ಶ್ರೀಲಂಕಾದಲ್ಲಿ ಅವಧಿಗೆ ಮುನ್ನವೇ ಸಂಸತ್ ವಿಸರ್ಜನೆ: ಜ.5ರಂದು ಚುನಾವಣೆ
ಕೋಲಂಬೊ, ನವೆಂಬರ್ 10: ಆಡಳಿತಾತ್ಮಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಶ್ರೀಲಂಕಾದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆಗಳಾಗಿದ್ದು, ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸಂಸತ್ಅನ್ನು ವಿಸರ್ಜಿಸಿದ್ದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ಅವಧಿಗೆ ಎರಡು ವರ್ಷ ಮುನ್ನವೇ ಚುನಾವಣೆ ಘೋಷಣೆಯಾಗಿದೆ.
ತಮ್ಮ ಬೆಂಬಲಿತ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರಿಗೆ ಸಂಸತ್ನಲ್ಲಿ ಬಹುಮತ ದೊರಕದ ಹಿನ್ನೆಲೆಯಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸಾರ್ವತ್ರಿಕ ಚುನಾವಣೆ ಘೋಷಿಸಿದ್ದಾರೆ. 2019ರ ಜನವರಿ 5 ರಂದು ಚುನಾವಣೆ ನಡೆಯಲಿದೆ.
ನವೆಂಬರ್ 14ಕ್ಕೆ ಬಗೆಹರಿಯಬಹುದೇ ಶ್ರೀಲಂಕಾ ರಾಜಕೀಯ ಬಿಕ್ಕಟ್ಟು?
2018ರ ನವೆಂಬರ್ 19ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಆರಂಭವಾಗಲಿದ್ದು, ನವೆಂಬರ್ 26ರವರೆಗೂ ನಡೆಯಲಿದೆ. 2019ರ ಜನವರಿ 17ರಂದು ಚುನಾವಣೆ ಬಳಿಕ ಹೊಸ ಸರ್ಕಾರ ರಚನೆಯ ಮೊದಲ ಸಭೆ ನಡೆಯಲಿದೆ.
ಪದಚ್ಯುತ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ವಿರುದ್ಧ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಪ್ರಧಾನಿಯನ್ನಾಗಿ ಬೆಂಬಲಿಸಲು ತಮ್ಮ ಪಕ್ಷದಲ್ಲಿ ಅಗತ್ಯ ಮತಗಳು ಇಲ್ಲ ಎಂದು ಬಹುಮತ ಸಾಬೀತುಪಡಿಸುವ ಕೆಲವೇ ಗಂಟೆಗಳ ಮೊದಲು ಅಧ್ಯಕ್ಷ ಸಿರಿಸೇನಾ ಅವರ ಶ್ರೀಲಂಕಾ ಫ್ರೀಡಂ ಪಾರ್ಟಿ ಒಪ್ಪಿಕೊಂಡಿತು.
ಶ್ರೀಲಂಕಾ: ಪ್ರಧಾನಿ ಮನೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಅಧ್ಯಕ್ಷ
ಪ್ರಧಾನಿಯಾಗಿದ್ದ ರಾನಿಲ್ ವಿಕ್ರಮಸಿಂಘೆ ಅವರ ಪಕ್ಷಕ್ಕೆ ನೀಡಿದ್ದ ಬೆಂಬಲವನ್ನು ಅ. 26ರಂದು ಹಿಂದಕ್ಕೆ ಪಡೆದುಕೊಂಡಿದ್ದ ಸಿರಿಸೇನಾ ಪಕ್ಷ, ಮಹಿಂದಾ ರಾಜಪಕ್ಸೆ ಅವರ ಪಕ್ಷಕ್ಕೆ ಬೆಂಬಲ ಘೋಷಿಸಿತ್ತು. ಇದರಿಂದ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ಸಿರಿಸೇನಾ ಅವರ ನಿರ್ಧಾರವನ್ನು ಖಂಡಿಸಿದ್ದ ವಿಕ್ರಮಸಿಂಘೆ, ಪ್ರಧಾನಿ ಕಚೇರಿ ತೊರೆಯಲು ನಿರಾಕರಿಸಿದ್ದರು. 225 ಸದಸ್ಯರ ಸಂಸತ್ನಲ್ಲಿ ತಮ್ಮ ಮೈತ್ರಿಕೂಟಕ್ಕೆ 113 ಸದಸ್ಯರ ಬೆಂಬಲ ಇದೆ ಎಂದು ಸಿರಿಸೇನಾ ಹೇಳಿಕೊಂಡಿದ್ದರು. ಆದರೆ, 104-105 ಸದಸ್ಯರ ಬೆಂಬಲ ಮಾತ್ರ ಇದೆ ಎನ್ನುವುದು ಖಚಿತವಾದ ಹಿನ್ನೆಲೆಯಲ್ಲಿ ಅವರು ಸಂಸತ್ ವಿಸರ್ಜನೆಗೆ ಮುಂದಾದರು.
ಸಂಸತ್ ವಿಸರ್ಜನೆಯನ್ನು ಪದಚ್ಯುತ ಪ್ರಧಾನಿ ವಿಕ್ರಮಸಿಂಘೆ ಅವರ ಪೀಪಲ್ಸ್ ಲಿಬರೇಷನ್ ಫ್ರಂಟ್ ಕಟುವಾಗಿ ಟೀಕಿಸಿದೆ. ಸಂಸತ್ ವಿಸರ್ಜನೆಯು ಅಕ್ರಮ ಮತ್ತು ಅಸಾಂವಿಧಾನಿಕ ಎಂದು ಅದು ಖಂಡಿಸಿದೆ.