ಶ್ರೀಲಂಕಾ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ವಿರುದ್ಧವೂ ರೊಚ್ಚಿಗೆದ್ದ ಜನತೆ
ಕೊಲಂಬೊ, ಮೇ 14: ಎರಡು ದಿನಗಳ ಹಿಂದಷ್ಟೇ ಶ್ರೀಲಂಕಾ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ರಾನಿಲ್ ವಿಕ್ರಮಸಿಂಘೆ ವಿರುದ್ಧ ಜನರ ಗುಂಪೊಂದು ಪ್ರತಿಭಟನೆ ನಡೆಸಿದ್ದು. ಹೊಸ ಪ್ರಧಾನಿಯಿಂದ ನ್ಯಾಯ ಸಿಗುವ ಭರವಸೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಶ್ರೀಲಂಕಾ ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ನಂತರ ಯುನೈಟೆಡ್ ನ್ಯಾಷನಲ್ ಪಕ್ಷ (ಯುಎನ್ಪಿ) ಅಧ್ಯಕ್ಷರಾಗಿದ್ದ 73 ವರ್ಷ ವಯಸ್ಸಿನ ರಾನಿಲ್ ವಿಕ್ರಮಸಿಂಘೆ ಅವರನ್ನು ಬುಧವಾರ ಶ್ರೀಲಂಕಾದ 26ನೇ ಪ್ರಧಾನ ಮಂತ್ರಿಯನ್ನಾಗಿ ನೇಮಿಸಲಾಗಿತ್ತು.
ಜನಾಕ್ರೋಶ ತೀವ್ರಗೊಂಡು ಹಿಂಸಾಚಾರ ಹೆಚ್ಚಾದ ಬೆನ್ನಲ್ಲೇ ಶ್ರೀಲಂಕಾ ರಾಷ್ಟ್ರಾಧ್ಯಕ್ಷ ಗೊಟಬಾಯ ರಾಜಪಕ್ಸ ಸಹೋದರ ಮಹಿಂದಾ ರಾಜಪಕ್ಸ ಸೋಮವಾರ ಶ್ರೀಲಂಕಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಆದಾಗ್ಯೂ ಜನಾಕ್ರೋಶ ಕಡಿಮೆಯಾಗಿಲ್ಲ, ಈಗ ನೂತನ ಪ್ರಧಾನಿ ವಿರುದ್ಧವೂ ಸಿಡಿದುಬಿದ್ದಿರುವ ಶ್ರೀಲಂಕಾ ಜನತೆ 'ರಾನಿಲ್ ವಾಪಸ್ ಹೋಗಲಿ' ಎಂದು ಕೊಲಂಬೋದಲ್ಲಿರುವ ಪ್ರಧಾನಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ನೂತನ ಪ್ರಧಾನಿಗೆ ಬೆಂಬಲ
" ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ರಾಜಪಕ್ಸ ಕುಟುಂಬಕ್ಕೆ ಹತ್ತಿರದ ಸ್ನೇಹಿತನಾಗಿದ್ದು, ಹೊಸ ಪ್ರಧಾನಿಯಿಂದ ಜನತೆಗೆ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲ ಎಂದು" ಪ್ರತಿಭಟನಾಕಾರರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದರ ನಡುವೆಯೇ ಶ್ರೀಲಂಕಾದ ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನಾ(ಎಸ್ಎಲ್ಪಿಪಿ) ಪಕ್ಷ ಸದನದಲ್ಲಿ ಕೇವಲ ಒಂದು ಸ್ಥಾನವನ್ನು ಹೊಂದಿರುವ ಪ್ರಧಾನಿ ವಿಕ್ರಮಸಿಂಘೆ ಅವರಿಗೆ ಬಹುಮತ ಸಾಬೀತುಪಡಿಸಲು ಬೆಂಬಲ ನೀಡಲು ನಿರ್ಧರಿಸಿದೆ.
ಶನಿವಾರ ಸುದ್ದಿಗಾರ ಜೊತೆ ಮಾತನಾಡಿದ ಮಾಜಿ ಸಚಿವ ಮತ್ತು ಆಡಳಿತಾರೂಢ ಎಸ್ಎಲ್ಪಿಪಿಯ ಹಿರಿಯ ನಾಯಕ ಎಸ್ಎಂ ಚಂದ್ರಸೇನ, "ನಮಗೆ ವಿಕ್ರಮಸಿಂಘೆ ಜೊತೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ, ಆದರೆ ದೇಶ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳಿಂದ ಹೊರಬರಲು ರಾನಿಲ್ ವಿಕ್ರಮಸಿಂಘೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲವಿದೆ " ಎಂದು ಹೇಳಿದ್ದಾರೆ.
ಆಡಳಿತ ಪಕ್ಷದ ಮತ್ತೊಬ್ಬ ಸಂಸದ ಪ್ರೇಮನಾಥ ಮಾತನಾಡಿ, " ಶ್ರೀಲಂಕಾದ ಯಾವ ಭಾಗದಲ್ಲಿ ಹೋದರೂ ನಾವು ಸರತಿ ಸಾಲುಗಳನ್ನು ನೋಡುತ್ತಿದ್ದೇವೆ, ಈ ಬಿಕ್ಕಟ್ಟು ಕೊನೆಯಾಗಬೇಕು. ರಾನಿಲ್ ವಿಕ್ರಮಸಿಂಘೆ ಈ ಬಿಕ್ಕಟ್ಟು ನಿಭಾಯಿಸಲು ಶ್ರಮಿಸುತ್ತಿದ್ದು ಅವರನ್ನು ಬೆಂಬಲಿಸುತ್ತೇನೆ" ಎಂದು ಹೇಳಿದ್ದಾರೆ.
ತೀವ್ರ ಸಂಕಷ್ಟದಲ್ಲಿರುವ ದ್ವೀಪರಾಷ್ಟ್ರ
2.2 ಕೋಟಿ ಜನಸಂಖ್ಯೆ ಹೊಂದಿರುವ ದ್ವೀಪರಾಷ್ಟ್ರ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ನಲುಗಿಹೋಗಿದೆ. ಇಡೀ ದೇಶವೇ ದಿವಾಳಿಯಾಗಿದ್ದು, ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್, ಡೀಸೆಲ್ ಖರೀದಿಸಲೂ ಜನ ಕಿಲೋ ಮೀಟರ್ಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇದೆ.
1948ರ ಸ್ವಾತಂತ್ಯ್ರದ ನಂತರ ಅತ್ಯಂತ ಕೆಟ್ಟ ದಿನಗಳನ್ನು ಕಾಣುತ್ತಿರುವ ಶ್ರೀಲಂಕಾದಲ್ಲಿ ಆಹಾರ, ಔಷಧ, ಕಚ್ಚಾ ವಸ್ತುಗಳ ಕೊರತೆ ತೀವ್ರವಾಗಿದೆ. ಹಣದುಬ್ಬರದ ಪರಿಣಾಮ ಅಗತ್ಯ ವಸ್ತುಗಳ ಬೆಲೆ ತೀವ್ರ ಹೆಚ್ಚಾಗಿದ್ದು ಜನ ಪರದಾಡುವಂತಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಪ್ರವಾಸೋದ್ಯಮ ಮೇಲಿನ ನಿರ್ಬಂಧದಿಂದ ಉಂಟಾದ ವಿದೇಶಿ ವಿನಿಮಯ ಕೊರತೆ ದ್ವೀಪರಾಷ್ಟ್ರ ಶ್ರೀಲಂಕಾದ ಬಿಕ್ಕಟ್ಟಿಗೆ ಕಾರಣವಾಗಿದೆ.