಗುತ್ತಿಲ್ಲ ಎಂದು ಬ್ಯಾಂಕ್ ಆರೋಪ ಮಾಡಿದೆ. ಇದು ಭೋಗ್ಯದ ಆಸ್ತಿಯಾಗಿದ್ದು, ಇದನ್ನು ರೋಸ್ ಕ್ಯಾಪಿಟಲ್ ಖರೀದಿಸಿ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ಗೆ ಅಕ್ಟೋಬರ್ 3, 2005ರಲ್ಲಿ 5.4 ಮಿಲಿಯನ್ ಪೌಂಡ್ ಗೆ (52 ಕೋಟಿ) ಇನ್ ಕಾರ್ಪೊರೇಟ್ ಮಾಡಿಸಿತ್ತು. ಹಕ್ಕಿನ ಪ್ರಕಾರ ಈ ಆಸ್ತಿ ಕ್ರೌನ್ ಎಸ್ಟೇಟ್ ಗೆ ಸೇರಿದ್ದು, ಮಾರಾಟ ಪತ್ರದ ಪ್ರಕಾರ ರಾಣಿ ಹೆಸರಿನಲ್ಲಿತ್ತು.
ವಿಜಯ್ ಮಲ್ಯ ಬಂಧನದ ಅವಶ್ಯಕತೆಯಿಲ್ಲ : ಸಿಬಿಐ ಬಿಗ್ ಬ್ಲಂಡರ್
ಸೆಪ್ಟೆಂಬರ್ 1,2017ಕ್ಕೆ 198 ಕೋಟಿ ರುಪಾಯಿ ಬಾಕಿ
ಬಾಕಿ ಇರುವ ಸಾಲದ ಮೊತ್ತವನ್ನು ರೋಸ್ ಕ್ಯಾಪಿಟಲ್ ಪಾವತಿಸಬೇಕು ಎಂದು ಬ್ಯಾಂಕ್ ಕೇಳುತ್ತಿದೆ. ಇನ್ನು ಮುಂದೆ ವಿಜಯ್ ಮಲ್ಯ ಮತ್ತು ಇತರರು ಈ ಆಸ್ತಿಯಲ್ಲಿ ಅಥವಾ ಬಾಕಿ ಭಾಗದಲ್ಲಿ ಪ್ರವೇಶಿಸದಂತೆ ಆದೇಶಿಸಬೇಕು ಎಂದು ಕೋರ್ಟ್ ಗೆ ಮನವಿ ಮಾಡಿದೆ. ಸೆಪ್ಟೆಂಬರ್ 1,2017ಕ್ಕೆ ಅನ್ವಯಿಸುವಂತೆ ಬಾಕಿ ಇರುವ ಮೊತ್ತ 20,718,236 ಪೌಂಡ್ (198 ಕೋಟಿ ರುಪಾಯಿ) ಎಂದು ಬ್ಯಾಂಕ್ ಆರೋಪಿಸಿದೆ.
ಸರಿಯಾಗಿಯೇ ಬಡ್ದಿ ಕಟ್ಟಿಕೊಂಡು ಬರ್ತಿದ್ದಾರೆ
ಮಲ್ಯ ಪರ ವಾದ ಮಂಡಿಸುತ್ತಿರುವ ವಕೀಲರು, ಆಸ್ತಿ ಮೇಲೆ ಬ್ಯಾಂಕ್ ಗೆ ಯಾವುದೇ ಹಕ್ಕಿಲ್ಲ. ರೋಸ್ ಕ್ಯಾಪಿಟಲ್ ಬಡ್ಡಿ ಪಾವತಿಸುತ್ತಿದೆ ಮತ್ತು ಬ್ಯಾಂಕ್ ನಿಂದ ಸಾಲವನ್ನು ಬೇಗ ಪಾವತಿಸಬೇಕು ಅಂತ ಹೇಳುತ್ತಿದ್ದು, ಸರಿಯಾದ ಕಾರಣ ನೀಡುತ್ತಿಲ್ಲ. ಅಡವು ಇಟ್ಟಿರುವ ನಿಯಮ-ನಿಬಂಧನೆಗಳನ್ನು ಬ್ಯಾಂಕ್ ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.