ಲಂಕಾದಲ್ಲಿ ಅನೇಕರ ಜೀವ ಉಳಿಸಿ, ಪ್ರಾಣತ್ಯಾಗ ಮಾಡಿದ ರಮೇಶ್
ಕೊಲಂಬೋ, ಏಪ್ರಿಲ್ 27: ಈಸ್ಟರ್ ರವಿವಾರದಂದು ಬಟ್ಟಿಕಲೋವದಲ್ಲಿರುವ ಜಿಯನ್ ಇವ್ಯಾಂಜಲಿಕಲ್ (Zion evangelical) ಚರ್ಚ್ನಲ್ಲಿ ಎಂದಿನಂತೆ ಪ್ರಾರ್ಥನೆ ನಡೆಯುತ್ತಿತ್ತು. ಅಲ್ಲಿದ್ದ ಯಾರೊಬ್ಬರಿಗೂ ಈ ಚರ್ಚ್ ನಲ್ಲಿ ಸ್ಫೋಟ ಸಂಭವಿಸಲಿದೆ, ಇಲ್ಲಿ ಆತ್ಮಾಹುತಿ ದಾಳಿಯಾಗಲಿದೆ ಎಂಬ ಅರಿವಿರಲಿಲ್ಲ. ಆದರೆ, ದುರಂತ ನಡೆದೇ ಬಿಟ್ಟಿತು. ದುರಂತವನ್ನು ತಡೆಯಲಾಗದಿದ್ದರೂ, ಆತ್ಮಾಹುತಿ ದಾಳಿಕೋರರನ್ನು ಚರ್ಚ್ ಬಾಗಿಲಲ್ಲೆ ತಡೆಯುವ ಮೂಲಕ ಅನೇಕರ ಜೀವವನ್ನು ಉಳಿಸಿದ ವ್ಯಕ್ತಿ ಯಾರು ಎಂಬುದು ಈಗ ಪತ್ತೆಯಾಗಿದೆ.
ಆತ್ಮಾಹುತಿ ದಾಳಿಕೋರರನ್ನು ತಡೆದು, ಪ್ರಾಣತ್ಯಾಗ ಮಾಡಿದ ವ್ಯಕ್ತಿಯ ಹೆಸರು ರಮೇಶ್ ರಾಜು. ಶ್ರೀಲಂಕಾದಲ್ಲಿ ದುರಂತ ಸಂಭವಿಸಿ, ವಾರದ ಬಳಿಕ ರಮೇಶ್ ತ್ಯಾಗವನ್ನು ಸ್ಮರಿಸಿ ಎಲ್ಲರೂ ಕೊಂಡಾಡುತ್ತಿದ್ದಾರೆ. ತನ್ನ ಈ ಪರಮ ತ್ಯಾಗದ ಮೂಲಕ ಅವರು ನೂರಾರು ಮಂದಿಯ ಪ್ರಾಣವನ್ನು ಉಳಿಸಿದ್ದಾರೆ.
ಪತ್ನಿ,ಪುತ್ರಿಯ ಕಳೇಬರ ಕೈಮೇಲಿತ್ತು!ಶ್ರೀಲಂಕಾ ಸ್ಫೋಟದ ಮನಕಲಕುವ ಕತೆ
40 ವರ್ಷದ ರಾಜು ಅವರು ಎರಡು ಮಕ್ಕಳ ತಂದೆಯಾಗಿದ್ದರು. ಆತ್ಮಹತ್ಯಾ ಬಾಂಬರ್ನನ್ನು ಚರ್ಚ್ನ ಬಾಗಿಲಲ್ಲೇ ತಡೆದು ನಿಲ್ಲಿಸಿ, ಭಾರಿ ಪ್ರಮಾಣದ ಸಾವು ನೋವನ್ನು ತಪ್ಪಿಸಿದರು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹೊಗಳಲಾಗುತ್ತಿದೆ.
ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಸುಮಾರು 253ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಐಎಸ್ಐಎಸ್ ಉಗ್ರರ ಕೈವಾಡ ಇರುವುದು ಖಚಿತವಾಗಿದೆ.
ಆ ಚರ್ಚ್ ನಲ್ಲಿ ನಡೆದ ಸ್ಫೋಟದಲ್ಲಿ ರಾಜು ಪ್ರಾಣತ್ಯಾಗ
ಭಾನುವಾರ ಆ ಚರ್ಚ್ ನಲ್ಲಿ ನಡೆದ ಸ್ಫೋಟದಲ್ಲಿ ರಾಜು ಸೇರಿದಂತೆ 29 ಮಂದಿ ಪ್ರಾಣಾಹುತಿಯಾಗಿದೆ. 14 ಮಕ್ಕಳು ದುರಂತ ಸಾವಿಗೀಡಾಗಿದ್ದಾರೆ. ದಾಳಿಕೋರನನ್ನು ತಡೆಗಟ್ಟಿದ್ದರಿಂದ ಚರ್ಚ್ನೊಳಗಿದ್ದ ಸುಮಾರು 600 ಮಂದಿ ಉಳಿಸಿದ್ದಂತಾಗಿದೆ. ಒಟ್ಟಾರೆ, ಚರ್ಚ್ ಗಳ ಮೇಲಿನ ದಾಳಿಯಿಂದಲೇ 253ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ.
