ಕತಾರ್ ಐಸಿಬಿಎಫ್ ಸದಸ್ಯರಾಗಿ ಕನ್ನಡಿಗ ಸುಬ್ರಹ್ಮಣ್ಯ ಹೆಬ್ಬಾಗಿಲು
ಕತಾರ್, ಜುಲೈ 20 : ಕತಾರ್ ಇಂಡಿಯನ್ ಕಮ್ಯುನಿಟಿ ಬೆನ್ವೊಲೆಂಟ್ ಫೋರಂ (ಐ.ಸಿ.ಬಿ.ಎಫ್) ಸದಸ್ಯರಾಗಿ, ಕತಾರ್ನಲ್ಲಿ ವಾಸಿಸಿರುವ ಬೈಂದೂರು ಮೂಲದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಆಯ್ಕೆಯಾಗಿದ್ದಾರೆ.
ಬೈಂದೂರು ತಗ್ಗರ್ಸೆಯ ಗುರುದತ್ತ ಶೇರುಗಾರ್ ಹಾಗೂ ಮೂಕಾಂಬು ಎನ್ನುವ ರೈತ ದಂಪತಿಗಳ ಪುತ್ರರಾಗಿರುವ ಇವರದ್ದು ಬಹಮುಖ ವ್ಯಕ್ತಿತ್ವ. ಮಯ್ಯಾಡಿ ಧ.ಮ.ಹಿ. ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ದಾವಣಗೆರೆ ಬಾಪೂಜಿ ಫ್ರೌಢಶಾಲೆಯಲ್ಲಿ ಫ್ರೌಢಶಿಕ್ಷಣ ಬಳಿಕ ಸಿವಿಲ್ ಇಂಜಿನಿಯರಿಂಗ್ ಪದವಿ ಮುಗಿಸಿ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಮೇಲುಸ್ತುವಾರಿ ಅಭಿಯಂತರಾಗಿ ಸೇವೆ ಸಲ್ಲಿಸಿ ಬಳಿಕ ಕತಾರ್ನ ಗಲ್ಪಾರ್ ಆಲ್ ಮಿಸ್ನಾದ್ ಕಂಪೆನಿಯಲ್ಲಿ ಅಭಿಯಂತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ
ಕತಾರ್ ಸೇರಿದಂತೆ ಜಾಗತಿಕ ಮಟ್ಟದ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಇವರು ಕರ್ನಾಟಕ ಸಂಘ ಕತಾರ್ ಉಪಾಧ್ಯಕ್ಷರಾಗಿ ಹಾಗೂ ಖಜಾಂಚಿಯಾಗಿ, ತುಳುಕೂಟ, ಭಾರತೀಯ ಸಾಂಸ್ಕ್ರತಿಕ ಕೇಂದ್ರ, ಕತಾರ್ ಕರ್ನಾಟಕ ಪ್ರೆಂಡ್ಸ್ನ ಸದಸ್ಯರಾಗಿದ್ದಾರೆ.
ನಾಟಕ, ಸಾಂಸ್ಕ್ರತಿಕ ಕಾರ್ಯಕ್ರಮ, ಶೈಕ್ಷಣಿಕ ಹಾಗೂ ಮನೋರಂಜನಾ ಕಾರ್ಯಕ್ರಮದ ಆಯೋಜನೆ ವಿವಿಧ ಸಂಘ ಸಂಸ್ಥೆಗಳ ಸಮನ್ವಯತೆಯೊಂದಿಗೆ ಕಾರ್ಯಕ್ರಮ ಪ್ರಸ್ತುತಿ, ಕತಾರ್ ಚಲನಚಿತ್ರೋತ್ಸವ ಸೇರಿದಂತೆ ವಿವಿಧ ಗಣ್ಯರ ಕಾರ್ಯಕ್ರಮದ ಪ್ರಮುಖ ಉಸ್ತುವಾರಿ ನಡೆಸಿದ್ದಾರೆ.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಇವರ ಸಾಧನೆಗೆ ಸಂದ ಗೌರವವಾಗಿದೆ. ಗ್ರಾಮೀಣ ಭಾಗದಲ್ಲಿ ಜನಿಸಿ ಕತಾರ್ ದೇಶದಲ್ಲಿ ಮಹತ್ವದ ಹುದ್ದೆ ಅಲಂಕರಿಸಿದ ಸುಬ್ರಹ್ಮಣ್ಯ ಹೆಬ್ಬಾಗಿಲು ಬೈಂದೂರಿನವರು ಎನ್ನುವುದು ನಮ್ಮ ಹೆಮ್ಮೆ.