ಶ್ರೀಲಂಕಾ: ಪ್ರಧಾನಿ ಮನೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಅಧ್ಯಕ್ಷ
ಕೊಲಂಬೊ, ಅಕ್ಟೋಬರ್ 30: ಶ್ರೀಲಂಕಾದಲ್ಲಿ ಉಂಟಾಗಿರುವ ಸಾಂವಿಧಾನಿಕ ಬಿಕ್ಕಟ್ಟು ಇನ್ನಷ್ಟು ಹದಗೆಡುವ ಲಕ್ಷಣಗಳು ಕಾಣಿಸುತ್ತಿವೆ.
ದೇಶದ ಪ್ರಧಾನಿಯ ಅಧಿಕೃತ ನಿವಾಸ 'ಟೆಂಪಲ್ ಟ್ರೀಸ್'ನ ವಿದ್ಯುತ್ ಸಂಪರ್ಕವನ್ನು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಆದೇಶದ ಮೇರೆಗೆ ಕಡಿತಗೊಳಿಸಲಾಗಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಮೈತ್ರಿ ಪಕ್ಷಗಳ ಬಿಕ್ಕಟ್ಟು, ಶ್ರೀಲಂಕಾ ಪ್ರಧಾನಿಯಾಗಿ ಮಹಿಂದ ರಾಜಪಕ್ಸೆ ನೇಮಕ
ಟೆಂಪಲ್ ಟ್ರೀಸ್ ಅನ್ನು ಬಲವಂತವಾಗಿ ವಶಕ್ಕೆ ಪಡೆದುಕೊಳ್ಳಲು ನಡೆಸಿರುವ ಪ್ರಯತ್ನವಿದು ಎನ್ನಲಾಗಿದೆ. ಕಳೆದ ಶುಕ್ರವಾರ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರನ್ನು ಹುದ್ದೆಯಿಂದ ಕಿತ್ತೊಗೆಯಲಾಗಿತ್ತು. ಈಗ ಅವರನ್ನು ಪ್ರಧಾನಿಯ ಅಧಿಕೃತ ನಿವಾಸದಿಂದ ತೆರವುಗೊಳಿಸುವ ಸಲುವಾಗಿ ಸಿರಿಸೇನಾ ಈ ಕ್ರಮ ತೆಗೆದುಕೊಂಡಿದ್ದಾರೆ.
2015ರಲ್ಲಿ ಸಿರಿಸೇನಾ ಮತ್ತು ವಿಕ್ರಮಸಿಂಘೆ ಜತೆಯಾಗಿ ಮೈತ್ರಿ ಮಾಡಿಕೊಂಡು ಮಹಿಂದಾ ರಾಜಪಕ್ಸೆ ಅವರನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲಿಸಿದ್ದರು. ವಿಕ್ರಮಸಿಂಘೆ ಪಕ್ಷಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿರುವ ಸಿರಿಸೇನಾ, ಅವರನ್ನು ಪ್ರಧಾನಿ ಸ್ಥಾನದಿಂದ ಕಿತ್ತೊಗೆದು, ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿದ್ದಾರೆ.
ಆದರೆ, ಯುನೈಟೆಡ್ ನ್ಯಾಷನಲ್ ಪಾರ್ಟಿಯ (ಯುಎನ್ಪಿ) ನಾಯಕರಾಗಿರುವ ವಿಕ್ರಮಸಿಂಘೆ ಅವರ ಜತೆಯಾಗಿ ನಿಂತಿರುವ ಬೆಂಬಲಿಗರು, ಟೆಂಪಲ್ ಟ್ರೀಸ್ ನಿವಾಸಕ್ಕೆ ಜನರೇಟರ್ ತಂದು ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಿದ್ದಾರೆ.
ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು, ಬಹುಮತ ಇಲ್ಲದವರಿಗೆ ಅಧಿಕಾರ!
ಯುಎನ್ಪಿಯ ಅನೇಕ ಸಂಸದರು ಟೆಂಪಲ್ ಟ್ರೀಸ್ನಲ್ಲಿಯೇ ಮೊಕ್ಕಾಂ ಹೂಡಿದ್ದು, ತಮ್ಮ ಪದಚ್ಯುತ ಪ್ರಧಾನಿಯ ರಕ್ಷಣೆಗೆ ನಿಂತಿದ್ದಾರೆ.
ಅಲ್ಲದೆ, ವಿಕ್ರಮಸಿಂಘೆ ಅವರ ಭದ್ರತೆಗೆ ನಿಯೋಜಿಸಲಾಗಿದ್ದ ಎಸ್ಟಿಎಫ್ ಸಿಬ್ಬಂದಿಯ ಕಡಿತಕ್ಕೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಭದ್ರತಾ ಸಿಬ್ಬಂದಿಯ ಕಡಿತದಿಂದ ವಿಕ್ರಮಸಿಂಘೆ ಅವರ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಯುಎನ್ಪಿ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.
ನಮ್ಮ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಯಾವುದೇ ಸರ್ಕಾರಿ ಹುದ್ದೆಯಲ್ಲಿ ಇರದ ಮಾಜಿ ರಕ್ಷಣಾ ಕಾರ್ಯದರ್ಶಿ ಗೊಟಬಯಾ ರಾಜಪಕ್ಸ ಅವರಿಗೆ 70 ಎಸ್ಟಿಎಫ್ ಸಿಬ್ಬಂದಿಯ ರಕ್ಷಣೆ ನೀಡಲಾಗಿತ್ತು ಎಂದು ವಿಕ್ರಮಸಿಂಘೆ ಬೆಂಬಲಿಗರು ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು; ಗುಂಡು ಹಾರಿಸಿ ಮೂವರಿಗೆ ಗಾಯ
ಸಂಸದೀಯ ಬಹುಮತ ಇಲ್ಲದೆಯೇ ಮಹಿಂದಾ ರಾಜಪಕ್ಸೆ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿ ಸಿರಿಸೇನಾ ಆದೇಶ ಹೊರಡಿಸಿರುವುದರ ಬಗ್ಗೆ ನಾಗರಿಕ ಸಮಾಜದ ಸದಸ್ಯರು, ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.