ರಾಜು ತಂದೆ ವೇಲುಸ್ವಾಮಿ ಹೇಳಿಕೆ
"ಆ ವ್ಯಕ್ತಿಯ ಬಗ್ಗೆ ಸಂಶಯ ಮೂಡಿದೆ. ನನ್ನ ಮಗ ಸುರಕ್ಷಿತ ಸ್ಥಳಕ್ಕೆ ಓಡಿಹೋಗಬಹುದಿತ್ತು ಹಾಗೂ ತನ್ನ ಪ್ರಾಣವನ್ನು ಉಳಿಸಿಕೊಳ್ಳಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ, ದಾಳಿಕೋರರನ್ನು ಚರ್ಚ್ನ ದ್ವಾರದಲ್ಲೇ ತಡೆದು ನಿಲ್ಲಿಸಿದ್ದಾನೆ, ಚರ್ಚ್ ಪ್ರವೇಶಿಸದಂತೆ ಮಾಡಿದ್ದಾನೆ" ಎಂದು ರಾಜು ಅವರ ತಂದೆ ವೇಲುಸಾಮಿ ರಾಜು ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮಕ್ಕಳು ಸೇರಿದಂತೆ ಅನೇಕ ಮಂದಿ ಪ್ರಾಣಗಳನ್ನು ರಕ್ಷಿಸಿದ ನನ್ನ ಮಗನ ತ್ಯಾಗದ ಬಗ್ಗೆ ಅತೀವ ಹೆಮ್ಮೆ ಎನಿಸುತ್ತದೆ ಎಂದಿದ್ದಾರೆ.
ಇದಪ್ಪಾ ತಾಕತ್ತು! ದಾಳಿಯಾಗಿ ವಾರದೊಳಗೆ ಉಗ್ರರ ಚೆಂಡಾಡಿದ ಶ್ರೀಲಂಕಾ
ದಾಳಿಕೋರನ ಬಳಿ ಎರಡು ದೊಡ್ಡ ಬ್ಯಾಗ್ ಗಳಿತ್ತು
ಅತ್ಮಾಹುತಿ ದಾಳಿಕೋರನ ಬಳಿ ಎರಡು ದೊಡ್ಡ ಬ್ಯಾಗ್ ಗಳಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಚರ್ಚ್ನ ಒಳಗೆ ಇಷ್ಟು ದೊಡ್ಡ ಬ್ಯಾಗ್ ತೆಗೆದುಕೊಂಡು ಹೋಗುವುದು ಸರಿ ಎನಿಸದ ಕಾರಣ, ಆತನನ್ನು ರಾಜು ತಡೆದಿದ್ದಾರೆ. ಚೀಲವನ್ನು ಹೊರಗಡೆ ಇಡುವಂತೆ ಸೂಚಿಸಿದ್ದಾರೆ. ಆದರೆ, ಇದಕ್ಕೆ ಒಪ್ಪದೆ ಬಲವಂತವಾಗಿ ಚರ್ಚ್ ನೊಳಗೆ ಪ್ರವೇಶಿಸಲು ಯತ್ನಿಸಿದ್ದರಿಂದ ಬಾಂಬ್ ಸ್ಫೋಟಗೊಂಡಿದೆ.
ಮಗನ ಅಗಲಿಕೆಯಿಂದ ಕತ್ತಲಾದ ಭವಿಷ್ಯ
ರಾಜು ಅವರ ತಂಗಿ, ಗಂಡ ಮತ್ತು 20 ತಿಂಗಳ ಮಗ ಕೂಡ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಅನೇಕ ಆರ್ಮಿ ಅಧಿಕಾರಿಗಳು ಬಂದು ನನ್ನ ಮಗನ ಕಾಫಿನ್ ಗೆ ಸೆಲ್ಯೂಟ್ ಹೊಡೆದರು. ನನ್ನ ಮಗನ ಧೈರ್ಯದಿಂದ ಇನ್ನಷ್ಟು ಜನರಿಗೆ ಸ್ಫೂರ್ತಿ ಸಿಗಲಿದೆ. ಆದರೆ, ಅವನ ಅಗಲಿಕೆ ನಮ್ಮ ಭವಿಷ್ಯ ಕತ್ತಲಾಗಿದೆ ಎಂದು 63 ವರ್ಷ ವಯಸ್ಸಿನ ವೇಲುಸ್ವಾಮಿ ಕಣ್ಣೀರಿಟ್ಟಿದ್ದಾರೆ.