ದೇಶವನ್ನು ದಿವಾಳಿ ಸ್ಥಿತಿಗೆ ತಂದ ಅಧ್ಯಕ್ಷ ಚುನಾವಣೆಯಿಂದ ಹಿಂದಕ್ಕೆ
ಕೊಲಂಬೋ, ಜೂನ್ 6: "ಕಳೆದ ಎರಡೂವರೆ ವರ್ಷಗಳಲ್ಲಿ ನಾವು ದೊಡ್ಡ ಸವಾಲುಗಳನ್ನು ಎದುರಿಸಿದ್ದೇವೆ. ಕೊರೊನಾ ವೈರಸ್ ಸಾಂಕ್ರಾಮಿಕದ ಜೊತೆಗೆ ಸಾಲದ ಹೊರೆ ಇದೆ. ನಮ್ಮ ಕಡೆಯಿಂದ ಕೆಲವು ತಪ್ಪುಗಳು ಆಗಿದೆ," ಎಂದು ಅಧ್ಯಕ್ಷ ಗೊತಬಯ ರಾಜಪಕ್ಸೆ ತಪ್ಪೊಪ್ಪಿಕೊಂಡಿದ್ದು ಎಲ್ಲರಿಗೂ ನೆನಪಿರಬಹುದು.
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ದಿವಾಳಿ ಹಂತ ತಲುಪಿದ್ದು, ಪ್ರಧಾನಿ ಸ್ಥಾನದಿಂದ ಮಹಿಂದಾ ರಾಜಪಕ್ಸೆ ಕೆಳಗಿಳಿದು ರನಿಲ್ ವಿಕ್ರಮಸಿಂಘೆ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಹಿಂದಾ ಸೋದರ, ಅಧ್ಯಕ್ಷ ಗೋತಬಯ ರಾಜಪಕ್ಸೆ ಈ ನಡುವೆ ಮಹತ್ವದ ಘೋಷಣೆ ಮಾಡಿದ್ದಾರೆ.
ಶ್ರೀಲಂಕಾ ಬಿಕ್ಕಟ್ಟಿಗೆ ಏನು ಕಾರಣ? ಒಂದು ಅವಲೋಕನ
ಆಡಳಿತ ಅವಧಿಯ ಉಳಿದ ಎರಡು ವರ್ಷಗಳನ್ನು ಪೂರೈಸುತ್ತೇನೆ, ಆದರೆ ಮರು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಚುನಾವಣಾ ರಾಜಕೀಯದಿಂದ ವಿಮುಖರಾಗುವುದಾಗಿ ಘೋಷಿಸಿದ್ದಾರೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ. ಜನತೆಯ ಆದೇಶದಂತೆ ನನಗೆ ಐದು ವರ್ಷಗಳ ಅವಧಿಯ ಅಧಿಕಾರ ಸಿಕ್ಕಿದೆ. ನನ್ನ ಅವಧಿಯನ್ನು ಪೂರೈಸುತ್ತೇನೆ ಎಂದು ಹೇಳಿದ್ದಾರೆ.
ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸಿರುವ ಶ್ರೀಲಂಕಾ, ಐಎಂಎಫ್ ನಿಂದ ಸುಮಾರು 4 ಬಿಲಿಯನ್ ಡಾಲರ್ ಮೊತ್ತದ ಆರ್ಥಿಕ ನೆರವನ್ನು ಕೋರಿದೆ. ಇದಲ್ಲದೆ, ಭಾರತ ಹಾಗೂ ಚೀನಾದ ಸಹಾಯವನ್ನು ಬಯಸಿದೆ. ಶ್ರೀಲಂಕಾದ ರುಪಾಯಿ ಶೇ 82ರಷ್ಟು ಕುಸಿತ ಕಂಡಿದ್ದು, ಜನತೆ ತತ್ತರಿಸಿದ್ದಾರೆ.
ಯಾವುದೇ ಹಣ ಲಾಭವನ್ನು ನೀಡದ ಮೂಲಸೌಕರ್ಯ ಯೋಜನೆಗಳಿಗೆ ದೊಡ್ಡ ಪ್ರಮಾಣದ ಸಾಲವನ್ನು ತೆಗೆದುಕೊಂಡಿದ್ದಕ್ಕಾಗಿ ಸರ್ಕಾರವನ್ನು ದೂಷಿಸಲಾಗುತ್ತಿದೆ. "ಇಂದು, ಈ ಆರ್ಥಿಕ ಬಿಕ್ಕಟ್ಟಿನಿಂದ ಜನರು ಅಪಾರ ಒತ್ತಡಕ್ಕೆ ಒಳಗಾಗಿದ್ದಾರೆ. ಈ ಪರಿಸ್ಥಿತಿಗೆ ನಾನು ತೀವ್ರವಾಗಿ ವಿಷಾದಿಸುತ್ತೇನೆ," ಎಂದು ರಾಜಪಕ್ಸೆ ಪುನರುಚ್ಛರಿಸಿದ್ದಾರೆ. ಹೆಚ್ಚಿನ ಬೆಲೆಗೆ ಅಗತ್ಯ ವಸ್ತುಗಳನ್ನು ಪಡೆಯಲು ಜನರು ಸಾಲಿನಲ್ಲಿ ಕಾಯಬೇಕಾದ ಸಂದರ್ಭದಲ್ಲಿ ಜನರ ಈ ನೋವು, ಆಕ್ರೋಶ ಸಾಮಾನ್ಯವಾಗಿದೆ ಎಂದು ಕೂಡಾ ಹೇಳಿದ್ದಾರೆ.
