ಭಾರತದ ಮುಸ್ಲಿಂ ಧರ್ಮಗುರುಗಳನ್ನು ಬಂಧಿಸಿದ ಪಾಕಿಸ್ತಾನ
ಭಾರತದಿಂದ ಪಾಕಿಸ್ತಾನಕ್ಕೆ ತೆರಳಿ ನಾಪತ್ತೆಯಾಗಿದ್ದ ಮುಸ್ಲಿಂ ಧರ್ಮಗುರುಗಳಿಬ್ಬರನ್ನು ಅಲ್ಲಿನ ಗುಪ್ತಚರ ಇಲಾಖೆ ಬಂಧಿಸಿದೆ ಎಂದು ತಿಳಿದು ಬಂದಿದೆ.
ನವದೆಹಲಿ, ಮಾರ್ಚ್ 17: ಭಾರತದಿಂದ ಪಾಕಿಸ್ತಾನಕ್ಕೆ ತೆರಳಿ ನಾಪತ್ತೆಯಾಗಿದ್ದ ಮುಸ್ಲಿಂ ಧರ್ಮಗುರುಗಳಿಬ್ಬರನ್ನು ಅಲ್ಲಿನ ಗುಪ್ತಚರ ಇಲಾಖೆ ಬಂಧಿಸಿದೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಇಲಾಖೆಯಿಂದ ನಿರೀಕ್ಷಿಸಲಾಗುತ್ತಿದೆ.
ಪಾಕಿಸ್ತಾನದ ಲಾಹೋರಿನ ವಿಶ್ವವಿಖ್ಯಾತ ದಾತಾ ದರ್ಬಾರಿಗೆ ಬೇಟಿ ನೀಡಿದ್ದ ದೆಹಲಿಯ ನಿಜಾಮುದ್ದೀನ್ ದರ್ಗಾದ ಮುಖ್ಯಗುರು ಆಸಿಫ್ ನಿಜಾಮಿ ಮತ್ತು ನಾಝಿಮ್ ನಿಜಾಮಿ ಕಳೆದ ಬುಧವಾರ (ಮಾರ್ಚ್ 8) ಸಂಜೆಯಿಂದ ನಾಪತ್ತೆಯಾಗಿದ್ದರು. ಇದೀಗ ಇವರು ಗುಪ್ತಚರ ಇಲಾಖೆಯ ಬಂಧನದಲ್ಲಿರುವುದಾಗಿ ತಿಳಿದು ಬಂದಿದೆ.[ಭಾರತದ ಮುಸ್ಲಿಂ ಧರ್ಮಗುರುಗಳು ಪಾಕಿಸ್ತಾನದಲ್ಲಿ ನಾಪತ್ತೆ]
ಬಂಧನದಲ್ಲಿರುವ ಧರ್ಮಗುರುಗಳ ಜತೆ ಸಂಪರ್ಕ ಸಾಧಿಸಲು ಯತ್ನಿಸಲಾಗುತ್ತಿದೆ. ಸದ್ಯದಲ್ಲೇ ಸಂಪರ್ಕಿಸಲಿದ್ದೇವೆ ಎಂದು ವಿದೇಶಾಂಗ ಇಲಾಖೆ ಮೂಲಗಳು ಹೇಳಿವೆ. ಭಾರತ ಧರ್ಮಗುರುಗಳ ಬಂಧನ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಪಾಕಿಸ್ತಾನಕ್ಕೆ ಈ ವಿಚಾರವನ್ನು ಮನವರಿಕೆ ಮಾಡಲಾಗಿದೆ.
ಈಗಾಗಲೇ ಕುಟುಂಬ ಸದಸ್ಯರು ಈ ವಿಚಾರದಲ್ಲಿ ಸಹಾಯ ಮಾಡುವಂತೆ ಸರಕಾರವನ್ನು ಕೇಳಿಕೊಂಡಿದ್ದಾರೆ. ಕೇಂದ್ರ ಸರಕಾರ ಪೂರ್ಣ ಸಹಕಾರ ನೀಡುವ ಭರವಸೆಯನ್ನೂ ನೀಡಿದೆ.
ಮೂಲಗಳ ಪ್ರಕಾರ ಸರಿಯಾದ ಪ್ರಯಾಣ ದಾಖಲೆಗಳಿಲ್ಲದ ಹಿನ್ನಲೆಯಲ್ಲಿ ನಝೀಮ್ ರನ್ನು ಲಾಹೋರ್ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ಇದಾದ ನಂತರ ನಝೀಮ್ ಪ್ರತಿಕ್ರಿಯೆಗೆ ಲಭ್ಯರಾಗಿರಲಿಲ್ಲ. ಇನ್ನು ಕರಾಚಿಗೆ ತೆರಳಿದ ಆಸೀಫ್ ಕರಾಚಿ ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿದ್ದರು.
ನಾಪತ್ತೆಯಾಗುವ ಮೊದಲು ಅಂದರೆ ಮಾರ್ಚ್ 8ರಂದು ಇಬ್ಬರೂ ಧರ್ಮಗುರುಗಳು ಕರಾಚಿಯಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಬೇಕಾಗಿತ್ತು. ಅದಕ್ಕೂ ಮೊದಲ ಇಬ್ಬರೂ ದಾತಾ ದರ್ಬಾರಿಗೆ ಭೇಟಿ ನೀಡಿದ್ದರು. ನಿಜಾಮುದ್ದೀನ್ ದರ್ಗಾ ಹಾಗೂ ದಾತಾ ದರ್ಬಾರಿನ ಧರ್ಮಗುರುಗಳು ಪರಸ್ಪರ ಮಸೀದಿಗಳಿಗೆ ಭೇಟಿ ನೀಡುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ.