ಇದಪ್ಪಾ ತಾಕತ್ತು! ದಾಳಿಯಾಗಿ ವಾರದೊಳಗೆ ಉಗ್ರರ ಚೆಂಡಾಡಿದ ಶ್ರೀಲಂಕಾ
ಕೊಲಂಬೋ, ಏಪ್ರಿಲ್ 27: ಶ್ರೀಲಂಕಾದಲ್ಲಿ ಸರಣಿ ಬಾಂಬ್ ದಾಳಿ ನಡೆದು ಒಂದು ವಾರ ಕಳೆಯುವ ಮೊದಲೇ ಉಗ್ರರನ್ನು ಅವರ ಅಡಗುದಾಣಕ್ಕೇ ತೆರಳಿ ಶ್ರಿಲಂಕಾ ಸೇನೆ ಕೊಂದು ಹಾಕಿದೆ. ಶ್ರೀಲಂಕಾದ ಕಲ್ಮುನೈ ಎಂಬಲ್ಲಿ ಐಸಿಸ್ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿದ ಶ್ರೀಲಂಕಾ ಸೇನೆ ಒಟ್ಟು 15 ಜನರನ್ನು ಕೊಂದುಹಾಕಿದೆ. ಇದರಲ್ಲಿ ಆರು ಜನ ಮಕ್ಕಳೂ ಸೇರಿದ್ದಾರೆ ಎನ್ನಲಾಗಿದೆ.
ಕಲ್ಮುನೈನ ಪ್ರದೇಶವೊಂದರಲ್ಲಿ ಉಗ್ರರು ಅಡಗಿದ್ದ ಖಚಿತ ಮಾಹಿತಿಯ ಮೇರೆಗೆ ಸೇನೆ ದಾಳಿ ನಡೆಸಿದ್ದು, ಪ್ರತಿದಾಳಿ ನಡೆಸಲು ಸಾಧ್ಯವಾಗದೆ ಮೂವರು ಉಗ್ರರು ತಾವೇ ಗುಂಡು ಹಾರಿಸಿಕೊಂಡು ಸತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೃತ ಉಗ್ರರಲ್ಲಿ ಹಲವರು ಆತ್ಮಾಹುತಿ ದಾಳಿಕೋರರಿದ್ದರು ಎಂದೂ ಶ್ರೀಲಂಕಾ ಸೇನೆ ತಿಳಿಸಿದೆ. ಆದರೆ ಮೃತರೆಲ್ಲರೂ ಭಯೋತ್ಪಾದಕ ಸಂಘಟನೆಗೆ ಸೇರಿದವರೆ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಶ್ರೀಲಂಕಾದಲ್ಲಿ ಮತ್ತೆ 3 ಕಡೆ ಬಾಂಬ್ ಸ್ಫೋಟ, 1 ಸಾವು
ಶುಕ್ರವಾರ ರಾತ್ರಿ ಸುಮಾರು ಒಂದು ಗಂಟೆಯ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ, 15 ಜನರು ಮೃತರಾಗಿದ್ದು, ಶನಿವಾರ ಬೆಳಿಗ್ಗೆ ಮೃತ ದೇಹವನ್ನು ಹೊರತೆಗೆಯಲಾಗಿದೆ ಎಂದು ಸೇನೆ ತಿಳಿಸಿದೆ.
ಮೃತರ ಸಂಖ್ಯೆಯಲ್ಲಿ ಗೊಂದಲ
ಏಪ್ರಿಲ್ 21 ರಂದು ಸಂಜೆ ಶ್ರೀಲಂಕಾ ರಾಜಧಾನಿ ಕೊಲಂಬೋ ಬಳಿ ಎಂಟು ಕಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ದಾಳಿಯಲ್ಲಿ 250 ಕ್ಕೂ ಹೆಚ್ಚು ಜನ ಮೃತರಾಗಿದ್ದರೆ, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಮೊದಲಿಗೆ ಮೃತರ ಸಂಖ್ಯೆ 350 ಎನ್ನಲಾಗಿತ್ತು. ಆದರೆ ನಂತರ ಶ್ರೀಲಂಕಾ ಸರ್ಕಾರ ನಿಖರ ಸಂಖ್ಯೆಯನ್ನು ನೀಡಿತ್ತು.
'ಶ್ರೀಲಂಕಾ ಸ್ಫೋಟದ ಮುಖ್ಯ ಶಂಕಿತ ಹಶೀಮ್ ದಾಳಿ ವೇಳೆಯೇ ಸತ್ತಿದ್ದಾನೆ'
ಘಟನೆಯ ಹೊಣೆ ಹೊತ್ತುಕೊಂಡ ಐಸಿಸ್
ಘಟನೆ ನಡೆದ ಎರಡು ದಿನದ ನಂತರ ಐಸಿಸ್ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಆದರೆ ಇದನ್ನು ಐಸಿಸ್ ಮಾಡಿದ್ದು ಎಂಬುದಕ್ಕೆ ಯಾವುದೇ ಪ್ರಬಲ ಸಾಕ್ಷ್ಯವನ್ನು ಅದು ನೀಡಿಲ್ಲ.
ಶ್ರೀಲಂಕಾದ ಸರಣಿ ಸ್ಫೋಟಕ್ಕೆ ಇಸ್ಲಾಮಿಕ್ ಸ್ಟೇಟ್ ಉಗ್ರರೇ ಹೊಣೆ
ಮತ್ತೆ ಮತ್ತೆ ದಾಳಿ
ಶ್ರೀಲಂಕಾದಲ್ಲಿ ಮತ್ತೆ ಮತ್ತೆ ಬಾಂಬ್ ಸ್ಫೋಟವಾಗುತ್ತಲೇ ಇದ್ದು, ಶುಕ್ರವಾರ ಸಹ ಮೂರು ಕಡೆ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಇದೇ ವಾರ ಮತ್ತೆ ರಡು ಕಡೆ ಸ್ಫೋಟವಾಗಿತ್ತಾದರೂ ಅದು ಉಗ್ರ ದಾಳಿಯಲ್ಲ, ಬಾಂಬ್ ನಿಷ್ಕ್ರಿಯ ಕಾರ್ಯಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಸ್ಫೋಟ ಎಂದು ಶ್ರೀಲಂಕಾ ಸರ್ಕಾರ ತಿಳಿಸಿತ್ತು.
ಎಚ್ಚರಿಕೆ ನೀಡಿತ್ತು ಭಾರತ
ಶ್ರೀಲಂಕಾದಲ್ಲಿ ದಾಳಿ ನಡೆಯುವ ಬಗ್ಗೆ ಹತ್ತು ದಿನಗಳ ಮೊದಲೇ ಭಾರತೀಯ ಗುಪ್ತಚರ ಇಲಾಖೆ ಶ್ರೀಲಂಕಾಕ್ಕೆ ಮಾಹಿತಿ ನೀಡಿತ್ತು. ಆದರೆ ಅದನ್ನು ಶ್ರೀಲಂಕಾ ಅಲ್ಲಗಳೆದಿದ್ದು, ತಮಗೆ ಯಾವುದೇ ಔಪಚಾರಿಕ ಪತ್ರ ಸಿಕ್ಕಿರಲಿಲ್ಲ ಎಂದು ಹೇಳಿದೆ.