ದಿವಾಳಿಯ ಹಂತಕ್ಕೆ ಶ್ರೀಲಂಕಾ
ಶ್ರೀಲಂಕಾ ದಿವಾಳಿಯ ಹಂತಕ್ಕೆ ತಲುಪಿದೆ. ಈ ವರ್ಷ 7 ಶತಕೋಟಿ ವಿದೇಶ ಸಾಲಗಳ ಪಾವತಿಯನ್ನು ಸ್ಥಗಿತಗೊಳಿಸಲಾಗಿದ್ದು, 2026ರ ವೇಳೆಗೆ ಅದರ ಮೊತ್ತ 25 ಶತಕೋಟಿ ಡಾಲರ್ ತಲುಪಲಿದೆ. ದೇಶದ ಒಟ್ಟು ವಿದೇಶಿ ಸಾಲವು 51 ಶತಕೋಟಿ ಡಾಲರ್ ಆಗಿದೆ. ವಿದೇಶಿ ಕರೆನ್ಸಿಯ ಕೊರತೆಯಿಂದ ಆಮದು ಕಡಿಮೆಯಾಗಿದೆ. ಹೀಗಾಗಿ ಮತ್ತು ಆಹಾರ, ಅಡುಗೆ ಅನಿಲ, ಇಂಧನ ಮತ್ತು ಔಷಧ ಸೇರಿದಂತೆ ಅಗತ್ಯ ವಸ್ತುಗಳಿಗೆ ತೀವ್ರ ಕೊರತೆ ಸೃಷ್ಟಿಯಾಗಿದೆ. ತಿಂಗಳುಗಟ್ಟಲೆ, ಸೀಮಿತ ಸ್ಟಾಕ್ಗಳನ್ನು ಖರೀದಿಸಲು ಜನರು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವಂತಹ ವಾತಾವರಣ ಸೃಷ್ಟಿಯಾಗಿದೆ. ಇಂಥ ಆರ್ಥಿಕ ಬಿಕ್ಕಟ್ಟಿಗೆ ರಾಜಪಕ್ಸೆ ಸಹೋದರರ ಭ್ರಷ್ಟಾಚಾರ ಮತ್ತು ಆಡಳಿತ ಶೈಲಿಯೇ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಶ್ರೀಲಂಕಾದ ವಿವಿಧ ಸರಕಾರಗಳು ಬಹುದೊಡ್ಡ ಯೋಜನೆಗಳಿಗಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಮನಬಂದಂತೆ ಸಾಲಗಳನ್ನು ಪಡೆದಿವೆ. ಚೀನಾ, ಜಪಾನ್ ಮತ್ತು ಎಡಿಬಿಯಿಂದ ಲಂಕಾ ಬಹಳಷ್ಟು ಸಾಲ ಪಡೆದಿವೆ. ಈಗ ಹೊಸ ಸಾಲ ಹುಟ್ಟುತ್ತಿಲ್ಲ. ಸಾಲದ ಸುಳಿಗೆ ಲಂಕಾ ಸಿಲುಕಿಕೊಂಡಿದೆ.
ಲಂಕಾದ ಒಟ್ಟು ಸಾಲ 12.55 ಬಿಲಿಯನ್ ಡಾಲರ್ ಇದೆ. ಈ ವರ್ಷ ಲಂಕಾ 4 ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿಸಬೇಕಿದೆ. ಅದಕ್ಕೆ ಮೀಸಲು ನಿಧಿ ಉಳಿದಿರುವುದೇ 2.31 ಬಿಲಿಯನ್ ಡಾಲರ್ ಹಣ ಮಾತ್ರವೇ. ಹೀಗಾಗಿ, ಚೀನಾ, ಭಾರತ ದೇಶಗಳಿಂದ ಹಣದ ನೆರವಿಗೆ ಲಂಕಾ ಮನವಿ ಮಾಡಿದೆ. ಭಾರತ ನೆರವಿಗೆ ಸಿದ್ಧವಾಗಿದೆ. ಮೊದಲು ಹಿಂದೇಟು ಹಾಕುತ್ತಿದ್ದ ಚೀನಾ ಇದೀಗ ಮೂರ್ನಾಲ್ಕು ಬಿಲಿಯನ್ ಡಾಲರ್ ಸಾಲ ಕೊಡಲು ಒಪ್ಪಿದೆ. ಹಾಗೆಯೇ, ಐಎಂಎಫ್ನಿಂದ ಸಾಲ ಪಡೆಯಲು ಲಂಕಾ ನಿರ್ಧರಿಸಿದೆ. ಇದರಿಂದಲಾದರೂ ಲಂಕಾ ಆರ್ಥಿಕತೆ ಒಂದಷ್ಟು ಚೇತರಿಕೆ ಕಾಣುವ ಆಶಯ ಇದೆ.