ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದ ಭಾರತ
ಇಸ್ಲಮಾಬಾದ್, ಜನವರಿ.03: ಊರಿಗೆ ಊರೇ ಹೊತ್ತಿ ಉರಿಯುತ್ತಿದ್ದರೆ ಅವನ್ಯಾರೋ ಪಿಟೀಲು ಬಾರಿಸುತ್ತಿದ್ದನಂತೆ. ಪಾಕಿಸ್ತಾನದಲ್ಲಿ ಸರ್ಕಾರವೂ ಕೂಡಾ ಇದೀಗ ಹಾಗೆ ವರ್ತಿಸುತ್ತಿದೆ. ಸಿಖ್ಖರ ಪವಿತ್ರ ಸ್ಥಳದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.
ಕ್ಷುಲ್ಲಕ ಕಾರಣಕ್ಕೆ ನಾಂಕನ್ ಸಾಹೇಬ್ ನಗರದಲ್ಲಿ ಕೆಲವು ಉದ್ರಿಕ್ತರು ಗುಂಪು ಕಟ್ಟಿಕೊಂಡು ದೊಂಬಿ ಎಬ್ಬಿಸುತ್ತಿದ್ದಾರೆ. ಭಾರತೀಯ ಯಾತ್ರಾರ್ಥಿಗಳ ಮೇಲೆ ಕಲ್ಲುತೂರಾಟ ನಡೆಸುತ್ತಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸುವ ಬದಲು ಪಾಕಿಸ್ತಾನ ಸರ್ಕಾರ ಕೈಕಟ್ಟಿ ಕುಳಿತುಕೊಂಡಿದೆಯಾ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಕೆಂಡ ಕಾರಿದೆ.
ಗುರು ನಾನಕ್ ಜನ್ಮಸ್ಥಳದಲ್ಲಿ ಕೆರಳಿದ ಪ್ರತಿಭಟನಾಕಾರರಿಂದ ಕಲ್ಲುತೂರಾಟ
ಪಾಕಿಸ್ತಾನ್ ನಲ್ಲಿರುವ ಗುರುನಾನಕ್ ರ ಜನ್ಮಸ್ಥಳದ ದರ್ಶನಕ್ಕೆ ತೆರಳಿದ ಭಾರತದ ಸಿಖ್ ಯಾತ್ರಾರ್ಥಿಗಳು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಂಜಾಬ್ ಜಿಲ್ಲೆ ಗುರುದ್ವಾರ್ ದ ನಾಂಕನ್ ಸಾಹೇಬ್ ನಗರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಸಿಖ್ ಯಾತ್ರಾರ್ಥಿಗಳ ಮೇಲೆ ಹಲ್ಲೆ ಯತ್ನ
ಪಾಕಿಸ್ತಾನ್ ದಲ್ಲಿರುವ ಸಿಖ್ ಸಮುದಾಯದ ಜನರ ಮೇಲೆ ದಾಂಧಲೆ ಮಾಡಲಾಗುತ್ತಿದೆ. ಉದ್ರಿಕ್ತರ ವಿರುದ್ಧ ಸರ್ಕಾರವು ಕ್ರಮ ತೆಗೆದುಕೊಳ್ಳುವ ಬದಲು ಮನರಂಜನೆಯ ರೀತಿಯಲ್ಲಿ ಕುಳಿತುಕೊಂಡು ನೋಡುತ್ತಿದೆ ಎಂದು ಭಾರತವು ಕಿಡಿ ಕಾರಿದೆ.
ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಭಾರತ
ಪಾಕಿಸ್ತಾನ್ ನ ಗುರುದ್ವಾರಕ್ಕೆ ತೆರಳಿದ ಭಾರತೀಯ ಮೂಲಕ ಸಿಖ್ ಯಾತ್ರಾರ್ಥಿಗಳು ಕೂಡಾ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣವೇ ಪಾಕಿಸ್ತಾನ ಸರ್ಕಾರ ಅವರ ನೆರವಿಗೆ ಬರಬೇಕು. ಸಿಖ್ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಮುಂದಾಗಬೇಕು. ಆತಂಕದಲ್ಲಿರುವ ಜನರಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕು ಎಂದು ಭಾರತ ಸರ್ಕಾರ ಖಡಕ್ ಆಗಿ ಹೇಳಿದೆ.
ಕಲ್ಲುತೂರಾಟದ ಹಿಂದಿನ ಕಾರಣ ಏನು ಗೊತ್ತಾ?
ಜಗ್ಜಿತ್ ಕೌರ್ ಎಂಬ ಸಿಖ್ ಯುವತಿಯನ್ನು ಮೊಹಮ್ಮದ್ ಹಸ್ಸನ್ ಎಂಬ ಯುವಕ ಕಳೆದ ಆಗಸ್ಟ್ ತಿಂಗಳಿನಲ್ಲಿ ಅಪಹರಿಸಿದ್ದು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಲು ಮುಂದಾಗಿದ್ದ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಯುವಕನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆರಳಿರುವ ಮುಸ್ಲಿಮರು ತಮ್ಮ ಧರ್ಮಕ್ಕೆ ಮತಾಂತರಗೊಂಡ ಯುವತಿಯನ್ನು ಹೇಗೆ ವಾಪಸ್ ಕರೆದುಕೊಂಡು ಹೋದರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
|
ಪವಿತ್ರ ಸ್ಥಳದ ಹೆಸರು ಬದಲಿಸುವ ಬೆದರಿಕೆ
ಇದಿಷ್ಟೇ ಅಲ್ಲದೇ, ಗುರು ನಾನಕ್ ರ ಜನ್ಮಸ್ಥಳ ನಾಂಕನ್ ಸಾಹೇಬ್ ನ ಹೆಸರನ್ನು ಗುಲಾಮನ್-ಇ-ಮುಸ್ತಫಾ ಆಗಿ ಬದಲಾಯಿಸಲಾಗುತ್ತದೆ. ಯಾವೊಬ್ಬ ಸಿಖ್ಖರನ್ನು ಇಲ್ಲಿ ಇರುವುದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಲಾಗುತ್ತಿದೆ ಎಂದು ವರದಿಯಾಗಿದೆ.