ಲಂಕಾದಲ್ಲಿ ಅಲ್ಪಸಂಖ್ಯಾತರ ಪಕ್ಷಗಳ ನಿರ್ಬಂಧ ಸಾಧ್ಯತೆ
ಕೊಲೊಂಬೋ, ಜನವರಿ 4: ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳ ಬಗ್ಗೆ ವಿಶ್ವದಾದ್ಯಂತ ಭಾರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಶ್ರೀಲಂಕಾದಲ್ಲಿ ಅಲ್ಪಸಂಖ್ಯಾತ ಪಕ್ಷಗಳ ನಿರ್ಬಂಧಕ್ಕೆ ಚಿಂತನೆ ಆರಂಭವಾಗಿದೆ.
ದೇಶದ ರಾಜಕೀಯ ಸುಸ್ಥಿರತೆ ಹಾಗೂ ಅಭಿವೃದ್ಧಿಗಾಗಿ ಅಲ್ಪಸಂಖ್ಯಾತರ ಪಕ್ಷಗಳ ನಿಯಂತ್ರಣಕ್ಕೆ ಸಂವಿಧಾನ ಬದಲಾವಣೆ ಆಗತ್ಯವಿದೆ ಎಂದು ನೂತನ ಅಧ್ಯಕ್ಷ ಗೊತಬಯ ರಾಜಪಕ್ಸೆ ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಮತ್ತೆ ಮಹೀಂದಾ ರಾಜಪಕ್ಸೆ ಅಧಿಕಾರ ಶುರು
ದೇಶದ ಬಹುಸಂಖ್ಯಾತರ ಅಭಿಪ್ರಾಯಗಳಿಗೆ ಮನ್ನಣೆ ಸಿಗುತ್ತಿಲ್ಲ. ಕೆಲವೊಮ್ಮೆ ಅಲ್ಪಸಂಖ್ಯಾತರ ಸಣ್ಣ ಪಕ್ಷಗಳು ಸರ್ಕಾರದಲ್ಲಿ ಅಸ್ಥಿರತೆ ಸೃಷ್ಟಿಸುತ್ತಿವೆ. ಕಿಂಗ್ಮೇಕರ್ ಗಳಾಗಿ ಬಹುಸಂಖ್ಯಾತರ ಆಶೋತ್ತರಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಾರೆ. ಇದರಿಂದ ದೇಶದ ಬಹುಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಸರ್ಕಾರ ನಡೆಸಬೇಕಾಗುತ್ತದೆ. ಹೀಗಾಗಿ ಅಲ್ಪಸಂಖ್ಯಾತರ ರಾಜಕೀಯ ಪಕ್ಷಗಳ ನಿಯಂತ್ರಣಕ್ಕೆ ಸಂವಿಧಾನ ಬದಲಾವಣೆ ಅನಿವಾರ್ಯ ಎಂದು ರಾಜಪಕ್ಸೆ ಅಭಿಪ್ರಾಯಪಟ್ಟಿದ್ದಾರೆ.
ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜಪಕ್ಸೆ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ರಾಜಪಕ್ಸೆಗೆ ಬಹುಸಂಖ್ಯಾತ ಬುದ್ಧ ಧರ್ಮೀಯರು ಹಾಗೂ ಸಿಂಹಳಿಯರು ಬೆಂಬಲಿಸಿದ್ದರು.
ಆದರೆ ತಮಿಳರು ಹಾಗೂ ಮುಸ್ಲಿಂರು ರಾಜಪಕ್ಸೆಗೆ ವಿರುದ್ಧವಾಗಿ ಮತದಾನ ಮಾಡಿದ್ದರು. ಎಲ್ಟಿಟಿಇ ನಿರ್ಮೂಲನೆಯ ಆಪರೇಷನ್ ಉಸ್ತುವಾರಿ ವಹಿಸಿದ್ದ ರಾಜಪಕ್ಸೆ ಅಧಿಕಾರಕ್ಕೆ ಬಂದಿರುವುದು ತಮಿಳರಲ್ಲಿ ಆತಂಕ ಮೂಡಿಸಿದೆ. ಇದಲ್ಲದೇ ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ಹಾಗೂ ಬಲಪಂಥೀಯ ಎನಿಸಿಕೊಂಡಿರುವುದರಿಂದ ಶ್ರೀಲಂಕಾದ ಮುಸ್ಲಿಂರಲ್ಲಿಯೂ ರಾಜಪಕ್ಸೆ ಬಗ್ಗೆ ವಿರೋಧವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ರಾಜಪಕ್ಸೆ ಈ ರೀತಿಯ ಮಾತನಾಡುತ್ತಿದ್ದಾರೆ ಎನ್ನಲಾಗಿದೆ. ಈ ವರ್ಷ ಶ್ರೀಲಂಕಾ ಸಂಸತ್ತಿಗೆ ಚುನಾವಣೆಯಿದ್ದು, ಇಂತಹ ವಿಚಾರಗಳು ರಾಜಕೀಯವಾಗಿಯೂ ಪ್ರಮುಖ ಪಾತ್ರವಹಿಸಲಿವೆ. ಗೊತಬಯಾ ರಾಜಪಕ್ಸೆ ಸಹೋದರ ಮಹಿಂದಾ ರಾಜಪಕ್ಸೆ ಪ್ರಧಾನಿ ಹುದ್ದೆ ಮೇಲೆ ಕಣ್ಣಿರಿಸಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ.